Friday, December 31, 2010

ಸಾಕು...

ಕಣ್ಣಿಗೆ ಯಾವ ಕಡಿವಾಣವೂ ಇಲ್ಲ.
ನೋಟಕೆ ತಡೆ ಹಾಕುವ ಕೋಟೆಯನ್ನು ಯಾರೂ ಕಟ್ಟಿಲ್ಲ/
ದೃಷ್ಠಿ ನಿನ್ನತ್ತ ಅದಾಗಿಯೆ ಅದು ನೆಟ್ಟು,
ನಿನ್ನಲ್ಲೆ ನೆಲೆಸಿದರೆ ಅದು ನನ್ನ ತಪ್ಪು ಹೇಗಾಗುತ್ತೆ?//


ಆದರೂ ಇದರಲ್ಲಿ ನನ್ನದೂ ಒಂಚೂರು ತಪ್ಪಿದೆ...
ನಿನ್ನ ಕನಸಿನ ಕೋಟೆಗೆ ಸೆರೆಯಾಗುವೆನೆಂಬ ಅರಿವಿದ್ದರೂ ನಾ ಲಗ್ಗೆ ಹಾಕಬಾರದಿತ್ತು...
ನಿನ್ನ ಒಲವ ತಿಳಿಗೊಳದಿಂದ ಹೊರ ಬಂದರೆ ಉಸಿರು ಸಿಗದೆ ಒದ್ದಾಡ ಬೇಕೆಂಬ ಅರಿವಿದ್ದರೂ ಸಹ,
ದೂರಮಾಡುವ ಗಾಳದ ಮೊನೆ ಕಚ್ಚಬಾರದಿತ್ತು/
ಸುತ್ತಲಿನ ಸೌಂದರ್ಯಕ್ಕೆ ಸೊಬಗು ಸಿಗೋದು ನೀ ನನ್ನ ಉಸಿರು ತಾಕುವಷ್ಟು ಹತ್ತಿರವಿದ್ದರೆ...
ಕಳೆದುಕೊಂಡರೂ ವಿಷಾದವೆನಿಸದೆ ವಿಚಿತ್ರ ಸಂಭ್ರಮವಾಗೋದು...
ನನಗೆ ಅರಿವಿಲ್ಲದಂತೆ ನೀ ನನ್ನ ಮನಸ ಕದ್ದರೆ/
ಟನ್ನಿನಷ್ಟು ಬೇಕಿಲ್ಲ.ಕ್ವಿಂಟಾಲ್ ನಷ್ಟನ್ನೂ ನಾ ಕೇಳ್ತಿಲ್ಲ...
ಕಿಲೋ ಸಹ ಬೇಡ...ಗ್ರಾಮ್ನಷ್ಟರ ಆಸೆಯೂ ಇಲ್ಲ,
ಔನ್ಸ್ ಸಿಕ್ಕರೂ ಸಾಕು...
ಕೊಡುತೀಯ ಒಲವ? ಮೊಗೆದು ಮನಸ ಚಟಾಕು?!//

Thursday, December 30, 2010

ಭ್ರಮೆಯೂ ಇರಬಹುದೆ...?

ಅಮೂಲ್ಯವಾದದ್ದು ನಾನೇನಾದರೂ ಇಲ್ಲಿಯವರೆಗೆ ಗಳಿಸಿದ್ದೆ ಹೌದಾದರೆ,
ಅದು ಕೆಲಕಾಲವಾದರೂ ನನಗೆ ಸಿಕ್ಕ ನಿನ್ನ ಸಾಂಗತ್ಯ...
ನಿನ್ನ ಪ್ರೀತಿ ಎಂದು ಎದೆಯುಬ್ಬಿಸಿ ಹೇಳಬಲ್ಲೆ,
ಬರದಿದ್ದರೂ...
ಸಂತಸಗಳ ಹೊತ್ತು ತರದಿದ್ದರೂ ನಿನ್ನ ನೆನಪೆ ಸಾಕು...
ಅದೆ ನನ್ನ ಪಾಲಿಗೆ ಸಿರಿ...
ಅದರ ಕಾವಲಿಗೆ ಏನನ್ನಾದರೂ ಮಾಡಬಲ್ಲೆ ಎಲ್ಲಾ ಎಲ್ಲೆಯನೂ ಮೀರಿ/
ಸ್ಪಷ್ಟವಾಗಿ ಗೊತ್ತು ಮತ್ತೆ ನೀ ಮರಳಿ ಬರುವುದಿಲ್ಲ...
ನನ್ನ ಕಾಯುವಿಕೆಯಂತೂ ಸಂತಸದಲ್ಲಿ ಕೊನೆಗೊಳ್ಳುವುದಿಲ್ಲ,
ಹೀಗಿದ್ದರೂ ನನ್ನ ನಿರೀಕ್ಷೆಗೆ ಕೊನೆಯಿಲ್ಲ...
ಬದುಕಿನಲ್ಲದಿದ್ದರೂ ಸಾವಿನ ನಂತರವಾದರೂ...
ನಿನ್ನಾತ್ಮದಲ್ಲಿ ನಾನು ವಿಲೀನವಾಗುವುದರಲ್ಲಿ ಸಂಶಯವಿಲ್ಲ//


ಸುತ್ತಲಿನ ಸದ್ದಿಗೆಲ್ಲ ನಾ ಕಿವುಡ...
ನಿನ್ನ ಮುಖದ ನಸು ನಗುವ ಹೊರತು ಇನ್ನೆಲ್ಲದಕ್ಕೂ ಕುರುಡ....
ನಿನ್ನ ನಾಮ ಜಪದ ನೆಪವಿಲ್ಲದಿದ್ದರೆ ಪೂರ್ತಿ ಮೂಕ,
ಆದರೂ ಅದೇ ನನಗೆ ಪರಮ ಸುಖ..
ಇಂದಿಗೆ ನೀ ನನ್ನ ದೂರವಾಗಿಸಿ ಆ ದರಿದ್ರ ದೇಶ ಸೇರಿ ಹೋಗಿ ಒಂದು ಸಂವತ್ಸರ/
ಒಂದು ಮಾಸದ ಮೇಲೆರಡು ದಿನ ಕಳೆಯಿತು...
ಆದರೂ ನಿನ್ನ ಮೇಲು ಮೇಲಿಂದ ಹೀಗೆಳೆಯುವಂತೆ ನಟಿಸುತ್ತಲೇ....
ನನ್ನೊಳಗಿನ ಒಲವ ಭೂಮಿಯಲ್ಲಿ ಇನ್ನಷ್ಟು ಪ್ರೀತಿಯ ಬೀಜ ಮೊಳೆಯಿತು,
ಈ ಇಷ್ಟೂ ದಿನಗಳಲ್ಲಿ ಕಳೆದು ಕೊಂಡದ್ದಕ್ಕಿಂತ....
ಪಡೆದು ಕೊಂಡದ್ದೆ ಹೆಚ್ಚು ಅನ್ನುವುದು ನನ್ನ ಭಾವನೆ...
ಇದು ಭ್ರಮೆಯೂ ಇರಬಹುದು//

Wednesday, December 29, 2010

ತೀರದ ತೃಷ್ಣಾ...

ಒಂಟಿತನದ ಶೂಲಕ್ಕೇರಿ...
ನಿರ್ಜೀವ ಭಾವಗಳ ಸಾಂಗತ್ಯದಲ್ಲಿ ಮೆರವಣಿಗೆ ಹೊರಟ ,
ನನ್ನೆಲ್ಲ ನೋವಿನ ಶಿಲುಬೆ ಹೊತ್ತ ನನ್ನ ಮನಸಿನ ಭಾರ ಇಳಿಸಲು ನೀ ಬಂದೇ ಬರುವೆ...
ಎಂಬ ಚೂರು ಆಸೆ ಇನ್ನೂ ಜೀವಂತವಾಗಿದೆ ಎದೆಯೊಳಗೆ/
ಮರೆತ ನೋವುಗಳನ್ನೆಲ್ಲಾ ಒಂದೊಮ್ಮೆ ನೀನೆ ಮರೆಯಾಗಿಸಿದ್ದೆ,
ಮರಳಿ ಮತ್ತದರಲ್ಲಿ ನಾ ಸೆರೆಯಾಗುವಂತೆ ಮಾಡಿದ್ದೂ ಕೂಡ...
ನೀನೆ ಎನ್ನುವುದು ಮಾತ್ರ ನನ್ನ ಬದುಕಿನ ಕ್ರೂರ ವ್ಯಂಗ್ಯ//

ಮುಗಿಯದ ಮೌನರಾಗದ ನಡುವೆ...
ಬಿಕ್ಕಳಿಕೆಯ ತಾಳ ಹಾಕುತ್ತ,
ರೋಧನೆಯ ನನ್ನ ಗಾಯನ ನಿರಂತರ ನಿನ್ನ ನೆನಪಿನಲ್ಲಿ ಜಾರಿಯಲ್ಲಿರುತ್ತದೆ/
ಹರಿವ ಯಾತನೆಯ ನದಿತೀರದಲ್ಲಿ ...
ನನ್ನದೂ ಒಂದು ನೋವಿನ ಧಾರೆ ಅದಕ್ಕೆ ಕೂಡಿಸುತ್ತ ಕೂತಿರುವ ನನ್ನ ವಿಹ್ವಲ ಚಿತ್ರ,
ನಿನ್ನ ಮನೆಗೋಡೆಯ ಮೇಲೆ ಆಲಂಕಾರಿಕ ಚಿತ್ರವಾಗಿ ತೂಗು ಹಾಕಿದ್ದೀಯಂತಲ್ಲ?...
ಇಷ್ಟೇಕೆ ನಿಷ್ಕರುಣೆ ನಿನಗೆ ನನ್ನಮೇಲೆ?//

ತೀರದ ತೃಷ್ಣಾ...

ಒಂಟಿತನದ ಶೂಲಕ್ಕೇರಿ...
ನಿರ್ಜೀವ ಭಾವಗಳ ಸಾಂಗತ್ಯದಲ್ಲಿ ಮೆರವಣಿಗೆ ಹೊರಟ ,
ನನ್ನೆಲ್ಲ ನೋವಿನ ಶಿಲುಬೆ ಹೊತ್ತ ನನ್ನ ಮನಸಿನ ಭಾರ ಇಳಿಸಲು ನೀ ಬಂದೇ ಬರುವೆ...
ಎಂಬ ಚೂರು ಆಸೆ ಇನ್ನೂ ಜೀವಂತವಾಗಿದೆ ಎದೆಯೊಳಗೆ/
ಮರೆತ ನೋವುಗಳನ್ನೆಲ್ಲಾ ಒಂದೊಮ್ಮೆ ನೀನೆ ಮರೆಯಾಗಿಸಿದ್ದೆ,
ಮರಳಿ ಮತ್ತದರಲ್ಲಿ ನಾ ಸೆರೆಯಾಗುವಂತೆ ಮಾಡಿದ್ದೂ ಕೂಡ...
ನೀನೆ ಎನ್ನುವುದು ಮಾತ್ರ ನನ್ನ ಬದುಕಿನ ಕ್ರೂರ ವ್ಯಂಗ್ಯ//

ಮುಗಿಯದ ಮೌನರಾಗದ ನಡುವೆ...
ಬಿಕ್ಕಳಿಕೆಯ ತಾಳ ಹಾಕುತ್ತ,
ರೋಧನೆಯ ನನ್ನ ಗಾಯನ ನಿರಂತರ ನಿನ್ನ ನೆನಪಿನಲ್ಲಿ ಜಾರಿಯಲ್ಲಿರುತ್ತದೆ/
ಹರಿವ ಯಾತನೆಯ ನದಿತೀರದಲ್ಲಿ ...
ನನ್ನದೂ ಒಂದು ನೋವಿನ ಧಾರೆ ಅದಕ್ಕೆ ಕೂಡಿಸುತ್ತ ಕೂತಿರುವ ನನ್ನ ವಿಹ್ವಲ ಚಿತ್ರ,
ನಿನ್ನ ಮನೆಗೋಡೆಯ ಮೇಲೆ ಆಲಂಕಾರಿಕ ಚಿತ್ರವಾಗಿ ತೂಗು ಹಾಕಿದ್ದೀಯಂತಲ್ಲ?...
ಇಷ್ಟೇಕೆ ನಿಷ್ಕರುಣೆ ನಿನಗೆ ನನ್ನಮೇಲೆ?//

ವಾಚಕರವಾಣಿಗೆ ನನ್ನ ಚೊಚ್ಚಲ ಪತ್ರ...!

ಮಾನ್ಯ ಸಂಪಾದಕರೆ...
ಇಂದಿನ ಪ್ರಜಾವಾಣಿಯ ಸಂಚಿಕೆಯಲ್ಲಿ (೨೮ ದಶಂಬರ ೨೦೧೦) " ಇಂಡಿಯಾ ಎನ್ನುವುದೆ ದಾಸ್ಯ"ಎಂಬ ಶಿರೋನಾಮೆಯಲ್ಲಿದ್ದ ವರದಿ ಪ್ರಕಟವಾಗಿದೆ.ಹಿರಿಯರೂ ಪ್ರಾಜ್ಞರೂ ಆದ ಡಾ ಚಿದಾನಂದಮೂರ್ತಿಗಳು ಮ್ಯಾನ್ಮಾರ್,ಶ್ರೀಲಂಕಗಳ ಮೇಲ್ಪಂಕ್ತಿ ಅನುಸರಿಸಿ ನಾವು ಅಂದರೆ ಭಾರತೀಯರೂ ವಸಾಹತುಶಾಹಿ ಕುರುಹಾದ 'ಇಂಡಿಯಾ'ವೆಂಬ ಹೆಸರಿನ ಕುರೂಪವನ್ನು ಹೋಗಲಾಡಿಸಿ 'ಭಾರತ'ವೆಂದು ದೇಶದ ಮರು ನಾಮಕರಣ ಮಾಡಿ ಸುರೂಪಗೊಳಿಸ ಬೇಕೆಂಬ ಆಶಯ ಮಂಡಿಸುತ್ತಾರೆ.ಅವರ ಈ ಆಗ್ರಹ ಅಪೇಕ್ಷಣೀಯವೆ ಆದರೂ ಈಗ ಅದರ ತುರ್ತು ಅಗತ್ಯ ಎಷ್ಟಿದೆ ಎಂಬುದು ಅವರೂ ಸೇರಿ ಎಲ್ಲರೂ ಯೋಚಿಸಬೇಕಾದ ಸಂಗತಿ.ಬಹುಸಂಖ್ಯಾತ ಉತ್ತರ ಭಾರತೀಯರು 'ಹಿಂದುಸ್ತಾನ್ 'ಎಂದು ಕರೆಯುವ ಈ ದೇಶ ಬಹಳ ಕಡಿಮೆ ಸಂಖ್ಯೆಯಲ್ಲಿರುವ ದಕ್ಷಿಣ ಭಾರತೀಯರಿಗಷ್ಟೇ "ಭಾರತ"ವಾಗುಳಿದಿದೆ ಎನ್ನುವುದು ಇಂದಿನ ವಾಸ್ತವ.ಜಾಯಮಾನ ಬದಲಾಗದೆ ಬರಿ ನಾಮವನ್ನಷ್ಟೆ ಬದಲು ಮಾಡುವ ತುರ್ತು ಸದ್ಯಕ್ಕಂತೂ ಇದೆ ಎಂದೆನಿಸುತ್ತಿಲ್ಲ.ಆದರೂ ಈ ಸಂಗತಿಯತ್ತ ಗಮನ ಸೆಳೆದ ಡಾ ಚಿದಾನಂದಮೂರ್ತಿಗಳ ಕಳಕಳಿ ಗಿಟ್ಟಿಸುವ ಮೆಚ್ಚುಗೆ ಮುಂದೆ ಅವರೇ ಆಡಿದ ಧರ್ಮಾಂಧ ಹೇಳಿಕೆಯಿಂದ ಮೌಲ್ಯ ಕಳೆದು ಕೊಂಡು ಗಟಾರ ಸೇರಿ ಹೋಗಿದೆ!


"ಅಲ್ಪ ಸಂಖಾಯತರ ಸಮುದಾಯದ ಹಬ್ಬಗಳನ್ನು ರಾಷ್ಟ್ರೀಯ ಹಬ್ಬ ಎಂಬಂತೆ ಆಚರಣೆ ಮಾಡುವುದು ಸರಿಯಲ್ಲ.ಭಾನುವಾರವೆ ವಾರದರಜೆ ನೀಡಬೇಕೆಂಬ ನಿಯಮ ಕೂಡ ಬದಲಾಗಬೇಕು" ಎಂದು ಅವರು ಮಾತು ಮುಂದುವರಿಸಿದರು ಎಂದು ವರದಿಯಾಗಿದೆ.ಜಾತ್ಯತೀತ ನಿಲುವಿನ ನಮ್ಮ ರಾಷ್ಟ್ರೀಯ ನೀತಿಯ ಮೆರಗು ಹೆಚ್ಚಿಸುವ ಅಲ್ಪಸಂಖ್ಯಾತ ಸಮುದಾಯಗಳ ಹಬ್ಬಗಳ ರಾಷ್ಟ್ರೀಯ ಆಚರಣೆ ಚಿದಾನಂದಮೂರ್ತಿಗಳ ಕಣ್ಣಿಗೆ ದುರಾಚಾರದಂತೆ ಕಾಣಲು ಅದೇನು ಪಾಪ ಮಾಡಿತ್ತು? ಅಲ್ಲದೆ ಸಿಖ್,ಬೌದ್ಧ ಧಮ್ಮ,ಜೈನ ಧರ್ಮಗಳಂತಹ ವೈದಿಕತೆಯ ಉಪಕವಲುಗಳಿಗಿಂತ ಇಸ್ಲಾಂ ಹಾಗು ಕ್ರೈಸ್ತ ರೂಪಿ ಪಶ್ಚಿಮದ ಧರ್ಮಗಳೆ ಅವರ ಮನಶಾಂತಿಗೆ ಕೊಳ್ಳಿಯಿಟ್ಟಿರುವುದು ಅವರ ಈ ಅಸಹನೆಪೂರಿತ ಹೇಳಿಕೆ ಮುಖಕ್ಕೆ ರಾಚಿದಂತೆ ಸ್ಪಷ್ಟಪಡಿಸಿದೆ.ಈ ಬಗೆಯ ಅಕಾರಣ ದ್ವೇಷದ ನಿಲುವು ಅವರ ವಯಸ್ಸಿಗೆ ಹಾಗು ಘನತೆಗೆ ಶೋಭಿಸುವುದಿಲ್ಲ.ಇನ್ನಾದರೂ ವಸ್ತುಸ್ಥಿತಿಯ ಉದಾತ್ತತೆ ಒಪ್ಪಿಕೊಂಡು ಇರಲಾಗದಿದ್ದಲ್ಲಿ ಕನಿಷ್ಠ ತಮ್ಮ ಹರಕು ಬಾಯಿಗೆ ಬೀಗ ಜಡಿದುಕೊಂಡಾದರೂ ಅವರು ಮಾನ ಉಳಿಸಿಕೊಳ್ಳುವುದು ಲೇಸು,ತುಂಬಿದ ಕೊಡ ಯಾವಾಗಲೂ ತುಳುಕ ಬಾರದು!

ಇನ್ನು ಭಾನುವಾರ ವಾರದ ರಜೆಯಾಗಿರುವ ಕುರಿತು.ಶುಕ್ರವಾರದಂದೆ ಜುಮ್ಮಾದ ಹೆಸರಿನಲ್ಲಿ ವಾರದ ರಜೆ ಕಡ್ಡಾಯಗೊಳಿಸಿರುವ ಕಟ್ಟರ್ ಇಸ್ಲಾಮಿ ರಾಷ್ಟ್ರಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ರಾಷ್ಟ್ರಗಳಲ್ಲೂ ಭಾನುವಾರದ ರಜಾ ಪದ್ದತಿಯೆ ಚಾಲ್ತಿಯಲ್ಲಿದೆ.ಇದು ಕ್ರೈಸ್ತ ನಂಬಿಕೆಗಳ ಅನುಸಾರ ರೂಪಿತವಾಗಿರುವ ಬಗ್ಗೆ ಏನೂ ಸಂಶಯವಿಲ್ಲವಾದರೂ ಈ ಬಗೆಗಿನ ಚರ್ಚೆಯೆ ಇದೀಗ ಅಪ್ರಸ್ತುತ.ಅಲ್ಲದೆ ಈ ವಾರಾಂತ್ಯದ ರಜಾ ಪದ್ದತಿಯಲ್ಲಿ ಹುಳುಕೇನೂ ಇಲ್ಲ.ಕೇವಲ ಗೊಡ್ಡು ಧಾರ್ಮಿಕತೆಯ ಚುಂಗು ಹಿಡಿದು ಹುಣ್ಣಿಮೆ,ಅಮಾವಾಸ್ಯೆ,ಏಕಾದಶಿಗಳಂದು ಸಾರ್ವತ್ರಿಕ ರಜೆ ಸಾರುವುದು ಎಷ್ಟು ಕಾರ್ಯಸಾಧುವಲ್ಲವೋ,ಅಷ್ಟೆ ಹಾಸ್ಯಾಸ್ಪದವೂ ಹೌದು.ಇಂತಹ ಚಿಲ್ಲರೆ ಸಲಹೆ ಸೂಚನೆ ಕೊಡುವುದನ್ನು ಬಿಟ್ಟು ಡಾ ಚಿದಾನಂದಮೂರ್ತಿಗಳು ನಿಜವಾದ 'ನಾಡೋಜ'ರಾಗೋದು ಯಾವಾಗ?

Tuesday, December 28, 2010

ತೀರದ ನಿರೀಕ್ಷೆ...

ಜೊತೆಜೊತೆಯಲೆ ಅಲೆವ ಅಲೆಗಳಿಗೂ ಸುಳಿವು ಕೊಡದಂತೆ ಮರೆಯಾಗುತ್ತೇನೆ,
ಸಂಗಡವೆ ಅದುರುವ ಎಲೆಗಳಿಗೂ ಚೂರೂ ಸುದ್ದಿ ಸಿಗದಂತೆ ಜಾರಿ ಹೋಗುತ್ತೇನೆ/
ನೀನೆ ಮನದಾಳದಿಂದ ಬಯಸಿದಂತೆ...
ನಿನ್ನಿಂದ ದೂರವಾಗಿದ್ದು....ಮಣ್ಣಲ್ಲಿ ಮಣ್ಣಾಗಿ ಕರಗುತ್ತೇನೆ,
ನಿನ್ನ ನೆನಪುಗಳೊಂದೆ ನನಗೆ ಶಾಶ್ವತ.....
ಕಡೆಯುಸಿರು ಕಳೆದ ನಂತರವೂ ನನ್ನೊಂದಿಗೆ ಅದೊಂದೆ ಇರೋದು ನಿಶ್ಚಿತ//

ಬಲಿಯುತ್ತದೆ...ನಲಿಯುತ್ತದೆ,
ಮತ್ತೆ ನಗುವರಳಿಸುತ್ತ ಒಲಿಯುತ್ತದೆ ಈ ಹೆಪ್ಪುಗಟ್ಟಿದ ಬಾಳು....
ಒಂದೊಮ್ಮೆ ನೀ ಮರಳಿ ಬಂದರೆ/
ಹೃದಯದ ಕೊನೆಯಲ್ಲೊಂದು...
ಆಸೆಯ ಮೊನೆಯಾಗಿ ಚುಚ್ಚುತ್ತಲೆ...
ಸಂತಸದ ನೆತ್ತರ ಬಿಸಿಬುಗ್ಗೆ ಚಿಮ್ಮಿಸುತ್ತದೆ,
ಎಂದಾದರೊಮ್ಮೆ..
ಮರೆತಾದರೂ ನೀ ಮರಳಿ ಬಂದು ಮನದೊಳಗೆ ನಿಂತರೆ//

ಭಯವಿದೆ...

ಬಲಿಯುತ್ತಿರುವ ರಾತ್ರಿಯಲ್ಲಿ ಗರ್ಭಪಾತವಾದ...
ನನ್ನ ಕನಸಿನ ಪಿಂಡದ ಮುಖ,
ನಿನ್ನ ಸುಂದರ ನೆನಪುಗಳನ್ನೆ ಹೋಲುತ್ತಿದ್ದುದು ಕೇವಲ ಆಕಸ್ಮಿಕವಾಗಿರಲಿಕ್ಕಿಲ್ಲ/
ನಿನ್ನ ನಸುನಗೆಯ ಶೂಲಕ್ಕೆ ನನ್ನ ಏರಿಸಿದಂತೆ,
ತುಸು ಮುಂಜಾನೆ ಬಿದ್ದ ಮರು ಸ್ವಪ್ನವೂ ಕೂಡ ಬಹುಷಃ ಸುಳ್ಳಾಗಲಿಕ್ಕಿಲ್ಲ//

Monday, December 27, 2010

ಕನಸು ಬಾಡದಿರಲಿ..

.


ಬಾಳಿನ ರೀಲು ಮತ್ತೆ ಹಿಂದೋಡುವಂತಿದ್ದರೆ,
ಮತ್ತೆ ನಿನ್ನ ಮುಗುಳ್ನಗುವಿನ ಪರಿಚಯ ಹೊಸತಾಗಿ ಆಗುತ್ತಿತ್ತು/
ಮರಳಿ ನೀ ನನ್ನ ಬಾಳಲಿ ಬರುತ್ತಿದ್ದೆ,
ನಿನ್ನೊಳಗೆ ನಾನು ನೂರು ಭರವಸೆಗಳನ್ನ ಹುಟ್ಟಿಸುತ್ತಿದ್ದೆ//

ನನ್ನೆಲ್ಲ ಕನಸುಗಳ ಮನೆಗೆ ಹಸಿರು ತೋರಣ ಕಟ್ಟಿ,
ಅಲ್ಲಿ ಕತ್ತಲು ಸುಳಿಯದಂತೆ ನಿನ್ನ ಹೊಳೆವ ಕಂಗಳ ದೀಪವ ನೀ ಹಚ್ಚುತ್ತಿದ್ದೆ...
ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವ?/
ಬಹುಷಃ ಅಂತೆಯೆ ಆದರೆ ಇವೇ ಸವಕಲು ಪದಗಳ ಬಳಸಿ...
ಮನದ ತುಮುಲಗಳನ್ನೆಲ್ಲ ತಿಳಿಸಿ.
ಮತ್ತೆ ನಿನ್ನ ಕೈಸೆರೆಯಾಗುವ ಸುಖದ ಕಲ್ಪನೆಯಲ್ಲಿ ರೋಮಾಂಚಿತನಾಗುತ್ತೇನೆ//

Sunday, December 26, 2010

ಹೇಳುತ್ತೀಯ?

ತುಟಿಯ ತುದಿಯಲಿ ಹುಟ್ಟಿದ ಮಾತು ತುಟಿಯೊಳಗೆ ಸಾಯಲಿ,
ಸದಾ ಒದ್ದೆಯಾಗಿಯೆ ಇರುವ ಕಣ್ಣಾಲಿಗಳು....
ಎಂದಾದರೊಮ್ಮೆ ಬಂದು ಅದನೊರೆಸುವ ಕೈಗಳಿಗಾಗಿ ಕಾಯಲಿ/
ನಿನ್ನ ನನ್ನ ನಡುವಿನ ಬಂಧವ ಬಾಯ್ಬಿಟ್ಟು ಎಲ್ಲರಿಗೂ ಹೇಳಬೇಕ?
ನಿನ್ನ ಮನಸಲ್ಲಿ ಬಂದು ನೆಲೆಯೂರಲು ನಾನು ಇನ್ಯಾರದೋ ಅನುಮತಿ ಕೇಳಬೇಕ?//

ನೀನೆಷ್ಟೆ ಹೇಳಿದರೂ...ಒಂದು ವೇಳೆ ನಾನದರ ಕೇಳಿದರೂ,
ಮನಸಿಗೆ ನಿನ್ನ ನೆನಪ ಅಳಿಸಿ ಹಾಕುವ ಕೆಲಸ ಸುಲಭವಲ್ಲ/
ನನ್ನ ಉಸಿರಿಂದ ನಿನ್ನಳಿಸಲೆ,
ಜೊತೆಯಾದ ಹೆಸರಿಂದ ನಿನ್ನನಳಿಸಲೆ?//

ತೊಯುತ್ತೇನೆ ನೋಯುತ್ತೇನೆ...!

ನಾನೇನೂ ವಿಶೇಷ ತಯಾರಿಯಿಂದ ಇಲ್ಲಿಗೆ ಬಂದು,
ಬರಕೊಂಡು ತಂದದ್ದನ್ನ ಇಲ್ಲಿ ಛಾಪಿಸುತ್ತ ಕೂರೋದಿಲ್ಲ....
ನಿನ್ನೊಂದಿಗೆ ಸಂಪರ್ಕ ಸೇತುವಾಗಿರುವ ಈ ನಿರ್ಜೀವ ಪರದೆಯ ಮುಂದೆ,
ಕ್ಷಣ ನಿನ್ನ ನೆನಪಿನಲ್ಲಿ ಧ್ಯಾನಸ್ಥನಾಗುತ್ತೇನೆ ಅಷ್ಟೆ...
ಮುಂದಿನದೆಲ್ಲ ಅದರಷ್ಟಕ್ಕೆ ಅದೇ ಆಗುತ್ತದೆ...ನನ್ನ ನಿಯಂತ್ರಣ ಮೀರಿ//


ನಗುವಿಗೆ ಸಂಚಕಾರ ತಂದಿದ್ದರೂ,
ನನ್ನದೆಯ ತಂಪನೆಲ್ಲ ಕುದಿ ಆವಿಯಾಗಿಸಿ/
ಕಣ್ಣೀರ ರೂಪದಲ್ಲಿ ಹೊರ ಚಲ್ಲಿದರೂ,
ನನಗ್ಯಾಕೋ ನಿನ್ನ ನೆನಪೆಂದರೆ ತುಂಬಾ ಇಷ್ಟ//

Saturday, December 25, 2010

ಬೋಳು ಬಾಳು..

ನೀನಿಲ್ಲದ ಕ್ಷಣಗಳ ಚಿತ್ರಣವನ್ನ ನಿನಗೂ ತೋರಿಸಬೇಕು,
ಒಂಟಿಯಾಗಿ ನಾ ಸಹಿಸಿದ ನೋವು ನಲಿವುಗಳನ್ನೆಲ್ಲ....
ನಿನ್ನೊಂದಿಗೆ ಹಂಚಿಕೊಳ್ಳಬೇಕೆಂದು ಅನಿಸಿದಾಗಲೆಲ್ಲ/
ಆತ್ಮಗತ ದಿನಚರಿಯಲ್ಲಿ ಅವನ್ನೆಲ್ಲ ದಾಖಲಿಸುತ್ತೇನೆ,
ಮುಂದೆಂದಾದರೂ ನೀನದನ್ನೋದಲಿ ಎಂಬಾಸೆ//

ಹಿಂದಿಗಿಂತಲೂ ನಾನೀಗ ತುಸು ಕುಗ್ಗಿದ್ದೇನೆ,
ಮಾನಸಿಕವಾಗಿ ಮುದುಡಿ ಬಾಡಿದ್ದೇನೆ/
ನೀನಿಲ್ಲದ ಚಿಂತೆಯ ಚಿತೆಯಲ್ಲಿ,
ಬೆಂದು ಬಳಲಿ ಬೆಂಡಾಗಿದ್ದೇನೆ//

ಅಲ್ಲವ?...

ಅಕಾಲದಲ್ಲಿ ಅದೇಕೊ ನನಗೆ ಮಳೆಯ ಹಂಬಲ/
ಮುಗಿಲ ಹನಿಗಳನ್ನು ಒಡಲಿಗಿಳಿಸಿಕೊಳ್ಳುವ ಇಳೆಯ ಹಂಬಲ/
ನಿನ್ನ ನಿರೀಕ್ಷೆಯೂ ನನ್ನ ಪಾಲಿಗೆ ಒಂಥರಾ ಹಾಗೇನೆ...
ಒಮ್ಮೆ ಒಟ್ಟು ಸೇರಿದ ಬಣ್ಣಗಳು ಮತ್ತೆ ಬೇರೆಯಾಗಲಾರವು ಅಲ್ಲವ?
ನಿನ್ನ ಆತ್ಮದ ಜೊತೆ ಸೇರಿ ಹೋದ ನನ್ನ ಉಸುರಿನದ್ದೂ ಕೂಡ ಇದೇ ಸ್ಥಿತಿ//

ಮುಗಿಲಿಗೂ ನೆಲಕ್ಕೂ ನಡುವೆ ಏನಿದೆ ಅನುಬಂಧ?,
ನೇಸರನಿಗೂ ಚಂದಿರನಿಗೂ ಮಧ್ಯೆ ಇರುವುದ್ಯಾವ ಬಂಧ?/
ವಿವರಿಸಲಿ ಹೇಗೆ ನನ್ನ ನಿನ್ನ ನಡುವಿನ ಸಂಬಂಧ?...
ಅದು ಹೀಗೆ ಇರಲಿ ಬಿಡು,
ಅದು ಹೀಗಿದ್ದರೇನೆ ಚಂದ//

Friday, December 24, 2010

ನಿನ್ನ ಪರಿಮಳ...

ನೆನ್ನೆ ಬಸ್ಸಿನಲ್ಲಿ ಘಮ್ಮೆಂದು ಎದ್ದು ಬಂದ ಚಂಡೂ ಹೂವಿನ ಪರಿಮಳ,
ಬಾಲ್ಯದ ನೆನಪುಗಳನ್ನೆಲ್ಲ ಉದ್ರೇಕಗೊಳಿಸಿದವು/
ಆಗಾಗ್ಗ ನಿನ್ನ ಜೊತೆಯ ನೆನಪು ಮರುಕಳಿಸಿದಾಗ,
ಉಲ್ಲಸಿತನಾಗುತ್ತೆನಲ್ಲ ಹಾಗಾಗಿತ್ತು...
ಮೊದಲ ಮಳೆಗೆ ಮಣ್ಣವಾಸನೆ ಕೊಡುತ್ತದಲ್ಲ ಮುದ ಹಾಗೆ//


ನನ್ನ ಕೆನ್ನೆಗೆ ನಿನ್ನ ತುಟಿ ಸೋಕುವಾಗ ತುಂಬು ಪ್ರೀತಿಯೊಂದಿಗೆ...
ತುಳುಕಿದ ಎಂಜಲೂ ತಾಕದಿದ್ದರೆ ಅದೆಂತ ಚುಂಬನ?,
ನೀ ನನ್ನ ಬಿಗಿಯಾಗಿ ತಬ್ಬಿ ಗಲ್ಲ ಕಚ್ಚಿ...
ಅಲ್ಲಿ ನಿನ್ನ ಹಲ್ಲ ಗುರುತನಿಳಿಸದ ಮೇಲೆ ಅದಿನ್ನೆಂತ ಆಲಿಂಗನ?!/
ಮೊತ್ತ ಮೊದಲ ಬಾರಿ ನೀ ನನ್ನ ಮೈತುಂಬ ಮುತ್ತಿಟ್ಟಾಗ...
ಅದರ ಮುಂದಿನೆರಡು ದಿನ ನಾ ಮಿಂದಿರಲಿಲ್ಲ!,
ನನ್ನ ಮೈಗಂಟಿದ ನಿನ್ನ ಪರಿಮಳ ಅಳಿಸಿ ಹೋದೀತೆಂಬ ಭಯದಿಂದ...
ಆದಿನಗಳಲ್ಲಿ ಬಿಟ್ಟೂ ಬಿಡದೆ ಭೋರಿಟ್ಟು ಸುರಿಯುತ್ತಿದ್ದ ಮಳೆಯಲ್ಲಿ...
ಅಪ್ಪಿತಪ್ಪಿಯೂ ನೆಂದಿರಲಿಲ್ಲ//

ಏಕಾಂತ...

ಚುಮು ಚುಮು ಚಳಿಯಲಿ,
ಚೂರೆ ಚೂರು ಅದ್ದಿ ತೆಗೆದ ಚಂದದ ಸಂಜೆ/
ನನ್ನ ಒಳ ಮನಸ್ಸಿನಂತೆಯೆ ಖಾಲಿ ಖಾಲಿಯಾಗಿರುವ ಕಡುನೀಲಿ ಬಸ್ಸಿನಲ್ಲಿ...
ಗುರಿಯಿಲ್ಲದ ಪಯಣ,
ಮನಸ್ಸೊಂದು ವಿಕಟ ಮರ್ಕಟ//

Thursday, December 23, 2010

ಆದಿಕವಿ ಪಂಪ -ಹಾದಿಕವಿ ಚಂಪಾ

ಅರಿವುಗೇಡಿಯೊಬ್ಬನ ಐಲು-ಪೈಲು...

ಸದುದ್ದೇಶದಿಂದ ಕೂಡಿದ ಸಂಗತಿಯೊಂದು ಕುಹಕಿಯೊಬ್ಬನ ಕೈಚಳಕಕ್ಕೆ ಬಲಿಯಾಗಿ ಗಟಾರ ಸೇರುವುದನ್ನು ಆಗಾಗ ಕೇಳಿ ಅರಿಯುತ್ತಿದ್ದೆ.ಆದರೆ "ವಿಜಯ ಕರ್ನಾಟಕ"ದಂತಹ ಜನಮೆಚ್ಚಿದ ಉತ್ಕೃಷ್ಟ ದಿನಪತ್ರಿಕೆಯ ಸದಾಲೋಚನೆಯೊಂದನ್ನು ಹಳ್ಳ ಹಿಡಿಸಿದ ಘನಂದಾರಿ ಸಾಹಿತಿ ಚಂದ್ರಶೇಖರ ಪಾಟೀಲರ ವರಸೆಯಿಂದ ಅದರ ಖುದ್ದು ಅನುಭವವೂ ಆದಂತಾಯಿತು.ನವಂಬರ್ ಕನ್ನಡಿಗರ ತೀರದ ಹಾವಳಿಯೇ ಎಲ್ಲೆಲ್ಲೂ ವ್ಯಾಪಿಸಿರುವ ಈ ಕಾಲದಲ್ಲಿ (ಮಾನ್ಯ ಪಾಟೀಲರ ಮಟ್ಟವೂ ಅಷ್ಟೆ ಎಂದು ವಿಷಾದದಿಂದಲೇ ಹೇಳಬೇಕಿದೆ!) ನಮ್ಮ ನಿತ್ಯ ಬದುಕಿನಲ್ಲಿ ನಮಗರಿವಿಲ್ಲದೆ ನಾವು ಬಳಸುತ್ತಾ ನಮ್ಮೊಳಗೆ ಹಾಸು ಹೊಕ್ಕಾಗಿರುವ ಅನೇಕ ಪರಭಾಷಿಕ ಪದಗಳಿಗೆ ಕಸ್ತೂರಿ ಕನ್ನಡದಲ್ಲಿಯೆ ಬಳಕೆ ಕಡಿಮೆಯಾಗಿ ತೆರೆಮರೆ ಸರಿದಿರುವ ಅನೇಕ ಸಂವಾದಿಗಳನ್ನು ಹುಡುಕಿಸಿ ಬಳಕೆಗೆ ತರುವ ವಿನೂತನ ಪ್ರಯೋಗವಾಗಿತ್ತು "ವಿಜಯ ಕರ್ನಾಟಕ" ಆರಂಭಿಸಿದ್ದ 'ಪದಕಟ್ಟಿ'.


ಮಾತೃ ಭಾಷೆಯ ಬಗ್ಗೆ ಇದ್ದ ಅಪರಿಮಿತ ಅಭಿಮಾನ,ಅನಗತ್ಯವಾಗಿ ಹರಡಿರುವ ಪರಭಾಷಾ ಹಾವಳಿಯ ಬಗ್ಗೆ ನನ್ನೊಳಗೆ ಹುದುಗಿದ್ದ ಸುಪ್ತ ಅಸಹನೆ,ನವ ಸರಂಜಾಮು ಅಥವಾ ನಾಗರೀಕ ಸೇವೆಗಳಿಗೆ ಸೂಚಿಸುವ ಪದಗಳು ಪರ್ಯಾಯವಾಗಿ ಚಾಲ್ತಿಗೆ ಬರಲಿ ಎಂಬ ಒಳ ಆಸೆ ಇವೆಲ್ಲವೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನನ್ನು ಪ್ರಚೋದಿಸಿದವು,ಅಲ್ಲದೆ ಕಳೆದ ೨೦೦೨ಅಲ್ಲಿ ನಾನು ಹಾಗು ನನ್ನ ಆತ್ಮಸಖ ರುದ್ರಪ್ರಸಾದ ಶಿರಂಗಾಲ ಮೊದಲಿಗೆ ನಾವು ಮಾಡಿಸಿದ್ದ ನಮ್ಮ ಸ್ವ-ವಿಳಾಸ ಬಿಲ್ಲೆ (ವಿಸಿಟಿಂಗ್ ಕಾರ್ಡ್) ಯಲ್ಲಿ landlineಗೆ 'ಸ್ಥಿರ'ವೆಂತಲೂ,mobileಗೆ 'ಸ್ಥಾಯಿ' ಅಂತಲೂ emailಗೆ 'ಮಿಂಚಂಚೆ'ಯಂತಲೂ ಛಾಪಿಸಿಕೊಂಡು ಆ ಮೂರು ಪರ್ಯಾಯ ಪದಗಳನ್ನ ಅಧಿಕೃತವಾಗಿ ಚಾಲ್ತಿಗೆ ತಂದಿದ್ದೆವು.ಇಂದು ಅದರ ಮೂಲ ಅರಿಯದವರೂ ಅವನ್ನು ವ್ಯಾಪಕವಾಗಿ ಬಳಸುತ್ತಿರುವುದು ನಮ್ಮಿಬ್ಬರಿಗೂ ಅತೀವ ಸಂತಸದ ಹಾಗು ಹೆಮ್ಮೆಯ ವಿಚಾರ.ಈ ಹಿನ್ನೆಲೆಯಲ್ಲಿ ಆಸ್ಥೆವಹಿಸಿ 'ಪದಕಟ್ಟಿ'ಯಲ್ಲಿ ಭಾಗವಹಿಸಿದ್ದೆ.ಇಲ್ಲಿ ಬಹುಮಾನದ ಅಮಿಷಕ್ಕಿಂತಲೂ ಭಾಷೆ ಬೆಳೆಯಲಿ ಎಂಬ ಪ್ರಾಮಾಣಿಕ ಕಾಳಜಿಯಷ್ಟೇ ಇತ್ತು.


ಅದೃಷ್ಟಕ್ಕೆ ಕಳೆದ ಮಾಸಾರಂಭದಲ್ಲಿ ಪ್ರಕಟಿತ ಫಲಿತಾಂಶಗಳಲ್ಲಿ ನಾನು ಸೂಚಿಸಿದ್ದ ಪದಗಳು ಮೊದಲಸುತ್ತಿನಲ್ಲಿ ಜಯಿಸಿ ಆಯ್ಕೆ ಸುತ್ತಿಗೆ ಸೇರಿದ್ದು ಕಂಡು ಉಲ್ಲಸಿತನೂ ಆಗಿದ್ದೆ.ಮೊನ್ನೆ ಸೋಮವಾರ ಅಂದರೆ ೨೦ ದಶಂಬರ ೨೦೧೦ ರಂದು ವಿಪಿಎಲ್ ಬಳಗದ ಕಡೆಯಿಂದ ಬಂದ ದೂರವಾಣಿಕರೆ ವಿಜೇತರಲ್ಲಿ ನಾನೂ ಒಬ್ಬನೆಂದು ತಿಳಿಸಿದಾಗ ಸಹಜವಾಗಿ ಸಂತಸಗೊಂಡೆ.ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರಾದ ಮಾನ್ಯ ಚಂದ್ರಶೇಖರ ಪಾಟೀಲರು ಅನುಸರಿಸಿದ ಮಾನದಂಡಗಳನ್ನು ಬುಧವಾರ ಹಾಗು ಗುರುವಾರ ಅನುಕ್ರಮವಾಗಿ 'ಲವಲvk'ಯಲ್ಲಿ ಓದುತ್ತಿದ್ದಂತೆ ಆ ಸಂತಸದ ಬಲೂನಿಗೆ ಮುಳ್ಳು ಸೋಕಿಸಿದಂತಾಗಿ ಈಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪಶ್ಚಾತಾಪ ಪಡುತ್ತಿದ್ದೇನೆ.ಘನ ವಿದ್ವಾಂಸ ಪಾಟೀಲರ ಘನತೆಗೆ (ಯೋಗ್ಯತೆಗೆ!) ತಕ್ಕಂತೆ ಪರನಿಂದೆಗಳು,ವಿಷಯ ವ್ಯಾಪ್ತಿ ಹೊರತಾದ ವಸ್ತುನಿಷ್ಟತೆಯಿಲ್ಲದ ಸವಕಲು ಅಳತೆಗೋಲುಗಳು ಅಲ್ಲಿ ಕಂಡು ಕಂಗಾಲಾಗಿ ಕಡೆಗೆ ನನಗೆ ನಾನು ಇಷ್ಟನ್ನು ಮಾತ್ರ ಹೇಳಿಕೊಂಡೆ "ಒಂದುವೇಳೆ ಚಂದ್ರಶೇಖರ ಪಾಟೀಲರಂತಹ 'ವೃತ್ತಿ'ಕನ್ನಡ 'ಓ'ರಾಟಗಾರ ಈ ಸ್ಪರ್ಧೆಗೆ ತೀರ್ಪುಗಾರರಾಗಿರೋದು ಮೊದಲೆ ಅರಿವಿದ್ದಿದ್ದರೆ ಖಂಡಿತಕ್ಕೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ!" ಈಗಲೂ ಅಷ್ಟೆ ನಾನು ಸ್ಪರ್ಧೆಯಿಂದ ಹಿಂತೆಗೆದು ಕೊಳ್ಳುತ್ತಿದ್ದೇನೆ.ಹಾಗು ನೀವು ಬೆನ್ನುತಟ್ಟಿ ಕೊಡಮಾಡಿರುವ ಬಹುಮಾನವನ್ನ ನಮ್ರತೆಯಿಂದ ಹಿಂದಿರುಗಿಸ ಬಯಸುತ್ತೇನೆ.

ಈ ನಿರ್ಧಾರದ ಕಾರಣಗಳನ್ನು ಸಾದರ ಪಡಿಸಲು ಇಚ್ಛಿಸುತ್ತೇನೆ.ಮೊದಲನೆಯದಾಗಿ ಇದು ಕನ್ನಡ ಕಟ್ಟುವ ಕೆಲಸ ,ಆದರೆ ಅದರ ಮೂಲಭೂತ ಆಶಯಕ್ಕೆ ಪಾಟೀಲರು ಮಸಿ ಬಳಿದಿದ್ದಾರೆ.ಅವರ ತೀರ್ಪಿನ ಪ್ರಕಾರ 'ಲಿಫ್ಟು' 'ಬಸ್ಸು' 'ಕ್ರಿಕೆಟ್ಟು' 'ಬ್ಯಾಂಕು' 'ಫ್ಯಾಷನ್ನು' 'ಸೈಕಲ್ಲು' 'ಹ್ಯಾಂಡ್ಸ್ ಫ್ರೀ' 'ಬ್ಲಾಕ್ ಮೇಲ್' 'ಪ್ಲಾಸ್ಟಿಕ್' 'ಕಾಫಿ 'ಗ್ಯಾರೇಜ್' 'ರಾಕೆಟ್' 'ಸ್ಟೆತಾಸ್ಕೋಪ್' 'ಟರ್ನ್ ಕಿ' 'ಫೋಟೋಜೆನಿಕ್' 'ಫ್ಯಾಕ್ಸು' 'ಶೂ' 'ಬಲ್ಬು' ಇವೆಲ್ಲ ಇರಬೇಕಂತೆ! "ಸ್ವಾಮಿ ಪಾಟೀಲರೆ! ಇದಕ್ಕೆ ಪರ್ಯಾಯ ಸೂಚಿತವಾದವುಗಳನ್ನ ನೋಡಿ ಹೆಚ್ಚು ಸೂಕ್ತವಾದುದನ್ನು ಆಯ್ಕೆ ಮಾಡುವುದು ನಿಮ್ಮ ಹೊಣೆಯಾಗಿತ್ತೆ ಹೊರತು ನಿಮ್ಮ ಸ್ವ-ಅಭಿಪ್ರಾಯದ 'ಫಾತ್ವಾ'ವನ್ನ ಸ್ಪರ್ಧಾರ್ಥಿಗಳ ಮೇಲೆ ಹೇರೋದಲ್ಲ."ಆ ಸಾಹಿತಿ 'ವಿಧಾನಸೌಧಕ್ಕೆ' ಸೈಕಲ್ ಹೊಡೆದ!" ಎಂಬ ನಿಮ್ಮದೇ ವ್ಯಂಗ್ಯ ಧಾಟಿಯ ಉದಾಹಾರಣೆ ಬೇರೆ ಕೊಡ್ತೀರ! ನಿಮ್ಮ ವಯಸ್ಸಿಗೆ ( ವಯಸ್ಸಿಗೆ ಮಾತ್ರ!) ಕೊಡುತ್ತಿದ್ದ ಈವರೆಗಿನ ಮರ್ಯಾದೆಯನ್ನೂ ಮರೆತು ಹೇಳಬೇಕೆಂದಿದ್ದರೆ 'ಅದು ನಿಮ್ಮ ಸ್ವ-ಅನುಭವದ ಸ್ವಗತವ?'. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದ್ವಿತಿಯ ಅವಧಿಗಾಗಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಗಾದಿಗಾಗಿ ನೀವು ಹೊಡೆದ ನಿಮ್ಮದೆ 'ಸೈಕಲ್ಲು' ಹಾಗು ಪರಿಷತ್ತಿನ ಚುನಾವಣೆಗಳಲ್ಲಿ ಅಧ್ಯಕ್ಷ ಪದವಿಗಾಗಿ ನೀವು ಮಾಡಿದ ಜಾತಿಯ 'ಬ್ಲಾಕ್ ಮೇಲ್'ಗಳಲ್ಲೆಲ್ಲ ನಮ್ಮಂತ ಹುಲುಮಾನವರ ಕಣ್ಣಿಗೆ ಕಾಣುತ್ತಿದ್ದುದು ಇದೇ ಸ್ವಾಮಿ.



ಇನ್ನು ಘನತೆವೆತ್ತ ಹಿರಿಯ,ವಯೋ ಹಾಗು ಜ್ಞಾನ ವೃದ್ಧ ಚಿದಾನಂದಮೂರ್ತಿಗಳ ವಿರುದ್ಧ ನೀವು ವ್ಯಥಾ ಬೀಸಿದ ವ್ಯಂಗ್ಯದ ಗದೆ. 'ಅಲ್ರಿ ಪಾಟೀಲರೆ! ಅವು ಈ ಸ್ಪರ್ಧೆಗೆ ಹೇಗೆ ಸಂಬಂಧಿಸಿವೆ? ಅವರು ಸ್ಥಿರವಾಣಿ ಹಾಗು ಚರವಾಣಿಗಳೆಂಬ ಪರ್ಯಾಯ ಪದಗಳನ್ನ ಸೂಚಿಸಿದರೆ ಕೈ ಎಟುಕದ ಕಡೆ ನಿಮಗ್ಯಾಕೆ ತುರಿಕೆ ಏಳುತ್ತದೆ? ಅಷ್ಟಕ್ಕೂ ಸ್ಪರ್ಧೆಯ ನೆಪದಲ್ಲಿ ನಾವೆಲ್ಲ ಸ್ಪರ್ಧಿಗಳು ಸೂಚಿಸಿರುವ ಉಳಿದೆಲ್ಲ ಪದಗಳಿಗಿಂತ ಅವೆ ಹೆಚ್ಚು ಸೂಕ್ತವೆಂಬ ಸತ್ಯ ಗೋಚರಿಸದಷ್ಟು ಹೊಟ್ಟೆಕಿಚ್ಚಿನ ಕುರುಡೆ ನಿಮ್ಮದು? ನಿಮ್ಮ ಚಿಲ್ಲರೆ ಸಾಹಿತ್ಯಿಕ ಜಗಳಗಳನ್ನೆಲ್ಲ (ವಾಸ್ತವವಾಗಿ ಅದು ಸಾಹಿತ್ಯಿಕವಾಗಿ ಕಡಿಮೆ,ನಿಮ್ಮ ವಯಕ್ತಿಕ ತೆವಲುಗಳೆ ನಿಮ್ಮೆಲ್ಲ ಜಗಳಗಳ ಮೂಲ) ಎಳೆದು ತಂದು ಸ್ಪರ್ಧೆಯ ಆಶಯಕ್ಕೆ ಮಸಿ ಬಳಿಯುವ ವಿಕೃತ ಮನಸೇಕೆ ಸ್ವಾಮಿ ನಿಮಗೆ?'

ಇಲ್ಲಿ ಕಳೆದೆರಡು ದಿನಗಳಿಂದ ಚೀರುವಯ್ಯನಾಗಿ ಚೀರುತ್ತಾ-ಸಾರುವಯ್ಯನಾಗಿ ಸಾರುತ್ತಾ ಮುಲ್ಲಾನಂತೆ 'ಫತ್ವಾ' ಹೊರಡಿಸಿದ್ದು ತಾವೆ ಹೊರತು ಇನ್ಯ್ಯಾರೂ ಅಲ್ಲ.ತನ್ನ ಸುಟ್ಟ ಸುಡುಗಾಡು ಜಾತಿಗಷ್ಟೆ 'ಜಗದ್ಗುರು'ವಾಗಿ ಮೆರೆಯುವ ಮೂರು ಕಾಸಿನ ಮಠಾಧಿಪತಿಗೂ ನಿಮಗೂ ಜಾಯಮಾನದಲ್ಲಿ ಚೂರೂ ವ್ಯತ್ಯಾಸವಿಲ್ಲ ಎಂಬುದು ಪುನಃ ಜಾಹೀರಾಗಿದೆಯಷ್ಟೆ. ಇನ್ನೊಂದು ವಿಷಯ :ನಾನಂತೂ ನಿಮ್ಮಂತೆ ಪೂರ್ವಾಗ್ರಹಪೀಡಿತನಲ್ಲ,ಹಾಗು ಕನ್ನಡ ನನಗೆ ಅವಕಾಶವಾದದ ಅಥವಾ ಅಧಿಕಾರದ ಅಥವಾ ಗೂಟದ ಕಾರಿನ ಸಂಪಾದನೆಯ ಸರಕೂ ಅಲ್ಲ.ಮತ್ತೊಂದು ಸಂಗತಿ ಸದಾ ನೆನಪಿನಲ್ಲಿಡಿ ವ್ಯಂಗ್ಯದ ಮದ್ದು ನಿಮಗೆ ಕಹಿ ಎಂದೆನಿಸುವಂತಿದ್ದರೆ ಬೇರೆಯವರಿಗೂ ಅದು ಹಾಗೆಯೆ ಇರುತ್ತದೆ.'ನಾಯಿ ಬಾಲ ಸದಾ ಡೊಂಕು' ಎಂಬ ಗಾದೆಯ ಸಂಪೂರ್ಣ ಅರಿವಿದ್ದರೂ ನಿಮಗೆ ಈ ಸಲಹೆ ಕೊಟ್ಟೆ.ಸ್ವೀಕರಿಸಿ ಬಿಡಿ ನನಗೇನೂ ಚಿಂತೆಯಿಲ್ಲ.ಕೊನೆಯದಾಗಿ,ಈ ಲೇಖನದಲ್ಲಿ ಬಳಸಿದ ಅಷ್ಟೂ ವ್ಯಂಗ್ಯ ಕೇವಲ ಪ್ರಾಸಂಗಿಕ ಹಾಗು ನಿಮ್ಮದೆ ರೀತಿಯಲ್ಲಿ ನಿಮಗೆ ತಿವಿದು ತೋರಿಸುವ ವಿಧಾನ.

Wednesday, December 22, 2010

ಕಳೆದು ಹೋಗಿದ್ದೆ..

ಕತ್ತಲ ಗವಿಯಲ್ಲಿ ಕಳೆದು ಹೋಗಿದ್ದೆ ನಾನು,
ಬೆಳಕಿನ ಭರವಸೆಯಿಲ್ಲದ ಅಂಧಕಾರದ ಬಾಳು/
ಕುಡಿದೀಪ ಬೆಳಗಿದಂತೆ ಬದುಕಲ್ಲಿ ಬಂದೆಯಲ್ಲ ನೀನು,
ಬಂದಷ್ಟೇ ವೇಗವಾಗಿ ಮರಳಿ ಮರೆಯಾಗಿಯೂ ಹೋದೆ....
ಹೆಚ್ಚಿಸಿ ನನ್ನುಳಿದ ದಿನಗಳ ತುಂಬ ಒಂಟಿತನದ ಗೋಳು//

Tuesday, December 21, 2010

ನಿನ್ನನುಳಿದು ಇನ್ನೇನು ಗೊತ್ತಿಲ್ಲ...

ಕರಾಳ ಬಾಳಲ್ಲಿ ನಿರಾಳ ಮಂದ ಮಾರುತ ನೀನು...
ನೀನಿಲ್ಲದೆ ಇನ್ನು ಹೇಗೆ ತಾನೆ ಇರಲಿ ನಾನು?/
ಇಳೆಯ ದಾಹವ ಎಂದಾದರೂ ಅರಿಯಲಾದೀತೆ ಬಾನು?
ಆಳ ಎಷ್ಟೇ ಇದ್ದರೂ ಮೋಡ ಕರಗಿ ನೆಲ ಮುಟ್ಟಲೇಬೇಕು...
ಇದೆ ಅಲ್ಲವ ಪ್ರಕೃತಿಯ ಅಲಿಖಿತ ಕಾನೂನು?//

Monday, December 20, 2010

ನೀನಿಲ್ಲದೆ ಇನ್ನೇನಿಲ್ಲ...

ಸ್ಥಿಗ್ಧ ಆಗಸವ ಆವರಿಸಿದ ಕರಿ ಮೋಡ,
ಇತ್ತ ಹನಿ ಮಳೆಯನೂ ಸುರಿಸಲಿಲ್ಲ...
ಅತ್ತ ನೀಲಾಗಸವ ಕಣ್ ತುಂಬಿಕೊಳ್ಳಲೂ ಅವಕಾಶ ಹರಿಸಲಿಲ್ಲ/
ಮುಗ್ಧ ನನ್ನ ಹೃದಯವನ್ನ ಆಕ್ರಮಿಸಿ ಕ್ಷಣದಲ್ಲಿ ತೊರೆದು ಹೋದ ಥೇಟ್ ನಿನ್ನಂತೆ...
ಅತ್ತ ನೀನೂ ನನ್ನ ಒಲವ ಆದರಿಸಲಿಲ್ಲ,
ಇತ್ತ ನನ್ನ ಅಂತರಾಳ ನಿನ್ನ ಹೊರತು ಇನ್ಯಾರನ್ನೂ ಆ ಭಾವದಲ್ಲಿ ಆವರಿಸಲಿಲ್ಲ//

Sunday, December 19, 2010

तनहा थो इससे पहले भी मै था....

भीड़ भरे रेल में,
एक हम है लाचार अकेले/
मन थो है बिलकुल खाली खाली,
दिल का आँगन भी है मायूस//


मै खुद जानता नहीं था के ये जालिम इश्क मुज में भी चाजायेगा,
मुश्किल से हासिल हवी कुशी एक पल में को जाएगा/
तनहा थो इससे पहले भी मै था,
पर आपसे मिलने के भाद जितना हुवा हु...उससे भेशक कम//

Saturday, December 18, 2010

ಕನವರಿಕೆ...

ಕನಸಲ್ಲಿ ಬಂದು ಪ್ರತಿನಿತ್ಯ ಕಾಡುವ ನೀನು...ನನಸಿನಲ್ಲಿ ನನ್ನಿಂದ ಬಲುದೂರ,
ನಿಜದಲ್ಲಿ ನನ್ನ ಮನಸಾರೆ ತಿರಸ್ಕರಿಸುವ ನಿನ್ನ ಮನ ಕಲ್ಪನೆಯಲ್ಲಿ ನನ್ನೆಡೆಗೆ ಅದೆಷ್ಟು ಉದಾರ!/
ನಿನಗೆ ಅದ್ಹೇಗೊ ಗೊತ್ತಿಲ್ಲ,
ನನಗೊ ಬದುಕು..ಕನವರಿಕೆ ಎರಡೂ ಒಂದೇನೆ//

ಕಾರಣ...

ಸದ್ದಿರದೆ ಸಂಭವಿಸುವ ಸಂತಸದ ಸಿಡಿಲಿನಂತೆ,
ನೋವಿನ ಕರಿಯೆಲ್ಲವ ಅರೆಕ್ಷಣವಾದರೂ ಮರೆಮಾಚಿಸುವ ಮಿಂಚಂತೆ/
ನೆನಪಾಗಿ ಮತ್ತೆ ಮತ್ತೆ ಕಾಡಿದರೂ...ನಿನ್ನಲೂ ಒಂದು ಸವಿಯಿದೆ,
ನೀ ಜೊತೆಗಿಲ್ಲದ ಕಹಿಗೆ ಇದಕ್ಕಿಂತ ಹಿತವಾದ ಮದ್ದುಬೇಕ?//

ನೂರು ಭಾವಗಳ ಬಿಡದೆ ತಡವಿದರೂ,
ಮೂಕ ಮನಸಿನ ಆಸೆಗಳಿಗೆ ಸೂಕ್ತ ವ್ಯಕ್ತ ಭಾಷೆಸಿಗದೆ ತಡವರಿಸುತ್ತಿದ್ದೇನೆ/
ಇದರಲ್ಲಿ ನಿನ್ನದೇನು ತಪ್ಪಿಲ್ಲ,
ನನ್ನೆಲ್ಲ ನೋವಿಗೆ...ನನ್ನೊಳಗಿನ ದೋಷವೇ ಕಾರಣ//

Thursday, December 16, 2010

ನಂಬಿಕೆ ಇಲ್ದಿದ್ರೇನು....

ಇತರರಿಗೆ ವಿಕ್ಷಿಪ್ತವೆನಿಸುವ ಅನೇಕ ಒಳ ಆಸೆಗಳು ನನ್ನೊಳಗಿವೆ.ಉದಾಹಾರಣೆಗೆ ಶತಾಬ್ದಿ ಎಕ್ಷ್ ಪ್ರೆಸ್ನಲ್ಲಿ ಭಿಕ್ಷೆ ಬೇಡಬೇಕು! ರಾಜಧಾನಿ ಎಕ್ಷ್ ಪ್ರೆಸ್ನಲ್ಲಿ ಟಿಕೆಟ್ ಇಲ್ಲದೆ ಎಲ್ಲ ಮಜಾ ಅನುಭವಿಸುತ್ತಲೆ ಪ್ರಯಾಣಿಸಬೇಕು! ಪಾಸ್ಪೋರ್ಟ್ ವೀಸಾದ ಹಂಗಿಲ್ಲದೆ ದರಿದ್ರ ಅಮೇರಿಕಾದಲ್ಲಿ ಅಂಡಲೆಯಬೇಕು ಹೀಗೆ...ಇದೇ ಸರಣಿಯ ಭಾಗವಾಗಿ ಬೀದಿ ಬದಿಯ ಫುಟ್ಪಾತ್ ದೇವರಲ್ಲಿ ಮೂರ್ಕಾಸಿನ ನಂಬಿಕೆ ಇಲ್ಲದಿದ್ದರೂ ಇವತ್ತು ಆದಷ್ಟು ದೇವಸ್ಥಾನ ಸುತ್ತಿ ಕೃಷ್ಣಯ್ಯ ಶೆಟ್ಟಿ ಅಂಡ್ ಕೋ ಪ್ರಾಯೋಜಿತ ಲಡ್ಡು ತಿನ್ನಬೇಕಂತ ಅನ್ಕೊಂಡಿದ್ದೇನೆ.ದೇವರಲ್ಲಿ ನಂಬಿಕೆ ಇಲ್ದಿದ್ರೇನು ಶೆಟ್ಟರ ಲಡ್ಡುವನ್ನ ಮನಪೂರ್ವಕ ನಂಬುತ್ತೇನೆ!ಚಿಕ್ಕಂದಿನಲ್ಲಿ ನಮ್ಮೂರ ಗಣಪತಿಕಟ್ಟೆಯ ತಂತ್ರಿಗಳ ಸಂಕಷ್ಟಿ ಪ್ರಸಾದಕ್ಕೂ ಹೀಗೆ ಶರಣಾಗ್ತಿದ್ದೆ.

Wednesday, December 8, 2010

ಇದಕ್ಕೆ ಹೆಸರಿಲ್ಲ...

ಬೀಸುವ ಗಾಳಿಯಲ್ಲಿ ನಿನ್ನ ಬಿಸಿಯುಸಿರು,
ಸಾಗೊ ಹಾದಿಯುದ್ದ ನಿನ್ನವೆ ಹೆಜ್ಜೆಗುರುತು/
ಬಾಳ ಪಯಣವೆಲ್ಲ ನಿನ್ನದೆ ಜೊತೆಯನು...
ನೀನಿಲ್ಲದಿದ್ದರೂ ಭ್ರಮಿಸುತ್ತಿದ್ದೆನಲ್ಲ,
ನಾನೆಂತ ಮರುಳ?//

ನಿಜದ ಮೇಲಿಂದ ಸರಿದ ಪರದೆ ಇನ್ನಷ್ಟು ಕಾಲ ಹಾಗೆಯೆ ಇದ್ದಿದ್ದರೆ ಚೆನ್ನಾಗಿತ್ತು,
ಹಾಗಂತ ನಾನೂ ಏನು ಸುಭಗನಾಗಿಯೆ ಉಳಿಯುತ್ತಿರಲಿಲ್ಲ/
ಕುಡುಕನೂ ಆಗಿರುತ್ತಿದ್ದೆ....ಖಂಡಿತ ಈಗಿನಂತೆಯೇ ನಿದ್ದೆ ಮರೆತು ನೀರವ ಇರುಳನ್ನೆಲ್ಲ ನರಕವಾಗಿಸಿಯೂಕೊಳ್ಳುತ್ತಿದ್ದೆ,
ಆದರೆ ಇನ್ನೂ ಕೊಂಚ ತಡವಾಗಿ!//

Tuesday, December 7, 2010

ಹೀಗ್ಯಾಕಾಯಿತೊ!

ಈ ಸಂಕಟಕೆ ಕೊನೆಯಿಲ್ಲ,
ಒಡೆದ ಹೃದಯದ ಚೂರುಗಳನು...ಮತ್ತೆ ಅಂಟಿಸುವ ಯಾವ ಬೆಸುಗೆಯೂ ಇಲ್ಲವಲ್ಲ/
ಮೌನದ ಚಿಪ್ಪಲಿ ಹುದುಗಿದ್ದರೂ ಮನಸೆಲ್ಲ ಅದೇಕೊ ಖಾಲಿಖಾಲಿ,
ಇಂತಹ ದಿನವೊಂದರ ನಿರೀಕ್ಷೆ ಖಂಡಿತ ನನಗಿರಲಿಲ್ಲ//

Monday, December 6, 2010

ನರಳಿಕೆ...

ಮಾತು ನೂರಿದ್ದರೂ ಮೂಕನಾಗೋದು...
ಭಾವದ ಸಾವಿರ ಹೆದ್ದೆರೆಗಳ ಭಾರ ಮನಹೊತ್ತು ದಾಟೋದು/
ಮನಸ್ಸಿಲ್ಲದ ಮನಸ್ಸಿನಿಂದ ಒತ್ತಾಯದ ಒಂಟಿತನಕ್ಕೆ ಅಂಟಿಕೊಳ್ಳೋದು...
ನೀ ನೆನಪಾದಾಗಲೆಲ್ಲ ಅವ್ಯಾಹತವಾಗಿ ಉಕ್ಕಿಬರುವ ಕಂಬನಿಗಳ ಸ್ವತಂತ್ರ ಬಿಟ್ಟು ಬಿಡೋದು...
ಛೀ...ನನ್ನದೂ ಒಂದು ಬಾಳ?,
ಇದಕ್ಕೆ ಕೊನೆ ಎಂದು?!//

Sunday, December 5, 2010

ನನಗೇ ಇದೇನೆಂದು ಗೊತ್ತಿಲ್ಲ..

ಮಾತಿನ ಬಣ್ಣವೆಲ್ಲ ಬಯಲಾಗಿದೆ...
ಅಸಲಿಗೆ ನಿನ್ನ ಮೌನ ಇದಕ್ಕಿಂತ ಹಿತವಾಗಿತ್ತು,
ನಗುವಿನ ನಿಗೂಢತೆಗೆ ತೆರೆ ಬಿದ್ದಿದೆ...
ಆ ನಿನ್ನ ಸಿಡುಕುತನದಲ್ಲೆ ಹೆಚ್ಚು ನಿಜ ಹುದುಗಿತ್ತು/
ಸಂಚೇನು ಅಡಗಿರಲಿಲ್ಲ ನಿನ್ನ ತುಂಟ ಕಣ್ಣೋಟದಲ್ಲಿ...
ಆದರಿದೀಗ ಅದೇಕೊ ಹಾಗೆನಿಸಲಾರಂಭಿಸಿದೆ,
ಮಬ್ಬು ಆವರಿಸುತ್ತಿರಲಿಲ್ಲ ನನ್ನ ದೃಷ್ಟಿಗೆ...
ಈಗೀಗ ಕಂಬನಿಯ ಪೊರೆ ಸದಾ ಕವಿದಿರಲಾರಂಭಿಸಿದೆ//

Saturday, December 4, 2010

ನಾನು...ನನ್ನ ಮನಸು...

ಬತ್ತಿದ ಭಾವಗಳಿಗೆಲ್ಲ ನೀಗದ ನೀರಡಿಕೆ,
ಸಾಯುತಿರುವ ಕನಸುಗಳ ಕಣ್ಣಲ್ಲೂ ನಿನ್ನದೆ ಕನವರಿಕೆ/
ಮತ್ತೇರಿಸ ಬೇಕಾದ ನಿಶ್ಚಲ ಹೊತ್ತಲಿ...
ಮುತ್ತುತ್ತಿರುವ ನೆನಪುಗಳ ಮುತ್ತಿಗೆಯಿಂದ ಜರ್ಜರಿತ,
ನಾನು...ನನ್ನ ಮನಸು//

ತೊಟ್ಟಿಕ್ಕುತ್ತಿವೆ....

ಒದ್ದೆ ಮನಸಿನ ಭಾವಗಳೆಲ್ಲ,
ನಿನ್ನೊಂದಿಗೆ ಕಂಡಿದ್ದ ಕನಸುಗಳ ಭಾರಕ್ಕೆ ಮಂಜಾಗಿ ತೊಟ್ಟಿಕ್ಕುತ್ತಿವೆ/
ಕಂಡವರು ಇದನ್ನು ಕಣ್ಣೀರ್ ಎಂದರು,
ನಾನೂ...ಇದನ್ನೆ ನನ್ನ ಒಲವೆನ್ನುತ್ತೇನೆ//

Friday, December 3, 2010

ನಿನ್ನವೇ ನೆನಪುಗಳು

ಏಕಾಂತವೂ ನನ್ನ ನಸೀಬಿನಲ್ಲಿಲ್ಲ...
ಎದೆಯೊಳಗೆ ಉಮ್ಮಳಿಸಿ ಬರುವ ನೆನಪಿನ ಅಲೆಗಳ ಸರಣಿ ಮನಸಿನ ದಡದ ಉಸುಕಿನ ದಂಡೆಯನ್ನು ಕರಗಿಸುತಲೆ ಇದೆ...
ನನ್ನೊಳಗಿನ ವಿಷಾದವೆಲ್ಲ ಹರಳುಗಟ್ಟುವ ಮೊದಲೆ ಹರಿದು ನೀರಾಗುತ್ತಿದೆ...
ಈಗಲೂ ಇದನ್ನು ಬರೆಯುತಿರುವುದು ನಾನಲ್ಲ...
ಕೈ ಓಡುತಿದೆ,ನಿನ್ನವೇ ನೆನಪುಗಳು ನನ್ನಿಂದ ಇವೆಲ್ಲವನ್ನೂ ಅಕ್ಷರಗಳಾಗಿ ಹೊರ ಬರಿಸುತಿವೆ..