Thursday, July 10, 2014

ಕನಸ ಬೀದಿಯುದ್ದ ಕವಿದ ಸಂಜೆ ಕತ್ತಲು.......





ಮೋಡದ ಮೋಸದ ಅರಿವಿರುವ ನೆಲದ ಮನಸಲ್ಲೂ
ಕನಸೊಂದು ನನಸಾಗಲಿ ಎನ್ನುವ
ಬಹುತೇಕ ಅಸಾಧ್ಯ ಸ್ವಪ್ನವೊಂದರ ಈಡೇರಿಕೆಯ ಅತಿಯಾಸೆ ಇದೆ.....
ಸೋಮಾರಿ ಬೆಳಗಿನಲ್ಲೊಂದು ಆಕಳಿಕೆ ಮರುಕಳಿಸಿ
ಮತ್ತೊಂದು ಚಿಕ್ಕ ನಿದಿರೆಯನ್ನು ಖಾತ್ರಿಪಡಿಸಿ ಹೋದ ಮೇಲೆ
ಮತ್ತೆ ಮನಸ ಕನಸು ತುಂಬಿ ಕಾಡಿತ್ತು.....
ವಾಸ್ತವ ಅರಿವಿಗೆ ನಾ ಮರಳೋದನ್ನೆ
ಅನಿವಾರ್ಯವಾಗಿ ಮತ್ತಷ್ಟು ಅದು ಕಾಯುವಂತಾಗಿತ್ತು./
ಭಾವದ ಹೊಳೆ ಉಕ್ಕಿ ಬಂದು
ಕಣ್ಣ ಅಂಚನ್ನ ತುಸು ತೋಯಿಸಿತ್ತು....
ಕಿಂಚಿತ್ತೂ ದಯೆ ತೋರದೆ ಕಲ್ಲೆದೆಗೆ ಅಪ್ಪಳಿಸಿ
ಮತ್ತೆ ಹುಟ್ಟ ಹೊರಟ ಮೃದು ಕಂಪನಗಳನ್ನ
ಭ್ರೂಣದಲ್ಲೆ ಮೌನವಾಗಿ ಸಾಯಿಸಿತ್ತು,
ಮರೆತು ಹಾಡಿದ ಮಧುರ ರಾಗವೊಂದು
ಮರುಕಳಿಸಿ ಕಾಡಿದ ಹೊತ್ತು
ಮನೆ ಮನದ ತುಂಬ ಕಡು ಕತ್ತಲಾವರಿಸಿತ್ತು.....
ಗೂಡಿನ ಹಂಗಿಲ್ಲದೆ ಸಿಕ್ಕ ಸಿಕ್ಕಲ್ಲೆಲ್ಲ ತಂಗುವೆ
ಹಸಿವಿಗೆ ಸಿಗುವ ಮಣ್ಣನ್ನಾದರೂ ಅನುಗಾಲ ನುಂಗುವೆ
ಆದರೆ ನಿಷ್ಠ ಮನೋಭಾವದಲ್ಲಂತೂ ರಾಜಿ
ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಾಧ್ಯವೆ ಇಲ್ಲ.//



ಹೊಸೆದ ಸರಾಸರಿ ಸಾಲುಗಳೆಲ್ಲ
ಕೇವಲ ನನ್ನದೊಬ್ಬನದ್ದಲ್ಲ
ನಾ ಹೊಸೆದ ಸಾಲುಗಳಿಗೆ ಅನೇಕರ
ಅನುಗಾಲದ ತಲ್ಲಣಗಳೂ ಸಾಲ ಕೊಟ್ಟಿವೆಯಲ್ಲಾ?.......
ಮಾತಲೆ ನಾವಿಬ್ಬರೂ ಕಟ್ಟಿದ್ದ ಕನಸಿನ ಮನೆಯ
ಕೈಯ್ಯಾರೆ ತಾನೆ ಮುರಿದು
ಮೌನದ ಝೋಪಡಿಗೆ ನನ್ನ ನೂಕಿದ ನೀನೆಂದೆಂದಿಗೂ
ಸಂತಸ ಸೌಧದಲ್ಲಿಯೇ ಬಾಳುತ್ತಿರು,
ಸಮಯ ದಾಟಿದ ಮೇಲೆ
ಪ್ರವಾಹ ಹೆಚ್ಚಿದ ಮೇಲೆ....
ಬಾಳು ಹೊಳೆ ಎರಡನ್ನೂ
ಕಾಯೋದು ಬರಿ ವ್ಯರ್ಥ./
ಮಳೆಯ ನಿರೀಕ್ಷೆ ಹುಟ್ಟಿಸುವ ಮೋಡಗಳು
ಮತ್ತೆ ನೆಲವ ತಣಿಸದಿದ್ದರೆ ಅವಕ್ಕೆ ಎಂದೆಂದಿಗೂ ಕ್ಷಮೆಯಿಲ್ಲ.....
ಪೂರ್ತಿ ಗಾಳಿ ಹೋದ ಗಾಲಿಯೇ ಆಗಿದ್ದರೂ
ಕೊಂಚ ದೂರವಾದರೂ ನಂಬಿದ ಗಾಡಿಯನ್ನ,
ಮುಂದೆಳೆದೇ ತೀರುತ್ತದೆ
ವಿಫಲ ಪ್ರೇಮಿಯ ಪಾಡೂ ಕೊಂಚ ಹಾಗೇನೆ.//



ಕನಸ ಬೀದಿಯುದ್ದ ಕವಿದ ಸಂಜೆ ಕತ್ತಲು
ಇರುಳಗುರುಡ ನಾನಾದರೂ ನನ್ನ ಹೆಜ್ಜೆ ತಪ್ಪಲೇ ಇಲ್ಲವಲ್ಲ
ನಿನ್ನ ಅಮಲು ಸದಾ ನನ್ನ ಮುತ್ತಲು......
ಬದುಕು ನಿತ್ಯ ಅನಿರೀಕ್ಷಿತಗಳ ಹೊಸ ಹಾಡು
ರಾಗ ತಪ್ಪಿದರೆ ಅದರಲ್ಲಿ ಲಯಬದ್ಧವಾಗಿ ತಪ್ಪದೆ
ಮಿಡಿಯುತ್ತಲೇ ಇರುವ ತಾಳದ ತಪ್ಪೇನು?,
ಕರೆದು ಕಾದು ಸಾಕಾಗಿ ಮೌನವಾಗಿ
ಬಂದ ಹಾದಿಯನ್ನೆ ದಿಟ್ಟಿಸುತ್ತಾ
ನಿನ್ನ ಬರುವನ್ನೆ ಕಾದ ಕೃಷ್ಣ ನಾನು....
ಆಗಾಗ ಬೇಕಿದ್ದರೆ ರಾಧೆಯಾಗಿಯೂ ಕಾಣಿಸಿಯೇನು./
ತೀರಿಸಿಲಾಗದ ಮತ್ತೆ ಮರಳಿ ಮುಟ್ಟಿಸಲಾಗದ
ಕೆಲವೆ ಕೆಲವು ಋಣಗಳಲ್ಲಿ....
ನಿನ್ನ ಆ ದಿನಗಳ ನಿರ್ಮಲ ಒಲವಿನ ಋಣವೂ ಒಂದು,
ಅಪರೂಪಕ್ಕೆ ಆವರಿಸಿದ್ದ ಸ್ವಪ್ನ ಸಹಿತ ನಿದ್ರೆಯಲ್ಲಿ
ಕೊಂಚ ನಾನಿದ್ದೆ ಹಾಗೂ ಜೊತೆಗೆ ನೀನಿದ್ದೆ.....
ಮೌನದ ಮಂಜು ಕರಗಿ
ಮಾತಿನ ಧಾರೆಗಳಾಗಿ ಹರಿದು ಹೋಗುವ ಹೊತ್ತಿಗೆ
ನೆನಪಿನ ಮೋಡಗಳು ಬಾನಿನ ಮೇಘಗಳೊಂದಿಗೆ ಹನಿಯುವ ಮತ್ತಿಗೆ
ಮನ ಅನುಗಾಲ ಶರಣು.//


ಹಳೆಯ ಊರಿನಲ್ಲಿ
ಅವೆ ಸವೆದ ಹಾದಿಗಳಲ್ಲಿ ಇರುಳ ಕತ್ತಲಿನಲ್ಲಿ.....
ಅನಾಥನಂತೆ ಒಬ್ಬನೆ ಮತ್ತೆ ಹೆಜ್ಜೆ ಹಾಕುವಾಗ
ಮನಸದೇಕೋ ಭಾರ ಭಾರ,
ಮನಸು ಮೃದುವಾದಷ್ಟೂ ನೋವಿನ ಬಿಂಬ ಆಳದಲ್ಲಿ ಮೂಡುತ್ತದೆ
ಬಾಳ ಪುಟ ಬಿಳಿಯಾಗಿದ್ದಷ್ಟೂ
ಬೀಳುವ ಸಂಕಟದ ಕಲೆ ಕೊನೆಯವರೆಗೂ ಕಾಡುತ್ತದೆ./
ದಾರಿಯುದ್ದ ಬಿಕ್ಕುತ್ತಾ ಬಂದ
ಹಾದಿ ಗುರುತಿನ ಸಿಹಿ ತುಂಡುಗಳನ್ನೆಲ್ಲ.....
ವಿಧಿ ಎಂಬ ಇರುವೆ ಕಬಳಿಸಿ
ಸುಗಮ ಬಾಳು ಬೋಳಾಗಿಹೋಯಿತು,
ಸರಿವ ಕಾಲದ ಜೀತ ಮಾಡಿತ್ತಾ
ಕೂಲಿಯ ಪ್ರತಿಫಲಕ್ಕಾಗಿ ಕಾಯುವಾಗ
ಸಿಕ್ಕಷ್ಟಕ್ಕೆ ಸುಖ ಪಡಬೇಕಿರೋದು ಅನಿವಾರ್ಯ ಕರ್ಮ.//

ತುಳುನಾಡು ಬಲು ವಿಸ್ತಾರವಂತೆ ಅದರ ಹಿರಿಮೆ ಘಟ್ಟದಲ್ಲೂ ಹರಡಿತ್ತಂತೆ!, ಯಾವನ್'ರಿ ಅದು ಮತಿಗೆಟ್ಟವ ಹೀಗೆಲ್ಲ ಹಾರಾಡುತ್ತಿರುವವ?








"ಒಂದು ಕಾಲದಲ್ಲಿ ಗೋಕರ್ಣ, ಸಿದ್ದಾಪುರ, ಹೊಸನಗರ, ತೀರ್ಥಹಳ್ಳಿ, ಕಿಗ್ಗ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಮೂಡಿಗೆರೆ ತುಳುನಾಡಿನ ಭಾಗಗಳಾಗಿದ್ದವು. ತುಳುನಾಡನ್ನು ಪ್ರಾಕೃತಿಕವಾಗಿ ೨ ಭಾಗಗಳಾಗಿ ವಿಂಗಡಿಸಲಾಗಿತ್ತು. ಘಟ್ಟ ಪ್ರದೇಶಗಳು ಮತ್ತು ಕರಾವಳಿ ಪ್ರದೇಶಗಳು. ತುಳುನಾಡಿನ ದೈವಗಳು ಘಟ್ಟಕ್ಕೆ ಹೋಗಿ ಅಲ್ಲಿನ ತುಳುವರನ್ನು ಹರಸುವ ಕ್ರಮ ಇದ್ದಿತು. ಘಟ್ಟದ ತುಳುವರು ಹಾಗೂ ಕರಾವಳಿ ತುಳುವರು ವ್ಯಾಪಾರ ಸಂಪರ್ಕ ಇಟ್ಟುಕೊಂಡಿದ್ದರು. ತುಂಬಾ ಅನ್ಯೋನ್ಯವಾಗಿದ್ದರು.

ಚಿತ್ರದುರ್ಗದ ಪಾಳೆಗಾರ ವಂಶಜರಾದ ಶಿವಪ್ಪನಾಯಕ ಮತ್ತು ಅವರ ತಲೆಮಾರಿನವರು ತುಳುನಾಡನ್ನು ದಂಡೆತ್ತಿ ಬಂದರು. ಅವರು ಸಾಗರದಲ್ಲಿ ಕೋಟೆಯನ್ನು ಕಟ್ಟಿದರು. ತುಳುನಾಡಿನಲ್ಲಿ ಕನ್ನಡವನ್ನೇ ಆಡುಭಾಷೆಯನ್ನಾಗಿ ಉಪಯೋಗಿಸಬೇಕು, ಇಲ್ಲವಾದರೆ ಕಠಿಣ ಶಿಕ್ಷೆಯನ್ನು ನೀಡುವುದಾಗಿ ಬೆಧರಿಸಿ ತುಳುವನ್ನು ನಾಶಪಡಿಸಲಾರಂಭಿದರು. ಪಾಳೆಗಾರರು ಕರಾವಳಿ ತುಳುನಾಡಿಗೂ ಆಕ್ರಮಣ ಮಾಡಿ ತುಳುನಾಡಿನ ರಾಜಧಾನಿ ಬಾರ್ಕೂರನ್ನು ವಶಪಡಿಸಿಕೊಂಡರು. ಕ್ರಮೇಣ ಹೊಸನಗರ ತೀರ್ಥಹಳ್ಳಿ, ಕಿಗ್ಗ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಮೂಡಿಗೆರೆ, ಸುಳ್ಯ, ಬಾರ್ಕೂರು, ಕುಂದಾಪುರ, ಸಿದ್ದಾಪುರ ಕನ್ನಡೀಕರಣ ಗೊಂಡಿತು. ವಿಶೇಷವೇನೆಂದರೆ ಇವರು ಕನ್ನಡದಲ್ಲೂ ತುಳುವಿನ ಧಾಟಿಯನ್ನು ಬಿಡಲಿಲ್ಲ. ತುಳು ಹಾಗೂ ಕನ್ನಡದ ಸಮಾಗಮವೇ ಕುಂದಭಾಷೆ, ಅರೆಭಾಷೆ ಗಳೆಂದು ಪ್ರಸಿದ್ಧವಾದವು. ಆದರೆ ತುಳುನಾಡಿನ ಮೂಲಭಾಷೆ ನಾಶವಾಗತೊಡಗಿತು.

ತುಳು ಭಾಷೆಯ ಪತನಕ್ಕೆ ಕಾರಣವಾದ ಕೆಲವು ಅಂಶಗಳು.
೧) ಚೋಳರ ಆಕ್ರಮಣ ತುಳುವಿಗೆ ತಂದ ಮೊದಲ ಆಘಾತ
೨) ಚೇರರ ಆಕ್ರಮಣ.
೩) ಹೊಯ್ಸಳರ ಆಕ್ರಮಣ
೪) ಪಾಳೆಗಾರರ ಆಕ್ರಮಣ
೫) ಬ್ರಿಟಿಶರಿಂದ ತುಳು ಲಿಪಿಯ ನಿರ್ಬಂಧ.
೬) ಭಾಷಾ ವೈವಿಧ್ಯತೆಯ ಮೇಲೆ ರಾಜ್ಯಗಳ ವಿಂಗಡನೆಯ ಸಂದರ್ಭದಲ್ಲಿ ತುಳುನಾಡನ್ನು ಕೇರಳಕ್ಕೂ ಕರ್ನಾಟಕಕ್ಕೂ ಪಾಲು.
೭) ಕರ್ನಾಟಕ ಸರ್ಕಾರದಿಂದ ತುಳು ನಿರ್ಬಂಧ.
( ತೆಂಕಣ ತುಳುನಾಡಿನ ಪತನದ ಬಗ್ಗೆ ಮುಂದಿನ ಪೋಸ್ಟ್ ನಲ್ಲಿ.)"

ಹೀಗೊಂದು ತಲೆಕೆಟ್ಟ ಬರಹ ಒಂದು ವ್ಯಾಪಕವಾಗಿ ಅಲ್ಲಿಲ್ಲಿ ಪಸರಿಸಿ ಹಂಚಿ ಹೋಗುತ್ತಿದೆ. ಅರೆಬೆಂದವನೊಬ್ಬ ಮನಸೋ ಇಚ್ಛೆ ಗಳಪಿದಂತಿರುವ ಈ ಬರಹಕ್ಕೆ ಮುಕುಳಿಬಾಯಿ ಇಲ್ಲ ಎನ್ನುವುದು ಅನಿವಾರ್ಯ.

ಸುಳ್ಳು, ಯಾವ ಕಾಲದಲ್ಲೂ ಗೋಕರ್ಣ, ಸಿದ್ಧಾಪುರ, ಹೊಸನಗರ, ತೀರ್ಥಹಳ್ಳಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಮುಡಿಗೆರೆ ಹಾಗೂ ಕಿಗ್ಗಾ ತುಳುನಾಡಿನ ಭಾಗವಾಗಿರಲೇ ಇಲ್ಲ. ಅವು ಕರುನಾಡ ಮಲೆನಾಡಿನ ಭಾಗಗಳಾಗಿದ್ದವು, ಇದ್ದಾವೆ ಹಾಗೂ ಇನ್ನು ಮುಂದೆಯೂ ಇರುತಾವೆ. ಇನ್ನು ಆ ಕಾಲಕ್ಕೆ ಹೇಳಿಕೊಳ್ಳುವ ಯಾವೊಂದು ಉತ್ಪತ್ತಿಯೂ ಇಲ್ಲದ ಕರಾವಳಿಯ ಬಡ ಜನ ಮಲೆನಾಡಿಗೆ ಅನ್ನ ಅರಸಿ ಉದ್ಯೋಗ ನಿಮಿತ್ತ ತಾವೆ ಬಿಕನಾಸಿಗಳಂತೆ ಬೇಡಿಕೊಂಡು ಘಟ್ಟ ಹತ್ತಿ ಹೋಗುತ್ತಿದ್ದರೆ ಹೊರತು, ಹಾಗೆ ಹೋದ ಮಾತ್ರಕ್ಕೆ ಇಡಿ ಘಟ್ಟವನ್ನೆ ತಮ್ಮದು ಎನ್ನುವ ತಿಕ್ಕಲಿಗೆ ಇಳಿದಿದ್ದರೆ ತಿಕದ ಮೇಲೆ ನಾಲ್ಕು ಒದ್ದು ಓಡಿಸುತ್ತಿದ್ದರು ಅಲ್ಲಿನವರು ಎನ್ನುವದನ್ನ ನೆನಪಿಟ್ಟುಕೊಂಡು ಹೀಗೆಲ್ಲ ಅಸಂಬದ್ಧವಾಗಿ ಬಡಬಡಿಸಬೇಕು ಅಷ್ಟೆ.

ಇನ್ನು ತುಳುನಾಡಿನ ಭೂತಗಳು ಮೂಲದಲ್ಲಿ ಘಟ್ಟವನ್ನ ಇಳಿದುಕೊಂಡು ಬಂದವು ಎನ್ನುವ ನುಡಿಕಟ್ಟಿದೆ. ಅದರ ಅರ್ಥ ಆ ಭೂತಾರಾಧನೆಯ ಸಂಸ್ಕೃತಿ ಬಹುಷಃ ತುಳುನಾಡಿಗೆ ಕರುನಾಡ ಕೊಡುಗೆ ಅನ್ನುವ ಅರ್ಥ ಹೊಮ್ಮಿಸುತ್ತವೆಯೆ ಹೊರತು. ಘಟ್ಟವನ್ನ ಯಾರೂ ತುಳುವರಿಗೆ ಜಹಗೀರು ಬರೆದುಕೊಟ್ಟಿದ್ದರು ಅಂತಲ್ಲ. ಇಂತಹ ಸಾಂಸ್ಕೃತಿಕ ಅನನ್ಯತೆ ದಯಪಾಲಿಸಿದ ನೆಲಕ್ಕೆ ಕೃತಜ್ಞರಾಗಿರುವ ಬದಲಿಗೆ ಆ ಸೀಮೆಯೆ ನಮ್ಮದು ಎನ್ನುವುದು ಅರೆ ಹುಚ್ಚರು ಮಾತ್ರ.

ಎರಡನೆಯ ಪಂಕ್ತಿಯಂತೂ ಭಯಂಕರ ಸುಳ್ಳಿನ ಬೊಂತೆ. ಎಲ್ಲಿಯ ಚಿತ್ರದುರ್ಗ? ಯಾರವ ಶಿವಪ್ಪನಾಯಕ? ಎಲ್ಲಾ ಬಿಟ್ಟು ಅವನ್ಯಾಕೆ ಖಾಯಿಲೆಯ ಬೀಡಾಗಿದ್ದ ಮಲೆಸೀಮೆಯನ್ನ ಕಷ್ಟಪಟ್ಟು ದಾಟಿ ಆ ಕಾಲದಲ್ಲಿ ಮೂರು ಕಾಸಿನ ಉತ್ಪತ್ತಿ ಇಲ್ಲದೆ ಮಲೆನಾಡಿಗೆ ಅನ್ನ ಅರಸಿಕೊಂಡು ಘಟ್ಟ ಹಟ್ಟುತ್ತಿದ್ದ ಕೈಸೋತ ತುಳುವರ ಬರಡು ಭಂಡಾರದಂತಹ ಕರಾವಳಿಗೆ ಮುತ್ತಿಗೆ ಹಾಕುತ್ತಿದ್ದ. ಒಂದು ವೇಳೆ ಆ ಹೆಸರಿನ ಪಾಳೆಗಾರನೊಬ್ಬ ಇದ್ದು ಅವನಿಗೇನಾದರೂ ಹುಚ್ಚುನಾಯಿ ಕಚ್ಚಿದ್ದರೆ ಮಾತ್ರ ಈ ಲಾಭವೆ ಇಲ್ಲದ ವ್ಯರ್ಥ ಶ್ರಮಕ್ಕೆ ಅವ ಇಳಿಯಬೇಕಿತ್ತೇನೋ! ಹಾಸ್ಯಾಸ್ಪದ ಬೊಂತೆ.

ಅವ ಬಂದ ಬೆದರಿಸಿ ತುಳು ಆಡದಂತೆ ಸ್ಥಳಿಯರನ್ನ ನಿರ್ಬಂಧಿಸಿದ ಅಂತೆಲ್ಲ ಸುಳ್ಳಿನ ಮಾಲೆ ಹೊಸೆವ ಮಡೆಯನಿಗೆ ಮೊದಲು ಗೊತ್ತಿರಬೇಕಾದ ಸತ್ಯವೇನೆಂದರೆ ಮಲೆನಾಡನ್ನ ಆಳಿದ ನಾಯಕ ಮನೆತನಕ್ಕೆ ಮಲೆನಾಡಿನಲ್ಲಿ ಪಾಳೆಪಟ್ಟು ಇದ್ದದ್ದು ಹೌದಾದರೂ ಅವರಿಗೂ ಚಿತ್ರದುರ್ಗದ ನಾಯಕರಿಗೂ ಸೂತ್ರ ಸಂಬಂಧವಿಲ್ಲ! ಚಿತ್ರದುರ್ಗದ ನಾಯಕರು ಜಾತಿಯಿಂದ ಬೇಡರಾಗಿದ್ದು ಅವರ ಹುಟ್ಟು ಉಪನಾಮ ನಾಯಕ. ಆದರೆ ನಗರ, ಕೆಳದಿ, ಬಿದನೂರು ಹಾಗೂ ಇಕ್ಕೇರಿಯನ್ನ ರಾಜಧಾನಿಗಳನ್ನಾಗಿಸಿಕೊಂಡು ಮಲೆನಾಡನ್ನ ಆಳುತ್ತಿದ್ದ ನಾಯಕರು ಶುದ್ಧ ಸಸ್ಯಾಹಾರಿ ಲಿಂಗಾಯತರು. ಇವರಿಗೆ ಪಟ್ಟವಾದ ನಂತರ ಮಾತ್ರ ನಾಯಕರೆಂದು ಕರೆಯಲಾಗುತ್ತಿತ್ತೇ ಹೊರತು ಹುಟ್ಟಿನಿಂದ ಅಲ್ಲ.

ಇನ್ನು ಎಲ್ಲಕ್ಕೂ ಪ್ರಮುಖವಾಗಿ ಕೆಳದಿಯ ನಾಯಕರು ಮಲೆನಾಡಿನಲ್ಲಿ ಆಳ್ವಿಕೆ ಆರಂಭಿಸಿದಾಗ ತುಳುನಾಡಿನ ರಾಜಧಾನಿಯಾಗಿ ಬಾರ್ಕೂರು ಇದ್ದಿರದೆ ನಾಲ್ಕು ವರೆ ಶತಮಾನ ಸುಖವಾಗಿ ಸರಿದುಹೋಗಿತ್ತು. ಸಾಗರ ಎನ್ನುವ ಊರು ಇನ್ನೂ ಹುಟ್ಟಿರಲೇ ಇಲ್ಲ! ಅದಿನ್ಯಾರ ಕನಸಿನಲ್ಲಿ ಶಿವಪ್ಪನಾಯಕ ಕೋಟೆ ಕಟ್ಟಿ ಬಂದನೋ ಅರ್ಥವೆ ಆಗುತ್ತಿಲ್ಲ! ಏಕೆಂದರೆ ಆತ ಹುಟ್ಟಿದ್ದೆ ಮುಂದೆ ನೂರೈವತ್ತು ವರ್ಷದ ನಂತರ! ಕೇಳಲಿಕ್ಕೆ ಮಜವಾಗಿದೆ ಕಥೆ.

ತನ್ನ ಕೊನೆಗಾಲದಲ್ಲಿ ಕೆಳದಿಯ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವನಾಯಕನ ಹೆಸರಿನಲ್ಲಿ ಒಂದು ಕೆರೆ ಕಟ್ಟಿಸಿ ಅದರ ಪಕ್ಕ ಒಂದು ಗಣಪತಿ ದೇವಸ್ಥಾನವನ್ನೂ ಸ್ಥಾಪಿಸಿ ಅದಕ್ಕೆ "ಸದಾಶಿವ ಸಾಗರ" ಎನ್ನುವ ಹೆಸರಿಟ್ಟ ಮುಂದೆ ಅದೆ ಕೆರೆಯ ಸುತ್ತ ಬೆಳೆದ ಊರು ಸಾಗರ ಎನ್ನಿಸಿಕೊಂಡಿತು. ಇದು ನಡೆದದ್ದು ೧೬೧೫ರಲ್ಲಿ. ಇಂದಿಗೂ ಸಾಗರದಲ್ಲಿ ಅದು  "ಗಣಪತಿ ಕೆರೆ"ಯ ಹೆಸರಿನಲ್ಲಿ ಅಸ್ತಿತ್ವದಲ್ಲಿದೆ. ಆಗ ತುಳುನಾಡಿನಲ್ಲಿ ಸುಮಾರು ಎಂಟು ವಿವಿಧ ಪಾಳೆಪಟ್ಟುಗಳು ಅಸ್ತಿತ್ವದಲ್ಲಿದ್ದವು ಹಾಗೂ ಮುಲ್ಕಿ ಸಾವಂತರ ರಾಜಧಾನಿಯಾಗಿಯೂ, ವೇಣೂರು ಅಜಿಲರ ರಾಜಧಾನಿಯಾಗಿಯೂ, ಕಾರ್ಕಳ ಭೈರರಸರ ರಾಜಧಾನಿಯಾಗಿಯೂ, ಮೂಡುಬಿದಿರೆ ಚೌಟರ ರಾಜಧಾನಿಯಾಗಿಯೂ, ಎಣ್ಮಕಜೆ ಬಲ್ಲಾಳರ ರಾಜಧಾನಿಯಾಗಿಯೂ ಚಾಲ್ತಿಯಲ್ಲಿದ್ದವೆ ಹೊರತು ಬಾರ್ಕೂರು ಪಾಳುಬಿದ್ದು ಇತಿಹಾಸದ ಪುಟ ಸೇರಿ ಹೋಗಿತ್ತು. ಇನ್ನೂ ಹುಟ್ಟದೆ ಇದ್ದ ಶಿವಪ್ಪನಾಯಕ ಬಂದು ಇವರ ಹುಟ್ಟಡಗಿಸಿದ ಅನ್ನುವ ಸವಿಯಾದ ಸುಳ್ಳು ಕೇಳಲಿಕ್ಕಷ್ಟೆ ಚಂದ ಇದೆ. ಆತ ಆಕ್ರಮಿಸಿ ತುಳುವರನ್ನ ತುಳಿದ ಎಂದು ಬರೆದ ಖಾಲಿ ಮಂಡೆಯವನಿಗೆ ಮೆದುಳು ಎನ್ನುವ ಅಂಗ ಇರುವುದು ಅನುಮಾನ ಅನ್ನುವುದು ಸ್ಪಷ್ಟ.

ಇನ್ನು ತುಳುಭಾಷೆಗೂ ಕುಂದಗನ್ನಡಕ್ಕೂ, ಅರೆಭಾಷೆಗೂ ಸಂಬಂಧವಿಲ್ಲ. ಅವೆಲ್ಲ ಪ್ರಗ್ಧ್ರಾವಿಡದ ಇನ್ನಿತರ ಲಿಪಿ ರಹಿತ ಕೂಸುಗಳಷ್ಟೆ ಇವು ಕನ್ನಡಕ್ಕೆ ನಿಷ್ಠವಾಗಿವೆಯೆ ಹೊರತು ತುಳುವಿಗೆ ಖಂಡಿತಕ್ಕೂ ಅಲ್ಲ. ತುಳು ಭಾಷೆಯ ಪತನಕ್ಕೆ ಅದನ್ನಾಡುವವರ ನಿರಭಿಮಾನ ಹಾಗೂ ಮಾತೃಭಾಷಾಭಿಮಾನ ಮರೆತ ವಾಣಿಜ್ಯ ಮನಸ್ಸಿನ ಅವರ ವ್ಯಾಪಾರಿ ಮನೋವೃತ್ತಿಯ ಪರಾಕೇಷ್ಠೆ ಕಾರಣವೆ ಹೊರತು ಯಾವ ಕಾಲಕ್ಕೂ ಚೋಳ ಹಾಗೂ ಚೇರರು ತುಳುನಾಡನ್ನ ಆಕ್ರಮಿಸಿರಲೇ ಇಲ್ಲ. ಹೊಯಸಳರು ಹಾಗೂ ಇವರು ಹೇಳಿದ ಪಾಳೆಗಾರರು (ಯಾವ ಊರಿನ ಪಾಳೆಗಾರ!.) ಇವರಿಗೂ ಇದೆ ಮಾತನ್ನ ಹೇಳಬೇಕು. ಹಾಗೆ ಯಾವ ಆಕ್ರಮಣವೂ ನಡೆದ ದಾಖಲೆಗಳಿಲ್ಲ.  ಇದಿನ್ನೊಂದು ಸುಳ್ಳು.

ಇನ್ನು ಬ್ರಿಟಿಷರಾಗಲಿ ಕರ್ನಾಟಕ ಸರಕಾರವಾಗಲಿ ತುಳು ಲಿಪಿ ಹಾಗೂ ಭಾಷೆಯ ಮೇಲೆ ನಿರ್ಬಂಧ ಎಲ್ಲೂ ವಿಧಿಸಿಯೆ ಇಲ್ಲ. ಹಾಗನ್ನುವವನಿಗೆ ಬಹುಷಃ ಗುಣವೆ ಆಗದ ಖಾಯಿಲೆ ಮಾತ್ರ ಆಗಿರಲಿಕ್ಕೆ ಸಾಧ್ಯ. ಹೌದು, ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ತುಳುನಾಡು ಪರಿಗಣಿತವಾಗಲಿಲ್ಲ. ಇಲ್ಲಿನ ಒಂದು ತಾಲ್ಲೂಕನ್ನ ಬಲವಂತವಾಗಿ ಕೇರಳಕ್ಕೆ ಸೇರಿಸಿ ಉಳಿದ ಭಾಗವನ್ನ ಕರ್ನಾಟಕದ ಮರು ಸುಪರ್ದಿಗೆ ಕೊಡಲಾಯಿತು ( ಬ್ರಿಟಿಷರಿಗಿಂತ ಮೊದಲು ಇದು ಮೈಸೂರು ರಾಜ್ಯ, ಅದಕ್ಕೂ ಮೊದಲು ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು ಅನ್ನುವುದು ನೆನಪಿಡಿ.). ಇದಕ್ಕೆ ಕಾರಣ ಆಡಳಿತದ ಹಿತದೃಷ್ಟಿ ಹಾಗೂ ಬಿಗಿ ಕಾನೂನು ಹಾಗೂ ಸುವ್ಯವಸ್ಥೆಗೆ ಸಣ್ಣ ರಾಜ್ಯಗಳ ಸೃಷ್ಟಿ ಕಂಟಕ ಎನ್ನುವ ಅಂದಿನ ಪ್ರಧಾನಿ ನೆಹರೂರವರ ವಯಕ್ತಿಕ ಅಭಿಪ್ರಾಯವೆ ಹೊರತು ಇದಕ್ಕೂ ಭಾಷೆಗೂ ತಳುಕು ಹಾಕೋದೆ ಹುಚ್ಚಾಟ. ಇದೆ ತತ್ವದಾಧಾರದಲ್ಲಿ ಅಲ್ಲಿಯವರೆಗೂ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಹಾಗೂ ಜಮಖಂಡಿಗಳನ್ನೂ ಕರ್ನಾಟಕದಲ್ಲಿ ವಿಲೀನಗೊಳಿಸಿದ್ದು. ಹೀಗೆಲ್ಲ ಸುಳ್ಳು ಹರಡುವ ಬೃಹಸ್ಪತಿಗಳಿಗೆ ಈ ವಿಚಾರ ಗೊತ್ತಿರಲಿಕ್ಕಿಲ್ಲ.


ಇನ್ನೊಂದು ವಿಷಯವೊಂದನ್ನ ಇಲ್ಲಿ ಪ್ರಸ್ತಾವಿಸ ಬಯಸುತ್ತೇನೆ. ಕಾಸರಗೋಡು ತಾಲ್ಲೂಕು ಕೇರಳ ಪಾಲಾಗಿ ತುಳುನಾಡಿಗೆ ಅನ್ಯಾಯವಾಗಿದೆ ಅನ್ನೋದು ಮೇಲ್ನೋಟದ ಸತ್ಯವಾದರೂ ವಾಸ್ತವವಾಗಿ ತುಳುನಾಡಿಗೆ ಇದರಿಂದ ಅಂತಹ ಅನ್ಯಾಯವೇನೂ ಆಗಿಲ್ಲ!. ಏಕೆಂದರೆ ಹದಿನೆಂಟನೆ ಶತಮಾನದ ಉತ್ತರಾರ್ಧದಲ್ಲಿ ಚಿಕ್ಕ ವೀರರಾಜೇಂದ್ರನ ಪದಚ್ಯುತಿ ಹಾಗೂ ಬನಾರಸ್ಸಿಗೆ ಅತನ ಗಡಿಪಾರಾದ ನಂತರ ಆತನ ಕೊಡಗನ್ನು ರಾಜಕೀಯವಾಗಿ ಒಡೆದು ಅದರ ಅವಿಭಾಜ್ಯ ಅಂಗವಾಗಿದ್ದ ಸುಳ್ಯ ತಾಲ್ಲೂಕನ್ನ ಆಡಳಿತಾತ್ಮಕ ಅನುಕೂಲಕ್ಕಾಗಿ ತಮ್ಮ ನೇರ ನಿಗಾರನಿಯಲ್ಲಿದ್ದ ಮದ್ರಾಸ್ ಸಂಸ್ಥಾನದ ದಕ್ಷಿಣ ಕನ್ನಡ ಜಿಲ್ಲೆಗೆ ಬ್ರಿಟಿಷರು ಸೇರಿಸಿದ್ದರು. ಬ್ರಿಟಿಷರು ಭಾರತದಿಂದ ಕಾಲ್ತೆಗೆದ ನಂತರ ಈ ಒಡೆದಾಳುವ ನೀತಿಯ ನೇರ ಫಲಾನುಭವಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯವನ್ನ ಉಚಿತ ಕೊಡುಗೆಯಾಗಿ ಉಳಿಸಿಕೊಂಡಿತು. ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗೆಜೆಟಿಯರ್ ಓದಿ ಸಂದೇಹಿತರು ತಮ್ಮ ಅನುಮಾನಗಳನ್ನ ಬಗೆಹರಿಸಿಕೊಳ್ಳಬಹುದು.

ಒಂದು ಸುಳ್ಳನ್ನ ಕಂಡಕಂಡಲ್ಲಿ ಕೋಟಿ ಬಾರಿ ಊಳಿಟ್ಟರೂ ಅದು ಕಡೆಗೂ ಸತ್ಯವಾಗಲಾರದು. ಈ ಅಲ್ಪ ಬುದ್ಧಿಯ "ತುಳುನಾಡ" ಹಗಲು ಕನಸುಗಾರಿಗೂ ಇದು ನೆನಪಿರಬೇಕು. ಅವರ ಈ ಬೊಬ್ಬೆ ತುಳುವಿಗೆ ಹೆಚ್ಚು ಹಾನಿಯನ್ನೆ ಉಂಟು ಮಾಡುತ್ತದೆಯೆ ಹೊರತು ಲಾಭವಾಗುವ ಮಾತಂತೂ ಬಲು ದೂರ.

{ ಅನುಬಂಧ;  Sadashiva Nayaka (1530–1566) was an important chieftain in the Vijayanagar Empire and earned the title Kotekolahala from emperor Aliya Rama Raya for his heroics in the battle of Kalyani. The coastal provinces of Karnataka came under his direct rule. He moved the capital to Ikkeri some 20 km. from Keladi.

 Venkatappa Nayaka (1586–1629) is considered by scholars as ablest monarch of the clan. He completely freed himself from the overlordship of the relocated Vijayanagar rulers of Penugonda. Italian traveller Pietro Della Valle, who visited his kingdom in 1623, called him an able soldier and administrator. In his reign the kingdom expanded so that it covered coastal regions, Malnad regions, and some regions to the east of the western Ghats of present day Karnataka. He is also known to have defeated the Adilshahis of Bijapur in Hanagal. Though a Virashaiva by faith, he built many temples for Vaishnavas and Jains and a mosque for Muslims.

Shivappa Nayaka (1645–1660) is widely considered as the ablest and greatest of the Keladi rulers. He was the uncle of Virabhadra Nayaka. Shivappa deposed his nephew to gain the throne of Keladi. He was not only an able administrator; he also patronised literature and fine arts. His successful campaigns against the Bijapur sultans, the Mysore kings, the Portuguese, and other Nayakas of the neighbouring territories east of the western ghats helped expand the kingdom to its greatest extent, covering large areas of present day Karnataka. He gave importance to agriculture and developed new schemes for collection of taxes and revenues which earned him much praise from later British officials. A statue of him and the palace built by him containing many artifacts of his times are reminders of the respect he has earned even from the present generation of people of the region.}

Thursday, July 3, 2014

ವಯಸ್ಸು ಮಿತಿ ಮೀರಿದ್ದರೂ ಸಾಂವಿಧಾನಿಕ ಮಾನ್ಯತೆ ಮಾತ್ರ "ತುಳುವಪ್ಪೆ" ( ತುಳುವಮ್ಮ.)ಗೆ ಇನ್ನೂ ಮರೀಚಿಕೆ......





ದ್ರಾವಿಡ ಭಾಷೆಗಳ ಇತಿಹಾಸವನ್ನ ನೋಡಿದರೆ ಮೊದಲು ಪ್ರಗ್ದ್ರಾವಿಡ ಎನ್ನುವ ಅಮ್ಮನಿಂದ ಒಟ್ಟಿಗೆ ಹುಟ್ಟಿ ಬೇರೆಯಾದ ಎರಡು ಅವಳಿ ಭಾಷೆಗಳು ತುಳು ಹಾಗೂ ತಮಿಳು. ಇವೆರಡೂ ಭಾಷೆಗಳು ನಾಲ್ಕೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು ಕೂಡಲೆ ಲಿಪಿ ಸಂಸ್ಕಾರ ಪಡೆದುಕೊಂಡವು.


ಅನಂತರ ಸುಮಾರು ಒಂದು ಸಾವಿರ ವರ್ಷಗಳ ನಂತರ ಹುಟ್ಟಿದ ಮೊದಲ ತಂಗಿ ಭಾಷೆ ಕನ್ನಡ. ಇದರ ಹಿಂದೆಯೆ ಮತ್ತೆ ಆರುನೂರು ವರ್ಷಗಳಾಚೆ ತೆಲುಗು ತೆಲ್ಲಿ ಹುಟ್ಟಿದಳು. ಇವರಿಬ್ಬರಿಗೂ ಕೂಡಲೆ ಲಿಪಿ ಸಂಸ್ಕಾರಗಳಾದವು ಸಹ.

ಆದರೆ ಕೊನೆಗೆ ಹುಟ್ಟಿದ ಹಾಗೂ ಕೇವಲ ಒಂದೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮಲಯಾಳಂ ಮಾತ್ರ ಲಿಪಿ ಬದ್ಧವಾಗಲು ಮತ್ತೆ ಸಾವಿರ ವರ್ಷ ನಿರೀಕ್ಷಿಸಬೇಕಾಯಿತು! ನೆರೆಯ ತುಳು ನಾಡಿನ ಲಿಪಿ ಇದರ ಅಗತ್ಯಕ್ಕೆ ಮುಂದಿನ ದಿನಗಳಲ್ಲಿ ಒದಗಿ ಬಂತು. ಇದಕ್ಕೆ ಒಂದು ಸ್ಪಷ್ಟ ನಿದರ್ಶನ ಎಂದರೆ ಹುಟ್ಟು ಮಲಯಾಳಿಯಾಗಿದ್ದರೂ ಶ್ರೀಶಂಕರಾಚಾರ್ಯರು ಔಷಧಕ್ಕೆ ಬೇಕೆಂದರೂ ಒಂದೇ ಒಂದು ಕೃತಿಯನ್ನ ತಮ್ಮ ಮಾತೃಭಾಷೆಯಲ್ಲಿ ರಚಿಸಿಲ್ಲ! ಲಿಪಿ ಇಲ್ಲದ್ದೂ ಇದಕ್ಕೊಂದು ಕಾರಣವಾಗಿದ್ದಿರಬಹುದು. ಅವರ ಕೃತಿಗಳೆಲ್ಲ ದೇವನಾಗರಿ ಲಿಪಿ ಹಾಗೂ ಸಂಸ್ಕೃತ ಭಾಷೆಯಲ್ಲಿವೆ.

ಮಲಯಾಳಂನ ಅತಿ ಪುರಾತನ ಸಾಹಿತ್ಯ ಕೃತಿಗಳ ವಯಸ್ಸು ಐದು ಶತಮಾನ ದಾಟುವುದಿಲ್ಲ. ಒಟ್ಟಿನಲ್ಲಿ ಮನೆಯ ಹಿರಿಯಕ್ಕಂದಿರಲ್ಲಿ ಒಬ್ಬಳಾಗಿದ್ದರೂ ಕಿರಿಯ ಕನ್ನಡ ಹಾಗೂ ಮಲಯಾಳಂನ ಮರ್ಜಿಯಲ್ಲಿ ಕಾಲ ಹಾಕಬೇಕಾದ ಸಂದಿಗ್ಧಕ್ಕೆ ತುಳುವಪ್ಪೆ ಸಿಲುಕಿ ಅನಿವಾರ್ಯವಾಗಿ ಪರಿತಪಿಸುತ್ತಿದ್ದಾಳೆ.


ಸಂಸ್ಕೃತ ಸಹಿತ ಆರ್ಯ ಕುಟುಂಬದ ಭಾಷೆಗಳು ಬಹುತೇಕ ದೇವನಾಗರಿ ಅಥವಾ ಅದರ ವಿವಿಧ ಪರಿಷ್ಕೃತ ಆವೃತ್ತಿಗಳನ್ನ ಬರವಣಿಗೆಗೆ ಬಳಸುತ್ತವೆ. ಸಂಸ್ಕೃತದ ಅಪಭ್ರಂಶಗಳಾದ ಅರ್ಧ ಮಾಗಧಿ, ಪಾಳಿ, ಪೈಶಾಚಿ ಹಾಗೂ ಪ್ರಾಕೃತ ಬ್ರಾಹ್ಮಿ ಲಿಪಿಯನ್ನ ಬರವಣಿಗೆಗೆ ಆಧರಿಸಿವೆ. ಒಟ್ಟಿನಲ್ಲಿ ಸಂಸ್ಕೃತವೂ ಸೇರಿ ಬಹುತೇಕ ಆರ್ಯ ಮೂಲದ ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ.


ತುಳುವಿಗೆ ಲಿಪಿ ಇಲ್ಲ ಅನ್ನುವುದು ಒಂದು ಜನಪ್ರಿಯ ನಂಬಿಕೆ. ಆದರೆ ಲಿಪಿಯೇ ಇದ್ದಿಲ್ಲದ ಮಲಯಾಳಂ ಭಾಷೆಗೆ ಕಡವಾಗಿ ಕೊಟ್ಟು ತನಗೆ ಇದ್ದ ಲಿಪಿಯ ಬೆಂಬಲವನ್ನ ಕಳೆದುಕೊಂಡು ಕಾಲಾನುಕ್ರಮದಲ್ಲಿ ಬಡವಾದ ನತದೃಷ್ಟ ಭಾಷೆ ತುಳು ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಆಚಾರ್ಯ ಮಾಧ್ವರು ತುಳು ಲಿಪಿಯಲ್ಲಿಯೇ ಧರ್ಮ ಜಿಜ್ಞಾಸೆಗಳನ್ನ ದಾಖಲಿಸಿದ್ದಾರೆ. ಇತ್ತೀಚಿನವರೆಗೂ ತುಳುನಾಡಿನ ಹಿರಿಯರು "ತಿಗಳಾರಿ" ಎಂದು ಕರೆಯಲಾಗುವ ಈ ಲಿಪಿಯನ್ನ ಬಳಸಿ ಬರವಣಿಗೆ ಸಾಗಿಸುತ್ತಿದ್ದರು.

ಇದರಲ್ಲಿ ಬರೆಯಲಾಗಿರುವ ಓಲೆಗರಿಗಳನ್ನ ಇಂದಿಗೂ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯ, ಉಡುಪಿಯ ಫಲಿಮಾರು ಮಠ ಹಾಗೂ ತಿರುವನಂತಪುರದ ಸರಕಾರಿ ವಸ್ತು ಸಂಗ್ರಹಾಲಯಗಳಲ್ಲಿ ನೋಡಬಹುದು. ತುಳು ಭಾಷಾಭಿಮಾನಿಗಳಿಗೆ ಇಲ್ಲಿದೆ ಅವರದ್ದೆ ಮಾತೃಭಾಷೆಯ ಸ್ವಂತ ಲಿಪಿ. ಇದರ ಪರಿಷ್ಕರಣೆಯೇ ಇಂದು ಚಾಲ್ತಿಯಲ್ಲಿರುವ ಮಲಯಾಳಂ ಲಿಪಿ ಎನ್ನುವುದು ಉಳಿದವರ ಮಾಹಿತಿಗಾಗಿ.


ನನ್ನ ಮಾತೃಭಾಷೆ ಕನ್ನಡ. ಆದರೆ ತುಳುವಿಗೆ ಆದ, ಆಗುತ್ತಿರುವ ಅನ್ಯಾಯಕ್ಕೆ ಮನ ಮಿಡಿಯುತ್ತದೆ. ಇಂದು ಬಳಕೆಯಲ್ಲಿ ರೂಢಿಗೆ ಬಂದಿರುವ ತಮಿಳು ಲಿಪಿಯನ್ನ ಆಧರಿಸಿ ಕೆಲವರು ಕನಿಷ್ಠ ಅಕ್ಷರಗಳಿರುವ ಅದು ಬೆಳೆದಿಲ್ಲ ಎನ್ನುವುದುಂಟು. ಆದರೆ ಅಕ್ಷರ ಸಮೃದ್ಧ ಸಂಗಂ ಕಾಲದ ತಮಿಳಿನಲ್ಲಿ ಈ ಸಮಸ್ಯೆ ಇರಲಿಲ್ಲ. ವಿಕಾಸ ಕೂಡುವುದರಲ್ಲಿ ಅಷ್ಟೇ ಇಲ್ಲ ಹಿತ ಮಿತ ಗೊಳಿಸುವುದರಲ್ಲಿಯೂ ಇರುತ್ತದೆ. ಅಂತೆಯೇ ಇನ್ನುಳಿದ ದ್ರಾವಿಡ ಭಾಷೆಗಳು ಸರಿಸುಮಾರು ೫೪ ಲಿಪಿಗಳಿಗೆ ತಮ್ಮ ವಿಕಸನವನ್ನು ಅಂತಿಮಗೊಳಿಸಿಕೊಂಡರೆ ತಮಿಳು ಮಾತ್ರ ಸೂಕ್ತ ಚಿನ್ಹೆಗಳನ್ನು ಸಮಯೋಚಿತವಾಗಿ ಬಳಸುವ ಸ್ವ ಶಿಸ್ತಿಗೆ ಒಳಪಟ್ಟು ತಾನೊಂದೇ ಭಿನ್ನ ಹಾದಿಯನ್ನು ತುಳಿಯಿತು. ಸೀಮಿತ ಅಕ್ಷರಗಳ ತಮಿಳು ವಿಫುಲ ಅಕ್ಷರಗಳ ಸಂಸ್ಕಾರವಿರುವ ನಮ್ಮಲ್ಲಿ ಗೊಂದಲ ಹುಟ್ಟಿಸಿದರೆ ಅದು ನಮ್ಮ ಕಲಿಕೆಯ ದೋಷವೆ ಹೊರತು, ಇದರಲ್ಲಿ ಆ ಭಾಷೆಯ ತಪ್ಪೇನೂ ನನಗೆ ಗೋಚರಿಸುತ್ತಿಲ್ಲ. ಸಹೋದರಿ ಭಾಷೆಗಳ ತುಲನೆಯಲ್ಲಿ ತುಳುವಿಗೂ ಸಮಾನ ಪಟ್ಟ ಸಿಗಬೇಕಿತ್ತು, ಆದರೆ ಇನ್ನೂ ಸಿಕ್ಕಿಲ್ಲ. ತಡವಾಗಿದೆ ನಿಜ ಆದರೆ ಮಾನ್ಯತೆ ಮತ್ಯಾವತ್ತಿಗೂ ತರಲಾಗದಂತಾಗಬಾರದು.