Tuesday, September 30, 2014

ಪುಸ್ತಕದೊಳಗೆ - ೧೯




"ಅನರ್ಥ ಕೋಶ"

ಲೇಖಕರು; ನಾರಾಯಣ ಕಸ್ತೂರಿ,
ಪ್ರಕಾಶಕರು; ಸಮಾಜ ಪುಸ್ತಕಾಲಯ ( ಮೊದಲ ಐದು ಮುದ್ರಣ.)

ಪ್ರಕಟಣೆ; ೧೯೭೦.


ಅಂಕಿತ ಪುಸ್ತಕ ( ಹೊಸ ಆವೃತ್ತಿ ಎರಡು ಬಾರಿ.)


ಪ್ರಕಟಣೆ; ೨೦೦೭,

ಕ್ರಯ; ರೂಪಾಯಿ ನಲವತ್ತು.



"ಅತ್ತೆ - ಈಕೆಗೆ ಮೀಸೆ ಬಂದರೆ, ಚಿಕ್ಕಪ್ಪ ಎಂದು ಕರೆಯಬಹುದು - ಮರೆಯಲ್ಲಿ.

ಅಶ್ವಶಕ್ತಿ - ಎರಡೂವರೆ ಸೇರು ಹುರಳಿ.

ಆಟಿಗೆ - ವಿರಾಮ ಸಿಕ್ಕಿದಾಗ, ನಾವು ಆಡುವುದಕ್ಕಾಗಿ, ಮಕ್ಕಳ ಹೆಸರು ಹೇಳಿ, ನಾವು ಕೊಂಡು ತಂದು ಇರಿಸಿರುವ ಆಟದ ಸಾಮಾನುಗಳು.

ಆಣೆ - ಬಹಳ ಅಗ್ಗವಾದ ಒಂದು ವಸ್ತು.

ಆತ್ಮಕಥೆ - ಬೇರೆ ಯಾರಾದರೂ ತಮಗಾಗದವರು ಬರೆದು ಬಿಟ್ಟಾರು ಎಂಬ ಭೀತಿಯಿಂದ ಬುದ್ಧಿವಂತರಾದ ದೊಡ್ಡವರನೇಕರು ತಮ್ಮ ಜೀವನ ಚರಿತ್ರೆಯನ್ನು ತಾವೆ ತಯಾರಿಸಿ ತಿದ್ದಿಸಿ ಪ್ರಕಟಿಸಿ ಬಿಡುತ್ತಾರೆ.

ಆತ್ಮಹತ್ಯೆ - ಸಂಸಾರವೆಂಬ ಆಟಕ್ಕೆ ಇದೆ ತುರುಫ್, ನೂರು ಸಲ ಹೇಳ ಬಹುದು. ಆದರೆ ಮಾಡಲು ಒಂದೆ ಸಲ ಮಾತ್ರ ಸಾಧ್ಯ. ಇದನ್ನು ಸಮರ್ಪಕವಾಗಿ ಮಾಡದಿದ್ದರೆ ಸರ್ಕಾರದವರು ಹಿಡಿದು ಶಿಕ್ಷಿಸುತ್ತಾರೆ. ಆದ್ದರಿಂದ ಮಿಕ್ಕ ಕೆಲಸಗಿಲಸ ಚಾಕರಿಗಳಂತಲ್ಲ.

ಆತಿಥ್ಯ - ಬಂದವನನ್ನು ಮರುದಿನವೆ ಮನೆಯಿಂದ ಹೊರಡಿಸುವ ಪಿತೂರಿ.

ಆನೆ ಹಾಲು - ಇದನ್ನು ಸೇವಿಸಿದರೆ ವಾರವೊಂದಕ್ಕೆ ಮೈಯಭಾರ ಇಪ್ಪತೈದು ಪೌಂಡಿನಂತೆ ಹೆಚ್ಚುತ್ತಾ ಹೋಗುವುದಂತೆ, ಆನೆ ಮರಿಗೆ.

ಇತ್ಯಾದಿ - ಮುಂದಕ್ಕೆ ಬರೆಯಲು ಬುಧ್ಧಿ ಓಡದಿದ್ದರೆ, ಈ ಪದವನ್ನುಪಯೋಗಿಸಿ ಬಚಾವಾಗಬಹುದು.

ಉದರ - ಉದರನಿಮಿತ್ತಮ್ ಬಹುಕೃತ ರೇಷನ್.

ಊಳಿಡುವುದು - ರಾತ್ರಿ ಹೊತ್ತು ನಾಯಿ ಊಳಿಟ್ಟರೆ, ಸಾವಿನ ಸೂಚನೆ ಅನ್ನುತ್ತಾರೆ. ಏಕೆಂದರೆ, ಆ ನಾಯಿಯನ್ನು ಎದುರು ಮನೆಯವರು ಕಲ್ಲು ಹೊಡೆದು ಸಾಯಿಸುವ ಸಂಭವ ಇದೆ.

ಕಲಿಯುಗ - ವಿದ್ಯಾರ್ಥಿ ದೆಸೆ, ಕಲಿಯುವ ಕಾಲ.

ಕವರು - ಬಿಲ್ಲುಗಳನ್ನಿರಿಸುವ ಬತ್ತಳಿಕೆ.

ಕಾಮಗಾರಿ - ವಿಟಲೀಲೆ.

ಕೆಸರು - ಹೆಸರು ಕೆಡಿಸಲು ಉಪಯೋಗವಾಗುವ ಪದಾರ್ಥ.

ಕೌಮಾರ - ಹಸುವನ್ನು ಕೊಲ್ಲುವವ.

ಗಲ್ಲಿ - ಕ್ರಿಕೆಟ್ ಆಟಗಾರರಲ್ಲಿ ಹಲವಾರು ಓಡಾಡುವ ಜಾಗ.

ಗೋಡೆ - ಅಶ್ಲೀಲ ಸಾಹಿತ್ಯದ ಪ್ರಚಾರ ಕೇಂದ್ರ, ಸಿನಿ ಪ್ರಚಾರದ ಆಧಾರ, ಪರಸ್ಪರ ದೂಷಣೆಗಳಿಗೂ , ಪಕ್ಷ ಪ್ರತಿಪಕ್ಷಗಳ ಘೋಷಣೆಗಳಿಗೂ ಒದಗುವಂತೆ ಕಟ್ಟಿ ತಯಾರಿಸಿದ ಜಾಹಿರಾತು ಜಾಗ.

ಗೋದಾನ - ಒಂದು ಬಗೆಯ ಕ್ಷೌರ.

ಗೋಲಿ - ಸಣ್ಣ ಹುಡುಗರೂ ದೊಡ್ಡ ಯೋಧರೂ ಆಟಕ್ಕಾಗಿ ಉಪಯೋಗಿಸುವ ಪದಾರ್ಥ.

ಗ್ರಂಥಕರ್ತ - ಈತ ಗಮನಿಸಬೇಕಾದದ್ದು ಮೂರು, ಹೆಸರು - ಸಮರ್ಪಣ - ಮುನ್ನುಡಿ. ಉಳಿದದ್ದು ಹೇಗಾದರೂ ಇರಲಿ.

ಚಿತ್ರಹಿಂಸೆ - ಸಿನಿಮಾ ನೋಡುವವರಿಗಾಗುವ ಹಿಂಸೆ.

ಚಿರಋಣಿ - ಸಾಲವನ್ನು ಕೊಟ್ಟು ತೀರಿಸದವನು.

ಜಗಲಿ - ಜಗಳಗಳ ಉಗಮ ಸ್ಥಾನ.

ಜಗಳ - ಗಂಡ ಹೆಂಡಿರ ಜಗಳ, ಗಂಡ ಕೊಂಡು ಕೊಡುವ ತನಕ.

ಜನಪ್ರಿಯ ಗೀತೆ - ಇದನ್ನು ಕೆಲವರು ಹಾಡುವ ಮೊದಲು ಜನಪ್ರಿಯ ಎನಿಸಿರುತ್ತದೆ.

ಟೀಚರ್ - ನಪುಂಸಕ ಲಿಂಗ, ಅಂದರೆ ಮಾಸ್ಟರೂ ಆಗಬಹುದು, ಮೇಡಂಮ್ಮೂ ಆಗಬಹುದು.

ಟ್ರೂಮನ್ - ಹೆಸರಿನಲ್ಲೇನಿದೆ ಅನ್ನುವುದಕ್ಕೆ ಒಳ್ಳೆಯ ಉದಾಹರಣೆ.


ಟೆಲಿಫೋನ್ - ಯಾರುಯಾರೋ ಪರಸ್ಪರ ಮಾತನಾಡುವುದನೆಲ್ಲ ಗುಪ್ತವಾಗಿ ಕೇಳಲಿಕ್ಕೆ ಇದೊಂದು ಉಪಾಯ.

ಟೋಪಿ - ಇದನ್ನು ಮೊದಲು ನಮಗೆ ಹಾಕಿದವರು ಪರಂಗಿಯವರು.

ಟೋಲ್'ಗೇಟ್ - ಇಲ್ಲಿಗೆ ಬಂದಾಗ ಲಾರಿಗಳಿಗೆ ಸ್ಪೀಡ್ ಲಿಮಿಟ್ ಎಂಬುದೇ ಇಲ್ಲ.

ತಕ್ಕಡಿ - ವ್ಯಾಪಾರಗಾರರು ಗಿರಾಕಿಗಳಿಗೆ ಮೋಸ ಮಾಡಲು ಉಪಯೋಗಿಸುವ ಒಂದು ಸಾಧನ, ಅನೇಕ ಸಂಸಾರಗಳಲ್ಲಿ ತಕ್ಕಡಿ ಏಳುವುದೇ ಇಲ್ಲವಂತೆ, ತಕ್ಕಡಿಗೇನು ಗೊತ್ತು ಸಕ್ಕರೆಯ ಬೆಲೆ?

ತಿಗಣೆ - ಹಾಸಿಗೆ ಇದ್ದಷ್ಟು ತಿಗಣೆ ಕಾಟ ( ಗಾದೆ.) ಮನುಷ್ಯನೊಂದಿಗೆ ತನ್ನ ರಕ್ತ ಸಂಬಂಧವನ್ನು ಉಳಿಸಿಕೊಂಡಿರುವ ಪ್ರಾಣಿ.

ತಟಸ್ಥ - ನದೀಸ್ನಾನಕ್ಕೆ ಬಂದು ನೀರಿಗೆ ಇಳಿಯಲೋ ಬೇಡವೋ ಎಂದು ಅನುಮಾನಿಸುವವ.

ಬೊಜ್ಜು - ಇದನ್ನ ಕಂಡಲ್ಲಿ ಕರಗಿಸೋಣ ಎನ್ನಿಸುತ್ತದೆ.

ಬೋಂಡ - ಇದನ್ನ ಕರಿಯುವ ಎಣ್ಣೆ ಹೊಲಸಾಗಿರುವುದರಿಂದ ಇದರ ಗಾತ್ರ ಚಿಕ್ಕದಾದಷ್ಟೂ ಉತ್ತಮ.

ಬ್ಯಾಂಕು - ಹಣವಂತರಿಗೆ ಹಣ ಒದಗಿಸುವ ಸಂಸ್ಥೆ, ಬಿಸಿಲಿದ್ದಾಗ ಕೊಡೆ ಸಾಲ ಕೊಟ್ಟು ಮಳೆ ಬಂದ ಕೂಡಲೆ ಹಿಂದಕ್ಕೆ ಕೇಳುವ ಸಂಸ್ಥೆ.

ಬ್ರಹ್ಮಚಾರಿ - ತಲೆಯೊಳಗೆ ಮೆದುಳಿದೆ ಎಂದು ತೋರುವ ಧೀರ, ಯಾರನ್ನು ಮದುವೆಯಾಗಲಿ ಎಂದು ತೀರ್ಮಾನಿಸಲು ಅಶಕ್ತನಾಗಿ ತೊಳಲಾಡುವವ, ಒಂದು ಹೆಣ್ಣು ಜೀವವನ್ನು ಉಳಿಸಿದವ, ತನ್ನ ಪೀಳಿಗೆಯನ್ನು ಬೆಳೆಸಲೆ ಬೇಕಾಗಿಲ್ಲವೆಂಬ ಸತ್ ಸಂಕಲ್ಪವನ್ನು ಮಾಡಿದವ.

ಬಂದರು - ಸಮುದ್ರದ ಮೇಲೆ ಹೋಗಿದ್ದವರು ಬಂದರು ಎನ್ನಿಸುವ ಜಾಗ.

ಭಾವಜೀವಿ - ಅಕ್ಕನ ಮನೆಯಲ್ಲಿದ್ದು ಕಾಲೇಜು ವ್ಯಾಸಂಗ ನಡೆಸುವ ಹುಡುಗ.

ಮಂತ್ರಿ - ನಾವು ಇನ್ನೂ ಚನ್ನಾಗಿ ಮಾಡಬಲ್ಲ ಕೆಲಸ ಕಾರ್ಯಗಳನ್ನು, ನಮಗಿಂತ ಅಸಮರ್ಪಕವಾಗಿ ಮಾಡಲು, ನಾವು ಚುನಾಯಿಸುವ ವ್ಯಕ್ತಿ.

ಮಹಾತ್ಮರು - ಮಹಾತ್ಮರು ಯಾವ ದೇಶದಲ್ಲೂ ಇದುವರೆಗೂ ಹುಟ್ಟಿಲ್ಲ; ಹುಟ್ಟುವುದೆಲ್ಲಾ ಶಿಶುಗಳೇ.

ಮೀನ ಮೇಷ - ಮೀನು ತಿನ್ನಲೋ, ಮೇಷ ತಿನ್ನಲೋ, ಎಂಬ ಚರ್ಚೆ.

ಮೋಸ - ಇತರರಿಗೆ ನಾವು ಮಾಡಿದರೆ ಜಾಣತನ, ಅವರು ನಮಗೆ ಮಾಡಿದರೆ ದ್ರೋಹ.. ಪತ್ತೆಯಾದರೆ ಪೆಚ್ಚು ಇಲ್ಲದಿದ್ದರೆ ಕೆಚ್ಚು, ದುರ್ಭಿಕ್ಷದಲ್ಲಿ ಅಧಿಕ ಮೋಸ.

ವಸಂತ - ಕವಿಗಳಿಗೆ ಹುಚ್ಚು ಬರುವ ಕಾಲ.

ವಾಕರಿಕೆ - ಕೆಲವರ ವಾಕ್ ಕೇಳುವಾಗ ಆಗುವ ಪ್ರತಿಕ್ರಿಯೆ.

ಶನೀಶ್ವರ - ರಾಮೇಶ್ವರಕ್ಕೆ ಹೋದಾಗ, ಅಲ್ಲೂ ನಮ್ಮನ್ನು ಪೀಡಿಸುವ ಪೂಜಾರಿಗಳು.

ಸಮಯಸ್ಪೂರ್ತಿ - ಸ್ನಾನದ ಮನೆಯೊಳಗೆ ನುಗ್ಗಿದಾಗ, ಅಲ್ಲಿದ್ದ ಮಹಿಳೆಯನ್ನು ಕಾಣುತ್ತಲೂ, ಹೊರಕ್ಕೆ ಧಾವಿಸುತ್ತ, ಕ್ಷಮಿಸಿ ರಾಯರೆ, ಎಂದು ಹೇಳುವುದು.

ಸೂಟು - ಸೂಟಾಗದಿದ್ದರೂ ಅನೇಕರು ಧರಿಸಿ ಮೆರೆಯುವ ವಸ್ತ್ರ ವಿಶೇಷ.

ಸ್ವಗತ - ನಾಟಕದಲ್ಲಿ ಒಬ್ಬರನ್ನುಳಿದು ಮಿಕ್ಕೆಲ್ಲರಿಗೂ ಕೇಳಿಸುವಂತೆ ಕೂಗಬೇಕಾದ ಮಾತು.

ಹರಿಹರ - ಒಬ್ಬ ಕನ್ನಡ ಕವಿ, ತುಂಬಾ ರಗಳೆ ಮಾಡಿದವನು."

- ನಾರಾಯಣ ಕಸ್ತೂರಿ


ನಾ ಕಸ್ತೂರಿಯೆಂದೆ ಪ್ರಸಿದ್ಧರಾಗಿರುವ ನಾರಾಯಣ ಕಸ್ತೂರಿ ಕನ್ನಡ, ಮಲಯಾಳಂ ಹಾಗೂ ಆಂಗ್ಲಭಾಷಾ ನಿಪುಣ ಲೇಖಕ. ಶಿಶು ಸಾಹಿತ್ಯ, ಕಾದಂಬರಿ, ಅನುವಾದ, ಹಾಸ್ಯ ಬರಹ, ಜೀವನ ಚರಿತ್ರೆ ಹಾಗೂ ಅಧ್ಯಾತ್ಮ ಇವರ ಬರಹದ ವಿವಿರ ಪ್ರಕಾರಗಳಾಗಿದ್ದವು. ಅಂದಿನ ತಿರುವಾಂಕೂರು ಸಂಸ್ಥಾನದ ಮಾರ್ತಾಂಡಂನಲ್ಲಿ ೧೮೯೭ರ ಅಗೋಸ್ತು ೧೪ನೆ ತೇದಿಯಲ್ಲಿ ಹುಟ್ಟಿ ಮಲಾಯಾಳಂ ಮಾಧ್ಯಮದಲ್ಲಿಯೆ ವಿದ್ಯಾಭ್ಯಾಸ ಪೂರೈಸಿ ತನ್ನ ಇಪ್ಪತೊಂದನೆ ವಯಸ್ಸು ಪ್ರಾಯಕ್ಕೆ ಉದರ ನಿಮಿತ್ತವಾಗಿ ಮೈಸೂರಿಗೆ ಶಿಕ್ಷಕ ವೃತ್ತಿ ಕೈಗೊಳ್ಲಲು ಬಂದ ನಾ ಕಸ್ತೂರಿ ಆನಂತರ ತಮ್ಮ ಕಲಿಕೆಯ ಶ್ರದ್ಧೆಯಿಂದ ಕನ್ನಡವನ್ನು "ಉಟ್ಟು ಖನ್ನಡ ಓರಾಟಗಾರರೂ" ನಾಚುವಂತೆ ಆಳವಾಗಿ ಕಲಿತು ಕನ್ನಡ ಬರಹ ಪ್ರಪಂಚದಲ್ಲಿ ಢಾಳವಾಗಿ ತಮ್ಮ ಹೆಸರು ಉಳಿಸಿ ಹೋದ ಪ್ರತಿಭಾವಂತ.

ಡಾ ರಾಶಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಆ ಕಾಲದಲ್ಲಿಯೆ ಸುಮಾರು ಎರಡು ಲಕ್ಷ ಪ್ರಸಾರ ಸಂಖ್ಯೆ ಹೊಂದಿದ್ದ "ಕೊರವಂಜಿ" ಹಾಸ್ಯ ಮಾಸ ಪತ್ರಿಕೆಗೆ ಅಂಕಣಕಾರರಾಗಿ ಕೇಫ, ಟಿ ಸುನಂದಮ್ಮ, ಆರಾಸೆ ಹಾಗೂ ಗಿರಣಿ ರಾಮಸ್ವಾಮಿಯಂತಹ ಲೇಖಕರೊಂದಿಗೆ ಸೇರಿ ಸುಮಾರು ಸಾವಿರಕ್ಕೂ ಮೀರಿದ ಹಾಸ್ಯ ಲೇಖನಗಳನ್ನು ಬರೆದಿದ್ದರೆ. 'ಆನರ್ಥ ಕೋಶ' ಒಂದು ವಿಶಿಷ್ಟ ಹಾಸ್ಯ ಪ್ರಯೋಗ. ಕನ್ನಡದ ಆಡುಭಾಷೆಯಲ್ಲಿ ಸೇರಿ ಹೋಗಿದ್ದ ಪರಭಾಷಾ ಪದಗಳನ್ನೂ ದಯ ತೋರಿ ಬಿಟ್ಟು ಬಿಡದೆ ದರದರನೆ ಎಳೆದುಕೊಂಡು ಬಂದು ಮುಂದೆ ಹಣಕಾಸಿನ ಮುಗ್ಗಟ್ಟಿನಿಂದ 'ಕೊರವಂಜಿ' ಶಾಶ್ವತವಾಗಿ ಹಾಸ್ಯದ ಕಣಿ ಹೇಳುವುದನ್ನ ನಿಲ್ಲಿಸುವವರೆಗೂ ನಾ ಕಸ್ತೂರಿ ನಿಯಮಿತವಾಗಿ ಬರೆದು ಕನ್ನಡಿಗರನ್ನ ರಂಜಿಸಿದ ಈ ಹಾಸ್ಯ ಅರ್ಥದ ಅಂಕಣ ಭಾರತೀಯ ಭಾಷೆಗಳನ್ನ ಬಿಡಿ ಪ್ರಪಂಚದ ಯಾವುದೇ ಭಾಷೆಯಲ್ಲಿಯೂ ಕಾಣ ಸಿಗಲಿಕ್ಕಿಲ್ಲ. ಬರವಣಿಗೆಯಲ್ಲಿ ಕನ್ನಡ ಅವರಿಗೆ ಸಿದ್ಧಿಸಿದ್ದರೂ ಸಹ ಉಚ್ಛಾರಣೆಯ ಹಂತದಲ್ಲಿ ಅವರ ಮಲಯಾಳಿ ಶೈಲಿ ಮರೆಯಾಗಿರಲಿಲ್ಲವಂತೆ, ಸಾಲದ್ದಕ್ಕೆ ಮೂಗಿನಲ್ಲಿ ಬೇರೆ ಮಾತಾಡುತ್ತಿದ್ದರಂತೆ ಅವರು. ಇದನ್ನೆ ಪ್ರಸಿದ್ಧ ಕಥೆಗಾರ ಸೀತಾರಾಂ ( ಆನಂದ.) ಈ ಬಗ್ಗೆ ಜಿ ಪಿ ರಾಜರತ್ನಂರಲ್ಲಿ 'ನರ್ಕಕ್ಕಿಳ್ಸಿ ನಾಲಗೆ ಸೀಳಿಸದ್ದಿದ್ದರೂನು "ಣಾ ಕಸ್ತೂರಿ" ಣಿತ್ಯ ಕನ್ನಡದಲ್ಲಿಯೆ ಮಾತಾಡ್ತಾರೆ!" ಅಂತ ಹಾಸ್ಯ ಮಾಡುತ್ತಿದ್ದರಂತೆ.

ತಾನು ಕನ್ನಡ ಕಲಿತ ಬಗೆಯನ್ನ ನಾ ಕಸ್ತೂರಿಯವರೆ ಹೀಗೆ ತಮಾಷೆಯಾಗಿ ಕೆಳಗಿನಂತೆ ವರ್ಣಿಸಿದ್ದಾರೆ.

" ಶ್ರೀಮಾನ್ ಟಿ ಎಸ್ ವೆಂಕಣ್ಣಯ್ಯನವರು ನನ್ನ ಕನ್ನಡ ಗುರುಗಳಲ್ಲೊಬ್ಬರು. ಅವರನ್ನು ನಾನು ಎಂದೆಂದಿಗೂ ಮರೆಯುವಂತಿಲ್ಲ. ಅವರ ಸಹವಾಸ ಭಾಗ್ಯ ನನಗೆ ದೊರೆತಾಗ ನಾನು ಇನ್ನೂ 'ಆಟ' 'ಊಟ' ಓಟ'ಗಳನ್ನ ತಟಾಯಿಸಿ 'ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ' ಎಂದು ಒದರುತ್ತಿದ್ದ ಆರು ವರ್ಷದ ಕನ್ನಡ 'ಮಾಣಿ'. ಅವರು ನನ್ನನ್ನು ಹುರಿದುಂಬಿಸಿದರು. ಅಡಿ ಇಡಿಸಿ ನಡೆಯಿಸಿದರು. ತ್ರಿಪದಿ ಗುಡ್ಡಗಳನ್ನೂ, ವಚನ ಸರೋವರಗಳನ್ನೂ, ಕುಮಾರವ್ಯಾಸ ಭಾರತದ ಗೇರುಸೊಪ್ಪೆಯನ್ನೂ, ಪಂಪ ಸಹ್ಯಾದ್ರಿಯನ್ನೂ, ತೋರಿಸಿ ಉತ್ಸಾಹ ತುಂಬಿದರು ಪ್ರಬುದ್ಧ ಕರ್ಣಾಟಕಕ್ಕಾಗಿ ನನ್ನಿಂದ ಹಲವಾರು ಲೇಖನಗಳನ್ನು ಬರೆಯಿಸಿದರು. ನಾನೆ ಸ್ಪೂರ್ತಿಗೊಂಡು ರಚಿಸಿದ ಒಂದು ಕವನವನ್ನು ಮೆಚ್ಚಿ ಅದರಲ್ಲಿ ಅಚ್ಚು ಹಾಕಿಸಿದರು. ಬೂದಿಯನ್ನೂ ಊದಿ ಬೆಳಗಿಸುವ ಕಾವು ಇತ್ತು ಅವರ ಉಸಿರಲ್ಲಿ. ಅವರ ಸ್ಮಾರಕವಾಗಿ ಒಂದು ಗ್ರಂಥಮಾಲೆಯನ್ನು ಅವಿಚ್ಛಿನ್ನವಾಗಿ ಹೊರಡಿಸುವ ಹೊಣೆಗಾರಿಕೆಯನ್ನು ಅವರ ಮಿತ್ರರು ಹಾಗೂ ಶಿಷ್ಯವೃಂದದ ಪರವಾಗಿ ಅವರ ತಮ್ಮಂದಿರಾದ ತ ಸು ಶಾಮರಾವ್ ಅವರು ಹೊತ್ತುಕೊಂಡಿದ್ದಾರೆ.

ಶ್ರೀ ಶಾಮರಾವ್ ಇಂಟರ್ ಬಿ ಎ ತರಗತಿಗಳಲ್ಲಿ ನನ್ನ ವಿದ್ಯಾರ್ಥಿ. ನನ್ನ ಗುರುಚರಣದಲ್ಲಿ ಪುಸ್ತಕವೊಂದನ್ನರ್ಪಿಸಬೇಕೆಂದು ನನ್ನ ಶಿಷ್ಯ ಸೂಚನೆ ಕೊಟ್ಟಾಗ ನನಗೆ ಅತ್ಯಾನಂದವಾಯಿತು. ಹಲವಾರು ವರ್ಷಗಳಿಂದ ನಾನು ಗುರುತು ಹಾಕಿರಿಸಿದ್ದಈ 'ಅನರ್ಥ ಕೋಶ'ವನ್ನು ಕಳಿಸಿದೆ. 'ಕನ್ನಡಂ ಕಾತ್ತುರಿಯಲ್ತೆ' ಎಂದು ನನ್ನನ್ನು ಪ್ರೀತಿಯಿಂದ ಬರ ಮಾಡಿಕೊಂಡ ಕನ್ನಡ ತಾಯಿಗೆ ಇದು ಒಂದು ಕುಹಕದ ಕಾಣಿಕೆ! ಅಳಿಲು ಸೇವೆ. ಹೊಕ್ಕ ಮನೆಯನ್ನು ಚೊಕ್ಕ ಮಾಡಲು ನಾನು ಕುಕ್ಕು ಮಾಡಿದ ಒಂದು ಬುಕ್ಕು! ಇದೀಗ ಇದು ಧಾರವಾಡದ ಸಮಾಜ ಪುಸ್ತಕಾಲಯದಿಂದ ದ್ವಿತೀಯ ಮುದ್ರಣ ಕಾಣುತ್ತಿರುವುದು ನನಗೆ ಸಂತೋಷ ತಂದಿದೆ.

ಸಂಪಗೆಗಿಂತಲೂ ತಂಪಗೆ ಎಂದರೆ ಇಂಪಾಗುವುದು ಕೇಳ್ವರಿಗೆ ಎಂದು ಕುವೆಂಪು ಅವರು ಮೂವತ್ತೆಂಟು ವರ್ಷಗಳ ಹಿಂದೆಯೆ ಸಾರಿದರು. ಈ ಕವನವನ್ನು ಅವರು ಬರೆದು ಮುಗಿಸಿದ ಕೂಡಲೆ ನನಗೆ ಅದನ್ನು ಓದಿ ತೋರಿಸಿದ ನೆನಪಿದೆ. ಬಹುಷಃ ಅಂದೆ ಆ ಘಳಿಗೆಯಲ್ಲಿಯೆ ಈ ಅನರ್ಥ ಕೋಶದ ಕಲ್ಪನೆ ನನ್ನಲ್ಲಿ ಮೂಡಿರಬೇಕು ಅನ್ನಿಸುತ್ತಿದೆ. ಅನಂತರ ಕುವೆಂಪು ಅವರೆ ನನ್ನನ್ನು 'ಆಲಿಸ್ ಇನ್ ವಂಡರ್'ಲ್ಯಾಂಡ್' ಎಂಬ ಸ್ವಪ್ನ ಕಥಾನಕವನ್ನು ಕನ್ನಡಿಕರಿಸುವಂತೆ ಪ್ರೇರೇಪಿಸಿದರು. ಅದರ ಗ್ರಂಥಕರ್ತನ ಚಮತ್ಕಾರಗಳ ಪೈಕಿ ಆತನ ಹೊಸ ಪದ ಪ್ರಯೋಗಗಳೂ ಬೆಸುಗೆ ಮಾತುಗಳೂ ನನ್ನೊಳಗೆ ಮನೆ ಮಾಡಿದವು. ಅಲ್ಲಿಂದೀಚೆಗೆ ನಾನು ಬರೆದ ಕಥೆ, ಕಾದಂಬರಿ, ಹರಟೆ, ಅಣುಕು, ಮಿಣುಕು ಇವುಗಳಲ್ಲೆಲ್ಲ ನನ್ನ ಲೇಖನಿಯಿಂದ ಜಾರಿದ ಇಂಥ ಅನೇಕ ಹೊಸ ಪ್ರಯೋಗಗಳು ಸೇರಿಕೊಂಡಿವೆ. ಶ್ರೀ ವಿ ಕೃ ಗೋಕಾಕರು, ಶ್ರೀ ದ ರಾ ಬೇಂದ್ರೆಯವರು 'ಚಕ್ರದೃಷ್ಟಿ' 'ಗಾಳಿಗೋಪುರ'ಗಳ ಮುನ್ನುಡಿಯಲ್ಲಿ ನನ್ನ ಈ ಚಾಳಿಯನ್ನ ಮೆಚ್ಚಿದ್ದಾರೆ. ಶ್ರೀ ಡಿವಿಜಿಯವರಂತೂ ನನ್ನ ಬುರುಡೆಗೆ ಮಸಿ ತುಂಬುತ್ತಲೇ ಬಂದಿದ್ದಾರೆ.


'ಜನ ಮೆಚ್ಚಿ ಹುಚ್ಚನ್' ಎಂಬಂತೆ ನಾನು 'ಖಾರಂತ' ಎನ್ನುವ ಅಣಕು ಹೆಸರಿನಲ್ಲಿ ಕಾರಂತರು 'ಅರ್ಥಕೋಶ'ವನ್ನ ಬರೆದಂತೆ ಕೊರವಂಜಿಯ ಪುಟಗಳ ಮೂಲಕ ಒಂದು ಅರಥಕೋಶವನ್ನೆ ಆರಂಭಿಸಿದೆ. ಆಗಾಗ ಹರುಕುಮುರುಕಾಗಿ ಹೊರಬಂದ ಈ ಕೃತಿಯ ಮೂಲ ಸ್ವರೂಪವೆ ಅದು. ಹಳೆಯ ಮಾತುಗಳು ಅನೇಕ ಈಗ ಮರದಡಿಯ ಸೀತೆಯಂತೆ ಅರ್ಥ ಮರೆತು ಗೋಳಿಡುತ್ತಿವೆ. ಹೊಸ ಅರ್ಥವನ್ನೂ, ಹಲವು ವೇಳೆ ವಿಪರೀತಾರ್ಥವನ್ನೂ ತೊಟ್ಟು ತಲೆ ತಗ್ಗಿಸಿವೆ. ಹೊಸ ಮಾತುಗಳನ್ನ ರಚಿಸಿ ನಾವು ನಮ್ಮ ಬಾಳನ್ನ ಹಸನಾಗಿಸಬೇಕೆಂದು ದಿ ಗೋವಿಂದ ಪೈಗಳೂ ಕೂಡ ಒತ್ತಿ ಹೇಳಿ ಕನ್ನಡ ನಾಡಿನ ಮೇಧಾವಿಗಳನ್ನೂ, ಕೀಧಾವಿಗಳನ್ನೂ ಅದಕ್ಕಾಗಿ ಕರೆದರು. ಹೊಸಲು ದಾಟಿದರೆ ಹೊಸ ಅಯ್ಯ ಎನ್ನುತ್ತಾರೆ. ಹಾಗೆಯೆ ಸಂಸ್ಕೃಅತದಿಂದ ಕನ್ನಡಕ್ಕೂ ಇತರ ಭಾಷೆಗಳಿಂದ ನಮ್ಮ ಭಾಷೆಗೂ ಶತಮಾನದಿಂದ ಶತಮಾನಕ್ಕೂ ಹೊಸಲು ದಾಟಿದಾಗಲೆಲ್ಲ ಅವು ಹೊಸ ಅರ್ಥ ತಾಳಿ ಅವು ಹೊಸ ಅಯ್ಯ ಗಳಾಗುತ್ತವೆ. ಅಂತವು ಅನೇಕ ಈ ಗ್ರಂಥದಲ್ಲಿಯೂ ಇವೆ.

ಇಂಗ್ಲೀಷಿನಲ್ಲಿ ಂಒಃಖಔSಇ ಃIಇಖಅಇ ಎಂಬುವವರ ಆeviಟs ಆiಛಿಣioಟಿಚಿಡಿಥಿ ಇದೆ. ಅomiಛಿ ಆiಛಿಣioಟಿಚಿಡಿಥಿ ಎಂಬ ಅಮೇರಿಕನ್ ಗ್ರಂಥವನ್ನೂ ನಾನು ನೋಡಿದ್ದೇನೆ. ಆದರೆ ಅವೆರಡರಲ್ಲೂ ಗ್ರಂಥಕರ್ತರು ಹೊಸ ಪದ ಪ್ರಯೋಗ ನಿರ್ಮಾಣಕ್ಕೆ ಹೊರಟಿಲ್ಲ. ನನ್ನ ಅಭಿಪ್ರಾಯದಲ್ಲಿ ಇಂತಹ ಒಂದು 'ಶಬ್ದ ಕೋಶ' ಹೊರದೇಶಗಳ ಯಾವ ಭಾಷೆಯಲ್ಲಿಯೂ ಇಲ್ಲ, ಭರತಖಂಡದ ಭಾಷೆಗಳಲ್ಲಂತೂ ಇದು ನವನವೀನ. ಆದರೊಂದು ಮಾತು 'ನವೀನಮಿತ್ಯೇವ ನ ಸಾಧು ಸರ್ವಂ' ಅಲ್ಲಲ್ಲಿ ಕೆಲವು ಹಲವು ಅಸಾಧು ಇರಬಹುದು. ಅನಿವಾರ್ಯವಾದ ಅನರ್ಥಗಳೂ ಅವುಗಳಲ್ಲಿ ಸೇರಿ ಹೋಗಿವೆ!

ಸದ್ಯಕ್ಕೆ ನನ್ನದು ಒಂದೆ ಒಂದು ಬಿನ್ನಹ. ಇದನ್ನು ಒಟ್ಟಿಗೆ ಒಂದೆ ಕೂರಿನಲ್ಲಿ 'ಪುಟಪುಟ'ನೆ ಓದಬೇಡಿ. ಗ್ರಂಥವನ್ನು ಕೊಂಡು ಕೈಗೆ ಎಟುಕುವಷ್ಟು ದೂರದಲ್ಲಿ ಇರಿಸಿಕೊಳ್ಳಿ. ಕಣ್ಣಲ್ಲೇನೋ ಬಂದು, ತುಟಿಯಲ್ಲೇನೋ ನಿಂತಾಗ ಸರಕ್ಕನ್ನೆಳೆದು ನಾಲ್ಕೈದು ಮಾತುಗಳನ್ನ ಅವುಗಳ ಅರ್ಥವನ್ನೂ ಓದಿ. ಥಟಕ್ಕನೆ ರುಚಿ ಗೊತ್ತಾಗದಿದ್ದರೆ ಎರಡು ಬಾರಿ ಆಕಳಿಸಿ ಗ್ರಂಥವನ್ನು ಇನ್ನೂ ಕೊಂಚ ದೂರದಲ್ಲಿರಿಸಿ ಸಮಾಧಾನವಾಗಿರಿ!"

- ನಾ ಕಸ್ತೂರಿ.



ದಾವಣಗೆರೆಯ ಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ನಾ ಕಸ್ತೂರಿ ಅಪಾರ ಅಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿದ್ದವರು. ಕೆಲಕಾಲ ಮೈಸೂರಿನ ಶ್ರೀರಾಮಕೃಷ್ಣ ಮಠದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಅವರು ಕೊನೆಗಾಲದಲ್ಲಿ ಶಿರಡಿಯ ಸಾಯಿಬಾಬರ ಅವತಾರ ತಾನೆಂದು ಹೇಳಿಕೊಳ್ಳುತ್ತಿದ್ದ ಪುಟ್ಟಪರ್ತಿಯ ಕರಡಿ ಸಾಯಿಬಾಬರ ಭಕ್ತಾಗ್ರೇಣಿಯಾಗಿ ಹೋದರು. ಸಾಯಿ ಆತ್ಮ ಕಥೆಯಿಂದ ಹಿಡಿದು ಅವರ ಮಹಿಮೆ ಸಾರುವ ಅನೇಕ ಭಕ್ತಿಭಾವದ ಗ್ರಂಥಗಳನ್ನ ರಚಿಸಿದ ನಾ ಕಸ್ತೂರಿ ಮಲಯಾಳಂನ ಪ್ರಸಿದ್ಧ ಕಾದಂಬರಿ ತಕಳಿ ಶಿವಶಂಕರ ಪಿಳ್ಳೆಯವರ "ಚೆಮ್ಮೀನ್"ನನ್ನ ಕನ್ನಡಕ್ಕೆ ಅನುವಾದಿಸಿ ಗಳಿಸಿದ್ದ ಖ್ಯಾತಿಯ ನಂತರ ಸಾಯಿ ಭಕ್ತಿ ಪರವಶತೆಯಿಂದ ಹಾಸ್ಯಾಸ್ಪದರೂ ಆದರು. ಅದೇನೆ ಇದ್ದರೂ ಪರಭಾಷಿಗನಾಗಿದ್ದೂ ಕನ್ನಡವನ್ನ ಕಲಿತು ಬೆಳೆಸಿದ ಕೀರ್ತಿ ಇವರದ್ದು. ಅದಕ್ಕಾಗಿ ಅವರು ಸದಾ ಸ್ಮರಣೀಯರು. ಅವರ ಕಾಲಾತೀತ ಹಾಸ್ಯ ಇಂದಿಗೂ ಪ್ರಸ್ತುತವಾಗಿಯೆ ಉಳಿದಿದೆ. ಈ ಕಾಲದ ಕೋಡಂಗಿಗಳಂತಹ ಟಿವಿ ಹಾಸ್ಯ ಸಾಹಿತಿಗಳನೇಕರ ಬಂಡವಾಳವಿಲ್ಲದ ಬಡಾಯಿಗೆ ಕಳ್ಳಸಾಗಣೆ ಮಾಡುವ ಹಾಸ್ಯದ ಆಕರ ಗ್ರಂಥವಾಗಿಯೆ ಅವರ ಬರಹಗಳು ಉಳಿದಿವೆ.  

Sunday, September 28, 2014

ಪುಸ್ತಕದೊಳಗೆ - ೧೮





"ನನ್ನ ಮಗ ಗುರುದತ್ತ"

ಲೇಖಕರು; ವಾಸಂತಿ ಪಡುಕೋಣೆ,
ಪ್ರಕಾಶಕರು; ಮನೋಹರ ಗ್ರಂಥಮಾಲಾ.
ಪ್ರಕಟಣೆ; ೧೯೭೬,
ಕ್ರಯ; ರೂಪಾಯಿ ಇಪ್ಪತ್ತು.


" ೧೯೫೩, ಮೆ ತಿಂಗಳಲ್ಲಿ ಗುರುದತ್ತನ ಮದುವೆಯಾಯಿತು. ಗೀತಾರಾಯ್'ಳನ್ನು ಅವಳ ಹಣಕ್ಕೋಸ್ಕರ ಗುರುದತ್ತ ಮದುವೆ ಮಾಡಿಕೊಂಡಿರುವನೆಂದೂ, ಇಲ್ಲದಿದ್ದರೆ ಆತನಿಗು ಆಕೆಗೂ ಎಲ್ಲಿಂದೆಲ್ಲಿಗೆ ಎಂದೂ 'ಟೈಮ್ಸ್' ಪತ್ರಿಕೆಯವರು ತುಂಬಾ ಅವಹೇಳನ ಮಾಡಿ ಬರೆದಿದ್ದರು. ಗುರುದತ್ತನಿಗೆ ವಾಸ್ತವದಲ್ಲಿ ಎಂದೂ ಹಣದ ಮೇಲೆ ಆಸೆ ಇರಲಿಲ್ಲ. ಹಾಗೆ ಇದ್ದದ್ದೇ ಆಗಿದ್ದರೆ ಆಕೆಯ ಹಣವನ್ನೆಲ್ಲ ದೋಚಿಕೊಂಡು ಆಕೆಯನ್ನಾತ ಕೈಬಿಡಬಹುದಾಗಿತ್ತು. ಆತ ದುಡಿದಿದ್ದು ಸ್ವತಃ ದುಡಿದು, ಅದರ ಒಂದು ಕಾಸನ್ನೂ ಇಟ್ಟುಕೊಳ್ಳದೆ ಬಂದದ್ದನೆಲ್ಲ ಪರೋಪಕಾರಕ್ಕಾಗಿ, ದಾನಕ್ಕಾಗಿ ಖರ್ಚು ಮಾಡುವ ಎದೆ ಅವನಿಗಿತ್ತು. ಇಷ್ಟಾಗಿ ಮಾಡಿದ್ದನ್ನು ಹೇಳಿಕೊಳ್ಳುವ ಚಟವೂ ಅವನಿಗಿರಲಿಲ್ಲ. ಈ ಚಿತ್ರಪಟದ ವ್ಯವಸಾಯವೆ ಹೆಚ್ಚಾಗಿ ಆತ್ಮಸ್ತುತಿ ಮಾಡಿಕೊಳ್ಳುವುದಕ್ಕೆ ಹಿರಿದು. ಇನ್ನೊಬ್ಬರು ತಮ್ಮನ್ನು ಮೆಚ್ಚಿ ಮಾತನಾಡುತ್ತಾರೋ ಇಲ್ಲವೋ? ಎಂಬ ಅನುಮಾನವಿದ್ದವರು ಸ್ವತಃ ಆತ್ಮಸ್ತುತಿ ಮಾಡಿಕೊಳ್ಳುತ್ತಿರಬಹುದು. ಗುರುದತ್ತನಿಗೆ ಯಾರ ಹೊಗಳಿಕೆಯಾಗಲಿ ಅಥವಾ ತೆಗಳಿಕೆಯಾಗಲಿ ಅತ್ತ ಲಕ್ಷ್ಯವೆ ಇರುತ್ತಿರಲಿಲ್ಲ. ತಾನಾಯಿತು, ತನ್ನ ಕೆಲಸವಾಯಿತು.ಹೀಗಾಗಿ ಅವನ ಸದ್ಗುಣಗಳು ಯಾರಿಗೂ ತಿಳಿಯದೆ ಹೋದವು. ಬಾಯಿಬಿಚ್ಚಿ ತನ್ನ ಸುಖ ದುಃಖಗಳನ್ನು ಹೇಳದ್ದರಿಂದ ಅವು ಯಾರಿಗೂ ತಿಳಿಯದೆ ಹೋದವು. ಸದಾ ಹಣದ ತಾಪತ್ರಯವಂತೂ ಇದ್ದೇ ಇತ್ತು. ಅಂದರೂ ಒಮ್ಮೆ ಕೈಯಲ್ಲಿ ತೆಗೆದುಕೊಂಡ ಕೆಲಸವನ್ನು ಆತ ಎಂದೂ ಕೈಬಿಡಲಿಲ್ಲ, ಇನ್ನೊಬ್ಬರ ಮುಂದೆ ಹೋಗಿ 'ದೇಹಿ' ಎಂದು ಕೈ ಒಡ್ಡಲಿಲ್ಲ.


'ಬಾಝ್' ನಂತರ 'ಆರ್ ಪಾರ್' ಫಿಲ್ಮಿನಲ್ಲಿ ಶ್ಯಾಮಾ ಎಂಬುವಳನ್ನು ನಾಯಕಿಯನ್ನಾಗಿ ಮಾಡಿ ತಾನು ನಾಯಕನಾಗಿ ಕೆಲಸ ಮಾಡಹತ್ತಿದನು. ಶ್ರಮಜೀವಿಗಳ ಬದುಕನ್ನ ತೋರಿಸುವ ಆ ಫಿಲ್ಮು ತುಂಬಾ ನಡೆದು ಹೆಸರನ್ನ ತಂದಿತು ಜೊತೆಗೆ ಹಣವನ್ನೂ ಸಹ. ಈ ನಡುವೆ ಮನೆಯ ವಾತಾವರಣವೆ ಬದಲಾಗಿದ್ದರಿಂದ ದೇವಿದಾಸನೂ, ವಿಜಯನೂ  ಓದು ಬರಹದಲ್ಲಿ ಮನಸ್ಸು ಹಾಕುತ್ತಿರಲಿಲ್ಲ. ದೇವಿದಾಸನನ್ನು ಒಂದು ಬೋರ್ಡಿಂಗಿಗೆ ಸೇರಿಸುವ ಸಲಹೆ ನಾನು ಗುರುದತ್ತನಿಗೆ ಕೊಟ್ಟೆನು. ಅವನಿಗೆ ಆಗ ಅದು ಸಾಧ್ಯವಾಗಲಿಲ್ಲ. ಆದರೂ ನನ್ನ ಮಾತಿಗೆ ಒಪ್ಪಿ ದೇವಿದಾಸನನ್ನು SSP ಶಾಲೆಗೆ ಸೇರಿಸಿದನು.೧೯೫೩ ನವಂಬರದಲ್ಲಿ ಆತ್ಮಾರಾಮಾ, ನಾಗರತ್ನಾ ಇವರ ಮದುವೆಯೂ ಆಯಿತು.

ಗೀತ ಮದುವೆಯಾದ ನಂತರ ಹಿಂದಿನಂತಿರಲಿಲ್ಲ. ಆಕೆಯ ಸ್ವಭಾವವೆ ಬದಲಾಯಿಸಿತ್ತು. ಮದುವೆಯನಂತರ ಸುಖವಾಗಿ ಆನಂದದಲ್ಲಿರುವುದರ ಬದಲಿಗೆ ಗುರುದತ್ತ - ಗೀತಾ ಇಬ್ಬರಲ್ಲೂ ಸದಾ ಜಗಳವೆ ಹೆಚ್ಚಾಗಿ ಕಂಡುಬರುತ್ತಿತ್ತು. ಗೀತಾ ಒಳ್ಳೆಯ ಹುಡುಗಿ ಹೌದು, ಆದರೂ ಏಕೋ ಏನೋ ಆ ಮದುವೆ ಸುಖಕರವಾಗಲಾರದೆಂದು ನನ್ನ ಒಳ ಮನಸ್ಸಿಗೆ ಕಾಣುತ್ತಿತ್ತು. ಗುರುದತ್ತನೂ ನನ್ನಲ್ಲಿ ಸಲುಗೆಯಿಂದಿದ್ದಾಗ ನನಗೆ ಅನಿಸಿದ್ದರ ಸೂಚನೆಯನ್ನೂ ಅವನಿಗೆ ಕೊಟ್ಟಿದ್ದೆ. ಆತನಿಗೂ ಒಮ್ಮೊಮ್ಮೆ ಹಾಗೆಯೆ ಕಾಣುತ್ತಿತ್ತೇನೋ ಆದರೆ ಕೊಟ್ಟ ಮಾತಿಗೆ ಎಂದೂ ಆತ ತಪ್ಪುತ್ತಿರಲಿಲ್ಲ. 'ಅಮ್ಮಾ, ನಾನು ಏನೆ ಆದರೂ ಗೀತಾಳನ್ನ ಪ್ರೀತಿಸುತ್ತೇನೆ. ಅದೂ ಅಲ್ಲದೆ ಅವಳನ್ನೆ ವರಿಸುವೆನೆಂದು ನಾನು ಮಾತು ಕೊಟ್ಟಿರುವುದನ್ನು ಹೇಗೆ ತಾನೆ ಒಪ್ಪಿ ತಪ್ಪಿಸಲಿ? ಸಾಧ್ಯವಿಲ್ಲ ಎಂದೂ ಸಾಧ್ಯವಿಲ್ಲ. ಅದೃಷ್ಟದಲ್ಲಿ ಇದ್ದಂತಾಗಲಿ. ನೀನು ಸುಮ್ಮನೆ ಚಿಂತಿಸಿ ಹಣ್ಣಾಗಬೇಡಮ್ಮ' ಎಂದೊಮ್ಮೆ ನನಗೆ ಹೇಳಿದ್ದನು. ಅವನೆ ಹೀಗೆ ಹೇಳುತ್ತಿರುವಾಗ, ಅವನೆ ನಮ್ಮ ಕುಟುಂಬಕ್ಕೂ ಆಧಾರವಾಗಿರುವಾಗ ನಾನಾದರೂ ಬಲವಂತ ಹೇಗೆ ಮಾಡಲಿ? ನಾನು ಮಾಡಿದರೂ ಅವನು ಕೇಳುವವನಲ್ಲ. ದೇವರೆ ಗತಿ ಅಂದುಕೊಂಡು ಸುಮ್ಮನಾದೆ.

೧೯೫೪ ಜುಲೈ ತಿಂಗಳ ಒಂಬತ್ತಕ್ಕೆ ಗುರುದತ್ತನ ಚೊಚ್ಚಲ ಮಗು ತರುಣನ ಜನನವಾಯಿತು. ಅದೆ ವರ್ಷ ಮೆ ೩೧ಕೆ ಮಗಳು ಲಲಿತೆಗೂ ಹೆಣ್ಣು ಮಗು ಹುಟ್ಟಿತು. ಗುರುದತ್ತನಿಗೆ ತನ್ನ ಮಗನಿಗಿಂತ ಲಲಿತೆಯ ಮಗಳ ಮೇಲೆಯೆ ಹೆಚ್ಚು ಮಮತೆ. ಮೊದಲು ಕೂಸು ನೋಡಿದವನೆ ಅವನು. ಹುಟ್ಟಿದ ಮೂರನೆ ದಿನಕ್ಕೆ ಅದರ ಎಷ್ಟೋ ಫೋಟೋಗಳನ್ನ ತೆಗೆದಿದ್ದನು. ಅದೆಷ್ಟೋ ವರ್ಷಗಳವರೆಗೆ ಸಣ್ಣ ಮಕ್ಕಳಿಲ್ಲದೆ ಇದ್ದ ಮನೆ ಈಗ ತುಂಬಿದಂತಾಯಿತು. ಇಬ್ಬರು ಮೊಮ್ಮಕ್ಕಳಿಗೂ ಹನ್ನೆರಡನೆ ದಿನ ಹೆಸರಿಡುವ ಸಂಭ್ರಮ ನಡೆಯಿತು. ಮಗಳ ಮಗುವಿಗೆ ಕಲ್ಪನಾ ಎಂದು ಹೆಸರಿಟ್ಟದ್ದಾಯಿತು. ಮಗ ಹುಟ್ಟಿದ ಮೇಲೆ ಗುರುದತ್ತ - ಗೀತ ತಕ್ಕ ಮಟ್ಟಿಗೆ ಸಂತೋಷವಾಗಿ ಅನ್ಯೋನ್ಯವಾಗಿಯೇ ಇದ್ದರು. ಮಗನಿಗಾಗಿ ಒಬ್ಬ ಆಯಾಳನ್ನು ಗೊತ್ತು ಮಾಡಿದರು. ನಾನು ಹೆಚ್ಛಾಗಿ ಮಗಳ ಮನೆಯಲ್ಲಿಯೆ ಇರುತ್ತಿದ್ದೆ. ಏಕೆಂದರೆ ಆಕೆಗೆ ಆಯ ಇಡುವ ಮನಸ್ಸೂ ಇರಲಿಲ್ಲ ಅನುಕೂಲತೆಯೂ ಇರಲಿಲ್ಲ.


ಒಂದು ವರ್ಷದಲ್ಲಿ ಗೀತಾ ಅತಿರೇಕದ ಸಿಡುಕಿನಿಂದ ಅನೇಕ ಬಾರಿ ಮನೆಬಿಟ್ಟು ಹೋಗಿದ್ದಳು. ಮದುವೆಯಾದ ನಂತರವಂತೂ ಆಕೆ ಸಂಪೂರ್ಣ ಸ್ವಾತಂತ್ರ್ಯ ತೆಗೆದು ಕೊಂಡಿದ್ದಳು. ಆದರೆ ಗಂಡ ಇದ್ದಾನೆಂಬ ನೆಪದಿಂದ ಇನ್ನೂ ಹೆಚ್ಚು ಸ್ವೇಚ್ಛಾಚಾರಿಯಾಗಿರಲಿಲ್ಲ ಅಷ್ಟೆ. ಅವಳ ಸಂಪಾದನೆಯೆಲ್ಲ ಅವಳ ಕೈಯಲ್ಲಿ. ಗುರುದತ್ತ ಅತ್ತ ಎಂದೂ ಲಕ್ಷ್ಯ ಹಾಕಲಿಲ್ಲ. ಅದು ಎಷ್ಟು ಎಂದೂ ಸಹ ಕೇಳುತ್ತಿರಲಿಲ್ಲ. ಹಾಗಾಗಿ ಅವಳ ದುಂದುವೆಚ್ಚಕ್ಕೆ ಹಾದಿಯಾಗಿತ್ತು. ಅಲ್ಲದೆ ಅನೇಕ ಸ್ನೇಹಿತರೂ ಇದಕ್ಕೆ ಕೂಡಿಕೊಂಡರು. ಅವರೊಡನೆ ಮನಸ್ಸು ಬಂದ ಕಡೆ ತಿರುಗುವುದು ಹೆಚ್ಚಾಯಿತು. ಕ್ರಮೇಣ ಸ್ವೇಚ್ಛಾಚಾರ ಮಿತಿಮೀರಲು ಆರಂಭಿಸಿತು. ಆಗಲೆ ಗುರುದತ್ತ ಒಂದಷ್ಟು ದಿಟ್ಟತನದಿಂದ ಲಗಾಮು ಜಗ್ಗಿ ತಡೆ ಹಿಡಿದಿದ್ದರೆ ಕುದುರೆ ಸರಳ ಹಾದಿ ಹಿಡಿಯುತ್ತಿತ್ತೋ ಏನೋ? ಸಡಿಲು ಬಿಟ್ಟು ತಪ್ಪು ಮಾಡಿದ.

........

೧೯೫೫ರಲ್ಲಿ ಗುರುದತ್ತನು ಖಾರಿನ ೧೨ನೆ ರಸ್ತೆಯಿಂದ ೧೯ನೆ ರಸ್ತೆಯಲಿಯ ಒಂದು ದೊಡ್ಡ ಮನೆ ಬಾಡಿಗೆ ಹಿಡಿದು ಅಲ್ಲಿಗೆ ಹೋದನು. ಆಗ ಗುರುದತ್ತನ ಸ್ಟೂಡಿಯೋ ತಾಡ್'ದೇವ್'ದಲ್ಲಿತ್ತು. ಈ ಸಲ ಹಾಸ್ಯ ಪ್ರಧಾನವಾದ ಚಿತ್ರಪಟವೊಂದನ್ನು ತಯಾರಿಸುವ ಇಚ್ಛೆಯಿಂದ ಆತನು ಮಧುಬಾಲಾಳಿಗೆ ನಾಯಕಿ ಪಾತ್ರ ಕೊಟ್ಟು ತಾನು ನಾಯಕನ ಪಾತ್ರ ವಹಿಸಿದನು. ಇದೂ ಅತ್ಯಂತ ಭರಪೂರ ನಡೆಯಿತು, ಕೈಯಲ್ಲಿ ಹಣ ಓಡಾಡ ಹತ್ತಿತು. ತರುಣನ ವರ್ಷದ ಹುಟ್ಟುಹಬ್ಬ ವಿಜೃಂಭಣೆಯಿಂದ ನಡೆಯಿತು. ಹುಟ್ಟು ಹಬ್ಬದ ಆಮಂತ್ರಣದ ಕಾರ್ಡುಗಳನ್ನ ಲಲಿತೆ ತಾನೆ ಮಾಡಿದ್ದಳೂ. ಗುರುದತ್ತಾ - ಗೀತಾ ಕೂಡಿಕೊಂಡು ಅನೇಕ ಸಲ ಮುಂಬೈಯನ್ನೆಲ್ಲಾ ಇಬ್ಬರೆ ಸುತ್ತಾಡಿಬಂದರು. ಮೊದಲನೆ ಸಲ ಲಂಡನ್ನಿಗೂ ಹೋಗಿ ಬಂದರು. ಇದೆ ವರ್ಷ ನಮ್ಮ ಯಜಮಾನರೂ ರಿಟೈರ್ ಆದರು. ನಾನೂ ಅವರೊಂದಿಗೆ ದೆಲ್ಲಿ, ಜಯಪುರ, ಕಾಶ್ಮೀರ, ಹರಿದ್ವಾರ, ಋಷಿಕೇಶ ಮುಂತಾದ ಸ್ಥಳಗಳನ್ನೆಲ್ಲ ನೋಡಿಬಂದು ನನ್ನ ಅನೇಕ ದಿನದ ಬಯಕೆ ತೀರಿಸಿಕೊಂಡೆನು. ನನ್ನ ತಾಯಿಯನ್ನು ಲಲಿತೆಯ ಮನೆಯಲ್ಲಿ ಇರುವಂತೆ ಒಪ್ಪಿಸಿದೆನು. ನಮ್ಮ ಯಜಮಾನರು ಇಬ್ಬರು ಮಕ್ಕಳಲ್ಲಿಯೂ ಸ್ವಲ್ಪ ಸ್ವಲ್ಪ ದಿನ ಇರಲಾರಂಭಿಸಿದರು. ನಾನು ಮುಂಬೈ ಬಿಡುವಾಗಲೆ ಸ್ವಲ್ಪ ಜ್ವರವಿತ್ತು. ಆದರೆ ನಾನು ಯಾರಿಗೂ ಹೇಳಲಿಲ್ಲ. ಒಮ್ಮೆ ಮುಂಬೈ ಬಿಟ್ಟರೆ ಸಾಕಾಗಿತ್ತು. ನಮ್ಮ ಸಂಸಾರವೋ ಬಡತನದ್ದು. ಸದಾ ದುಡ್ಡಿನ ಚಿಂತೆ. ಬರುವುದು ಕಡಿಮೆ ಹೋಗುವುದು ಹೆಚ್ಚು. ನಮಗಲ್ಲದೆ ನಮ್ಮಿಂದ ನಮ್ಮ ಮಕ್ಕಳಿಗೂ ಅವರ ಪಾಡು ದುಃಖಕ್ಕೀಡಾಗುವುದು. ಆಗ ಯಾರನ್ನವರು ಸಂಭಾಳಿಸಬೇಕು? ಮಾತಿಗೊಮ್ಮೆ ಸಿಡಿದೇಳುವ ತಮ್ಮ ಹೆಂಡತಿಯನ್ನೆ? ಮುಸು ಮುಸು ಮಾಡುವ ತಂದೆ ತಾಯಂದಿರನ್ನೆ? ಈ ಅನುಭವ ನಮಗಷ್ಟೆ ಕಾಯ್ದಿರಿಸಿದ್ದಲ್ಲ. ಇಡಿ ಜಗತ್ತಿನ ಅನುಭವವೆ ಇದು.

ಗುರುದತ್ತ ನನ್ನಿಂದ ದೂರವಾಗಿದ್ದೇನೋ ನಿಜ ಆದರೆ ನನ್ನ ಬೇಕು ಬೇಡಗಳನ್ನು ಅವನು ಯಾವಾಗಲೂ ಪೂರೈಸುತ್ತಿದ್ದನು. ನನಗೆ ಎಲ್ಲಿಗೆ ಬೇಕೋ ಅಲ್ಲಿಗೆ ಕಳಿಸಿಕೊಡುವನು. ಚಿಕ್ಕಂದಿನಿಂದಲೂ ದೊಡ್ಡೂರುಗಳನ್ನೂ, ಪ್ರಕೃತಿ ಸೌಂದರ್ಯವನ್ನೂ ನೋಡಬೇಕೆಂಬ ನನ್ನ ಹುಚ್ಚು ಕುತೂಹಲವನ್ನೂ ಡಾರ್ಜಲಿಂಗ್, ಕಾಶ್ಮೀರಗಳಂತಹ ರಮ್ಯ ಪ್ರದೇಶಗಳಿಗೆ ಕಳಿಸಿಕೊಟ್ಟು ತೃಪ್ತಿ ಪಡಿಸಿದನು. ನಾನೂ ಅವನ ಮಾತಿಗೆ ವಿರುದ್ಧ ಹೋಗುತ್ತಿರಲಿಲ್ಲ. ಅವನ ವೈವಾಹಿಕ ಜೀವನದಲ್ಲಾಗಲಿ, ವ್ಯಾವಹಾರಿಕ ಜೀವನದಲ್ಲಾಗಲಿ ನಾನು ಕೈ ಹಾಕುತ್ತಿರಲಿಲ್ಲ. ನನ್ನಿಂದ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೆ. ಆದರೂ ಇನ್ನೊಬ್ಬರಿಗೆ ತಗ್ಗಿ ಇದ್ದು ತನ್ನ ಜೀವಮಾನವನ್ನು ಇನ್ನು ಕಳೆಯುವ ಸಮಯ ಬಂತಲ್ಲಾ ಎಂದು ಒಳಗೊಳಗೆ ಬೇಯುತ್ತಿದ್ದೆ.

ಗುರುದತ್ತ ಮುಂಗೋಪಿಯೂ ಹೌದು, ಆದರೆ ಆತನ ಮನಸ್ಸು ಸ್ಪಟಿಕದಂತೆ ಸ್ವಚ್ಛವಾಗಿತ್ತು. ಪರನಿಂದೆ ಆತನಿಗೆ ಸಹಿಸುತ್ತಿರಲಿಲ್ಲ. ಆತನ ನಿರ್ಮಲವಾದ ಸ್ವಭಾವವೆ ಆತನನ್ನ ಕುತ್ತಿಗೆ ಗುರಿ ಮಾಡುತ್ತಿತ್ತು. ಅವನ ಹಿತಶತ್ರುಗಳು ಅವನನ್ನ ಹೊಗಳಿದಂತೆ ಮಾಡಿ ಮೋಸ ಮಾಡುತ್ತಿದ್ದರು. ಏನೆ ಆದರೂ ಪರೋಪಕಾರ, ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಊಟ ಹಾಕುವುದು ಅವರಿಗೆ ಪಾಠ ಶಾಲೆಯ ಖರ್ಚು ಕೊಡುವುದು ಮಾಡುವುದನ್ನ ಆತ ಬಿಡುತ್ತಿರಲಿಲ್ಲ. ಅದರೆ ಪ್ರತಿಫಲ ಬಯಸುತ್ತಿರಲಿಲ್ಲ. ತಾನು ಹೀಗೆ ಮಾಡಿದೆ ಎಂದೂ ಹೇಳಿಕೊಳ್ಲುತ್ತಿರಲಿಲ್ಲ. ಇದನ್ನೆ ಒಳಮುಚುಗ ಸ್ವಭಾವವೆಂದು ಕರೆದು ಆತನನ್ನು ಅಹಂಕಾರಿ ಎಂದು ಜರೆದವರೂ ಉಂಟು. ಆತನನ್ನು ಆತನ ಜೀವಮಾನದುದ್ದಕ್ಕೂ ಯಾರೊಬ್ಬರೂ ಸರಿಯಾಗಿ ತಿಳಿದುಕೊಳ್ಳಲಿಲ್ಲ. ಪದವಿಧರನಲ್ಲದಿದ್ದರೂ ಆತನಿಗೆ ಓದುವ ಹುಚ್ಚು ಬಹಳ. ಶೇಕ್ಸ್ಪಿಯರ್ಸ್, ಬರ್ನಾರ್ಡ್ ಷಾ, ಎಮಿಲ್ ಝೂಲಾ, ವುಡ್'ಹೌಸ್, ಟಾಲ್'ಸ್ಟಾಯ್, ಸ್ಟೆನ್'ಬೆಕ್ ಮೊದಲಾದವರ ಕೃತಿಗಳನ್ನ ಆತ ಅದೆಷ್ಟು ಬಾರಿ ಓದಿದ್ದನೋ ತಿಳಿಯದು. ಅಷ್ಟೊಂದು ನಂಬಿಕೆ ಇಲ್ಲದಿದ್ದರೂ ಖುರ್ಹಾನ್, ಬೈಬಲ್'ಗಳನ್ನೂ ಓದುತ್ತಿದ್ದನು. ತನಗೆ ತಿಳಿದಷ್ಟನ್ನು ತಿಳಿದ ಮಟ್ಟಿಗೆ ಜೀವನದಲ್ಲಿ ಅಚರಣೆಗೆ ತರಲು ಪ್ರಯತ್ನಿಸಿದನು. ಹಗಲು ರಾತ್ರಿ ಮನಸಿನಲ್ಲಿ ತನ್ನ ಚಿತ್ರಪಟದ ಬಗ್ಗೆಯೆ ತುಂಬಿಕೊಂಡಿರುತ್ತಿದ್ದನು. ಎದುರಿಗಿದ್ದವರನ್ನು ಮರೆತು ಇಇನ್ನೆಲ್ಲೋ ಧೇನಿಸುತ್ತಿರುವಂತೆ ಅವನ ಕಣ್ಣುಗಳು ಶೂನ್ಯ ದೃಷ್ಟಿಯನ್ನು ತೋರಿಸುತ್ತಿದ್ದವು. ಗೀತಾಳ ಸ್ವಭಾವ ಇದಕ್ಕೆ ವಿರುದ್ಧವಾಗಿತ್ತು. ಆಕೆ ತನ್ನ ಸುತ್ತಲೂ ಮಾಯಾಜಾಲವನ್ನು ಬೀಸಿ ತನ್ನನ್ನು ಥೈ ಥೈ ಕುಣಿಸುವ ವಂಚಕ ಸ್ನೇಹಿತರ ಬೆನ್ನು ಹತ್ತಿದ್ದಳು. ತೃಷ್ಣೆಯ ಶಮನಕ್ಕಾಗಿ ಮೃಗಜಲಕ್ಕೆ ಕೈ ಒಡ್ದಿ ನಡೆದಿದ್ದಳು. ತನ್ನ ಸುಖೋಪಭೋಗಗಳ ಮುಂದೆ ಆಕೆಗೆ ಏನೊಂದೂ ಕಾಣುತ್ತಿರಲಿಲ್ಲ. ದೈವದತ್ತವಾದ ದಿವ್ಯ ಕಂಠವೊಂದು ಅವಳಿಗಿತ್ತು. ಪಾರ್ಶ್ವ ಸಂಗೀತದಲ್ಲಿ ಲತಾ ಮಂಗೇಷ್ಕರಳ ನಂತರ ಇವಳ ಹೆಸರೆ ಪ್ರಸಿದ್ಧವಿತ್ತು. ಆದರೆ ಅದೃಷ್ಟವಿರಲಿಲ್ಲ. ಆಕೆಗೆ ಮನುಷ್ಯ ಸಹಜವಾದ ಅಂತಃಕರಣ ಪ್ರವೃತ್ತಿಯೆ ಇರಲಿಲ್ಲ. ಹೊರಮಿಂಚು, ಡೌಲು ಹಾಗೂ ಸವಿಮಾತು ಇವೆ ಅವಳನ್ನು ಆಕರ್ಷಿಸುತ್ತಿದ್ದವು. ಹೀಗಾಗಿ ಇಬ್ಬರ ಸ್ವಭಾವಗಳೂ ಎಂದೂ ಕೂಡಲೆ ಇಲ್ಲ. ಗುರುದತ್ತನ ಸರಳ ಸ್ವಭಾವ, ನಿರ್ಮಲ ಮನಸ್ಸನ್ನ ಅಕೆ ಎಂದೂ ತಿಳಿದುಕೊಳ್ಳಲೆ ಇಲ್ಲ. ತಿಳಿದು ಕೊಳ್ಳುವುದು ಅವಳ ಆಳವೂ ಅಲ್ಲ. ಹೀಗಿದ್ದೂ ಗುರುದತ್ತ ಅವಳಿಂದ ಏನನ್ನೂ ಮುಚ್ಚಿಡುತ್ತಲಿರಲಿಲ್ಲ. ಆಕೆ ಹತ್ತಿರ ಬಂದರೆ ಸಾಕು ಪ್ರತಿಯೊಂದನ್ನೂ ಆಕೆಗೆ ಹೇಳುತ್ತಿದ್ದನು. ಆಕೆಯ ಅಭಿಪ್ರಾಯ ಕೇಳುತ್ತಿದ್ದನು. ಉಶ್ಶೆಪ್ಪಾ! ಈಗ ಇಬ್ಬರೂ ಅನ್ಯೋನ್ಯತೆಯೊಂದಿರುವರಲ್ಲಾ! ಎಂದು ಉಸಿರು ಬಿಡುವಷ್ಟರಲ್ಲಿಯೆ ಮತ್ತೆ ಜಗಳ ಹುಟ್ಟಿಕೊಂಡಿರುತ್ತಿತ್ತು. ಜಗಳದ ಪರಿಣಾಮವೇನು? ಆಕೆ ತನ್ನ ತವರುಮನೆಗೆ ಹೊರಟು ಹೋಗಿ ಬಿಡುವುದು. ಇಲ್ಲಿದ್ದರೂ ಆಕೆಯ ಊಟ ಯಾವಾಗಲೂ ತಾಯಿಯ ಮನೆಯಿಂದಲೆ ಬರುತ್ತಿತ್ತು. ಈ ಗಂಡ - ಹೆಂಡಿರ ಜೀವನವೆಂದರೆ ನಮಗೊಂದು ಗೂಢವೆ ಆಗಿತ್ತು.


.........


ಒಮ್ಮೆ ಗುರುದತ್ತನು ಹೈದ್ರಾಬಾದಿಗೆ ಒಂದು ಚಿತ್ರಪಟದ ಬಿಡುಗಡೆಗೆ ಹೋದಾಗ ಒಂದು ತೆಲುಗು ಚಿತ್ರವನ್ನು ನೋಡಿದನಂತೆ. 'ರೋಜುಲು ಮರ್ಯಾವು' ಎಂಬುದು ಅದರ ಹೆಸರು. ಅದರಲ್ಲಿ ವಹೀದಾ ರೆಹಮಾನ್ ಎಂಬುವವಳು ನೃತ್ಯ ಮಾಡಿದ್ದುದು ಗುರುದತ್ತನಿಗೆ ತುಂಬಾ ಹಿಡಿಸಿತ್ತಂತೆ, ಕೂಡಲೆ ಅವಳನ್ನು ತನ್ನ ಮುಂದಿನ ಚಿತ್ರಕ್ಕೆ ಕಾಂಟ್ರಾಕ್ಟ್ ಮೂಲಕ ತೆಗೆದುಕೊಳ್ಳಬೇಕೆಂದು ಅನೇಕ ಸಲ ಅವಳ ತಾಯಿಯನ್ನು ಸಮಜಾಯಿಷಿಸಿದರೂ ಆಕೆ ಒಪ್ಪಲಿಲ್ಲವಂತೆ. ಒಮ್ಮೆ ತಲೆಯಲ್ಲಿ ಹೊಕ್ಕಿದ್ದನ್ನು ಸಹಸಾ ಬಿಡುವಂತವನೂ ಗುರುದತ್ತ ಅಲ್ಲ. ನಾನಾ ಉಪಾಯಗಳಿಂದ ತಾಯಿ-ಮಕ್ಕಳನ್ನು ಒಡಂಬಡಿಸಿ ಆಕೆಯ ಅನೇಕ ಕರಾರುಗಳಿಗೆ ಒಪ್ಪಿ, ಕಾಂಟ್ರಾಕ್ಟಿಗೆ ಆಕೆಯಿಂದ ಸಹಿ ಮಾಡಿಸಿಕೊಂಡೆ ಬೊಂಬಾಯಿಗೆ ಹಿಂದಿರುಗಿದನುಇವಳನ್ನು ಕೂಡಿಸಿಕೊಂಡು ತೆಗೆದ ಚಿತ್ರಪಟವೂ ಯಶಸ್ವಿಯಾಯಿತು. ಪ್ರತಿಯೊಬ್ಬರೂ ಮೊದಮೊದಲು ವಹೀದಾಳನ್ನು ತೆಗೆದುಕೊಂಡದ್ದಕ್ಕಾಗಿ ಗುರುದತ್ತನನ್ನು ಹೀಯ್ಯಾಳಿಸಿದ್ದರು. ಗುರುದತ್ತ ಅದಕ್ಕೆ ಕಿವಿಗೊಡಲಿಲ್ಲ. ಹೇಳಿದ ಕೆಲಸವನ್ನು ಶೀಘ್ರ ತಿಳಿದುಕೊಳ್ಳುವ ಬುದ್ಧಿ ಅವಳಿಗಿದೆಯೆಂದು ಹೇಳುತ್ತಿದ್ದ. ಆಗಿನ್ನೂ ಆಕೆಗೆ ಕೇವಲ ಹದಿನಾರು ವರ್ಷ ಪ್ರಾಯ. ಹೆಚ್ಚು ಕಲಿತವಳೂ ಅಲ್ಲ. ತಂದೆ ತೀರಿಕೊಂಡ ನಂತರ ಮನೆಯ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು. ಆಗ ಯಾರಿಂದಲೋ ಈ ಫಿಲ್ಮು ಜಗತ್ತು ಸೇರಿದಳು. ಗುರುದತ್ತ ಅವಳನ್ನು ಚಿತ್ರಪಟದಲ್ಲಿ ತಂದ ಬಳಿಕ ಚಿತ್ರಪಟ ವ್ಯವಸಾಯದಲ್ಲಿ ಗುರುದತ್ತನಲ್ಲಿದ್ದ ಜಾಣ್ಮೆ, ದಿಗ್ಧರ್ಶನ ಮಾಡುವ ಕಲೆ ಜನರ ಕಣ್ಣಿಗೆ ಹೊಡೆಯಿತು. ಆ ಫಿಲ್ಮು ತಂದ ಹಣದಿಂದ ತನ್ನ ಆಫೀಸಿನ ಎಲ್ಲಾ ಕೆಲಸಗಾರರಿಗೂ, ಮನೆಯಲ್ಲಿರುವ ಎಲ್ಲಾ ಆಳುಗಳಿಗೂ ಮೂರು ಮೂರು ತಿಂಗಳ ಬೋನಸ್ ಕೊಟ್ಟನು. ಯಾವಾಗಾದರೂ ಮೊದಲಿಗೆ ಸ್ಟೂಡಿಯೋದಲ್ಲಿರುವವರಿಗೆ ಸಂಬಳ ಕೊಟ್ಟು೭ ಕಡೆಗೆ ತನ್ನ ಮನೆಯ ಖರ್ಚಿಗೆ ಕೊಡುತ್ತಿದ್ದನು. ಷೂಟಿಂಗ್ ನಡೆಯುತ್ತಿರುವಾಗ ನಿಶ್ಯಬ್ಧತೆ ಇರಬೇಕು. ಸ್ವಲ್ಪ ಶಬ್ಧ ಅಥವಾ ಕೆಲಸದಲ್ಲಿ ಸ್ವಲ್ಪ ತಪ್ಪಾದರೆ ಸಾಕು ಹುಲಿಯಂತೆ ಗರ್ಜಿಸುವನು. ಎಲ್ಲರೂ ಇವನಿಗೆ ಹೆದರಿ ಸಾಯುತ್ತಿದ್ದರು. ಆದರೆ ಕೆಲಸ ತೀರಿದ ಬಳಿಕ ಗುರುದತ್ತ ಅವರ ಪರಮ ಮಿತ್ರ. ಅವರ ಸುಖ ದುಃಖ ಎಲ್ಲಾ ಕೇಳೀಕೊಳ್ಳುವನು. ಅವರಿಗೆ ಏನು ಬೇಕೋ ಅದನ್ನು ಒದಗಿಸುವನು. ಹೀಗಾಗಿ ಮೂರುನೂರು ಮಂದಿ ಕೆಲಸಗಾರರೂ ಆಫೀಸಿನ ಸಿಬ್ಬಂದಿಗಳೂ ಗುರುದತ್ತನನ್ನು ಅಷ್ಟೊಂದು ಶ್ರದ್ಧೆ ವಿಶ್ವಾಸಗಳಿಂದ ನೋಡಿಕೊಳ್ಳುತ್ತಿದ್ದರು. ಅವನಿಗೊಂದಷ್ಟು ತಲೆಶೂಲೆಯಿದ್ದರೆ ತಾವು ದೇವರಿಗೆ ಬೇಡಿಕೊಳ್ಳುವರು. ಪ್ರತಿ ವರ್ಷ ಒಬ್ಬ ಶಿಲ್ಪಿಯು ಗಣೇಶನ ಹಬ್ಬಕ್ಕೆ ಗಣಪತಿಯ ವಿಗ್ರಹ ಮಾಡಿ ತಂದುಕೊಟ್ಟು ತನ್ನ ಸಂಭಾವನೆ ಪಡೆಯುತ್ತಿದ್ದನು. ಆತನು ೧೯೬೩ರಲ್ಲಿ ತೀರಿಕೊಂಡದ್ದರಿಂದ ಅದೂ ನಿಂತು ಹೋಯಿತು.

ಗುರುದತ್ತನಿಗೆ ಚಿಕ್ಕ ಮಕ್ಕಳು ಎಂದರೆ ತೀರಿತು, ಬಹಳ ಪ್ರೀತಿ. ತನ್ನ ಹಿರಿಯ ಮಗ ತರುಣನ ಮೇಲಂತೂ ವಿಶೇಷ. ಏನೂ ಅವಕಾಶವಿಲ್ಲದಷ್ಟು ದುಡಿತವಿರುವ ತನ್ನ ಹೊತ್ತಿನಲ್ಲಿಯೆ ಒಂದಷ್ಟನ್ನು ಹೇಗಾದರೂ ಮಾಡಿ ಸ್ಮಯ ದೊರಕಿಸಿ ಅವನನ್ನು ಎತ್ತಿ ಆಡಿಸುವನು. ಅವನ ಮೇಲೆ ತನ್ನ ಪ್ರೀತಿಯ ಧಾರೆ ಸುರಿಸುವನು. ಅವನು ಆಗ ತಯಾರಿಸಿದ 'ಪ್ಯಾಸಾ' ಫಿಲ್ಮು ಅತ್ಯಂತ ಪ್ರಸಿದ್ಧಿ ಪಡೆಯಿತು. ಐಶ್ವರ್ಯ, ಹೆಸರು, ಜನ ಹೊಗಳಿಕೆ ಎಲ್ಲವನ್ನೂ ಅದು ತಂದಿತು.

ಲೋಣಾವಳಾದಲ್ಲಿ ಕೆಲವು ಎಕರೆ ಹೊಲ ಕೊಂಡು ಮೂರು ರೂಮನ್ನು ಅಲ್ಲಿ ಕಟ್ಟಿಸಿದ. ತನಗೆ ಬೇಸರವಾದಾಗ, ಪಿಚ್ಚರಿಗೋಸ್ಕರ ಏನಾದರೂ ಬರೆಯಬೇಕಾದಾಗ ಅಲ್ಲಿ ಹೋಗಿ ಇರುವನು. ತಾನೆ ಅಡುಗೆ ಮಾಡಿಕೊಳ್ಳುವನು. ನೋಡಿಕೊಳ್ಳಲು ಇಟ್ಟವರ ಜೊತೆ ಹೊಲದಲ್ಲಿ ದುಡಿಯುವನು.  ಅವರಿಂದ ಜೋಳದ ರೊಟ್ಟಿ ಅಥವಾ ಸಜ್ಜೆಯ ರೊಟ್ಟಿ ಇಸಕೊಂಡು ತಿನ್ನುವನು. ಅಲ್ಲಿ ತಾನೆ ತೋಡಿಸಿದ ಬಾವಿಯ ನೀರನ್ನು ತಾನೆ ಜಗ್ಗುವನು. ಅಕ್ಕಪಕ್ಕದ ಕೂಲಿ ಕುಂಬಳಿಯವರು ಬಂದರೆ ಅವರಿಗೂ ಹನಿಸುವನು. ಆ ಬಾವಿ ಅಲ್ಲಿಯವರಿಗೆಲ್ಲ ಪುಣ್ಯ ತೀರ್ಥದಂತಾಗಿತ್ತು. ಎಲ್ಲರೂ ನೀರು ಒಯ್ಯುವವರೆ. ಆ ಭೂಮಿಯಲ್ಲಿ ಬೆಳೆದು ಬಂದ ದವಸ ಧಾನ್ಯವನ್ನು ತಂಗಿ - ತಮ್ಮಂದರಿಗೂ ಹಂಚಿ ಉಳಿದಿದ್ದನ್ನು ಮನೆಗೆ ಕಳಿಸುವನು. ಇದೆಲ್ಲದರಿಂದ ಲೋಣಾವಾಳ ಗುರುದತ್ತನಿಗೆ ಪ್ರಾಣವಾಯಿತು.

ಆದರೆ ಅದೆ ಗೀತಾಳಿಗೆ ಪ್ರತಿರೋಧದ ಭಾವನೆಗೆ ಆಸ್ಪದ ಮಾಡಿಕೊಟ್ಟಿತು. ಹಳ್ಳಿಯ ಜೀವನವೆಂದರೆ ಮೂಗು ಮುರಿಯುವ ಸ್ವಭಾವ ಅವಳದು. ಇಷ್ಟಾಗಿ ಗುರುದತ್ತ ಯಾವುದರಲ್ಲಿ ಉತ್ಸಾಹ ತೋರಿಸುತ್ತಾನೋ ಅದರಲಿ ಅವಳಿಗೆ ನಿರುತ್ಸಾಹ. ಗಂಡ ಹೆಂಡತಿಯ ನಡುವಿನ ಈ ಜಗ್ಗಾಟದಲ್ಲಿಯೆ ತರುಣನ ನಂತರದ ಎರಡನೆಯ ಹುಡುಗ ಅರುಣ ಹುಟ್ಟಿದನು. ಇದು ೧೯೫೬ರಲ್ಲಿ. ಈ ಸಲವಾದರೂ ಹೆಣ್ಣು ಹುಟ್ಟಬಹುದೆಂಬ ಅವರಿಬ್ಬರ ಆಸೆ ಈಡೇರಲಿಲ್ಲ. ಈ ಮಧ್ಯೆ ಗುರುದತ್ತನು 'ಪಾಲಿಹಿಲ್ಸ್'ನಲ್ಲಿ ಒಂದು ನೂರು ವರ್ಷ ಹಳೆಯದಾದ ಬಂಗ್ಲೆಯೊಂದನ್ನು ಕ್ರಯಕ್ಕೆ ಕೊಂಡು ಅದರ ಮೇಲೆ ಸಾವಿರಗಟ್ಟಲೆ ಹಣ ಖರ್ಚು ಮಾಡಿ ತನಗೆ ಬೇಕಾದಂತೆ ಅದನ್ನು ಹೆಚ್ಚು ಕಡಿಮೆ ಮಾಡಿಕೊಂಡನು. ದೊಡ್ಡ ಮನೆಯಲ್ಲಿ ಒಮ್ಮೆ ಇರಬೇಕೆಂಬ ತನ್ನ ಮನೋವಾಂಛಿತವನ್ನು ಪೂರೈಸಿಕೊಂಡನು. ಗುಜರಾತದ ಹಸುಗಳು, ಸಾಯಾಮೀಜ ಬೆಕ್ಕು, ವಿವಿಧ ಜಾತಿಯ ನಾಯಿಗಳು, ಪಕ್ಷಿಗಳು, ಕೋತಿಗಳು, ಮೊಲಗಳು, ಇವೆಲ್ಲವನ್ನೂ ಮೀರಿ ಒಂದು ಹುಲಿಮರಿ! ಎಲ್ಲಾ ಬಂದು ಮನೆ ಸೇರುವಂತೆ ಮಾಡಿದನು. ಸಣ್ಣದೊಂದು ಸರ್ಕಸ್ಸೆ ನೆರೆದಂತಾಯಿತು. ಹುಲಿಮರಿಯು ಒಂದೊಮ್ಮೆ ಅರುಣನನ್ನು ನೆಕ್ಕಿತಂತೆ. ಕೂಡಲೆ ಅದನ್ನು ಯಾರಿಗೋ ಕೊಟ್ಟುಬಿಟ್ಟನು. ಧನ-ಧಾನ್ಯ, ಪಶು-ಪಕ್ಷಿ, ಮನೆ-ಮಕ್ಕಳು, ಸತಿ-ಸುತರು, ಈ ಎಲ್ಲಾ ಸುಖ ಸಮೃದ್ಧಿ ಯಾರಿಗೆ ಹೊಟ್ಟೆಕಿಚ್ಚು ತರುತ್ತಿತ್ತೋ ದೇವರಿಗೆ ಗೊತ್ತು. ಗೀತ ಹಿಂದೆ ಎಷ್ಟು ಸದ್ಗುಣಿಯಾಗಿದ್ದಳೋ ಅಷ್ಟೇ ಈಗ ನಾನಾ ತರಹದ ವ್ಯಸನಾಧೀನಳಾಗಿ ಅಲ್ಲದ ಸ್ನೇಹಿತರ ಕೂಡಿಕೊಂಡು ಬಂಗಾರದಂತಾ ತನ್ನ ಸಂಸಾರ ಸೌಧವನ್ನೆ ಹಾಳುಗೆಡವ ಹತ್ತಿದಳು. ಯಾವಾಗಲೂ ಅವಳ ಸುತ್ತ ವ್ಯಸನಿ ಗೆಳೆಯರು ನೆರೆದಿರುತ್ತಿದ್ದರು, ಹೆಣದ ಸುತ್ತ ಹದ್ದುಗಳು ನೆರೆದಂತೆ!


- ವಾಸಂತಿ ಪಡುಕೋಣೆ.


ಭಾರತೀಯ ಚಿತ್ರರಂಗವಿರಲಿ ಕಳೆದ ಶತಮಾನದ ಐವತ್ತರ ಹಾಗೂ ಅರವತ್ತರ ದಶಕದಲ್ಲಿ ತನ್ನ ನಿರ್ದೇಶನ ನೈಪುಣ್ಯದಿಂದ ಜಾಗತಿಕ ಚಿತ್ರರಂಗವೆ ಭಾರತದತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ನಮ್ಮ ಪಡುಕೋಣೆಯ ಗುರುದತ್ತರದ್ದು. ಬೆಂಗಳೂರಿನಲ್ಲಿ ಹುಟ್ಟಿ ಕೊಲ್ಕೊತ್ತಾದಲ್ಲಿ ಬೆಳೆದು ಮುಂಬೈನಲ್ಲಿ ಕೀರ್ತಿಯ ಉತ್ತುಂಗಕ್ಕೇರಿ ಲೋಣಾವಳದ ಮಣ್ಣಿನಲ್ಲಿ ಮಣ್ಣಾದ ಅಲ್ಪ ಅವಧಿಯಲ್ಲಿಯೆ ಅತ್ಯುಗ್ರವಾಗಿ ಉರಿದು ನಿಗೂಢ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿ ಅತಿ ಶೀಘ್ರವಾಗಿ ಇನ್ನಿಲ್ಲವಾದರೂ ಇಂದಿಗೂ ತನ್ನ ಕಲಾ ಜಾಣ್ಮೆಗಾಗಿ ನೆನಪಿಸಲ್ಪಡುವ ಪಡುಕೋಣೆ ಮೂಲದ ಗುರುದತ್ ಚಿತ್ರ ನಿರ್ಮಾಣದ ವಿಷಯಕ್ಕೆ ಬಂದರೆ ತಮ್ಮ ಕಾಲಕ್ಕಿಂತ  ಕನಿಷ್ಠ ಐವತ್ತು ವರ್ಷ ಮುಂದೆ ಇದ್ದವರು.


ದೇಶ ವಿಭಜನೆಯ ನಂತರ ಲಾಹೋರಿನಿಂದ ಮುಂಬೈಗೆ ಸ್ಥಳಾಂತರಗೊಡಿದ್ದ ಹಿಂದಿ ಚಿತ್ರೋದ್ಯಮ ಆಗಿನ್ನೂ ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸುವ ಶೈಶವಾವಸ್ಥೆಯಲ್ಲಿತ್ತು. ಅನೇಕ ಪ್ರತಿಭಾ ಸಂಪನ್ನರು ಧರ್ಮಾಧರಿತವಾಗಿ ರಚನೆಯಾದ ಪಾಕಿಸ್ತಾಸದಲ್ಲಿ ಇರಲು ಇಷ್ಟ ಪಡದೆ ಧರ್ಮಾತೀತ ಪ್ರಜಾಪ್ರಭುತ್ವ ಭಾರತದ ಕಡೆಗೆ ಮುಖ ಮಾಡಿದ್ದ ಹೊತ್ತದು. ಮುಂಬೈನಲ್ಲಿ ಸ್ಥಿತಗೊಂಡ ಹಿಂದಿ ಚಿತ್ರೋದ್ಯಮಕ್ಕೆ ಮದ್ರಾಸಿನಲ್ಲಿ ನೆಲೆಗೊಂಡು ಬೆಳೆದು ಬಲಿಷ್ಜ್ಠವಾಗಿದ್ದ ದಕ್ಷಿಣ ಭಾರತೀಯ ಚಿತ್ರೋದ್ಯಮ ಒಡ್ಡುತ್ತಿದ್ದ ಸಶಕ್ತ ಪೈಪೋಟಿಯನ್ನ ಎದುರಿಸಿ ತಾನೂ ಬೆಳೆದು ತೋರಿಸಬೇಕಾದ ಅನಿವಾರ್ಯತೆ ಇತ್ತು. ಗುರುದತ್ತ, ದೇವಾನಂದ, ಬಲರಾಜ ಸಹಾನಿ, ಪೃಥ್ವಿರಾಜ ಕಪೂರ್, ಬಿ ಆರ್ ಛೋಪ್ರಾರಂತಹ ಅನೇಕ ಖ್ಯಾತನಾಮರ ಕೊಡುಗೆಯ ಫಲವಾಗಿ ಮುಂಬೈ ಇಂದು ಜಾಗತಿಕ ಚಿತ್ರೋದ್ಯಮದ ಮುಖ್ಯ ಸ್ಥಳಗಳಲ್ಲೊಂದಾಗಿ ಗುರುತಿಸಪಡುತ್ತಿದೆ ಅಂದರೆ ಅದರಲ್ಲಿ ಅತಿಶಯೋಕ್ತಿ ಏನೂ ಇಲ್ಲ.

ಗುರುದತ್ ಜೀವಿತಾವಧಿ ಬರಿ ನಲವತ್ತು ವರ್ಷ ಅದರಲ್ಲಿ ಅರ್ಧಾಂಶ ಮಾತ್ರ ಆತನ ಚಿತ್ರಬಾಳ್ವೆ ಸಾಗಿತ್ತು. ಆರಂಭದಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕೆಲಕಾಲ ವೃತ್ತಿ ನಿರ್ವಹಿಸಿದ ಗುರುದತ್ ಅನಂತರ ನಟ ಹಾಗೂ ಸಹ ನಿರ್ದೇಶಕನಾಗಿ ಚಿತ್ರೋದ್ಯಮಕ್ಕೆ ಅಡಿಯಿಟ್ಟರು. ಅಂದಿನ ಖ್ಯಾತ ಚಿತ್ರೋದ್ಯಮಿ ವಿ ಶಾಂತಾರಾಮರ ಪ್ರಭಾತ್ ಫಿಲಂಸ್ ಗರಡಿಯಲ್ಲಿ ಪಳಗಿದ ಗುರುದತ್ ಅಲ್ಲಿ ದೇವ್ ಆನಂದ್ ಹಾಗೂ ರೆಹಮಾನ್ ಎಂಬ ಜೊತೆಗಾರರೊಂದಿಗೆ ಸಂಪಾದಿಸಿದ ಸ್ನೇಹ ಮುಂದೆ ದೇವ್ ಆನಂದರ ನವಕೇತನ ಫಿಲಂಸ್'ಕ್ಕಾಗಿ 'ಬಾಝಿ' ನಿರ್ದೇಶಿಸುವುದರೊಂದಿಗೆ ಪರ್ಯಾವಸನಗೊಂಡಿತು. ಆರಂಭದಲ್ಲಿ ಛಾಯಾಗ್ರಹಣದತ್ತ ಒಲವು ತೋರಿದ್ದ ಗುರುದತ್ತರ ಆಸಕ್ತಿ ನಿಧಾನಕ್ಕೆ ನಿರ್ದೇಶನದತ್ತ ಕೇಂದಿತಗೊಂಡಿತು. ಮುಂದೆ ತನ್ನದೆ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ ಗುರುದತ್ ಛಾಯಾಗ್ರಾಹಕ ವಿ ಕೆ ಮೂರ್ತಿ, ಅಬ್ರಾರ್ ಆಳ್ವಿ, ರಾಜ್ ಖೋಸ್ಲಾ, ಓ ಪಿ ನಯ್ಯರ್'ರಂತಹ ಪ್ರತಿಭಾವಂತರ ಪಡೆ ಕಟ್ಟಿದರು. ಮುಂದಿನ ದಿನಗಳಲ್ಲಿ ಜಾನಿ ವಾಕರ್, ವಹೀದಾ ರೆಹಮಾನ್'ರಂತಹ ಪ್ರತಿಭಾವಂತ ನಟ ನಟಿಯರನ್ನೂ ತೆರೆಗೆ ಪರಿಚಯಿಸಿದ ಶ್ರೇಯವೂ ಅವರಿಗೆ ಸಲ್ಲುತ್ತದೆ. ಈ ತಂಡದೊಂದಿಗೆ ತಾವೆ ನಿರ್ಮಾಪಕನಾಗಿ ತಯಾರಿಸಿದ ಚಿತ್ರ 'ಸಿಐಡಿ' ಕೂಡಾ ದೇವ್ ನಾಯಕರಾಗಿ ನಟಿಸಿದ್ದ ಚಿತ್ರವಾಗಿತ್ತು.  

ಯಶಸ್ಸು ಹಾಗೂ ಸೋಲು ಆಗಾಗ ವೃತ್ತಿ ಬಾಳಿನುದ್ದ ಎದುರಿಸಿದ ಗುರುದತ್ ತಯಾರಿಸಿದ 'ಪ್ಯಾಸಾ' 'ಜಾಲ್' 'ಸಾಹಿಬ್ ಬೀವಿ ಔರ್ ಗುಲಾಮ್' 'ಕಾಗಜ್ ಕೆ ಫೂಲ್' 'ಆರ್ ಪಾರ್' 'ಸೈಲಾಬ್' ''ಚೌದುವೀಕಾ ಚಾಂದ್' ನಂತಹ ಕೆಲವೆ ಕೆಲವು ಚಿತ್ರಗಳನ್ನ ನಟ ನಿರ್ಮಾಪಕ ನಿರ್ದೇಶಕ ಹೀಗೆ ವಿಭಿನ್ನ ನೆಲೆಯಲ್ಲಿ ಬಿಟ್ಟು ಹೋಗಿದ್ದರೂ ಅವೆಲ್ಲ ಇಂದಿಗೂ ಶ್ರೇಷ್ಠತೆಯ ಮಾನದಂಡದಲ್ಲಿ ಉನ್ನತವಾಗಿ ನಿಲ್ಲುವಂತವೆ. ಹೃಷಿಕೇಶ್ ಮುಖರ್ಜಿ ನಿರ್ದೇಶನದ 'ಸಾಂಜ್ ಅಔರ್ ಸವೇರ' ಗುರುದತ್ ಕೊಟ್ಟಕೊನೆಗೆ ತೆರೆಯ ಮೇಲೆ ಕಾಣಿಸಿಕೊಂಡ ಚಿತರವಾಗಿತ್ತು.

ವಯಕ್ತಿಕ ಬದುಕಿನ ಏರುಪೇರು. ಗೀತಾದತ್ ( ರಾಯ್.) ಜೊತೆಗಿನ ವಿಫಲ ವಿವಾಹ, ವಹೀದಾ ರೆಹಮಾನ್ ಜೊತೆಗಿನ ಸಂಶಯಾಸ್ಪದ ಪ್ರೇಮ ಇವೆಲ್ಲ ಗುರುದತ್ತರಂತಹ ಅಂತರ್ಮುಖಿಯನ್ನ ಸಾವಿನ ಮನೆಗೆ ತಳ್ಳಿದವೇನೋ. ಈ ಬಗ್ಗೆ ಆಶಾ ಭೋಂಸ್ಲೆ ವಿವಿಧಭಾರತಿಯ ಸಂದರ್ಶನವೊಂದರಲ್ಲಿ ಹೇಳಿದ್ದನ್ನ ಕೇಳಿದ್ದೇನೆ. ಮೂಲತಃ ಬರಹಗಾರಳೆ ಅಲ್ಲದ ಗುರುದತ್ ತಾಯಿ ವಾಸಂತಿ ಪಡುಕೋಣೆ ತನ್ನ ಮಗನ ಬಗ್ಗೆ ಆತನ ಸಾವಿನ ನಂತರ ಬರೆತ ನೆನಹುಗಳು 'ನನ್ನ ಮಗ ಗುರುದತ್ತ'ದಲ್ಲಿ ಕಾಣಸಿಗುತ್ತವೆ. ಕನ್ನಡವನ್ನಷ್ಟೆ ಬರೆಯಲು ಅರಿತಿದ್ದ ಅವರ ಈ ಬರಹವನ್ನ ಗಿರೀಶ ಕಾರ್ನಾಡರ ಮುನ್ನುಡಿಯೊಂದಿಗೆ ಮೂವತ್ತೈದು ವರ್ಷಗಳ ಹಿಂದೆ ಧಾರವಾಡದಿಂದ ಮನೋಹರ ಗ್ರಂಥಮಾಲಾ ಪ್ರಕಟಿಸಿತ್ತು. ಸದ್ಯ ಪ್ರತಿಗಳು ಹುಡುಕಿದರೆ ಸಿಕ್ಕಾವು. ಈ ಪುಸ್ತಕ ಮರು ಮುದ್ರಣಗೊಂಡ ಸುಳಿವಿಲ್ಲ. ಗುರುದತ್ತರ ತಂಗಿ ಮಗಳು ಕಲ್ಪನಾ ಲಾಜ್ಮಿ ಇವತ್ತಿಗೆ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು.


ನಮ್ಮ ಪಾಣೆ ಮಂಗಳೂರಿನಿಂದ ಹೋಗಿ ಜಾಗತಿಕವಾಗಿ ಮಿನುಗಿದ ಗುರುದತ್ ಕಡೆಯವರೆಗೂ ಪಡುಕೋಣೆಯ ಕನ್ನಡಿಗನಾಗಿಯೆ ಮೆರೆದರೆ ನೆನ್ನೆ ಮೊನ್ನೆ ಕಣ್ಣು ಬಿಟ್ಟ ಲಂಬೂ ನಟಿಮಣಿಯೊಬ್ಬಳು ತನ್ನ ಮೂಲವನ್ನ ಪಡು'ಕೋಣ್?' ಎಂದು ಹಿಂದೀಕರಿಸಿಕೊಳ್ಳುವ ವಿಫಲ ಮಂಗಾಟಕ್ಕೆ ಇಳಿದಿರೋದು ವ್ಯಂಗ್ಯದ ನಗು ಉಕ್ಕಿಸುತ್ತದೆ. ಚಿತ್ರಾಭಿಮಾನಿಗಳಿಗೆ ಇದೊಂದು ಒಳ್ಳೆಯ ಓದು.

Wednesday, September 24, 2014

ಪುಸ್ತಕದೊಳಗೆ - ೧೭






"ಗಾನ್ ವಿತ್ ದ ವಿಂಡ್" ( ಆಂಗ್ಲ.)

"ಗಾನ್ ವಿತ್ ದ ವಿಂಡ್" ( ಕನ್ನಡಾನುವಾದ.)

ಲೇಖಕರು; ಮಾರ್ಗರೆಟ್ ಮಿಶೆಲ್ ( ಮೂಲ.),

ಶ್ಯಾಮಲಾ ಮಾಧವ ( ಕನ್ನಡ.)

ಪ್ರಕಾಶಕರು; ಆಂಗ್ಲ, ಪ್ಯಾನ್ ಬುಕ್ಸ್.
ಕನ್ನಡ, ಅಂಕಿತ ಪುಸ್ತಕ.

ಪ್ರಕಟಣೆ; ೧೯೩೬ ( ಆಂಗ್ಲ ಮೊದಲ ಆವೃತ್ತಿ.)
೨೦೦೪ ( ಕನ್ನಡ ಆವೃತ್ತಿ.),

ಕ್ರಯ; ೮.೯೯ ಪೌಂಡ್ ( ಆಂಗ್ಲ.)
ರೂಪಾಯಿ ಇನ್ನೂರೈವತ್ತು ( ಕನ್ನಡ.).




                                    

            "ಅಂದು ರಾತ್ರಿ ಭೋಜನದಲ್ಲಿ ಸ್ಕಾರ್ಲೆಟ್ ತನ್ನ ತಾಯ ಸ್ಥಾನವನ್ನು ನಿರ್ವಹಿಸಿದಳಾದರೂ, ಅವಳ ಮನವೆಲ್ಲ ತಾಯ ಸಾಮೀಪ್ಯಕ್ಕಾಗಿ ಕಾತರಿಸುತ್ತಿತ್ತು. ತನ್ನ ಸಂಕಷ್ಟವನ್ನು ತಾಯೊಡನೆ ನಿವೇದಿಸಿ ಕೊಳ್ಳುವುದು ಅಸಾಧ್ಯವೇ ಇತ್ತಾದರೂ ತಾಯಿಯ ಉಪಸ್ಥಿತಿಯೇ ಅವಳ ಮನವನ್ನು ಹಗುರಾಗಿಸ ಬಹುದಿತ್ತು. ತನ್ನ ಸಮಸ್ಯೆಯನ್ನೇ ಮರೆತು ತಂದೆ ಎಂದಿನಂತೆ ಅಧಿಕಾರ ವಾಣಿಯಿಂದ ಯುಧ್ಧದ ಬಗ್ಗೆ ಘಂಟಾಘೋಷವಾಗಿ  ಮಾತು ಹರಿಸಿದಾಗ ಸ್ಕಾರ್ಲೆಟ್ ಇನ್ನು ಸಹಿಸದಾದಳು. ಅಷ್ಟರಲ್ಲಿಯೇ ಕೇಳಿಸಿದ ಬಂಡಿಯ ದನಿಗೆ ಅವಳು ಒಮ್ಮೆಲೇ ಕುಳಿತಲ್ಲಿಂದ ಎದ್ದು ಬಿಟ್ಟಳು.

              ಬಂಡಿಯು ನೇರವಾಗಿ ಮನೆಯ ಹಿಂಭಾಗಕ್ಕೆ ಹೋದುದರಿಂದ ಸ್ಕಾರ್ಲೆಟ್ ನಿರಾಶಳಾಗಿ ಪುನಃ ಕುಳಿತು ಬಿಟ್ಟಳು. ಹೊರಗೆ ಸಂಭ್ರಮದ ದನಿಗಳೊಡನೆ ಅದೇ ತಾನೇ ಹೊರಗೆ ಹೋದ ಪೋರ್ಕ್‍ನ ದನಿಯೂ ಸೇರಿ ಹೆಜ್ಜೆಗಳು ಊಟದ ಮನೆಯ ಹೊರಗೆ ನಡೆತಂದು ಒಳ ಬಂದ ಪೋರ್ಕ್ 
ಬಿನ್ನವಿಸಿದ;  "ಮಿಸ್ಟರ್ ಜೆರಾಲ್ಡ್, ನಿಮ್ಮ ಹೊಸ ಹೆಣ್ಮಗಳು ಬಂದಿದ್ದಾಳೆ."

            ಮದುಮಗನ ಸಂಭ್ರಮ ಅವನ ಮಾತು, ಮುಖದಲ್ಲಿ ಎದ್ದು ತೋರುತ್ತಿತ್ತು.

              "ಹೊಸ ಹೆಣ್ಣೇ? ನಾನ್ಯಾವ ಹೆಣ್ಣನ್ನೂ ಕೊಂಡಿಲ್ಲ."

              "ಹೌದು ಒಡೆಯಾ, ನೀವು ಕೊಂಡಿದ್ದೀರಿ. ಆಕೆ ಇಲ್ಲಿ ನಿಮ್ಮನ್ನು ಕಂಡು ಮಾತಾಡಲು ಕಾದಿದ್ದಾಳೆ." ಕೈಗಳನ್ನು ಹಿಸುಕುತ್ತಾ ಪೋರ್ಕ್ ನುಡಿದ .
               " ಸರಿ, ಮದುಮಗಳನ್ನು ಒಳಗೆ ಕರೆ ತಾ."

              ಒಳ ಪ್ರವೇಶಿಸಿದ ಡಿಲ್ಸಿಯು  ನೇರ ಮೈಕಟ್ಟು ನಡೆಯ ಗಂಭೀರ ಗತ್ತಿನ ಚಹರೆಯ ಮಹಿಳೆಯಾಗಿದ್ದಳು. ಆಕೆಯ ರೂಪದಲ್ಲಿ ನೀಗ್ರೋ - ಇಂಡಿಯನ್ ಚಹರೆಗಳೆರಡೂ ಮಿಳಿತವಾಗಿದ್ದುವು. ಸ್ಕಾರ್ಲೆಟ್‍ಗೂ ಮಿಸ್ಟರ್ ಒಹಾರಾಗೂ ಅಭಿವಾದಿಸಿದ ಆಕೆ ತನ್ನೊಡನೆ ತನ್ನ ಮಗಳನ್ನೂ ಕೊಂಡ ಒಡೆಯನ ಔದಾರ್ಯವನ್ನು ಹೊಗಳಿ ಕೃತಜ್ಞತೆ ಸಲಿಸಿ ತೊಂದರೆ ಕೊಡುತ್ತಿರುವುದಕ್ಕಾಗಿ ಕ್ಷಮೆ ಯಾಚಿಸಿದಳು. ಕರುಣೆಯ ಕಾಯಕದಲ್ಲಿ ಸಿಕ್ಕಿ ಬಿದ್ದ ಜೆರಾಲ್ಡ್ ಸಂಕೋಚಗೊಂಡ ಡಿಲ್ಸಿ ತನ್ನ ಮಗಳು ಪ್ರಿಸ್ಸಿಯನ್ನು ಸ್ಕಾರ್ಲೆಟ್‍ಗೆ ಆಳಾಗಿ ಕೊಟ್ಟಿರುವುದಾಗಿ ಸಾರಿದಳು. ಹಕ್ಕಿಯಂತೆ ತೆಳ್ಳಗಿದ್ದ ಪ್ರಿಸ್ಸಿಯ ಕೂದಲು ಹಲವಾರು ಪಿಗ್‍ಟೇಲ್‍ಗಳಲ್ಲಿ ಹೆಣೆಯಲ್ಪಟ್ಟಿತ್ತು. ತಾಯ ಸೂಚನೆಯಂತೆ ಪ್ರಿಸ್ಸಿ ಥಟ್ಟನೆ ವಂದಿಸಿ ನಕ್ಕಂತೆ ಹಲ್ಲು ಕಿರಿದಾಗ ಸ್ಕಾರ್ಲೆಟ್‍ಗೂ ನಗದೆ ಇರಲಾಗಲಿಲ್ಲ. 

              ಡಿಲ್ಸಿ ಅನುಮತಿ ಪಡೆದು ಮಗಳೊಡನೆ ಹೊರನಡೆದಳು. ಪೋರ್ಕ್ ಹಿಂಬಾಲಿಸಿದ.

             ಕ್ಯಾರಿನ್ ರಮ್ಯ ಕಾದಂಬರಿಯೊಂದರ ಪ್ರಣಯ ಪ್ರಸಂಗದಲ್ಲಿ ಮುಳುಗಿ ತೇಲುತ್ತಿದ್ದಳು. ಸ್ಯುಲೆನ್ ಮರುದಿನದ ಪಾರ್ಟಿಯಲ್ಲಿ ಸ್ಟ್ಯುವರ್ಟ್‍ನನ್ನು ಸ್ಕಾರ್ಲೆಟ್‍ಳ ಪಕ್ಕದಿಂದ ತನ್ನತ್ತ ತನ್ನ ನಾಜೂಕು ಸ್ತ್ರೀತ್ವದತ್ತ ಆಕರ್ಷಿಸಲು ಸಾಧ್ಯವಾದೀತೋ ಏನೆಂದು ಚಿಂತೆಯಲ್ಲಿ ಮುಳುಗಿದ್ದಳು. ಸ್ಕಾರ್ಲೆಟ ಆಶ್‍ಲಿಯ ಬಗೆಗಿನ ಚಿಂತೆಯುಲ್ಲಿ ಯೋಚನೆಯ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದಳು .

             ಅವಳ ಅಂತರಂಗವೆಲ್ಲ ಬುಡಮೇಲಾಗಿದ್ದರೂ ಅವಳ ಈ ಪ್ರೀತಿಯ ಕೋಣೆ ಮಾತ್ರ ಎಂದಿನ ವ್ಯವಸ್ಥೆಯಲ್ಲೇ ಇತ್ತು. ವಿಶಾಲ ಮಹಾಗನಿ ಮೇಜು, ಕಪಾಟುಗಳು, ಬೆಳ್ಳಿಯ ಪರಿಕರಗಳು, ಒರಸು ಬಟ್ಟೆಗಳು ಎಲ್ಲವೂ ಸ್ವಸ್ಥಾನದಲ್ಲೇ ಇದ್ದು ಅವಳ ಸಹನೆಯನ್ನು ಪರೀಕ್ಷಿಸುತ್ತಿದ್ದುವು. ಅಲ್ಲಿಂದ ಹೊರಗೋಡಿ ತಾಯ ಆಫೀಸ್ ಕೋಣೆಯಲ್ಲಿ ಅತ್ತು ಮನವನ್ನು ಹಗುರಾಗಿಸ ಬಯಸಿದ್ದಳು. ಅವಳ ಪರಮ ಪ್ರಿಯ ಕೋಣೆ- ತಾಯಿ ದಿನವೂ ಜಮೀನಿನ ಲೆಕ್ಕಪತ್ರಗಳನ್ನು ಪರಿಶೀಲಿಸುವ ಆ ಕೋಣೆಯಲ್ಲಿ - ತಾಯ ಮಡಿಲಲ್ಲಿ ತಲೆಯಿರಿಸಿ ಅತ್ತು ಮನವನ್ನು ಹಗುರಾಗಿಸ ಬಯಸಿದಳು ಸ್ಕಾರ್ಲೆಟ್.

            ಕೊನೆಗೂ ಬಂಡಿಗಾಲಿಗಳ ಸದ್ದೂ ಎಲೆನ್‍ಳ ಇನಿದನಿಯೂ ಕೇಳಿ ಬಂತು. ಎಲ್ಲ ಕಣ್ಗÀಳೂ ಉತ್ಸುಕತೆಯಿಂದ ಬಾಗಿಲತ್ತ ತಿರುಗಿದುವು.  ಎಲೆನ್ ಒಳ ಹೊಕ್ಕೊಡನೆ ಮಾಯೆಯಿಂದೆಂಬಂತೆ ಜೆರಾಲ್ಡ್‍ನ ಮುಖ ಬೆಳಗಿತು . 

            ಎಮ್ಮಿಯ ಮಗು ತೀರಿತೆಂದು ಎಲೆನ್ ತಿಳಿಸಿದಾಗ ತಾಯಿಯಿರದ ಆ ಮಗು ತೀರಿ ಕೊಂಡುದೇ ಉತ್ತಮವೆಂದು ಜೆರಾಲ್ಡ್ ಅನ್ನುವಾಗ ಎಲೆನ್ ಆ ಮಾತನ್ನಲ್ಲೇ ಹಗುರವಾಗಿ ಕಡಿದಳು. ಎಮ್ಮಿಯ ಮಗುವಿನ ತಂದೆ ಟ್ಯಾರಾದ ಓವರ್ಸಿಯರ್ ಆಗಿದ್ದ ಜೊನಾಸ್ ವಿಲ್ಕರ್‍ಸನ್ ಇರಬಹುದೆಂಬ ಸಂದೇಹ ಸ್ಕಾರ್ಲೆಟ್‍ಗೂ ಬಂದಿತ್ತು. 

              ಪ್ರಾರ್ಥನೆಗೆ ಸಜ್ಜಾದ ಎಲೆನ್‍ಳನ್ನು ಮ್ಯಾಮಿಯ ಧೃಢ ಸ್ವರ ಎಚ್ಚರಿಸಿತು. ಉಪಯೋಗಕ್ಕೆ ಬಾರದ ಕೃತಘ್ನರಾದ ಆ ಬಡ ಬಿಳಿಯರಿಗಾಗಿ ಜೀವ ತೇದು ಊಟ ಬಿಡುವುದರಲ್ಲಿ ಅರ್ಥವಿಲ್ಲವೆಂದು ಕಟುವಾಗಿ ನುಡಿದ ಮ್ಯಾಮಿ ಎಲೆನ್‍ಳ ಊಟವನ್ನು ಸಿಧ್ಧಗೊಳಿಸುವಂತೆ ಪೋರ್ಕ್‍ಗೆ ಆಜ್ಞಾಪಿಸಿದಳು. 

           ಎಲೆನ್ ಕುಳಿತೊಡನೆ ಮಕ್ಕಳ ಅಹವಾಲುಗಳು ಅವಳನ್ನು ಮುತ್ತಿ ಕೊಂಡವು. ನಡುನಡುವೆ ಮಕ್ಕಳನ್ನು ಗದರುತ್ತಾ ಜೆರಾಲ್ಡ್ ಕೂಡ ಪತ್ನಿಯು ತನ್ನ ಮಾತನ್ನೇ ಕೇಳಲೆಂಬ ತನ್ನಿಷ್ಟವನ್ನು ಸಾಧಿಸ ಹೊರಟಿದ್ದ. ಚಾಲ್ರ್ಸ್‍ಟನ್‍ನ ಸಜ್ಜನರ ಬಗ್ಗೆ ಜೆರಾಲ್ಡ್ ನುಡಿದ ಮಾತುಗಳನ್ನು ಒಪ್ಪಿ ಕೊಂಡ ಎಲೆನ್ ಮಕ್ಕಳ ಅಹವಾಲುಗಳಿಗೂ ಸಹನೆಯಿಂದ ಉತ್ತರಿಸಿದಳು.

            ಕರಿಯರನ್ನು ದಾಸ್ಯದಿಂದ ಬಿಡಿಸಿ ಸ್ವತಂತ್ರರಾಗಿಸ ಹೊರಟಿರುವ ಯಾಂಕಿಗಳು ಈ ಬಿಡುಗಡೆಗೆ ಯಾವ ಬೆಲೆಯನ್ನೂ ತೆರಲು ಸಿಧ್ಧರಿರದೆ ಇರುವ ಬಗ್ಗೆ ಜೆರಾಲ್ಡ್ ನುಡಿಯುತ್ತಿದ್ದಾಗ ಎಲೆನ್‍ಳ ಊಟ ಮುಗಿದು ಅವಳು ಎದ್ದು ಬಿಟ್ಟಳು. 

                 "ಪ್ರಾರ್ಥನೆಯೇ ?" ಜೆರಾಲ್ಡ್ ಅರೆಮನದಿಂದ ಕೇಳಿದ. 

                "ಹೌದು ಈಗಾಗಲೇ ಬಹಳ ತಡವಾಗಿದೆ" ಎಲೆನ್ ಉತ್ತರಿಸಿದಳು. 

             ಮೇಜು ಪ್ರಾರ್ಥನೆಗೆ ಸಿಧ್ಧವಾದೊಡನೆ ಎಲೆನ್ ಮೊಣಕಾಲೂರಿ ಧರ್ಮಗ್ರಂಥದ ಮೇಲೆ ಕೈಗಳನ್ನು ಜೋಡಿಸಿ ಆರಂಭಿಸಿದಳು. ತಂದೆ ಮಕ್ಕಳು ತಮ್ಮ ತಮ್ಮ ಸ್ಥಾನದಲ್ಲೂ ಆಳುಗಳು ಬಾಗಿಲ ಬಳಿಯಲ್ಲೂ ಮೊಣಕಾಲೂರಿ ಸಿಧ್ಧವಾದರು. ಮ್ಯಾಮಿ ನರಳುತ್ತಾ ತನ್ನ ಸ್ಥೂಲಕಾಯದ ಭಾರವನ್ನು ತನ್ನ ಮೊಣಕಾಲ್ಗಳ ಮೇಲಿರಿಸಿದರೆ ಪೋರ್ಕ್ ನೆಟ್ಟನೆ ಸರಳಿನಂತೆಯೂ ರೋಸಾ, ಟೀನಾ ಹಾಗೂ ಇತರ ಆಳುಗಳು ತಮ್ಮ ಕ್ಯಾಲಿಕೋ ಉಡುಪನ್ನು ಹರಡುತ್ತಲೂ ನಿದ್ದೆಯಿಂದ ಕಣ್ಣೆಳೆದು ಹೋಗುತ್ತಿದ್ದ ಜ್ಯಾಕ್ ಮ್ಯಾಮಿಯ ಕೈಗೆ ತನ್ನ ಕಿವಿ ಸಿಗದಂತೆ ದೂರದಲ್ಲೂ ಸಿಧ್ಧರಾಗಿ ಉತ್ಸುಕತೆಯಿಂದ ಪ್ರಾರ್ಥನೆಗಾಗಿ ಎದುರು ನೋಡಿದರು. 

              "ಪವಿತ್ರ ಮಾತೆ ಮೇರಿ ನಮಗಾಗಿ ಇಂದೂ ನಮ್ಮ ಅಂತಿಮ ಕ್ಷಣಗಳಲ್ಲೂ ಪ್ರಾರ್ಥನೆಯಿರಲಿ!" ಎಂದು ಸಾಗಿದ ಪ್ರಾರ್ಥನೆಯು ಇಂದೂ ಸ್ಕಾರ್ಲೆಟ್‍ಳ ಮನದ ತುಮುಲವನ್ನಡಗಿಸಿ ಶಾಂತಿ ತುಂಬಿತು. ಎಲೆನ್ ಮಧ್ಯಸ್ಥಿಕೆ ವಹಿಸಿದಾಗ ಸ್ವರ್ಗಕ್ಕೆ ಅವಳ ಕರೆಯು ಖಂಡಿತ ಕೇಳುವುದೆಂದು ಸ್ಕಾರ್ಲೆಟ್‍ಳ ಧೃಢ ನಂಬಿಕೆಯಾಗಿತ್ತು. 

             ಮುಗಿದ ಕೈಗಳ ಮೇಲೂ ತಲೆಬಾಗಿ ಆಶ್‍ಲಿಯ ಚಿಂತೆಯಲ್ಲಿ ಮುಳುಗಿದ್ದ ಸ್ಕಾರ್ಲೆಟ್‍ಗೆ ಇದ್ದಕ್ಕಿದ್ದಂತೆ ಆಶ್‍ಲಿಗೆ ತಾನು ಅವನನ್ನು ಪ್ರೇಮಿಸುತ್ತಿರುವ ಅರಿವೇ ಇಲ್ಲವೆಂಬ ಸತ್ಯ ಗೋಚರವಾಯ್ತು . ಅವನಿಗೆ ಅರಿವಾಗುವಂತೆ ತಾನೆಂದೂ ನಡೆದು ಕೊಂಡಿರಲಿಲ್ಲ. ಅವನ ಕಣ್ಗಳನ್ನು ಆಗಾಗ ಕವಿಯುತ್ತಿದ್ದ ವ್ಯಥೆಯ ಮೋಡಕ್ಕೆ ಇದೇ ಕಾರಣವೆಂದು ಆಕೆ ಅರಿತಳು. ಹೇಗಾದರೂ ತನ್ನ ಪ್ರೇಮವನ್ನು ಅರುಹಿದರೆ ..... ಹೌದು, ಹೇಗಾದರೂ ........

            ತಾಯಿಯ ದೃಷ್ಟಿ ತನ್ನ ಮೇಲಿದ್ದುದು ಅರಿವಾಗಿ, ಪ್ರಾರ್ಥನೆಯ ಸರಣಿಯನ್ನು ಮರೆತಿದ್ದ ಸ್ಕಾರ್ಲೆಟ್ ಎಚ್ಚತ್ತು ತನ್ನ ಭಾಗವನ್ನು ಮುಂದುವರಿಸಿದಳು. ಕನ್ಯೆ ಮೇರಿಯ ಸ್ತುತಿಯನ್ನು ಎಲೆನ್ ಸುಶ್ರಾವ್ಯವಾಗಿ ಮುಂದುವರಿಸಿದಾಗ ಎಂದಿನಂತೆ ಸ್ಕಾರ್ಲೆಟ್‍ಳ ಮನದಲ್ಲಿ ಮಾತೆ ಮೇರಿಯ ಸ್ಥಾನದಲ್ಲಿ ತಾಯಿ ಎಲೆನ್‍ಳ ಚಿತ್ರವೇ ಇತ್ತು. 

                ಪ್ರಾರ್ಥನೆ ಮುಗಿದು ಎದ್ದ ಪೋರ್ಕ್ ಉದ್ದದ ದೀಪದಾನಿಯ ದೀಪ ಬೆಳಗಿ ಹಾಲ್‍ಗೆ ನಡೆದು ಅಲ್ಲಿನ ವಿಶಾಲ ವಾಲ್‍ನಟ್ ಮೇಜಿನ ಮೇಲಿಟಸಂಖ್ಯ ದೀಪ ಮೋಂಬತ್ತಿಗಳಲ್ಲಿ ಒಂದು ದೀಪವನ್ನೂ ಮೂರು ಮೋಂಬತ್ತಿಗಳನ್ನೂ ಬೆಳಗಿಸಿ ರಾಜ-ರಾಣಿಯರನ್ನು ಶಯ್ಯಾಗಾರಕ್ಕೊಯ್ಯುವ ಗತ್ತಿನಲ್ಲಿ ದೀಪಧಾರಿಯಾಗಿ ಮುಂಬರಿದು ಉಪ್ಪರಿಗೆಯೇರಿದನು. ಜೆರಾಲ್ಡ್‍ನ ತೋಳನ್ನಾಧರಿಸಿ ಎಲೆನ್‍ಳೂ ಹಿಂದಿನಿಂದ ತಂತಮ್ಮ ಮೋಂಬತ್ತಿಗಳೊಡನೆ ಮಕ್ಕಳು ಮೂವರೂ ಸಾಗಿದರು. 

              ತನ್ನ ಕೋಣೆಯನ್ನು ತುಂಬಿದ ಮಂದವಾದ ತಿಂಗಳ ಬೆಳಕಲ್ಲಿ ಹಾಸಿಗೆಯ ಮೇಲೆ ಪವಡಿಸಿದ ಸ್ಕಾರ್ಲೆಟ್ ನಾಳೆಯ ದಿನದ ರಂಗುಗಂಗಿನ ಕನಸುಗಳನ್ನು ಹೆಣೆಯ ತೊಡಗಿದಳು. ತನ್ನ ಕಲ್ಪನೆಯ ಚಿತ್ರ ಪೂರ್ಣಗೊಂಡಾಗ ಅವಳು ಶ್ರೀಮತಿ ಆಶ್‍ಲಿ ವಿಲ್ಕ್ಸ್ ಆಗಿದ್ದಳು. ಇಚ್ಛೆ ಹಾಗೂ ಪ್ರಾಪ್ತಿ ಎರಡು ಬೇರೆ ಬೇರೆ ವಿಷಯಗಳೆಂಬ ಸತ್ಯವನ್ನು ಎಲೆನ್ ಆಕೆಗೆ ತಿಳಿ ಹೇಳಿರಲಿಲ್ಲ. ಹದಿಹರೆಯದ ಸೋಲರಿಯದ ಸಂತೃಪ್ತ ಜೀವನವು ವಿಧಿಯನ್ನೂ ಜಯಿಸಬಹುದೆಂದು ತಿಳಿದಿತ್ತು!"



- ಶ್ಯಾಮಲಾ ಮಾಧವ


ಇಲ್ಲಿಯವರೆಗಿನ ಪುಸ್ತಕಗಳ ಮಾರಾಟದಲ್ಲಿ ದಾಖಲೆಯನ್ನೆ ನಿರ್ಮಿಸಿದ ಕಾದಂಬರಿ "ಗಾನ್ ವಿತ್ ದ ವಿಂಡ್' ತನ್ನ ಮೊದಲ ಪ್ರಕಟಣೆಯ ನಂತರದ ಮುಕ್ಕಾಲು ದಶಕಗಳ ನಂತರವೂ ಮೊದಲಿನಷ್ಟೆ ಜನಪ್ರಿಯತೆ ಉಳಿಸಿಕೊಂಡಿರುವ ಈ ಕೃತಿಗಿಂತ ಜಾಗತಿಕವಾಗಿ ವ್ಯಾಪಾರದ ಅಂಕಿ ಸಂಖ್ಯೆಗಳ ತುಲನೆಯಲ್ಲಿ ಅಲ್ಪ ಅಂತರದಲ್ಲಿ ಮುಂದಿರುವ ಇನ್ನೊಂದು ಪುಸ್ತಕವೇನಾದರೂ ಇದ್ದರೆ ಅದು 'ಬೈಬಲ್' ಮಾತ್ರ! ವಿಶ್ವವಿಖ್ಯಾತವಾದ ಮಾರ್ಗರೆಟ್ ಮಿಶಲ್ ರಚಿಸಿದ ಈ ಉನ್ಮತ್ತ ಪ್ರಣಯದ ಕೃತಿಯನ್ನ ಲೇಖಕಿ ಶ್ಯಾಮಲಾ ಮಾಧವರು ಹತ್ತು ವರ್ಷಗಳ ಹಿಂದೆಯೆ ಕನ್ನಡದ ಓದುಗರಿಗೆ ಅನುವಾದದ ಮೂಲಕ ಪರಿಚಯಿಸಿದ್ದಾರೆ.  

'ಗಾನ್ ವಿತ್ ದ ವಿಂಡ್' ಅದರ ನಾಯಕಿ ಸ್ಕಾರ್ಲೆಟ್ಟಳ ಕಥೆ ಅಂತ ಮೇಲ್ನೋಟಕ್ಕೆ ಅನ್ನಿಸಿದರೂ ಇದರ ವಿಸ್ತಾರದ ಹರಿವು ಇನ್ನಷ್ಟು ಆಳವಾಗಿದೆ. ಅಮೇರಿಕಾವನ್ನ ಕಾಡಿದ ಆಂತರಿಕ ನಾಗರೀಕ ಯುದ್ಧ ಅಮೇರಿಕಾವನ್ನು ಹೈರಾಣಾಗಿಸಿದ್ದು. ಸಂಯುಕ್ತ ಸಂಸ್ಥಾನಗಳ ದಕ್ಷಿಣದ ರಾಜ್ಯ ಜಾರ್ಜಿಯದಲ್ಲಿ ಇದರ ಕಿಡಿ ಹೊತ್ತಿಕೊಂಡದ್ದು. ಆಫ್ರಿಕನ್ ಕಪ್ಪು ಅಮೇರಿಕನ್ನರ ಮೇಲಿನ ಅಸ್ಪರ್ಶ್ಯತೆಯ ದೌರ್ಜನ್ಯಕ್ಕೆ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳುವಲ್ಲಿ ಇದರ ಪರಿ ಸಮಾಪ್ತಿಯಾದದ್ದು. ಉತ್ತರ ಹಾಗೂ ದಕ್ಷಿಣದ ಏಳು ರಾಜ್ಯಗಳ ಸ್ವಾತಂತ್ರ್ಯ ಘೋಷಣೆಯ ಹಂತಕ್ಕೆ ಹೇತುವಾದ ಮೂಲ ನಿವಾಸಿಗಳು, ವಲಸಿಗ ಬಿಳಿಯರು ಹಾಗೂ ಆಫ್ರಿಕನ್ ಕರಿಯರ ನಡುವಿನ ದಮನಕಾರಿ ತಾರತಮ್ಯ ನೀತಿಯ ಚಲಾವಣೆ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ನಿರುಪಯುಕ್ತವಾದದ್ದು. ಅಬ್ರಾಹಂ ಲಿಂಕನ್ ರಾಷ್ಟ್ರದ ಚುಕ್ಕಾಣಿ ಹಿಡಿದು ಅಧ್ಯಕ್ಷನಾಗಿ ರಾಜಕೀಯ ಸವಾಲುಗಳ ಸರಮಾಲೆಯನ್ನೆ ಎದುರಿಸಬೇಕಾಗಿ ಬಂದುದು ಇವೆಲ್ಲ ಸರಣಿಯಾಗಿ ಓದುಗರ ಮನದ ಭಿತ್ತಿಯನ್ನ ಬಿಡಿ ಬಿಡಿ ಚಿತ್ರಗಳಾಗಿ ಆವರಿಸಿ ಕೂತು ಬಿಡುತ್ತವೆ. ಹಾಗಿದೆ ಮಿಶೆಲ್ ನಿರೂಪಣೆ.

ಕನ್ನಡಕ್ಕೆ ಬಹಳ ಅಸ್ಥೆಯಿಂದ ಇದನ್ನ ಅನುವಾದಿಸಿದ ಶ್ಯಾಮಲಾ ಮಾಧವರು ಈ ಬೃಹತ್ ಕೃತಿಯ ಪ್ರಕಟಣೆಗಾಗಿ ಅನುವಾದದ ನಂತರ ಒಂದು ದಶಕ ಕಾಯಬೇಕಾಯಿತು. ಆದರೆ ಈ ಸುದೀರ್ಘ ನಿರೀಕ್ಷೆ ಹುಸಿ ಹೋಗದ ಹಾಗೆ ಇದರ ಕನ್ನಡಾವತರಣಿಕೆಯೂ ಸಹ ಮೂಲದಷ್ಟೆ ಜನಪ್ರಿಯತೆ ಗಳಿಸಿತು. ಮುಂಬೈ ಕನ್ನಡತಿಯಾದ ಮಂಗಳೂರು ಮೂಲದ ಶ್ಯಾಮಲಾರು ಲೇಖಕಿ ಹಾಗೂ ಅನುವಾದಕಿಯಾಗಿ ಕನ್ನಡದ ಓದುಗರಿಗೆ ಸುಪರಿಚಿತರು. ತಮ್ಮ ಹನ್ನೊಂದರ ಹರೆಯದಲ್ಲಿಯೆ ಕವಯತ್ರಿಯಾಗಿ ಬರಹ ಜಗತ್ತಿಗೆ ಕಾಲಿಟ್ಟಿದ್ದ ಅವರು ೧೯೯೪ರಲ್ಲಿ 'ಆಲಂಪನಾ' ಉರ್ದು ಕೃತಿಯನ್ನ ಅದೆ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸುವ ಮೂಲಕ ಅನುವಾದಕಿಯಾಗಿಯೂ ಗುರುತಿಸಿಕೊಂಡರು. ಇದುವರೆಗೂ ನಿವೃತ್ತ ಪೊಲಿಸ್ ಅಧಿಕಾರಿ ರಾಮಣ್ಣ ರೈಗಳ ಆಂಗ್ಲ ಕೃತಿ 'ಮೈ ಡೇಸ್ ಇನ್ ಪೊಲೀಸ್' ( 'ಸುಧಾ'ದಲ್ಲಿ ಇದು 'ಪೊಲಿಸ್ ಡೈರಿ'ಯಾಗಿ ಪ್ರಕಟಗೊಂಡಿತು.), ವಿಲ್ಡ್ಯುರಾಂಟರ 'ದ ಸ್ಟೋರಿಸ್ ಆಫ್ ಸಿವಿಲೈಸೇಶನ್' ( ಭಾಗಶಃ.), 'ಎಂ ಆರ್ ಪೈ - ಅನ್ ಕಾಮನ್ ಮ್ಯಾನ್' ಇದರ ಭಾವಾನುವಾದ 'ಎಂ ಆರ್ ಪೈ - ಅಸಮಾನ್ಯ ಮನುಷ್ಯ', ವಿಶ್ವಸಾಹಿತ್ಯದ ಇನ್ನೊಂದು ಖ್ಯಾತ ಕೃತಿ 'ಫ್ರಾಂಕನ್ಸ್ಟೈನ್' ಕೂಡ ಇವರ ಅನುವಾದದ ಮೂಲಕ ಕನ್ನಡಕ್ಕೆ ಬಂದಿದೆ. ಸ್ಪಾರೋಗಾಗಿ ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿಕೊಟ್ಟ ಬಿ ಟಿ ಲಲಿತಾನಾಯಕರ ಎರಡು ಕಥೆಗಳು, ತುಳಸಿ ವೇಣುಗೋಪಾಲರ 'ಹೊಂಚು' ಕಥೆಯ ಆಂಗ್ಲಾನುವಾದ, ಕುವೆಂಪು ಭಾಷಾಭಾರತಿಗಾಗಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿಕೊಟ್ಟ ಡಾ ಬಾಬಾಸಾಹೆಬ್ ಅಂಬೇಡ್ಕರರ ಬರಹ ಮತ್ತು ಭಾಷಣಗಳು ಮುಂತಾದ ಕೃತಿಗಳ ಮೂಲಕ ಅನುವಾದಕ ಖ್ಯಾತರಾಗಿದ್ದಾರೆ.

ಇವಿಷ್ಟು ಅವರ ಪ್ರಕಟಿತ ಕೃತಿಗಳ ಕಥೆಯಾದರೆ. ಇನ್ನು ಆಂಗ್ಲದಿಂದ ಕನ್ನಡಕ್ಕೆ ಅವರು ಅನುವಾದಿಸಿರುವ ಅರುಂಧತಿ ರಾಯ್'ರವರ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಹಾಗೂ ಶಾಲೆಟ್ ಬ್ರಾಂಟಿಯ 'ಜೇನ್ ಏರ್' ಪ್ರಕಟಣೆಯ ಹೊಸ್ತಿಲಿನಲ್ಲಿವೆ. ಲೇಖಕಿ ಎಂ ಎಂ ಕೆಯವರ 'ಫಾರ್ ಪೆವೆಲಿಯನ್ಸ್' ಸದ್ಯ ಅವರಿಂದ ಕನ್ನಡಾನುವಾದಗೊಳ್ಳುತ್ತಿದೆ. ೨೦೦೪ರಲ್ಲಿ ಅತ್ಯುತ್ತಮ ಅನುವಾದಿತ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡಮಿ 'ಗಾನ್ ವಿತ್ ದ ವಿಂಡ್'ನ್ನ ಪುರಸ್ಕರಿಸಿತ್ತು. ಕೇವಲ ಅನುವಾದ ಕ್ಷೇತ್ರಕ್ಕಷ್ಟೆ ಸೀಮಿತಗೊಳ್ಳದ ಶ್ಯಾಮಲಾರ 'ಆಲೋಕ' ಕಥಾ ಸಂಗ್ರಹ, 'ಬದುಕು ಚಿತ್ತಾರ' ಲೇಖನಗಳ ಸಂಗ್ರಹ. 'ಸತ್ಸಂಚಯ'ವೆಂಬ ಸಂಪಾದಿತ ಕೃತಿಗಳು ಸಹ ಓದುಗರ ಮನ್ನಣೆಯನ್ನ ಗಳಿಸಿವೆ.  

'ಗಾನ್ ವಿತ್ ದ ವಿಂಡ್' ಕೃತಿಯು ಪುಸ್ತಕವಾಗಿ ಪ್ರಕಟಣೆಯಾದ ಎರಡು ವರ್ಷಗಳ ನಂತರ ವಿಕ್ಟರ್ ಫ್ಲೆಮಿಂಗ್ ನಿರ್ದೇಶನದಲ್ಲಿ ಸಿನೆಮಾವಾಗಿ ಬೆಳ್ಳಿತೆರೆಯನ್ನೂ ಏರಿತ್ತು. ೧೯೪೦ರ ಹನ್ನೆರಡನೆ ಅಕಾಡಮಿ ಪ್ರಶಸ್ತಿಗಳಲ್ಲಿ ಹತ್ತು ಪ್ರಶಸ್ತಿಗಳನ್ನ ಪ್ರಬಲ ಪೈಪೋಟಿಯ ನಡುವೆಯೂ ಇದೊಂದೆ ಚಿತ್ರ ದೋಚಿದ್ದೂ ಸಹ ಇದು ವರೆಗಿನ ದೊಡ್ಡ ದಾಖಲೆ. ಲೆಸ್ಲಿ ಹಾರ್ವರ್ಡ್, ಕ್ಲಾರ್ಕ್ ಗ್ಲೇಬ್, ಒಲಿವಿಯಾ ಡೆ ಹೆವ್ವಿಲ್ಯಾಂಡ್ ಹಾಗೂ ವಿವಿಯನ್ ಲೈ ಅಭಿನಯದ ಈ ಚಿತ್ರ ಬಹುತೇಕ ಎಲ್ಲಾ ವಿಭಾಗಗಳಲ್ಲೂ ಆ ಸಾಲಿನ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿತ್ತು. ಇವತ್ತಿಗೂ ಒಂದು ಪುಸ್ತಕವಾಗಿ ಹಾಗೂ ಸಿನೆಮಾವಾಗಿ 'ಗಾನ್ ವಿತ್ ದ ವಿಂಡ್' ಶ್ರೇಷ್ಠವೆಂದೆ ಪರಿಗಣಿತವಾಗುವ ವಿಶ್ವಮಾನ್ಯ ಕೃತಿ. 

ಪುಸ್ತಕದೊಳಗೆ - ೧೬




"ನಾಲ್ಲಕೆಟ್" ( ಮಲಯಾಳಂ.)

"ಚೌಕಟ್ಟಿನ ಮನೆ" ( ಕನ್ನಡಾನುವಾದ.) 

ಲೇಖಕರು; ಮಾಡತ್ತಿಲ್ ತೇಕ್ಕೆಪಾಟ್ ವಾಸುದೇವನ್ ನಾಯರ್,

ಪ್ರಕಾಶಕರು; ಮಲಯಾಳಂ, ಡಿಸಿ ಬುಕ್ಸ್,
ಕನ್ನಡ, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ,

ಪ್ರಕಟಣೆ; ೧೯೫೮ ( ಮೊದಲ ಆವೃತ್ತಿ.)
೨೦೧೩ ( ಇಪ್ಪತೈದನೆಯ ಆವೃತ್ತಿ.),

ಕ್ರಯ; ರೂಪಾಯಿ ತೊಂಬತ್ತೈದು ( ಮಲಯಾಳಂ.)
ರೂಪಾಯಿ ಎಪ್ಪತೈದು ( ಕನ್ನಡ.).



"ಮನೆಯ ಮುಂಬಾಗಿಲನ್ನು ತೆರೆದು ಯಾರೋ ಬೆಳಕು ಹಿಡಿದುಕೊಂಡು ಬಂದವರು ಹಾಗೆಯೆ ಹಿಂದಿರುಗಿ ಹೋದರು. ಒಳಗಿನಿಂದ ಒಂದು ನಾಮಜಪ ಕೇಳಿಸುತ್ತಿತ್ತು;

'ನಾರಾಯಣಾ... ನಾರಾಯಣಾ..."

ತಾನೆಲ್ಲಿದ್ದೇನೆ ಎಂದು ತಿಳಿಯಲು ಎಷ್ಟೋ ನಿಮಿಷಗಳು ಬೇಕಾದವು.

ಚಳಿಯಾದ ಗಾಳಿ ಬೀಸಿತು, ಕಣ್ಣ ರೆಪ್ಪೆಗಳೆರಡೂ ಭಾರವಾದ ಹಾಗೆ ಅನಿಸುತ್ತಿದ್ದವು. ಒಳಗಿನಿಂದ ಅದೆಲ್ಲಿಂದ ಎಂದು ತಿಳಿಯದು ಯಾರೋ ಸಣ್ಣ ಧ್ವನಿಯಲ್ಲಿ ಹೇಳುತ್ತಿದ್ದಾರೆ.

'ನರನಾಗಿ ಹುಟ್ಟಿ ಭೂಮಿಯ ಮೇಲೆ....'

ಮತ್ತೆ ಕಣ್ಣು ರೆಪ್ಪೆಗಳು ಮುಚ್ಚಿದವು, ಪುನಃ ಕಣ್ಣನ್ನು ತೆರೆದದ್ದು ಒಂದು ತಣ್ಣನೆಯ ಕೈ ತನ್ನ ಮೈಯನ್ನ ತಡವಿದಾಗಲೆ. ಬೆಚ್ಚಿ ಎದ್ದು ನೋಡಿದಾಗ ಅಜ್ಜಿಯೊಬ್ಬರು ಅವನ ಹತ್ತಿರದಲ್ಲಿಯೇ ಕುಕ್ಕರುಗಾಲಿನಲ್ಲಿ ಕೂತಿದ್ದರು. ಕೆಂಪು ಅಂಚಿನ ವಸ್ತ್ರವನ್ನ ಹೊದ್ದಿದ್ದ ಅವರ ತಲೆಗೂದಲೆಲ್ಲ ಬೆಳ್ಳನೆ ಬಿಳಿಯಾಗಿದ್ದು ಚರ್ಮ ಸುಕ್ಕುಗಟ್ಟಿ ಹೋಗಿತ್ತು. ಆಕೆಯ ಗಾಜಿನಂತಹ ಬೆಳಕು ಮಾಸಿದ ಕಣ್ಣುಗಳತ್ತ ನೋಡಿದಾಗ ಅಕೆಯ ಮುಖದಲ್ಲಿ ಸಣ್ಣದೊಂದು ನಗು ಕಾಣಿಸಿಕೊಂಡಿತು. ತತ್ಕಾಲಿಕವಾಗಿ ಅವನು ಹೆದರಿಕೆಯಿಂದ ಹೊರಬಂದ.

ಏನನ್ನೋ ಹೇಳಲು ಬಾಯಿ ತೆರೆದಾಗ 'ಹೆದರಬೇಡ ನಾನು ನಿನ್ನ ಅಜ್ಜಿ' ಎಂದು ಅವರು ಹೇಳಿದರು.

ಅಜ್ಜಿ! ಅವನ ಅಮ್ಮನ ಅಮ್ಮ!!

'ಎದ್ದು ಒಳಗೆ ಬಾ'

ಅಪ್ಪುಣ್ಣಿ ಎದ್ದು ನಿಂತು ಅವರನ್ನು ಹಿಂಬಾಲಿಸಿದ. ಬಾಗಿಲನ್ನು ಅವರು ತಲುಪುವಷ್ಟರಲ್ಲಿ ಪಡಸಾಲೆಯಲ್ಲಿ ನಿದ್ದೆ ಮಾಡುತ್ತಿದ್ದ ಕೆಲವರನ್ನು ಎಡವಿಕೊಂಡು ಹೋಗಬೇಕಾಗಿ ಬಂತು. ಚಿತ್ತಾರದಲ್ಲಿ ಕೊರೆದ ಮನೆಯ ತಲೆ ಬಾಗಿಲನ್ನು ದಾಟಿ ಅವರೊಂದಿಗೆ ಅವ ತೆಂಕು ಬದಿಗೆ ಹೋದ. ಅದರ ಹತ್ತಿರವೆ ನಡು ಅಂಗಳ. ಅದರ ಪಶ್ಚಿಮಕ್ಕೆ ಒಂದು ಕಿರು ದೀಪದ ಸೊಡರು ಉರಿಯುತ್ತಲಿತ್ತು.

ಮನೆಯ ತೆಂಕು ಭಾಗದ ಉದ್ದಗಲಕ್ಕೂ ಹೆಂಗಸರು ಮಲಗಿದ್ದರು, ನಿದ್ದೆ ಮಾಡುತ್ತಿದ್ದ ಅವರ ಹಿಂಡಿನತ್ತ ರಾತ್ರಿ ಕಂಡ ನಾಗಕನ್ನಿಕೆ ಕಣ್ಣಿಗೆ ಬಿದ್ದಾಳೆಯೆ ಎಂದು ಕುತೂಹಲದಿಂದ ಅವನು ಕಣ್ಣು ಹಾಯಿಸಿದ. ನಡು ಅಂಗಳವನ್ನ ಆವರಿಸಿ ನಿಲ್ಲಿಸಿದ ದಪ್ಪ ದಪ್ಪದ ಕಂಭಗಳನ್ನು ನೋಡುವುದೇ ಮನಸಿಗೊಂದು ಆನಂದ.

ಆ ಕಡೆ ಬಡಗು ಮನೆಯ ಕಿಡಕಿಗಳು ಮುಚ್ಚಿದ್ದವು, ಕಡುಗತ್ತಲೆ. ನೆಲದ ಮೇಲೆ ಯಾರೋ ಕೆಲವರು ಒರಗಿ ಕೊಂಡಂತೆ ಅಸ್ಪಷ್ಟವಾಗಿ ಗೋಚರಿಸಿತು. ಕಷ್ಟದಲ್ಲಿ ಹೆಜ್ಜೆ ಹಾಕಿ ಅಟ್ಟವಿಲ್ಲದ ಕಡೆ ಬಂದಾಗ ಹಿಂದಿನ ದಿನ ಮಾತನಾಡಿಸಿದ್ದ ಮಾಳು ಯಾವುದೋ ಕೆಲಸದಲ್ಲಿ ತೊಡಗಿಕೊಂಡಿರುವವಳಾಗಿ ಕಾಣಿಸಿದಳು.

ತಾನೋದು ಮಣೆಯ ಮೇಲೆ ಕೂತು, ಇವನನ್ನೂ ಹತ್ತಿರದಲ್ಲಿಯೇ ಕೂರಿಸಿಕೊಂಡು ಅಜ್ಜಿ 'ನನ್ನ ಕಂದಾ ನೀನು ಬಂದದ್ದೆ ನನಗೆ ಗೊತ್ತಾಗಲಿಲ್ಲ,  ಕೂಟ್ಟಿಗೆಯ ಹಾಳು ಮುದುಕಿ ನನಗೆ ಏನೂ ಹೇಳಲೆ ಇಲ್ಲವಲ್ಲೋ, ಈಗ ಮಾಳು ಹೇಳಿ ಗೊತ್ತಾಯಿತು' ಎಂದರು.

ಅವನ ತಲೆಯನ್ನ ತನ್ನ ಸೊರಗಿ ಸುಕ್ಕಾದ ಕೈಯಿಂದ ನೇವರಿಸುತ್ತಾ 'ನನ್ನ ಕಂದಾ, ಎಲ್ಲಾ ನನ್ನ ಹಣೆಬರಹ' ಎಂದು ಹೇಳಿ ಇನ್ನಷ್ಟು ಯೋಚಿಸುತ್ತಾ 'ಇದೆಲ್ಲಾ ನನ್ನ ಹಣೆಬರಹವಲ್ಲದೆ ಮತ್ತಿನ್ನೇನು?' ಎಂದು ಬಿಕ್ಕಳಿಸಿದರು. ಅವನಿಗೆ ಏನೊಂದನ್ನೂ ಹೇಳಲು ತೋಚಲಿಲ್ಲ. ಒಟ್ಟಿನಲ್ಲಿ ಮನದಾಳದಲ್ಲಿ ಮಾತ್ರ ತಳಮಳವಾಗಲಿಕ್ಕೆ ಶುರುವಾಯಿತು.

'ಪಾಠಶಾಲೆಗೆ ಹೋಗ್ತಿದೀಯ'

'ಹ್ಞುಂ'

'ಅವಳಿಗೆ ನೀನೆ ಗತಿ, ನೀನು ಮೇಲೆ ಬರಬೇಕು, ಅವಳಿಗೆ.... ಅವಳಿಗೆ....' ಅಜ್ಜಿಯ ಗಂಟು ಅಷ್ಟಕ್ಕೆ ಬಿಗಿದುಕೊಂಡು ಬಂತು.

ಅಷ್ಟರಲ್ಲಿ ಬಾಗಿಲಲ್ಲಿ ಒಬ್ಬಳು ಬಂದು ಇಣುಕಿ ನೋಡಿ ಹೋದಳು. ಅನಂತರ ಅಸಂಖ್ಯ ಅಪರಿಚಿತ ಹೆಂಗಸರ ಮುಖಗಳು ಬಾಗಿಲಿನ ಹತ್ತಿರ ಗುಂಪುಗೂಡಿದವು. ಎಲ್ಲರೂ ಅವನನ್ನೆ ದಿಟ್ಟಿಸುತ್ತಿದ್ದರು. ತಮ್ಮತಮ್ಮೊಳಗೆ ಬಾಯಿಗಳು ಮಾತ್ರ ಪಿಸುಗುಡುತ್ತಿದ್ದವು. ಆಗಾಗ ಹೊಸ ಹೊಸ ಮುಖಗಳು ಪ್ರತ್ಯಕ್ಷವಾಗುತ್ತಿದ್ದವು.

ಸ್ವಲ್ಪ ತಲೆಗೂದಲು ನೆರೆತ, ಯಜಮಾನಿಯ ಹಾಗಿದ್ದ ಒಬ್ಬ ಹೆಂಗಸು ಅಜ್ಜಿಯ ಮುಂದೆ ಬಂದು ಒಮ್ಮೆ ಹುಸಿ ಕೆಮ್ಮಿದಳು. ಆಮೇಲೆ ಮೆಲು ದನಿಯಲ್ಲಿ ಆಕ್ಷೇಪಿಸುವಂತೆ ಗಡುಸಾಗಿ 'ಅಮ್ಮಾ ಯಾವುದೋ ತೊಂದರೆ ಯಾಕೆ ತಂದು ಕೊಳ್ಳೋದು?' ಎಂದಳು.

'ಎಂಥಾದ್ದೆ ಅದು ಮಾರಿ ತೊಂದರೆ?'

'ಮಾವನಿಗೆ ಗೊತ್ತಾದರೆ ಉಳಿಗಾಲವಿಲ್ಲ'

ಅಜ್ಜಿ ಸಿಟ್ಟಿನಿಂದ ಕೆಂಡವಾದಳು. 'ಏನಾಯ್ತು ಗೊತ್ತಾದರೆ? ನನ್ನ ಸಿಗಿದು ಕೊಂದು ಹಾಕ್ತಾನೇನು ಅವನು?'

'ನೋಡು ಇದರಿಂದ ನನಗೂ, ನನ್ನ ಮಕ್ಕಳಿಗೂ ಯಾವುದೆ ತೊಂದರೆ ಆಗ ಕೂಡದು. ಅದಷ್ಟೆ ನಾ ಹೇಳೋದು'

'ಲೇ ಕಟುಕಿ, ನಿನ್ನ ಹೆತ್ತ ಹಾಗೆ ಇವನ ತಾಯಿಯನ್ನೂ ನಾನು ಹೊತ್ತು ಹೆತ್ತಿದೀನಿ ಕಣೆ'

'ಇದೆಲ್ಲ ಜಬರದಸ್ತು ಮಾವನ ಹತ್ರ ಮಾಡಿ, ನನ್ನ ಹತ್ರ ಬೇಡ'

ಮತ್ತಿನ್ನೇನನ್ನೂ ಅಜ್ಜಿ ಹೇಳಲಿಲ್ಲ, ತನ್ನ ಅಂಗವಸ್ತ್ರದಿಂದ ಸುಮ್ಮನೆ ಕಣ್ಣಿನಿಂದ ಜಿನುಗಿದ ಹನಿಗಳನ್ನ ಒರೆಸಿಕೊಂಡರಷ್ಟೆ. ವಾದಿಸಲಿಕ್ಕೆ ಬಂದ ಹೆಂಗಸು ಅಸಹಾಯಕತೆಯಿಂದ ಒಮ್ಮೆ ನೆಲವನ್ನ ಝಾಡಿಸಿ ತುಳಿದು ಅಲ್ಲಿಂದ ಜಾಗ ಖಾಲಿ ಮಾಡಿದಳು. ಈಗ ಹೆಂಗಸರು ನಿಂತಿದ್ದ ಬಾಗಿಲಿನ ಹತ್ತಿರ ಕೆಲ ಎಳೆಯ ಹುಡುಗರು ನಿಂತು ಇವನನ್ನೆ ಆಶ್ಚರ್ಯದಿಂದ ನಿರುಕಿಸುತ್ತಿದ್ದರು. ಹಿಂದಿನ ದಿನ ಮಧ್ಯಾಹ್ನದ ನಂತರ ಈಗ ಪುನಃ ಅವನು ಮುತ್ತಜ್ಜಿಯನ್ನ ಕಂಡ. 

ಅಡುಗೆ ಮನೆಯ ಕಡೆಯಿಂದ ಬಂದ ಮುತ್ತಜ್ಜಿ 

'ಅಪ್ಪೂ, ಇನ್ನು ನಾವು ಮನೆಗೆ ಹೋಗಬ್ಯಾಡವ? ನಿನ್ನ ಮನೆಗೆ ಮುಟ್ಟಿಸಿ... ನಾನೂ...'

ಇದಕ್ಕೆ ಅಜ್ಜಿಯೆ ಉತ್ತರಿಸಿದರು.

'ನೀ ಬೇಕಾದರೆ ಹೋಗು ಮುದುಕಿ, ಅವ ಈಗ ಬರಲ್ಲ.'

ಈ ಮಾತು ಕೇಳಿ ಹೆಂಗಸರು ಪರಸ್ಪರ ಮುಖಮುಖ ನೋಡಿಕೊಂಡರು. ಈಗ ಆ ದೊಡ್ಡ ಹೆಂಗಸು ಮತ್ತೆ ಅಸಹನೆ ಸೂಸುವಂತೆ ನೆಲ ಝಾಡಿಸುತ್ತಾ ಪಿರಿಪಿರಿಗುಟ್ಟುತ್ತಾ ಅಲ್ಲಿಂದ ಹೊರ ನಡೆದಳು. ಸಾಲದ್ದಕ್ಕೆ ಬಾಗಿಲ ಪಕ್ಕ ಉಗುರುರು ಕಚ್ಚುತ್ತಾ ನಿಂತಿದ್ದ ಹುಡುಗನೊಬ್ಬನ ಕೈ ಮೇಲೆ ಹೋಗುತ್ತಲೆ ಪಟ್ ಎಂದು ಹೊಡೆದು ಹೋದಳು. 

'ಮಾಳು ಇಲ್ಲಿ ಬಾ'

ಮಾಳು ಬಂದಾಗ 'ಮಾಳು ಅಪ್ಪುಣ್ಣಿಗೆ ಒಂದಿಷ್ಟು ಹಲ್ಲು ಪುಡಿನೂ ನೀರನ್ನೂ ಕೊಡು' ಎಂದರು ಅಜ್ಜಿ.

ಇಷ್ಟಾದರೂ ಕೊಟ್ಟಿಗೆಯ ಮುತ್ತಜ್ಜಿ ಸಂಶಯ ಕಳೆಯದೆ ಅಲ್ಲಿಯೆ ನಿಂತಿದ್ದಳು. 'ಮುದುಕಿ ನೀ ಹೋಗು ನಾನವನನ್ನ ಹೊಲೆಯರ ಹುಡುಗನ ಜೊತೆ ಕಳಿಸ್ತೀನಿ' ಎಂದಾಗ ಒಲ್ಲದ ಮನಸ್ಸಿನಿಂದಲೆ ಮುತ್ತಜ್ಜಿ ಹೊರಟಳು.

ಅಪ್ಪುಣ್ಣಿ ಮಾಳುವಿನ ಜೊತೆ ಹೊರಕ್ಕೆ ಹೋದ, ಹಲ್ಲು ಉಜ್ಜಿ ಮುಖ ತೊಳೆದು ಮತ್ತೆ ಅವನು ಅಜ್ಜಿಯ ಹತ್ತಿರ ಬಂದ. ಮಂಡಿಯ ಮೇಲೆ ಗಲ್ಲವನ್ನ ಇರಿಸಿಕೊಂಡ ಅಜ್ಜಿ ಅದೇನನ್ನೋ ಆಲೋಚಿಸುತ್ತಿದ್ದರು. ಅಪ್ಪುಣ್ಣಿಯೂ ಅವರಂತೆ ಸುಮ್ಮನೆ ಕುಳಿತುಕೊಂಡಿದ್ದ. ತನಗೆ ಬಡಿಸಿದಾಗ ಅವನಿಗೂ ಗಂಜಿ ಬಡಿಸಲಿಕ್ಕೆ ಅಜ್ಜಿ ಹೇಳಿದರು. ಅಡುಗೆ ಮನೆಯಿಂದ ಮಾತ್ರ ಗೊಣಗಾಟ ಸ್ಪಷ್ಟವಾಗಿ ಕೇಳಿಸುತ್ತಲೇ ಇತ್ತು.

ಗಂಜಿಯ ಜೊತೆ ಬಾಳೆಯ ಕೀತಿನಲ್ಲಿ ಚಟ್ನಿ ಹಾಗೂ ಸುಟ್ಟ ಹಪ್ಪಳವನ್ನೂ ಬಡಿಸಿದಾಗ ಅವನಿಗೆ ಉಣ್ನಲು ಯಾಕೋ ಹಸಿವೆಯೆ ಕಾಣಿಸಲಿಲ್ಲ. ಹಲಸಿನೆಲೆಯ ದೊನ್ನೆಯಲ್ಲಿದ್ದ ಗಂಜಿಯನ್ನ ಕುಡಿದದ್ದು ಮಾತ್ರ ಅಷ್ಟರಲ್ಲಿ ಹೆಂಗಸರೆಲ್ಲ ಲಗುಬಗೆಯಿಂದ ಅತ್ತಿತ್ತ ಚದುರುವುದು ಹಾಗೂ ಮಕ್ಕಳೆಲ್ಲ ಅಲ್ಲಲ್ಲಿಯೆ ಮರೆಯಾಗಿ ನಿಲ್ಲುವುದು ಕಾಣಿಸಿತು.

'ಒಡಹುಟ್ಟಿದವಳೆ....' ಸಿಡಿಲಿನ ಹಾಗಿತ್ತು ಆ ಕರ್ಕಶ ಧ್ವನಿ.

ಅಜ್ಜಿ ಹಲಸಿನೆಲೆಯ ದೊನ್ನೆಯನ್ನ ತಟ್ಟೆಯಲ್ಲಿಟ್ಟು 'ನಾರಾಯಣಾ... ನಾರಾಯಣಾ....' ಎಂದು ನಾಮಜಪ ಮಾಡಿದರು ಮೆಲ್ಲಗೆ.

ಬಾಗಿಲಿನ ಎತ್ತರಕ್ಕೆ ಬಾಗಿಲವಾಡದಲ್ಲಿ ಒಬ್ಬ ಅಜಾನುಬಾಹು ಬಂದು ನಿಂತಿದ್ದ. ಹಾ ದೊಡ್ಡ ಮಾವ!

'ಯಾರವ ಹುಡುಗ?'

ಅಜ್ಜಿ ಮೌನವಾಗಿದ್ದರು. 'ನಿನ್ನ ಹತ್ತಿರವೆ ಕೇಳ್ತಿರೋದು ಯಾರದು ಈ ಹುಡುಗ ಅಂತ?'

'ಇವನು ಪಾರುಕುಟ್ಟಿಯ ಮಗ...'

'ಯಾರವಳು ಮುಂಡೆ ಪಾರುಕುಟ್ಟಿ?'

'ಈ ಮನೆಯ ಒಂದು ಜ್ಯೋತಿ' ಅನ್ನಬೇಕೆಂದು ಆವೇಶದಲ್ಲಿ ಅನ್ನಿಸಿದರೂ ಅಜ್ಜಿ ಸಮಾಧಾನದಿಂದಲೆ 'ಅಂಥವಳೊಬ್ಬಳನ್ನ ಇದೆ ಮನೆಯಲ್ಲಿ ನಾನು ಹೆತ್ತೆ!' ಅಂದರು.

'ಥೂ.... ನನ್ನ ಮನೆತನ ಕಂಡ ಕಂಡ ಕೂಳಿಗೆ ಗತಿಗೆಟ್ಟವರೆಲ್ಲಾ ಕಾಲಿಡೋ ಅಂತದ್ದಲ್ಲ! ಯಾವಳೆ ಅವಳು ರಂಡೆ ಈ ಭಿಕಾರಿ ಹುಡುಗನಿಗೆ ಗಂಜಿ ಕೊಟ್ಟವಳು?'

ಅಜ್ಜಿ ಎದ್ದು ನಿಂತರು. ಅವನೂ ನಡುಗುತ್ತಾ ಎದ್ದು ನಿಂತ. ದೊಡ್ಡ ಮಾವ ಸಿಟ್ಟಿನಿಂದ ಮಾತನಾಡುತ್ತಾ ಕಂಪಿಸುತ್ತಿದ್ದರು.

ಈಗ ತನ್ನನ್ನು ಕೊಂದು ಇಲ್ಲೆ ಹುಗಿದು ಹಾಕಿ ಬಿಡುತ್ತಾರೋ ಏನೋ.... ತಾನಿನ್ನು ಬದುಕುವುದೆ ಇಲ್ಲ ಎನ್ನಿಸಿತು.... ಅವನ ಕುತ್ತಿಗೆಯ ಸುತ್ತ ಅವರ ದಪ್ಪ ಕೈಬೆರಳುಗಳು ಬಳಸಿಕೊಂಡು ಬಂದವು. ಹೊರ ಮಾರ್ಗವನ್ನ ತೋರಿಸುತ್ತಾ ಹೊಸ್ತಿಲಿನಾಚೆ ಹೊರಗೆ ತಳ್ಳುತ್ತಾ 'ಹೋಗೋ ಆಚೆ! ಇನ್ನು ಇಲ್ಲಿನ ಅಂಗಳ ಅಥವಾ ಹಿತ್ತಲಿನತ್ತ ಕಾಲಿರಿಸಿದ್ದು ಕಾಣ ಸಿಕ್ಕರೆ ಕಾಲು ಕತ್ತರಿಸಿ ಸಿಗಿದು ತೋರಣ ಕಟ್ಟಿಯೇನು! ಹೋಗ್ ಹೋಗ್....' ಎಂದು ಮಾವ ಗರ್ಜಿಸಿದರು.

ಈಗವನು ಹತಾಶೆ ಅವಮಾನ ಹೇಳಿಕೊಳ್ಳಲಾಗದ ನೋವಿನಿಂದ ನಡೆಯುತ್ತಲಿರಲಿಲ್ಲ ಅಳು ನುಂಗಿಕೊಂಡು ಬಿಸಬಿಸ ಓಡುತ್ತಿದ್ದ. ಕುತ್ತಿಗೆಗೆ ಕೈ ಹಾಕಿ ದೂಡಿದಾಗ ನೊರಜುಗಲ್ಲುಗಳೆ ಹರಡಿದ್ದ ಹೊರಗಿನ ಅಂಗಳದಲ್ಲಿ ಬಿದ್ದು ಮಂಡಿ ತರಚಿ ಹೋಗಿತ್ತು. ಮನೆಯೊಳಗಿನಿಂದ

'ಅನುಭವಿಸ್ತೀರಿ, ಇದರ ಕೆಟ್ಟ ಫಲವನ್ನ ನೀವೆಲ್ಲರೂ ತಪ್ಪದೆ ಅನುಭವಿಸ್ತೀರಿ' ಮಾವನ ಹೂಂಕಾರ ಅತಿದೂರದವರೆಗೆ ಸಿಡಿಲಿನಂತೆ ಕೇಳುತ್ತಲೇ ಇತ್ತು.

......

ಮನೆಬಿಟ್ಟು ಹೋಗಿ ಈಗ ಹಣವಂತನಾಗಿ ಮತ್ತೆ ನಾಲ್ಕು ವರ್ಷದ ನಂತರ ಮರಳಿ ಊರಿಗೆ ಅಪ್ಪುಣ್ಣಿ ಬಂದ ಏಳನೆ ದಿನ ಅದು. ಆದಿನ ತಲೆ ಬಾಗಿಲ ಪಕ್ಕದ ಪಾಲಿನಲ್ಲಿ ದೊಡ್ಡ ಮಾವನ ದರ್ಶನವಾಯಿತು. ಸಿಗರೇಟಿನ ಧಮ್ ಎಳೆಯುತ್ತಾ ಪಡಸಾಲೆಯಲ್ಲಿ ಅತ್ತಿತ್ತ ತಿರುಗಾಡುತ್ತಿದ್ದಾಗ ಮನೆಯ ಮುಂಭಾಗದಿಂದ ಮರದ ಜೋಡುಗಳ ಸದ್ದು ತೇಲಿ ಬಂತು. ಜಗಲಿಯ ಮುಂಭಾಗದಲ್ಲಿಯೆ ಬಂದು ನಿಂತು 'ಅಪ್ಪುಣ್ಣಿ' ಎಂದು ಕರೆದರವರು.

ಇದೆ ಮೊದಲನೆ ಬಾರಿ ಹೆಸರು ಹಿಡಿದು ಕರೆಯಲಿಕ್ಕೆ ದೊಡ್ಡ ಮಾವನ ನಾಲಗೆ ಹಿಡಿದಂತಾಗುತ್ತಿತ್ತು. ಚೂರಿಯಲ್ಲಿ ಇರಿದಂತಾಯ್ತು ಅಪ್ಪುಣ್ಣಿಗೆ.

'ಅಪ್ಪುಣ್ಣಿ ಸ್ವಲ್ಪ ಈಚೆ ಬರ್ತೀಯ ಮಗ!'

'ಏಕೆ?'

'ಇಲ್ಲಿ ಅಂಗಳಕ್ಕೆ ಬಾ' ಶಾಂತಚಿತ್ತ ಧ್ವನಿಯಲ್ಲಿ ಕರೆದರು, ಸಿಡಿಲಿನಂತೆ ಅಬ್ಬರಿಸುತ್ತಿದ್ದ ದೊಡ್ಡ ಮಾವ ಇವರೇನ!

'ಬೇಕಿಲ್ಲ, ಇಲ್ಲೇ ನಿಂತರೂ ಸಾಕು'

'ಬೇಲಿಯ ಆಚೆ ಕಡೆ ಅವರು ನಿಂತಿದ್ದರು, ಈ ಕಡೆ ಆಕ್ರೋಶದಿಂತ ತಪ್ತನಾಗಿದ್ದ ಅಪ್ಪುಣ್ಣಿ. ತನ್ನ ಬೆರಳಿನ ನೆಟಿಗೆ ಮುರಿಯುವುದರ ಮೂಲಕ ಇವನು ಅದನ್ನ ಹೊರ ಹಾಕುತ್ತಿದ್ದ.

ದೊಡ್ಡ ಮಾವನ ಕಂದಿದ ಮುಖದಲ್ಲಿ ಹಿಂದಿನ ವೀರಾವೇಶದ ಪ್ರತಾಪಗಳೊಂದೂ ಕಾಣಿಸಲಿಲ್ಲ. ದೇಹ ಹಾಗೂ ಮನಸ್ಸೆರಡೂ ದುರ್ಬಲಗೊಂಡಿರೋದು ಸ್ಪಷ್ಟವಾಗಿತ್ತು. ತನ್ನ ಕಣ್ಣುಗಳ ಕಡೆಗೆ ನೇರ ನೋಡುತ್ತಾ ಮಾತನಾಡಲು ಅವರು ಕಷ್ಟ ಪಡುತ್ತಿದ್ದರು ಇವರು ಎನ್ನುವುದು ಖಚಿತವಾಯಿತು.

'ಮೂರು ನಾಲ್ಕು ದಿನಗಳಿಂದ ಬರಬೇಕು ಅಂದುಕೊಂಡಿದ್ದೆ'

'ಹ್ಞುಂ'

ಆ ದಿನ ಕುತ್ತಿಗೆ ಹಿಡಿದು ಹುಚ್ಚುನಾಯಿಯನ್ನ ಅಟ್ಟುವಂತೆ ಓಡಿಸಿದ್ದರು, ದೊಡ್ದ ಮಾವನ ಮುಪ್ಪಾದ ಮುಖವನ್ನ ಕಾಣುವಾಗ ಅಪ್ಪುಣ್ಣಿಗೆ ಹಳೆಯ ಕಹಿಯೆಲ್ಲ ಜ್ಞಾಪಕಕ್ಕೆ ಬಂತು. ಅಂಗಳಕ್ಕೆ ಕಾಲಿಟ್ಟರೆ ಕಾಲು ಮುರಿದು ಸಿಗಿದು ತೋರಣ ಕಟ್ಟುವ ಮಾತನಾಡಿದ್ದ ದೊಡ್ಡ ಮನುಷ್ಯನೆ ಈಗ ಅಸಹಾಯಕತೆಯೆ ಮೈವೆತ್ತಂತೆ ತನ್ನ ಮುಂದೆ ದೈನ್ಯದಿಂದ ನಿಂತಿದ್ದಾನೆ. 

'ನಾನು ಬಂದದ್ದು ಒಂದು ಕೆಲಸಕ್ಕಾಗಿ'

'ಹೇಳಿ'

'ಪಾಲಾದಾಗ ತರವಾಡಿನ ಮೂಲಮನೆಯನ್ನ ನಾನು ಪಡೆದೆ. ಕುಟುಂಬದ ಗೌರವ ಅಲ್ಲವ? ಭಗವತಿ ವಾಸ ಮಾಡುವ ಜಾಗ. ಪರಾಧೀನ ಮಾಡಕೂಡದು ಅಂತ ಭಾವಿಸಿ ಹಾಗೆ ಮಾಡಿದ್ದು'

'ಸರಿ ಒಳ್ಳೆಯದೆ ಆಯ್ತಲ್ಲ'

'ಆದರೆ ಈಗ ಈ ಮನೆ ಭಗವತಿ ನಿವಾಸವಾಗಿರುವ ಮನೆ ಕಷ್ಟಕಾಲದಲ್ಲಿ ಐನೂರು ರೂಪಾಯಿಗೆ ಸಾಲದ ಅಡಕ್ಕೆ ಹಾಕಿದೇನೆ! ಅದೆ ಈಗ ಸಂಕಟಕ್ಕೆ ಬಂದಿದೆ'

ಮೌನವಾಗಿ ಅಪ್ಪುಣ್ಣಿ ಅವರನ್ನೆ ಆಲಿಸುತ್ತಿದ್ದ.ಕೆಲವು ನಿಮಿಷ ಮೌನವಾಗಿ ಅನುಮಾನಿಸುತ್ತಲೆ ನಿಂತಿದ್ದ ದೊಡ್ದ ಮಾವ ಕೊನೆಯಲ್ಲಿ ಕಷ್ಟಪಟ್ಟು 'ಹತ್ತನೆ ತಾರೀಕಿನೊಳಗೆ ಹಣದ ಏರ್ಪಾಡಾಗದಿದ್ದರೆ ಮನೆ ಖಾಲಿ ಮಾಡಬೇಕಂತ ತೀರ್ಮಾನ ಆಗಿದೆ. ಎಷ್ಟಾದರೂ ನಮ್ಮ ಕುಟುಂಬದ ಮನೆ ಅಲ್ಲವಾ?' ಅಂದರು

ಅಪ್ಪುಣ್ಣಿ ಸುಮ್ಮನೆ ಹೂಂಗುಟ್ಟಿದ.

'ಖರೀದಿಗೆ ಮುಸ್ಲಿಂ ಮಾಪಿಳ್ಳೆಗಳು ತಯ್ಯಾರಿದ್ದಾರೆ, ಆದರೆ ಭಗವತಿಯ ಸ್ಥಳ ಮಾಪಿಳ್ಳೆಗಳಿಗೆ ಹೇಗೆ ಮಾರೋದು?' ಅವರ ವೇದನೆ ದೈನ್ಯಕ್ಕೆ ಮುಟ್ಟಿದಾಗ ಗಂಟಲೆತ್ತರಿಸಿ ಅಪ್ಪುಣ್ಣಿ 'ಅದಕ್ಕೆ ನಾನೇನು ಮಾಡಲಿ?' ಎಂದ.

'ನಿನ್ನ ಹತ್ತಿರ ದುಡ್ಡಿದೆಯಂತೆ, ಐನೂರು ರೂಪಾಯಿಗೆ ಪ್ರಾಮಿಸರಿ ನೋಟು ಬರೆದು ಕೊಡುತ್ತೇನೆ. ಸಾಲವಾಗಿ ಕೊಟ್ಟಿರು....'

ಬೇಲಿಯಾಚೆ ನಿಂತು ತುಂಬೆ ಗಿಡ ಸವರುತ್ತಿರುವ ಮುದುಕನ ಚಿತ್ರ ಕ್ಷಣ ಕಾಲ ಮರೆಯಾಗಿ ಕುತ್ತಿಗೆಗೆ ಕೈ ಹಾಕಿ ಚಾವಡಿಯಿಂದ ಹುಚ್ಚು ನಾಯಿಯ ಹಾಗೆ ಅಟ್ಟಿದ ದರ್ಪದ ದೈತ್ಯನ ಚಿತ್ರವೆ ಮತ್ತೆ ಮನಸ್ಸಿನಾಳದಿಂದ ಮೂಡಿ ಬಂತು.

'ಹುಸಿ ಗತ್ತಿನ ಗುತ್ತಿನ ಮನೆ ಹೀಗೆ ಉಳಿಯಲಿ ಅಂತ ನನ್ಗೇನೂ ಆಸೆ ಇಲ್ಲ' ಸಿಟ್ಟಿನಿಂದ ಅಪ್ಪುಣ್ಣಿ ಅಂದ.

'ಏನಂದಿ ಅಪ್ಪುಣ್ಣಿ!'

'ಸರಿಯಾಗಿ ಕೇಳದಿದ್ದರೆ ಮತ್ತೊಂದು ಸಲ ಹೇಳ್ತೀನಿ, ಈ ಸೊಕ್ಕಿನ ತರವಾಡು ಮನೆ ಹೀಗೆಯೆ ಇರಬೇಕಂತ ನನಗೇನೂ ಆಸೆ ಇಲ್ಲ. ನೀವು ಮರೆತಿರಬಹುದು ಆದರೆ ಕುತ್ತಿಗೆ ಹಿಡಿದು ತಳ್ಳಿ ಓಡಿಸಿದ ಆ ದಿನವನ್ನ ನಾನಿನ್ನೂ ಮರೆತಿಲ್ಲ.'

ಕ್ಷಣಕಾಲ ನಿಶ್ಯಬ್ಧ ಅಲ್ಲಿ ಆವರಿಸಿತು. "ಆದದ್ದರ ಬಗ್ಗೆ ನನಗೂ ನೋವಿದೆ, ಆಗಿದ್ದು ಆಗಿ ಹೋಯಿತು. ಅದನ್ನ ಮರೆತು ಬಿಡು ಅಪ್ಪುಣ್ಣಿ' ಗದ್ಗದ ಕಂಠದಲ್ಲಿ ದೊಡ್ದ ಮಾವ ಯಾಚಿಸಿದರು!

'ಆದರೆ ಅದಷ್ಟು ಸುಲಭವಲ್ಲ'

'ಎಲ್ಲಾ ದಾರಿ ಮುಚ್ಚಿ ಹೋದಾಗ ನೀನು ಮನೆಗೆ ಬಂದ ವಿಷಯ ಕೇಳಿ ಆಸೆ ಚಿಗುರೊಡೆಯಿತು. ಎಷ್ಟೆಂದರೂ ನಮ್ಮ ಕುಟುಂಬ ಪುರಾತನ ಕಾಲದಿಂದ ಬಾಳಿ ಬದುಕಿದ ಮನೆ'

'ನನ್ನ ಹತ್ತಿರ ದುಡ್ಡೇನೋ ಇದೆ, ಆದರೆ ಯಾರಿಗೂ ಸಾಲ ಕೊಡುವ ಮನಸ್ಸಿಲ್ಲ'

'ತುಂಬೆ ಗಿಡದ ತಲೆ ಸವರುತ್ತಾ ಹನಿಗಣ್ಣಾಗಿ ದೊಡ್ದ ಮಾವ ನಿಂತಿದ್ದರು. ಅಪ್ಪುಣ್ಣಿಯ ದೃಷ್ಟಿಯೂ ನೆಲದ ಕಡೆಗೆ ನೆಟ್ಟಿತ್ತು. ಅಸಹಾಯಕ ಹೆಜ್ಜೆ ಎಳೆಯುತ್ತಾ ಅವರು ಹಿಂದಿರುಗಲು ಹೊರಟಾಗ ಏನನ್ನೋ ನಿರ್ಧರಿಸಿ ಅಪ್ಪುಣ್ಣಿ ಅವರನ್ನು 'ನಿಲ್ಲಿ' ಎಂದು ಕರೆದ. ದೊಡ್ಡ ಮಾವ ಸುಮ್ಮನೆ ನಿಂತರು.

'ಮಾಪಿಳ್ಳೆಗೆ ಮಾರೋದಕ್ಕಲ್ಲವೆ ನಿಮಗೆ ಸಂಕಟ? ನಾನೆ ಕೊಂಡುಕೊಳ್ಳೋದಾದರೆ?'

ದಿಗ್ರಾಂತರಾದ ಮಾವ 'ನಾನು ಯೋಚಿಸ್ತೇನೆ' ಕಂಭದ ಹಾಗೆ ನಿಂತಿದ್ದವರು ಕ್ಷೀಣವಾಗಿ ನುಡಿದರು.

'ಇನ್ನೂ ಆಲೋಚಿಸಿ ಆಗಿಲ್ಲವ! ಇಲ್ಲೆ ಈಗಲೆ ಈ ಕ್ಷಣ ತೀರ್ಮಾನ ಆಗಬೇಕು, ನೋಡುವ ನನ್ನ ಕೈನಲ್ಲಿ ಕೊಂಡುಕೊಳ್ಳೋಕೆ ಸಾಧ್ಯ ಉಂಟೋ ಇಲ್ಲವೋ ಅಂತ. ಈ ಮನೆ ಮತ್ತು ಜಮೀನಿಗೆ ಸೇರಿ ಒಟ್ಟು ಎಷ್ಟು ಕ್ರಯ ಅಂತ ಹೇಳಿ'

ದೊಡ್ಡ ಮಾವ ಗಲಿಬಿಲಿಯಿಂದ ಮುಂದೆ ಮಾತನಾಡೋದಕ್ಕೇನೆ ಸಂಶಯಿಸಿಕೊಂಡು ನಿಂತರು.

'ಹೇಳಿ ಇದು ವ್ಯಾಪಾರ, ಸಂಶಯವೇಕೆ? ನನ್ನ ಯೋಗ್ಯತೆಯ ಒಳಗಿದ್ದರೆ ಖಂಡಿತಾ ಕೊಳ್ಳುತ್ತೇನೆ'

ಮತ್ತೂ ಸಂಶಯಿಸುತ್ತಾ ದೊಡ್ದ ಮಾವ ನಿಂತೆ ಇದ್ದಾಗ ಅಪ್ಪುಣ್ಣಿಗೆ ವಿಪರೀತ ಸಿಟ್ಟು ಬಂತು.

'ಏಕೆ ನನ್ನ ದುಡ್ಡಿಗೆ ಬೆಲೆ ಇಲ್ಲ ಅಂತಲ?'

'ಹಾಗೇನೂ ಅಲ್ಲ...' ಅವರು ತಡವರಿಸಿದರು.

'ಹಾಗಿದ್ದರೆ ಮುರಿದು ಬೀಳುತ್ತಿರುವ ಮುಪ್ಪಾದ ಮನೆ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಸರಿಯಾದ ನ್ಯಾಯವಾದ ಒಂದು ಕ್ರಯ ಹೇಳಿ'

'ನಾಲ್ಕು ಸಾವಿರಕ್ಕೆ ಪೋಟುಕುರದ ಹಾಜಿ ಮಾಪಿಳ್ಳೆ ಕೇಳಿದ್ದ...'

'ಗಾಳಿ ಬೆಳಕಿನ ವ್ಯವಸ್ಥೆಯೆ ಸರಿಯಾಗಿಲ್ಲದ ಈ ಮುರಿದು ಹೋಗಲಿಕ್ಕಿರುವ ಮನೆಯಲ್ಲಿ ಮನುಷ್ಯರಾದವರು ಬಾಳುವ ಹಾಗಿಲ್ಲ! ಹೀಗಿದ್ದರೂ ನಾನು ನಾಲ್ಕು ಸಾವಿರಕ್ಕೆ ತಯ್ಯಾರ್. ಕೂಡಲೆ ಕ್ರಯಪತ್ರ ಬರೆಸುವ ಏರ್ಪಾಡು ಮಾಡಿ'

ಮಾವನ ಕುತ್ತಿಗೆ ಹಾಗೂ ಬೆನ್ನು ಮತ್ತಷ್ಟು ಬಾಗಿತು. 

'ಏನು ತೀರ್ಮಾನಿಸಿದಿರಿ?'

ನಾಚಿಕೆಯಿಂದ ಹಿಡಿಯಾದ ಅವರು ಬಾವಿಯ ಆಳದಿಂದ ಎನ್ನುವಂತೆ 'ಆಯ್ತು' ಎಂದು ಮುಲುಕಿದರು.

ನಿಧಾನವಾಗಿ ಅವರು ಅಲ್ಲಿಂದ ಕಾಲೆಳೆದುಕೊಂಡು ಹೋಗುತ್ತಿರೋದನ್ನ ನೋಡಿದವ ಅಲ್ಲಿಂದ ಹಿಂದಿರುಗಿದ. ಚಾವಡಿಗೆ ಬಂದು ಚಾಪೆಯ ಮೇಲೆ ಉರುಳಿಕೊಂಡಾಗ 'ಹೋದರಾ' ಎಂದರು ಮೀನಾಕ್ಷಿಯಕ್ಕ.

'ಹೋದರು'

'ಇದು ಮಾವನಿಗೆ ಎಲ್ಲಾ ಬಗೆಯಲ್ಲಿಯೂ ಕಷ್ಟದ ಕಾಲ'

ಅವರ ಈ ಅನುಕಂಪದ ನುಡಿ ಅಪ್ಪುಣ್ಣಿಗೆ ಅಷ್ಟಾಗಿ ಹಿಡಿಸಲಿಲ್ಲ. 

'ಹೂದೋಟದ ಆಸ್ತಿ ಏನಾಯಿತು?'

'ಅದುಂಟು, ಅಲ್ಲೊಬ್ಬಳು ದೇವತೆ ಇದ್ದಳು, ಈಗ ಅವಳೂ ಇಲ್ಲವಾಗಿ ಹೋದಳು'

'ಯಾರೂ'

'ಅಪ್ಪುಣ್ಣಿಗೆ ಈ ಸಂಗತಿ ಗೊತ್ತಿಲ್ಲವ! ಮೊದಲ ಹೆರಿಗೆ ಪಾಪ...'

'ಯಾರದು ಮೀನಾಕ್ಷಕ್ಕ'

'ಕಳೆದ ಜ್ಯೇಷ್ಠ ಮಾಸದಲ್ಲಿಯೆ ಅಮ್ಮಿಣ್ಣಿಕುಟ್ಟಿ ಸತ್ತಳು'

ಮತ್ತೇನನ್ನೂ ಪ್ರತಿಕ್ರಿಯಿಸದೆ ಆತ ಎದ್ದು ಚಾವಡಿಯ ಕಿಟಕಿಯ ಹತ್ತಿರ ಬಂದ. ತನಗೆ ಅರಿವಿಲ್ಲದಂತೆ ಕಿಟಕಿಯ ಸರಳುಗಳನ್ನ ಗಟ್ತಿಯಾಗಿ ಹಿಡಿದು ಕಣ್ಣೀರು ಸುರಿಸುತ್ತಿದ್ದಾಗ ಮೀನಾಕ್ಷಿಯಕ್ಕ.

'ಪಾಪ ತುಂಬಾ ಒಳ್ಳೆಯ ಹೆಣ್ಣಾಗಿತ್ತದು' ಅಂತ ತನಗೆ ತಾನೆ ಹೇಳಿಕೊಂಡದ್ದು ಕೇಳಿಸಿತು.

.........

ಮುಚ್ಚಿದ್ದ ಮೊಗಸಾಲೆಯ ಬಾಗಿಲನ್ನ ಅಪ್ಪುಣ್ಣಿ ತೆರೆದ. ತೆಂಕಲಾಗೆ ಬರಿ ಕತ್ತಲಾವರಿಸಿತ್ತು. ಕಿಟಕಿಯನ್ನ ಬಲವಾಗಿ ತೆರೆದಾಗ ಅಲ್ಲೆಲ್ಲ ಬೆಳಕಿನ ಕಿರಣಗಳು ಆವರಿಸಿಕೊಂಡವು. ಅಲ್ಲಿನ ಗಾಳಿಯಲ್ಲಿ ಅದೆಂತದೋ ಅಂದು ಬಗೆಯ ವಾಸನೆ ತುಂಬಿಕೊಂಡಂತಿತ್ತು. ಮುಚ್ಚಿದ ಎಲ್ಲಾ ಬಾಗಿಲುಗಳನ್ನೂ ಆತ ಬಿಚ್ಚಿದ. ಮೂಲೆಯಲ್ಲೆಲ್ಲಾ ಕತ್ತಲೆ ಇಡುಕರಿದಿತ್ತು. ಚಪ್ಪಡಿ ಹಾಸಿದ್ದ ನಡು ಅಂಗಳದಲ್ಲಿ ಹಳೆಯ ಮುರಿದ ಚಾಪೆಗಳ ಕಸಕಡ್ದಿಗಳು ತುಂಬಿಕೊಂಡಿದ್ದವು. ದುರಸ್ತಿ ಕಾಣದ ಕಂಭಗಳೆಲ್ಲ ಒರಲೆ ಹಿಡಿದಿದ್ದವು.

ಬಡಗು ಕೋಣೆಯ ಬಡಗು ಭಾಗಕ್ಕೆ ಆತ ಹೋಗಿ ನಿಂತ. ಅದೆ ಏಣಿಯಿರುವ ಕೋಣೆ. ಆ ಕೋಣೆಯಲ್ಲಿಯೆ ಅಲ್ಲವ ಮೂರು ವರ್ಷ ಕಳೆದದ್ದು. ಆ ನೆಲದ ಹತ್ತಿರ ಹೋದಾಗ ಕಣ್ಣೀರು ಧುಮುಕಬಹುದೆ? ಅಲ್ಲಿ ನಿಂತಾಗ ಆ ಕತ್ತಲ ಕೋಣೆಯೊಳಗೆ ಇನ್ನೂ ಬಳೆಗಳು ಸದ್ದು ಮಾಡುತ್ತಿರಬಹುದು, ಮಲ್ಲಿಗೆ ಹೂವಿನ ಘಮ ಇನ್ನೂ ಅಲ್ಲಿ ಅವರಿಸಿರಬಹುದು, ಬಟ್ಟೆಗೆ ಹಾಕಿದ ಸಾಬೂನಿನ ಸೌಗಂಧ ಅಲ್ಲಿ ಇನ್ನೂ ನಿಂತಿರಬಹುದೆ? ಎನ್ನಿಸಿತ್ತು. ವೇದನೆಗಿಂತ ಹೆಚ್ಚು ಷೂನ್ಯತೆ ಮನಸಿನಲ್ಲಿ ಆವರಿಸಿತು.

ಏಣಿಯನ್ನ ಹತ್ತಿ ಮೇಲಿನ ಕೋಣೆಗೆ ಆತ ಹೋದ. ಆದರೆ ಮುಚ್ಚಿದ್ದ ಆ ಒಂದು ಕೋಣೆಯ ಬಾಗಿಲನ್ನ ಮಾತ್ರ ತೆರೆಯಲಿಲ್ಲ. ಬರಲಿರುವ ಗಂಡನಿಗಾಗಿ ತಂಗಕ್ಕ ಅಣಿ ಮಾಡಿಟ್ಟಿದ್ದ ಕೋಣೆಯೊಳಗೆ ಕಿಚಪಿಚ ಎನ್ನುತ್ತಾ ಇಲಿಗಳು ಓಡಾಡುತ್ತಿರುವ ಶಬ್ದ ಕೇಳಿ ಬರುತ್ತಿತ್ತು. ಹಾಗೆ ಬಂದ ಗಂಡು ತಂಗಕ್ಕನನ್ನು ತಿರಸ್ಕರಿಸಿ ಹೋದನೆಂದು ಮೀನಾಕ್ಷಕ್ಕ ಹೇಳಿದ್ದರು. ಆ ಒಂದು ಕೋಣೆ ಈಗಲೂ ಹಾಗೆಯೆ ಇರಬೇಕು ಒಳಗಿನಿಂದ.

ತೇವವಾಗಿದ್ದ ಗೋಡೆಗಳ, ಬಿರುಕು ಬಿಟ್ಟ ನೆಲದ ಈ ತೊಟ್ಟಿ ಮನೆಯಲ್ಲಿ ಹಿಂದೆಲ್ಲ ಓಡಾಡುವಾಗ ಹೆದರಿಕೆಯಾಗುತ್ತಿತ್ತು. ಎಷ್ಟೋ ತಲೆ ಮಾರುಗಳು ಇಲ್ಲಿ ಆಶ್ರಯ ಪಡೆದು ಈ ಕತ್ತಲೆಯೊಳಗೆ ಲೀನವಾಗಿ ಹೋಗಿವೆ. ಪೊರೆಮ್ಮಾನ್ ಮಾವ, ನಾರಾಯಣ ಮಾವನ ಆತ್ಮಗಳು ಇಲ್ಲೆ ಎಲ್ಲಾದಾರೂ ಸುತ್ತಾಡುತ್ತಲೆ ಇರಬಹುದು. ಆ ಹುಡುಗಿಯ ನೆನಪೂ ಸಹ ಆಯಿತು. ಈಗ ಕೇವಲ ಹಳೆಯ ನೆನಪುಗಳು ಮಾತರ ಉಳಿದಿರುವ ಮನೆ ತನ್ನ ಮನೆ, ತನ್ನ ಸ್ವಂತ ಮನೆ.

ಐದು ವರ್ಷ ದುಡಿದು ತಾನು ಕಷ್ಟ ಪಟ್ಟು ಸಂಪಾದಿಸಿದ್ದನ್ನೆಲ್ಲ ಇದಕ್ಕೆ ಸುರಿದಾಗಿದೆ. ಅಂತೂ ಇಲ್ಲೊಂದು ವಿಶಾಲ ಆತ್ಮ ಸಂಸ್ಕೃತಿ ಇದೆ ಅಂದ ಹಾಗಾಯಿತು. ಇಲ್ಲಿಂದಲೆ ಒಂದು ಕಾಲದಲ್ಲಿ ನಾನು ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಆತಂಕದಿಂದ ಓಡಿ ಹೋಗಿ ಪಾರಾದದ್ದು. ಎಲ್ಲರೂ ಆಗ ದೂರ ಸರಿಸಿದರು, ಕಾರಣ? ಇಲ್ಲಿನ ಒಬ್ಬ ಹೆಂಗಸು ತಾನು ಇಷ್ಟ ಪಟ್ಟಿದ್ದ ಬಡವನೊಬ್ಬನನ್ನು ಒಪ್ಪಿ ಮದುವೆಯಾದದ್ದು.

'ಈಗ ಆ ಹೆಂಗಸು ಎಲ್ಲಿರಬಹುದು?' ಎಂಬ  ವಿಷಯಕ್ಕೆ ಬಂದಾಗ ಮನಸೊಳಗೆ ಆತಂಕದ ಅಲೆಗಳು ಎದ್ದವು. ಮನೆಯವರ ಸಮ್ಮತಿ ಇಲ್ಲದ ಕಾರಣ ಮೆಚ್ಚಿದವನಿಗಾಗಿ ಆಕೆ ಈ ಮನೆಯನ್ನ ಬಿಟ್ಟಳು, ಅನಂತರ ಜೀವನ ಪೂರ್ತಿ ಅದಕ್ಕಾಗಿ ಕ್ಲೇಷ ಪಡಬೇಕಾಗಿ ಬಂದಿತು. ಅಕೆಯೆಡೆಗೆ ಯಾರೊಬ್ಬರೂ ತಿರುಗಿ ಸಹ ನೋಡಲಿಲ್ಲ, ಬದಲಿಗೆ ಸತ್ತಳು ಅಂತ ಸೂತಕದ ಸ್ನಾನ ಮಿಂದರು. ಒಳಗಿದ್ದ ಸೂತಕ ತೆಗೆದು ಹಾಕಿದರು, ತಮ್ಮಷ್ಟಕ್ಕೆ ತಾವೆ ಸೂತಕ ಕಳೆಯಿತು ಎಂದು ಅಂದುಕೊಂಡರು.

ಅದೆ ಹೆಣ್ಣಿನ ಮಗ ಇದೀಗ ಇದೆ ದೊಡ್ದ ಮನೆಯ ಮಾಲಿಕ! ಯಜಮಾನನಾದ ಮೇಲೆ ಸಂಕಟದಿಂದ ಆಕೆ ತನ್ನಮ್ಮ ಎನ್ನುವುದು ಅಪ್ಪುಣ್ಣಿಗೆ ನೆನಪಾಯಿತು. ಅವಳನ್ನು ತಾನೂ ಮರೆತೆನಲ್ಲ! ಅಪ್ಪ ಸತ್ತ ನಂತರ ನನ್ನ ಸಾಕಿ ಬೆಳೆಸಿದಳು, ನಂಬೂದರಿ ಮನೆಯ ಜೀತ ಮಾಡಿ ಕಡೆಯುವ ಕಲ್ಲಿನ ಬುಡಲ್ಲಿ ಕೂತು ಎಂಜಲೆಲೆಯ ಅನ್ನವನ್ನುಂಡು.....

ಆಮೇಲೆ ನಾನ್ಯಾಕೆ ಇದನ್ನೆಲ್ಲ ಮರೆತೆ? ಯಾರೂ ದಿಕ್ಕಿಲ್ಲದ ಸ್ಥಿತಿಯಲ್ಲಿ ಶಂಕರನ್ ನಾಯರ್ ಎಂಬ ಒಬ್ಬ ಮನುಷ್ಯ ಆಕೆಗೆ ಆಸರೆಯಾಗಿ ನಿಂತ. ಧರೆಗೆ ಬಿದ್ದು ಹೋಗುತ್ತಿರುವಾಗ ಒದಗಿ ಬಂದ ಸಹಾಯ ಹಸ್ತವನ್ನ ಬೇಡವೆನ್ನುವ ಸ್ಥಿತಿಯಲ್ಲಿ ಅವಳೂ ಸಹ ಇರಲಿಲ್ಲವಲ್ಲ. ಅದು ತಪ್ಪಾ? ಯಾರದ್ದು ತಪ್ಪು? ಯಾವುದು ತಪ್ಪು? ತನ್ನನ್ನು ತಾನು ಮತ್ತೆ ಮತ್ತೆ ಅವನು ಪ್ರಶ್ನಿಸಿಕೊಂಡ. ಅಂತೂ ಅವನಿಗೆ ಉಸಿರು ಕಟ್ಟಿಕೊಂಡ ಹಾಗಾಯಿತು. ಮಧ್ಯಾಹ್ನದ ರಣ ಬಿಸಿಲು ಹೊರಗೆ ಸುಡುತ್ತಿತ್ತು, ಗಾಳಿ ಬೀಸುತ್ತಿರಲಿಲ್ಲ, ಎಲೆ ಅಲುಗಾಡುತ್ತಿರಲಿಲ್ಲ. ಬೆವರಿದ ಮೈಯಿಂದ ಆತ ಚಾವಡಿಗೆ ಇಳಿದು ಬಂದ.

ಇಷ್ಟು ದಿನ ಆತ ಜಗತ್ತಿಗೆ ತನ್ನ ಬಗ್ಗೆಯೆ ಸುಳ್ಳು ಹೇಳಿದ್ದ. ಎಲ್ಲಾ ಇದ್ದೂ ತಾನು ಅನಾಥನೆಂದು ಗುರುತಿಸಿಕೊಂಡಿದ್ದ. ಹಾಗೆ ಹೇಳುವಾಗ ತನ್ನ ಬೆಲೆಯನ್ನ ತಾನೆ ಕಡಿಮೆ ಮಾಡಿಕೊಂಡ ನಾಚಿಕೆ ಒಳಗೊಳಗೆ ಆವರಿಸುತ್ತಿತ್ತು. ಎಷ್ಟೆಲ್ಲಾ ಋಣಭಾರದ ಸಂಕೋಲೆಗಳು ತನ್ನನ್ನು ಆವರಿಸಿವೆ? ವೈನಾಡಿನ ಸೈದಾಲಿ ಕುಟ್ಟಿಯ ಕೆಲಸ ಕೊಡಿಸಿದ ಋಣ, ಬೆವರಿದ ಕೈಯಿಂದ ಶಂಕರನ್ ನಾಯರನ ಗಳಿಕೆಯ ಒದ್ದೆ ನೋಟುಗಳನ್ನ ಪರೀಕ್ಷೆಯ ಫೀಜು ಕಟ್ಟಲು ಕಡೆ ಕ್ಷಣದಲ್ಲಿ ಶಾಲೆಗೆ ತಂದು ಕೊಟ್ಟ ಅಬ್ದುಲ್ಲಾನ ಸಹಾಯದ ಋಣ. ವಿದ್ಯಾರ್ಥಿ ವೇತನ ಕೊಟ್ಟ ಮುಖ್ಯೋಪಧ್ಯಾಯರ ಋಣ. ಆಯಾಸಗೊಂಡ ಮನಸ್ಸಿನಿಂದ ಚಾವಡಿಯ ಕಂಭಕ್ಕೆ ಒರಗಿ ಕಾಲು ಚಾಚಿ ಆತ ಕೂತುಕೊಂಡ. ಸೋಲು ಗೆಲುವುಗಳ ಲೆಕ್ಕಾಚಾರ ಹಾಕುತ್ತಾ ವ್ಯಥಾ ಅವನ ಮನಸು ಪಾಡು ಪಡುತ್ತಿತ್ತು.

.....

ಮನೆಯ ತಲೆ ಬಾಗಿಲಿನ ಮೆಟ್ಟಿಲುಗಳತ್ತ ಬಂದ ಆ ಯುವಕ ನಿಂತ. ಹಿಂದೆ ಬರುತ್ತಿದ್ದ ಹೆಂಗಸಿಗೆ 'ಅಮ್ಮಾ ಒಳಗೆ ಬಾ' ಎಂದ. ಅವಳು ಅನುಮಾನಿಸುತ್ತಾ ನಿಂತಾಗ 'ಧೈರ್ಯವಾಗಿ ಬಾ' ಎಂದ. ತಲೆಯ ನೆತ್ತಿ ಮೇಲಿ ಆಗಲೆ ಬಿಳಿ ಕೂದಲುಗಳು ಕಾಣುತ್ತಿದ್ದ ಅವಳು ಅನುಮಾನಿಸುತ್ತಲೆ ಚಾವಡಿಯನ್ನೇರಿದಳು. ಆದರೂ ಆ ವಯಸ್ಸಾದವ ಇನ್ನೂ ಹೊರಗೆಯೆ ನಿಂತಿರೋವಾಗ 'ಬನ್ನಿ ಒಳಗೆ' ಅಂತ ಈತ. ಆತನೂ ಸಂಕೋಚದಿಂದಲೆ ಒಳಬಂದ.

'ಒಳಗೆ ಎಷ್ಟೊಂದು ಕತ್ತಲೆ ಅಪ್ಪುಣ್ಣಿ" ಎಂದಳು ಆಕೆ.

'ಹಗಲೂ ಸಹ ಇಷ್ಟು ಕತ್ತಲೆ ಇರುವಲ್ಲಿ ಸತ್ತವರ ಪ್ರೇತಗಳೂ ಇದ್ದಾವು' ಹೆದರಿಕೆಯಿಂದಲೆ ಅವಳೆಂದಳು.

'ಅಮ್ಮಾ ಹೆದರಬೇಡ, ಈ ತೊಟ್ಟಿ ಮನೆಯನ್ನ ಮುರಿಸಿ ಹಾಕುವ ಏರ್ಪಾಡು ಮಾಡುವ. ಒಳ್ಳೆಯ ಗಾಳಿ ಬೆಳಕಿರುವ ಒಂದು ಪುಟ್ಟ ಮನೆ ಇಲ್ಲಿ ಕಟ್ಟಿಸುವ ಸಾಕು' ಎಂದ ಅಪ್ಪುಣ್ಣಿ.

'ಮುರಿದು ಹಾಕೋದಾ! ಭಗವತಿ ಇರುವ ಸ್ಥಳ ಅಲ್ಲವ?'

ಆತ ಗಟ್ಟಿಯಾಗಿ ನಕ್ಕ. ಆ ನಗುವಿನ ಅಲೆಗಳು ಹಳೆಯ ಮನೆಯ ಮೂಲೆಮೂಲೆಗಳನ್ನೂ ಮುಟ್ಟಿ ಮಾರ್ದನಿಸಿದವು. ಆ ಮುದಿ ಮನುಷ್ಯ ಮಾತ್ರ ಪರವಶನಾಗಿ ಇನ್ನೂ ನಿಂತೆ ಇದ್ದ.

-ಎಂ ಟಿ ವಾಸುದೇವನ್ ನಾಯರ್.

ತಮ್ಮ ಪ್ರಪ್ರಥಮ ಕಾದಂಬರಿ 'ನಾಲ್ಲಕೆಟ್' ಮೂಲಕವೆ ಬರಹ ಜಗತ್ತಿನಲ್ಲಿ ಅದ್ಭುತ ಪ್ರವೇಶ ಪಡೆದ ವಾಸುದೇವನ್ ನಾಯರ್ ಮಲಯಾಳಂನಲ್ಲಿ ಬರಹದ ದೈತ್ಯರಾಗಿದ್ದರೂ ಸಹ ಸದ್ಯದ ಭಾರತೀಯ ಬರಹ ಜಗತ್ತಿನಲ್ಲಿಯೆ ಒಂದು ದೊಡ್ಡ ಹೆಸರಾಗಿರುವವರು. ಕಾದಂಬರಿಕಾರ, ಪತ್ರಕರ್ತ, ಸಂಪಾದಕ, ಚಿತ್ರ ಸಂಭಾಷಣೆಕಾರ ಹಾಗೂ ನಿರ್ದೇಶಕನಾಗಿ ಎಂಟಿವಿ ತಾವು ಸಾಗಿದೆಡೆಯಲ್ಲೆಲ್ಲ ಮರೆಯಲಾಗದ ಛಾಪನ್ನ ಮೂಡಿಸಿದವರು. ೧೯೯೫ರಲ್ಲಿ ಮಲಯಾಳಿ ಸಾಹಿತ್ಯ ಜಗತ್ತಿಗೆ ಅವರು ಸಲ್ಲಿಸಿದ ಸೇವೆಗೆ 'ಜ್ಞಾನಪೀಠ' ಪ್ರಶಸ್ತಿ ಅವರನ್ನ ಅರಸಿಕೊಂಡು ಬಂತು.

ನಾಯರ್ ಕೂಡು ಕುಟುಂಬವೊಂದರ ವಿಘಟನೆಯ ಕಥೆಯಾದ 'ನಾಲ್ಲಕೆಟ್' ೧೯೫೮ಕ್ಕೆ ಪ್ರಕಟವಾದಲ್ಲಿಂದ ಈಚೆಗೆ ಸುಮಾರು ಐದು ಲಕ್ಷ ಪ್ರತಿಗಳಾಗಿ ಮಲಯಾಳಂ ಭಾಷೆಯೊಂದರಲ್ಲಿಯೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಇದುವರೆಗೆ 'ನಾಲ್ಲಕೆಟ್' ಸುಮಾರು ಇಪ್ಪತೈದು ಬಾರಿ ಮರು ಮುದ್ರಣಗೊಂಡಿದೆ. ೧೯೫೯ರ ಸಾಲಿನ ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ 'ನಾಲ್ಲಕೆಟ್'ವಿಗೆ ಸಂದಿತ್ತು. ಅದನಂತರ ಸುಮಾರು ಹದಿನಾಲ್ಕು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ 'ನಾಲ್ಲಕೆಟ್'ವನ್ನ ಅನುವಾದಕರಾದ ಬಿ ಕೆ ತಿಮ್ಮಪ್ಪ 'ಚೌಕಟ್ಟಿನ ಮನೆ' ಅನ್ನುವ ಹೆಸರಿನಲ್ಲಿ ಕನ್ನಡಕ್ಕೂ ಅನುವಾದಿಸಿದ್ದಾರೆ. 'ನ್ಯಾಷನಲ್ ಬುಕ್ ಟ್ರಸ್ಟ್' ಈ ಕನ್ನಡವತರಣಿಕೆಯನ್ನ ಪ್ರಕಟಿಸಿದೆ. ಸ್ವತಃ ಎಂಟಿವಿ ಇದೆ ಕೃತಿಯನ್ನ ತೊಂಬತ್ತರ ದಶಕದಲ್ಲಿ ದೂರದರ್ಶನಕ್ಕಾಗಿ "ಟೆಲಿಫಿಲಂ" ಆಗಿ ನಿರ್ದೇಶಿಸಿದ್ದರು.

ಅಳಿಯ ಕಟ್ಟನ್ನು ಅನುಸರಿಸುವ ಮಾತೃ ಮೂಲ ಸಂಪ್ರದಾಯದ ಕೇರಳದ ನಾಯರ್ ಸಮುದಾಯವನ್ನ ಆಚಾರ, ವಿಚಾರ ಹಾಗೂ ಸಾಂಸ್ಕೃತಿಕ ಅನನ್ಯತೆಯ ದೃಷ್ಟಿಯಿಂದ ಕನ್ನಡ ನಾಡಿನ ಕರಾವಳಿಯ ಬಂಟ ಸಮುದಾಯಕ್ಕೆ ಹೋಲಿಸಬಹುದಾದರೆ, ದೌಲತ್ತು ದರ್ಪದ ವಿಷಯಕ್ಕೆ ಬಂದರೆ ಘಟ್ಟದ ಮೇಲಿನ ಜಮೀನ್ದಾರ ಒಕ್ಕಲಿಗರಿಗೆ ಅವರನ್ನ ಸರಿದೂಗಿಸಬಹುದು. ತನ್ನ ಮೆಚ್ಚಿನ ಹುಡುಗ ಜಾತಿಯವನೆ ಆಗಿದ್ದರೂ ಸಹ ಬಡವನೆಂಬ ಕಾರಣಕ್ಕೆ ಮದುವೆಯಾದ ನಂತರ ಕುಟುಂಬದಿಂದ ಬಹಿಷ್ಕರಿಸಲಾದ ನಿರ್ಭಾಗ್ಯ ಹೆಣ್ಣೊಬ್ಬಳ ಮಗ ಈ ಅಪ್ಪುಣ್ಣಿ. ಚಿಕ್ಕ ವಯಸ್ಸಿನಲ್ಲಿಯೆ ಅಪ್ಪನನ್ನ ಕಳೆದುಕೊಳ್ಳುತ್ತಾನೆ. ಬಡತನದ ಬೇಗುದಿಯಲ್ಲಿಯೆ ಸಿರಿವಂತ ನಂಬೂದರಿಗಳ ಮನೆಯ ಜೀತ ಮಾಡಿ ಸ್ವಾಭಿಮಾನಿ ಹೆಣ್ಣಾದ ಪಾರುಕುಟ್ಟಿ ಅವನನ್ನು ಸಾಕಿದಳು. ಆದರೆ ಮುಂದೆ ಕಾಲ ಬದಲಾಯಿತು. ಸುಳ್ಳು ಸಂಶಯಕ್ಕೆ ಬಲಿಯಾಗಿ ಸಹಾಯಕ್ಕೆ ಬಂದ ಇನ್ನೊಬ್ಬ ಸಹೃದಯಿ ಶಂಕರನ್ ನಾಯರ್ ಜೊತೆ ಆವಳ ಸಂಬಂಧ ಕಲ್ಪಿಸಿ ಮಗನೂ ಅವಳನ್ನ ತಿರಸ್ಕರಿಸಿದ. ಕಡೆಗೆ ಕಾಲದ ವೇಗ ಅವರನ್ನೆಲ್ಲ ಒಗ್ಗೂಡಿಸಿತು. ಆದ ತಪ್ಪು ಗ್ರಹಿಕೆಗಳೆಲ್ಲ ಕರಗಿ ಹೋದವು. ಅಪಮಾನ, ಮಾನಸಿಕ ಹಿಂಸೆ ಹಾಗೂ ಮನದೊಳ ಬೇಗುದಿಗಳಿಂದ ನರಳಿದ ಅಪ್ಪುಣ್ಣಿ ಬಾಳನ್ನ ಗೆದ್ದು ಸಾಧಿಸಿ ತೋರಿಸುವ ಕಥೆಯಲ್ಲಿ ಕಣ್ಣೀರು ತರಿಸುವ ಭಾವನೆಗಳ ತಾಕಲಾಟವಿದೆ.

ನಾನು ಮಲಯಾಳಂ ಕಲಿತದ್ದಕ್ಕೂ ಸಾರ್ಥಕವಾಯಿತು. ನನಗೆ ಮೂಲ ಪುಸ್ತಕ ಹಾಗೂ ಅದರ ಕನ್ನಡಾನುವಾದ ಎರಡನ್ನೂ ಓದುವ ಸುಖ ಸಿಕ್ಕಿತು. ವಾಸ್ತವದಲ್ಲಿ ಮೂಲ ಮಲಯಾಳಿ ನಿಜಕ್ಕೂ ಕನ್ನಡಾನುವಾದಕ್ಕಿಂತ ಹಿತವಾಗಿದೆ. ಆದರೆ ಕನ್ನಡ ಭಾವಾನುವಾದ ಕಳಪೆಯೇನೂ ಅಲ್ಲ. ಇದು ವಾಸ್ತವದಲ್ಲಿ ಎಂಟಿವಿಯವರ ಬಾಲ್ಯದ ಅನುಭವ ಕಥನವೆ ಆಗಿದೆ. ನೋವು, ಅವಮಾನ ಹತಾಶೆಗಳನ್ನ ಅನುಭವಿಸಿದ ಮನಸ್ಸುಗಳಿಗೆಲ್ಲ ಖಂಡಿತ ಇದರ ಕಥನ ತಾಕಿಯೆ ತಾಕುತ್ತದೆ.