Thursday, June 26, 2014

ಆರೋಗ್ಯ ಸಚಿವನೆಂಬ ಕೊಬ್ಬಿದ ಹೆಗ್ಗಣವೂ, ಇಲಿ ಪಾಲಾಗುವ ಬಡ ರೋಗಿಗಳೂ......



ಯು ಟಿ ಖಾದರನೆಂಬ ಅವಿವೇಕಿಯ ಇತ್ತೀಚಿನ ನಡೆಗಳು ನೋಡುತ್ತಿರುವ ಕನ್ನಡಿಗರ ಕಣ್ಣಲ್ಲಿ ಹೇಸಿಗೆ ಹುಟ್ಟಿಸುತ್ತಿವೆ. ಸಿರಿವಂತ ತಂದೆಯೊಬ್ಬನ ಭಂಡ ಮಗನಂತಹ ಈ ದುರಹಂಕಾರಿಯ ದುರ್ವರ್ಥನೆ, ದಿನ ಕಳೆದಂತೆ ಅಧಿಕಾರದ ಅಮಲು ಸರ್ರನೆ ತಲೆಗೇರಿ ಈತನ ಉಢಾಫೆಗಳಿಗೆ ಮೇರೆ ಇಲ್ಲದಂತಾಗುತ್ತಿದೆ. ಪೊಗದಸ್ತಾಗಿ ಕೊಬ್ಬಿದ ಊರ ಹಂದಿ ಗಾತ್ರದ ಈ ಮೂರು ಕಾಸಿನ ರಾಜಕಾರಣಿ ಕೇವಲ ತನ್ನ ಪಾಳೆಪಟ್ಟಿನಲ್ಲಿ ಹೀಗೆ ಹಾರಾಡಿಕೊಂಡಿದ್ದರೆ ಕ್ಯಾಕರಿಸಿ, ಸಾಧ್ಯವಾದಲ್ಲಿ ಕೊಂಚ ಕನಿಕರಿಸಿ ಸುಮ್ಮನಾಗಬಹುದಿತ್ತು. ಆದರೆ ನಮ್ಮ ನಿಮ್ಮೆಲ್ಲರ ದುರಾದೃಷ್ಟಕ್ಕೆ ಈ ದುರಹಂಕಾರಿ ರಾಜ್ಯದ ಆರೋಗ್ಯ ಸಚಿವನಾಗಿ ವಕ್ಕರಿಸಿಕೊಂಡಿದೆ ಹಾಗೂ ಇದೆ ಕಾರಣಕ್ಕೆ ರಾಜ್ಯದ ಅಷ್ಟೂ ಸರಕಾರಿ ಆಸ್ಪತ್ರೆಗಳ ಆರೋಗ್ಯ ಮಾತ್ರ ಗುಣ ಪಡಿಸಲಾಗದಷ್ಟು ಹದಗೆಟ್ಟು ಹೇಸುಗೆಟ್ಟು ಹೋಗಿದೆ.


ಹಾಗೆ ನೋಡಿದರೆ ಹಿಂದಿನ ಭಾಜಪದ ಸರಕಾರದಲ್ಲಿಯೆ "ಅಂದ್ರಾಗಿನ" ಪುಡಿ ಗಣಿ ರೌಡಿಯ ಆರೈಕೆಯಲ್ಲಿ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳು ಈಗಿಗಿಂತ ಹೆಚ್ಚು ಸುಸ್ಥಿತಿಯಲ್ಲಿ ನಳನಳಿಸುತ್ತಿದ್ದವು. ಆದರೆ ಈ ಶನಿ ವಕ್ಕರಿಸಿಕೊಂಡದ್ದೆ ತಡ ರಾಜ್ಯದಾದ್ಯಂತ ಉತ್ತಮ ಸೇವೆ ಒದಗಿಸುತ್ತಾ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಗ್ಗುಲ ಮುಳ್ಳಾಗಿದ್ದ ಎಲ್ಲ ಸರಕಾರಿ ಆಸ್ಪತ್ರೆಗಳನ್ನ ವ್ಯವಸ್ಥಿತವಾಗಿ ಮುಗಿಸಿ ಕಂಡವರಿಗೆ ಕಾಸು ಸಂಪಾದನೆಯ ದಾರಿ ತೋರಿಸುವ ಸತ್ಕಾರ್ಯ ಆರಂಭವಾಗಿ ಹೋಯಿತು. ಆರಂಭದಲ್ಲಿ ತಾನು ಬಹಳ ದಕ್ಷ ಎಂದು ತೋರಿಸಿಕೊಳ್ಳಲು ಅಲ್ಲೊಂದು - ಇಲ್ಲೊಂದು ಆಸ್ಪತ್ರೆಗಳಿಗೆ ಅನಿರೀಕ್ಷಿತ ದಾಳಿಯಿಟ್ಟು ಪರಿಶೀಲನೆಯ ನಾಟಕವಾಡಿದ ಈ ಕೊರಮ "ಶ್ರೀಸಾಮಾನ್ಯರ ಬಾಯಲ್ಲಿ "ಭಲೆ ಭಲೆ" ಎಂದೆನೆಸಿಕೊಂಡವ ಆಮೇಲಾಮೇಲೆ ಅಗಸರ ಕತ್ತೆಯಂತೆ ಹೇಳ ಕೇಳದೆ ನಾಪತ್ತೆಯಾದ.


ಇಲ್ಲಿಂದ ಕಾಣೆಯಾದ ಸಚಿವ ಪ್ರಾಣಿ ಅಲ್ಲಿ ತನ್ನ ಸ್ವ-ಕ್ಷೇತ್ರದ ಪಕ್ಕದ ಛರ್ಬಿ ಹೆಚ್ಚಾಗಿ ಸತ್ತ ಪುಂಡ ದನಗಳ್ಳರಿಗೆ ಲಕ್ಷಾಂತರ ರೂಪಾಯಿ ಪರಿಹಾರ ಕೊಡಿಸುವುದರಲ್ಲಿಯೂ, ಕಂಡಕಂಡ ಅಂಗಡಿಗಳ ಟೇಪು ಕತ್ತರಿಸುತ್ತಾ, ಮದುವೆ - ಮುಂಜಿಗಳಿಗೆ ಓಡಾಡುತ್ತಾ ಆಕಳಿಯ ಜೊತೆಯಲ್ಲಿಯೆ ಕಾಲ ಹಾಕುವುದರಲ್ಲಿಯೂ ಪುರುಸೊತ್ತಾಗಲಾರದಷ್ಟು ಬ್ಯುಸಿಯಾಗಿ ಹೋಯಿತು. ಹಾಗೂ ಎಡೆಯಲ್ಲಿ ಒಂಚೂರು ಸಮಯ ಸಿಕ್ಕಿದ್ದೇ ಹೌದಾದರೆ ಸಚಿವನೆಂಬ ಈ ಕೋಣಕ್ಕೆ ತನ್ನ ರಕ್ತ ಸಂಬಂಧಿಗಳ ಖಾಸಗಿ ಆಸ್ಪತ್ರೆಗಳ ಹಿತ ಕಾಯುವ ಘನಂದಾರಿ ಕಾರ್ಯಭಾರವೆ ವಿಪರೀತವಾಗಿರುತ್ತದೆ. ಹೀಗಾಗಿ ರಾಜ್ಯದ ಆಸ್ಪತ್ರೆಗಳ ಮಾತೆತ್ತಿದರೆ "ಸುಮ್ನೆ ಬೊಬ್ಬೆ ಹೊಡೆಯಬೇಡ್ರಿ!, ಅದರಿಂದ ಏನೂ ಆಗಲ್ಲ!!" ಅಂತ ಈ ಗಡವ ಕಂಡ ಕಂಡಲ್ಲಿ ಅಬ್ಬರಿಸಿ ತನ್ನನ್ನ ನಿಲ್ಲಿಸಿ ಕೇಳಿದವರ ಮೇಲೆಯೆ ಬೊಬ್ಬಿರಿಯುವುದನ್ನ ರೂಢಿ ಮಾಡಿಕೊಂಡಿದೆ.


ತಿಂಗಳಾನುಗಟ್ಟಲೆಯಿಂದ ಎಳೆ ಮಗು ಕೌಸರ್'ಬಿ ವೈದ್ಯಕೀಯ ನಿರ್ಲಕ್ಷ್ಯದಿಂದ ಇನ್ನೂ ತೀವೃ ನಿಗಾ ಘಟಕದಲ್ಲಿ ಜೀವಚ್ಛವವಾಗಿ ಒದ್ದಾಡುತ್ತಿದ್ದರೆ ಅದನ್ನ ಕಾಣುವ ಕಣ್ಣಿಲ್ಲದ ಈ ಹಡಬೆ ಸಚಿವ, "ತನ್ನ ಇಲಾಖೆಯ ಆಕ್ಷೇಪ ಏನಾದರೂ ಇದೆಯೆ?" ಎನ್ನುವ ಟಿಪ್ಪಣಿ ಹೊತ್ತು ಬಂದ ಭಿಕ್ಷೆಗೆ ನಿಂತ ಜ್ಣಾನಪಿತ್ಥ ವಿಕಾರಿ ಸಾಹಿತಿಯೊಬ್ಬನ ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚವನ್ನ ಭರಿಸುವ ಕಡತಕ್ಕೆ ಕಣ್ಣುಮುಚ್ಚಿ ಸಹಿ ಝಡಿದು ಮುಂದಿನ ಕ್ರಮಕ್ಕಾಗಿ ಅತಿ ಶೀಘ್ರವಾಗಿ ಮರಳಿ ಮುಖ್ಯಮಂತ್ರಿಗಳ ಕಛೇರಿಗೆ ರವಾನಿಸಿ ಕೃತಾರ್ಥನಾಗುತ್ತದೆ.


ಕುಡಿದು ಓಲಾಡಿ ಮೈ ಮನಸು ಎರಡನ್ನೂ ಕೆಡಿಸಿಕೊಂಡ ಈ ಕೊರಮನ ಸಂಪುಟ ಸಹುದ್ಯೋಗಿಯೊಬ್ಬ ಸಾರಾಯಿ ಅಮಲು ಹೆಚ್ಚಾಗಿ, ತನ್ನ ಪರಮ ಅಶಿಸ್ತಿನ ಜೀವನ ಶೈಲಿಗೆ ಸ್ವಯಂ ಬಲಿಯಾಗಿ ನಿತ್ಯದಂತೆ ನೆಲಕಚ್ಚಿದರೆ ಖುದ್ದು ಮುತುವರ್ಜಿ ವಹಿಸಿ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ರವಾನಿಸಿ ಬೀಗಿದ ಈತ, ಅದೆ ತನಗೆ ವಹಿಸಿದ ಕರ್ತವ್ಯ ನಿರ್ವಹಣೆಯ ಹೊತ್ತಿನಲ್ಲಿ ಜೀವದ ಹಂಗು ತೊರೆದು ಗುಂಡಿನ ದಾಳಿಗೆ ಸಿಕ್ಕಿದ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯನ್ನ ಸುಸಜ್ಜಿತ ಪರದೇಶಿ ಆಸ್ಪತ್ರೆಗೆ ಆದಷ್ಟು ಬೇಗ ರವಾನಿಸಿ ಬದುಕಿಸಿಕೊಳ್ಳುವ ಸಕಲೆಂಟು ಸಾಧ್ಯತೆಗಳಿದ್ದರೂ ಜೋಭದ್ರನಂತೆ ಕಾಲ ಹಾಕಿ ನಾಡೆಲ್ಲ ಕಾತರದಿಂದ ಬೇಡುತ್ತಿದ್ದರೂ ಆ ಅಮೂಲ್ಯ ಜೀವವನ್ನ ಉಳಿಸಿಕೊಳ್ಳಲಾಗದೆ ಹೋದ. ಅಂದಹಾಗೆ ರಾಜ್ಯದ ಆರೋಗ್ಯ ಸಚಿವನಾಗಿ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದದ್ದು ಇದೆ ಸಚಿವನೆಂಬ ಶೋಕಿಲಾಲ ಅನ್ನುವುದು ನಿಮ್ಮ ಗಮನಕ್ಕೆ.



ಹೋಲಿಕೆಯಲ್ಲಿ ನಿಷ್ಕೃಷ್ಟ ಸ್ಥಿತಿಯಲ್ಲಿರುವ ಬಯಲುಸೀಮೆಯ ಸರಕಾರಿ ಆಸತ್ರೆಗಳಿಗಿಂತ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಆಸ್ಪತ್ರೆಗಳು ತಕ್ಕಮಟ್ಟಿಗೆ ಸುಸಜ್ಜಿತವಾಗಿದ್ದವು. ಆದರೆ ಈ ಮೂರೂ ಬಿಟ್ಟವನ ಅಂಧಾ ದರ್ಬಾರಿನಲ್ಲಿ ಕೊಪ್ಪಳದ ಸರಕಾರಿ ಆಸ್ಪತ್ರೆ ಎನ್ನುವ ದೊಡ್ಡಿಗೂ, ಬರು ಬರುತ್ತಾ ಕತ್ತೆಯಾದ ರಾಯರ ಕುದುರೆಯಂತಹ ಕೊಪ್ಪ ಹಾಗೂ ತೀರ್ಥಹಳ್ಳಿಗಳಲ್ಲಿರುವ ಸರಕಾರಿ ಆಸ್ಪತ್ರೆಗಳ ಅಧೋಗತಿಗೂ ಹೆಚ್ಚು ವ್ಯತ್ಯಾಸವೇನೂ ಉಳಿದಿಲ್ಲ. ಉದಾಹರಣೆಗೆ ಮೊನ್ನೆ ಮೊನ್ನೆ ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಇಲಿಗಳು ರಾಜಾರೋಷವಾಗಿ ಹಸುಗೂಸೊಂದರ ಕೆನ್ನೆ ಮೂಗನ್ನ ಕಿತ್ತು ತಿಂದಿವೆ. ಆ ಮುಗ್ಧ ಮಗುವಿನ ಬಡ ಪೋಷಕರ ರೋಧನವನ್ನ ಕೇಳುವ ಕಿವಿಗಳೆ ಗತಿ ಇಲ್ಲ. ಹಾಗೂ ಒತ್ತಾಯಿಸಿ ಈ ಭಂಡನನ್ನ ಹಿಡಿದು ಕೇಳಿದರೆ "ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯ ಬಾರದಿತ್ತ!" ಎನ್ನುತ್ತದೆ ಸಚಿವ ಮೃಗ. ಇನ್ನೂ ಅಡ್ಡಗಟ್ಟಿ ನ್ಯಾಯವಾಗಿ ಆತ ಮಾಡಬೇಕಾದ ಕೆಲಸ ನೆನಪಿಸಿದರೆ "ಬೊಬ್ಬೆ ಹೊಡೆಯುವುದರಿಂದ ಕೆಲಸ ಆಗ್ತದೇನ್ರಿ?!" ಅಂತ ಉಢಾಫೆಯಿಂದ ಅಬ್ಬರಿಸುತ್ತದೆ ಈ ಹೆಗ್ಗಣ.

ಆಷ್ಟಕ್ಕೂ ಜನಸೇವಕನಾಗಿ ಸಚಿವ ಹುದ್ದೆಗೆ ಏರಿರುವ ಈ ದಪ್ಪ ಚರ್ಮದವನ ಆದ್ಯತೆಗಳಾದರೂ ಏನು?  ಇಂತಹ "ಅಯೋಗ್ಯ ಸಚಿವ"ನೆಂಬ ಹೆಗ್ಗಣಗಳನ್ನ ಬೇಲಿ ಕಾಯುವುದಕ್ಕೆ ಬಿಟ್ಟಿರುವಾಗ ಯಕಶ್ಚಿತ್ ಇಲಿಗಳು ಆಟಾಟೋಪಕ್ಕೆ ಇಳಿಯುವುದರಲ್ಲಿ ಆಶ್ಚರ್ಯವಾದರೂ ಏನಿದೆ?

Tuesday, June 24, 2014

ಎರಡಾಗಿ ನೀನೊಡೆದ ಬಾಳನ್ನ .......




ಋತುಮಾನದ ಬದಲಾವಣೆಯಲ್ಲಿ ಮಗ್ನವಾಗಿ ಹೋದ ಮನ
ಮಳೆಯ ನಿರಂತರ ಧಾರೆಗೆ ತೋಯಲು ಕಾತರಿಸಿ ಕಾದು ಕೂತಿದೆ.....
ನಮ್ಮ ನಾಳೆ ನಮ್ಮ ಇಂದಿನಂತೆಯೆ ಇರುತ್ತೆ
ಇಂದಿನ ನಮ್ಮ ಆಲೋಚನೆಗಳು ನಮ್ಮ ನಾಳೆಯ ಭವಿಷ್ಯವನ್ನು ಹೊತ್ತು ತರುತ್ತೆ,
ಗಾಳಿಯ ಸೋಕುವ ಸ್ಪರ್ಶದಂತೆ
ನೀರಿನ ಅಲೆಯ ಆಪ್ತತೆಯಂತೆ....
ಕುರುಡ ನಾನು ನನ್ನೊಳಗಿನ ನಿನ್ನನ್ನ ನಿತ್ಯ ಕಾಣಬಲ್ಲೆ./
ಸುತ್ತಲೂ ಸಾವಿರ ಸಂಗತಿಗಳು ಸರಾಗವಾಗಿ ಸರಿದು ಸಾಗುತ್ತಲಿದ್ದರೂ
ನಿನ್ನ ಕನವರಿಕೆಯಲ್ಲಿಯೇ ಸದಾ ಮುಳುಗಿರುವ ಮನಸು
ಒಂದು ಬಗೆಯ ಅನ್ಯಮನಸ್ಕತೆಯಿಂದಲೆ ಅದರಲ್ಲಿ ಪಾಲ್ಗೊಳ್ಳುತ್ತದೆ....
ಹರಿಸಿದಲ್ಲಿ ಹರಿವ ನೀರಾಗಿದ್ದರೇನೆ ಚೆನ್ನ
ಕೂಡಿಟ್ಟರೆ ಖಂಡಿತಾ ಚಿಂತೆ ಕಾಡದಿರದು,
ಹರಿಯ ಬಿಟ್ಟರೆ ಮುಖದಲ್ಲಿ
ಚಿಂತೆಯ ಗೆರೆಯೂ ಸಹ ಮೂಡದು....
ಅನಿರೀಕ್ಷಿತಗಳ ಪ್ರವಾಹ ಬಾಳು
ಕೊಚ್ಚಿ ಹೋಗುವ ಹುಲು ಹುಲ್ಲುಗರಿ ನಾನು
ಆಯ್ಕೆಗಳು ಅಷ್ಟಾಗಿ ನನಗಿಲ್ಲವೇ ಇಲ್ಲ.//


ಕಳೆದು ಹೋಗುವಂತಿದ್ದರೆ ಸಂತೆಯಲ್ಲಿ
ಕೊಚ್ಚಿಕೊಂಡು ಸಾಗುವಂತಿದ್ದರೆ ನೆರೆಯಲ್ಲಿ....
ದುಸ್ತರ ಬಾಳನ್ನ ಇನ್ನಷ್ಟು ಭರಿಸುವುದಕ್ಕಿಂತ
ಅದೇನೆ ಸರಿಯಾದ ಆಯ್ಕೆ,
ಸರಿದ ನೂರು ಸಂಕಟದ ಸಾಲುಗಳ
ಕೊನೆಯದೊಂದು ಪದ ಮತ್ತೆ ಬಳಿ ಬಾಗಿ
ನೆಮ್ಮದಿಯ ನೆತ್ತಿಯ ಪುನಃ ಚುಂಬಿಸದಿರಲಿ./
ಹತ್ತರಲ್ಲಿ ಹನ್ನೊಂದಿರಬಹುದು ನಾ ನಿನ್ನ ಪಾಲಿಗೆ
ಆದರೆ ನನ್ನೆದೆಯ ಪಿಸುದನಿಯನೆಲ್ಲ
ಮೀಸಲಿಟ್ಟು ಬಿಟ್ಟೆ ನಾ ನಿನ್ನೆಲ್ಲ ನಾಳೆಗೆ.....
ಪಿಸು ಮಾತಿನ ತುಸು ಕನಸುಗಳಲ್ಲಿ
ಕೆಲವಾದರೂ ನಸು ನನಸಾಗಲಿ
ಕೊನೆಯ ಉಸುರಿನ ಕೊಸರಳಿಯುವ ಮೊದಲು,
ನೆನ್ನೆ ಬಿದ್ದು ತಣಿಸಿದ ಮಳೆಗೆ
ಇವತ್ತು ಮಾತ್ರ ನೆಲದ ಮೇಲೆ ಕಿಂಚಿತ್ತೂ ಕರುಣೆಯಿಲ್ಲ....
ಕಳೆದ ಕ್ಷಣಗಳ ಸವಿನುಡಿಗಳ ಭ್ರಮೆಯಲ್ಲಿಯೇ ಉಳಿದವರಿಗೆ
ನಾಳಿನ ವಾಸ್ತವದ ಭೀಕರತೆಗಳ ಅರಿವಿರೋದಿಲ್ಲ.//



ನಿದಿರೆ ಬಾರದ ರಾತ್ರಿಗಳು
ನೆಮ್ಮದಿ ತಾರದ ಹಗಲುಗಳಿರಲು.....
ಖುಷಿಯ ಹನಿಗೆ ಬಾಯಾರಿದವ
ನಿರೀಕ್ಷೆಯ ಬಿಸಿಲ ಹಾದಿಯುದ್ದ ಹೆಜ್ಜೆ ಹಾಕಲೇ ಬೇಕಲ್ಲ,
ವಿಶಾಲ ಜಗದ ನಿಬಿಡ ಹುಚ್ಚರ ಸಂತೆಯಲ್ಲಿ ನಾನೂ ಒಬ್ಬ
ಬೆಳಕ ಹಾದಿ ಹಲವಿದ್ದರೂ ತಬ್ಬಲು ಕಾತರಿಸುತ್ತೇನೆ
ನಿತ್ಯ ಮಾಸಲು ನೆರಳ ಮಬ್ಬ./
ಗರಿ ಬೀಸಿ ಕರೆದ ಗಂಡು ನವಿಲ
ಮೋಹಕ ಮೋಡಿಗೆ ಮರುಳಾದ ಹೆಣ್ಣು....
ತನ್ನೆಲ್ಲ ಬಿಂಕವನ್ನೂ ಬಿಟ್ಟು
ದಾಸಾನುದಾಸಿಯಾಗಿ ಹೋಯಿತು,
ಕೊರಳ ತೆರೆದು ಕೇವಲ ಇಂಪ ಸುರಿದ
ಪುಂಡು ಕೋಗಿಲೆಯ ಹಸಿಹಸಿ ಸುಳ್ಳುಗಳಿಗೂ....
ಸೊಕ್ಕಿನ ಕೋಕಿಲ ತಲೆದೂಗುತ್ತಾ
ತನ್ಮಯವಾಗಿ ಮೋಡಿಗೆ ಒಳಗಾಯಿತು.//


ತಂಪು ಹೊತ್ತಲಿ ಬೆಚ್ಚಗೆ ತುಡಿಯಿತ್ತಾ
ನೋವಿನ ಮದ್ಯದ ಸೀಸೆಯ ತಳಕ್ಕಂಟಿದ ನಾಲ್ಕು ಹನಿಗಳನ್ನೆ
ಮತ್ತೆ ಮರುಕಳಿಸಿ ಕುಡಿಯುತ್ತಾ.....
ಎಂದಿನಂತೆ ಅನಾಥ ಭಾವ ಹೊತ್ತ
ಎದೆಭಾರದೊಂದಿಗೆ ಕುಳಿತಿದ್ದೇನೆ,
ಎರಡಾಗಿ ನೀನೊಡೆದ ಬಾಳನ್ನ
ಒಂದಾಗಿಯೇ ಬಿಗಿದು ಕಾದುಕೊಂಡು ಬಂದಿರುವ ನನಗೆ
ಕೊನೆಯವರೆಗೂ ಅದನ್ನ ಸುರಕ್ಷಿತವಾಗಿ ಕಾಪಾಡಿ....
ಇನ್ನೊಂದು ದಡ ಮುಟ್ಟಿಸುವುದು ಕಷ್ಟವೇನಲ್ಲ./
ಮದ್ದಿಲ್ಲದ ಹುಚ್ಚಿಗೆ ಒಳಗಾಗಿ
ಬಾರದ ನಿನ್ನ ಹಾದಿಯನ್ನೆ ಎಡೆಬಿಡದೆ ಕಾದೆ....
ನಟ್ಟಿರುಳಲೂ ನಿದಿರೆ ತಾರದ ಅದರ ಸಂಚಿಗೆ
ಸುಖಾಸುಮ್ಮನೆ ಬಯಸಿ ಬಯಸಿ ಬಲಿಯಾಗಿಹೋದೆ,
ಸ್ವಪ್ನದ ದಿಂಬಿನಲ್ಲಿ ತಲೆ ಇಟ್ಟು
ಕನಸ ಮಂದರಿ ಹೊದ್ದು ನಿತ್ಯ ಮಲಗುವ ಭಾಗ್ಯವೊಂದು
ಕೊನೆಯವರೆಗೂ ಇದ್ದರೆ ಸಾಕೇ ಸಾಕು.....
ಗೋಳಿನ ಸಹೋದರ ಸಂಬಂಧಿ ಬಾಳನ್ನ
ಹೇಗಾದರೂ ಸವೆಸಬಹುದು.//

Monday, June 23, 2014

ಭಾವಶೂನ್ಯ ಬರಿ ಪದಗಳಿಗೆ ಖಂಡಿತಾ ಆ ಬಲವಿಲ್ಲ......





ತೇನೆ ಹಕ್ಕಿ ದೂರದಲ್ಲಿ ತನ್ಮಯವಾಗಿ ಹಾಡಿದ ವಿಷಾದದ ತಾಣಕ್ಕೆ
ಅನಿಯಂತ್ರಿತವಾಗಿ ಹೆಜ್ಜೆ ಹಾಕುವ ಮರುಳಿಗೆ
ಕೊನೆಗೂ ಆ ಜಾಗ ಕಾಣ ಸಿಗಲಿಲ್ಲ.....
ಕಣ್ಣ ರಾಯಭಾರಕ್ಕೆ ಬೆಣ್ಣೆಯಂತೆ ಕರಗುವ ಹೃದಯದ ಕಲ್ಲಿಗೆ
ಬಾಳು ಧೂಳಾಗಿ ಹೋದಾಗಲಷ್ಟೆ ವಾಸ್ತವದ ಕಠೋರತೆ ಅರಿವಿಗೆ ಬರುತ್ತದೆ,
ಇರುಳ ಏಕಾಂತದ ನಶೆಗೆ ಕನ್ನ ಹಾಕಿದ ಕನಸುಗಳಿಗೆಲ್ಲ
ನಿತ್ಯ ನಲಿವಿನ ದೂರದ ಬೆಟ್ಟವನ್ನ ತೋರಿಸಿ ಮನಸ ನಯವಾಗಿ ಯಾಮಾರಿಸುತ್ತವೆ......
ಹುಟ್ಟು ಮೂಗನ ಮೌನದಷ್ಟು ಸಹಜವಲ್ಲ
ವಿರಹ ಹುಚ್ಚೆಬ್ಬಿಸಿ ಮನದೊಳಗೆ ಹುಟ್ಟಿಸುವ ಮೌನಿ ಕೂಸಿನ ನಿಶ್ಯಬ್ಧ./
ಸೋಕಿ ಹೋದ ಗಾಳಿ ಮತ್ತೆ ಬಾನಿನಾಳವ ಸೋಕುವುದಿಲ್ಲ
ತಾಕಿ ಹೋದ ಮಳೆ ಹನಿ ಮರಳಿ ನೆಲದೆದೆಯ ತಣಿಸುವುದಿಲ್ಲ.....
ಕುರುಳು ಕಟ್ಟಿಕೊಂಡು ಸೂಡಿಯಾದ ಕನಸ ಮುಡಿಯೊಳಗೆ
ಅಸಂಖ್ಯ ನಿರೀಕ್ಷೆಯ ಅಮೂಲ್ಯ ಕೇಶರಾಶಿ ಅಡಗಿದೆ,
ಸಿಕ್ಕು ಬಿಡಿಸಿ ಒಂದೊಂದನ್ನೆ ಈಡೇರಿಸಿಕೊಳ್ಳುವಷ್ಟರವರೆಗೆ
ಈ ಸೀಮಿತ ವಾಯಿದೆಯ ಬಾಳು ತಾಳ್ಮೆಯಿಂದ ಕಾದೀತ?.....
ಬಂದು ಸುರಿದು ತಣಿಸುತ್ತದಂತೆ ಖಂಡಿತ ನಾಳೆ
ನಂಬುವುದೋ? ಬಿಡುವುದೋ?
ಇಂದು ಮಾತು ತಪ್ಪಿದ ಮೋಡ ನೆಲದೆದೆಯ ಮೇಲೆ ಒಲವ ಮಳೆ.//


ವಿಧಿ ಆಸೆ ತೋರಿಸಿ ವಿಧಿ ವಂಚಿಸಿದ ಮಗು ನಾನು
ಮೊಗ್ಗಲ್ಲಿ ಮುದ್ದಿಸಿ ಅರಳುವ ಹಂತದಲ್ಲಿ ನೀನೆ ಬಯಸಿ
ಹೊಸಕಿ ಹಾಕಿದ ಹೂ ಮೊಗದ ಮೇಲಿದ್ದ ನಸು ನಗುವಲ್ಲವೇನು?....
ಹುತ್ತ ಕಟ್ಟಿ ಹೋಗಿ ಮತ್ತೆ ಹುಡುಕ ಬಂದರೆ
ಮರಳಿ ಕಾಯ ಕಾಣಿಸುವುದಾದರೂ ಹೇಗೆ?,
ಕನಸು ದೊಡ್ಡದಿದ್ದರೂ ಸಹ ಈಡೇರದೆ ಹೋದ
ಅನೇಕ ಆಸೆಗಳು ಮಾತ್ರ ಅತಿ ಸಣ್ಣದಾಗಿಯೆ ಇದ್ದವು ಅನ್ನೊದು
ಮನದಾಳದ ಪ್ರಾಮಾಣಿಕ ಪಿಸುಮಾತು......
ಯಾರವನೂ ಆಗಿರದ
ಯಾರ ಗಾಳಕ್ಕೂ ಯಾವತ್ತಿಗೂ ಬೀಳದ
ಯಾರಿಗೂ ಹೋಗಿ ಕೊನೆಮೊಮ್ಮೆ ಮುಟ್ಟದ
ಫಕೀರ ಬಾಳಿಗೆ ಖಚಿತ ದಿಕ್ಕು ಇದೆ ಆದರೆ ದೆಸೆ ಮಾತ್ರ ಕಾಣುತ್ತಿಲ್ಲ./
ಮೌನಯಾನದ ನಡುವೆ ನಡುಗಡಲಿನಲ್ಲಿ ಸೋತು ನಿಂತ ನಾವೆಗೆ
ನಾಳೆಯ ನಿರೀಕ್ಷೆಗಳೊಂದಿಷ್ಟು
ದೂರ ತೀರವ ಹೋಗಿ ಮುಟ್ಟುವಂತೆ ಪುಸಲಾಯಿಸುತ್ತವೆ....
ತಂಪು ಸುರಿದ ಹಗಲಿನುದ್ದ ಹನಿ ಮಳೆಯ ಕನಸು ಜೀವಂತವೆ ಆಗಿತ್ತು
ಆದರೆ ದುರುಳ ಬಾನ ಕಣ್ಣಲ್ಲಿ ಕೇವಲ ಮಳೆಯ ಸುರಿವ ಸೋಗಿತ್ತು,
ಮೋಹಕವಾಗಿ ಮನವ ಆಗಾಗ ದೋಚಿದ ವಿರಳ ಮಂದಹಾಸಗಳಿಗೆ
ಬರಡು ಬಾಳನ್ನ ಹಸಿರಾಗಿಸಿದ ಹಿರಿಮೆ ಇದೆ.//



ಒಮ್ಮೆ ಒಂದಕ್ಕೆ ಅಂಟಿದ ಮೇಲೆ
ಕೊನೆಯವರೆಗೂ ನಂಟನ್ನ ಕಳೆದುಕೊಳ್ಳದವನಾದ ಮೇಲೆ....
ಆಗುವ ಕಷ್ಟ ನಷ್ಟಗಳನ್ನೆಲ್ಲ ಸಹಿಸೋದು
ಅನಿವಾರ್ಯ ಕರ್ಮ,
ಒಮ್ಮೆ ಮನ ಸೋತ ಮೇಲೆ ಕಳೆದುಕೊಳ್ಳಲಿಕ್ಕೆ
ನನ್ನಲ್ಲಿ ಇನ್ನೇನೂ ಉಳಿದೇ ಇಲ್ಲ
ಒಮ್ಮೆ ಹಚ್ಚೆಯಾಗಿ ಮೂಡಿದ ನಂತರ
ನೆನಪುಗಳ ಛಾಯೆ ನನ್ನೊಳಗಿಂದ ಅಳಿದೆ ಇಲ್ಲ./
ಕಾಲನ ಕಠಿಣ ಅಣತಿ ಇದ್ದಂತೆ ಅಲ್ಲೆ ಉಳಿದು ಹೋದ
ಮತ್ತೆ ಮರಳಿ ಬಾರದ ನೆನ್ನೆಗಳ ಬಗ್ಗೆ ತಿರುಕನ ಕನಸನ್ನ ಕಾಣುತ್ತಿದ್ದೇನೆ....
ಸುಮ್ಮನೆ ಮೌನವಾಗುಳಿವ ನಿರ್ಧಾರ ಅಯಾಚಿತವಲ್ಲ
ಆದ ಅಪಮಾನಕಾರಿ ಅನುಭವಗಳ ಒತ್ತಾಸೆಯೂ ಅದಕ್ಕಿದೆ,
ಹಾಗೊಮ್ಮೆ ಆಗುವಂತಿದ್ದರೆ ಮತ್ತೆ ನಿನ್ನ ತೆಕ್ಕೆಗೆ ಮರಳಿ ಜಾರಬೇಕಿದೆ
ಇರುಳಿಡಿ ಬರೀ ಪಿಸು ಮಾತುಗಳನ್ನಾಡುತ್ತಾ ನಿನ್ನೊಲವಲ್ಲಿಎ ಜಾಗರಣೆ ಕೂರಬೇಕಿದೆ....
ಶುರುವಿಗೆ ಹುಟ್ಟಿದ ಪ್ರೀತಿ ಕೊನೆಯವರೆಗೂ ಜೊತೆಗಿರಬೇಕು
ನಿಷ್ಠೆ ಪ್ರಾಮಾಣಿಕತೆಗಳಿಲ್ಲದ ಭಂಡ ಬಾಳನ್ನ
ಮತ್ತೆ ಯಾಕಾದರೂ ಬಾಳಬೇಕು?//



ಹಳೆಯ ಹಾದಿಯ ಜಾಡಿನಲ್ಲಿ ಮೂಡಿರುವ ಹೆಜ್ಜೆಗಳು
ಆಳವಾಗಿ ಮನದ ಅವೆ ಮಣ್ಣಿನಲ್ಲಿ ಉಳಿದು ಹೋಗಿರೋವಾಗ
ಕಣ್ಣೀರ ಮಳೆಗೆ ಅಲ್ಲಿ ಕೆಸರೆದ್ದದ್ದು ಸಹಜ ತಾನೆ....
ಭಾವಶೂನ್ಯ ಬರಿ ಪದಗಳಿಗೆ ಆ ಬಲವಿಲ್ಲ
ಕೆಲವೆ ಕೆಲವು ಒಣ ಪದಗಳಿಗೆ ಅಗಲಿಕೆಯ ನೋವನ್ನ ಹಿಡಿದಿಡುವ
ಶಕ್ತಿ ಇರುವಷ್ಟು ಪೇಲವ ಒಲವಲ್ಲ,
ಇರುಳ ಚಳಿಯಲ್ಲಿ ಮುನ್ನೂರು ಮೈಲಿ ನಡುರಸ್ತೆಯ ಮೇಲೆ
ಅನಾಥನಾಗಿ ಒಬ್ಬಂಟಿಯಾಗಿ ತೇಲಿ ಗೂಡು ಮುಟ್ಟುವಷ್ಟು ಹೊತ್ತು
ನನ್ನ ಕೇವಲ ನೀನವರಿಸಿಕೊಂಡಿದ್ದೆ./
ಅದೆಲ್ಲೆ ದೂರ ಇದ್ದರೂನು
ತನ್ಮಯ ರಾಗದಲ್ಲಿ ಮೃಣ್ಮಯ ಮನಸು ತಲ್ಲೀನವಾಗಿ ಹೋಗುವಾಗ.....
ಕಿವಿಗೆ ನಿನ್ನ ಧ್ವನಿಯ ಮಾರ್ದನಿಯ ಹೊರತು
ಇನ್ನೇನೂ ಕೇಳಿಸಲಾಗದ ಹಾಗಾಗುತ್ತಿದೆ,
ನಮ್ಮ ನಾಳೆ ನಮ್ಮ ಇಂದಿನಂತೆಯೆ ಇರುತ್ತೆ
ಇಂದಿನ ನಮ್ಮ ಆಲೋಚನೆಗಳು
ನಮ್ಮ ನಾಳೆಯ ಭವಿಷ್ಯವನ್ನು ಹೊತ್ತು ತರುತ್ತೆ....
ಸುಮ್ಮನೆ ಕಳೆವ ಏಕಾಂತದ ಆಪ್ತ ಕ್ಷಣಗಳು
ಅದೇಕೆ ಅಷೊಂದು ಕ್ರೂರವಾಗಿ
ಕೇವಲ ಕಂಬನಿಯ ಕಪ್ಪ ಕೇಳುತ್ತವೆ?//

Thursday, June 19, 2014

ದೂರದಲ್ಲೆಲ್ಲೋ ನೆಲದೆದೆ ಒದ್ದೆಯಾದ ಕಥೆ.......




ಗೊತ್ತಿಲ್ಲದೆ ಇಟ್ಟಿದ್ದ ಹೆಜ್ಜೆಯೊಂದು
ಈಗ ಗೊತ್ತಿದ್ದರೂ ಹಿಂತೆಗೆದುಕೊಳ್ಳಲಾಗದಷ್ಟು ಆಳಕ್ಕೆ ಹೂತು ಹೋಗಿರುವಾಗ....
ಮತ್ತೆ ಎಲ್ಲ ಮರೆತು ಮೊದಲಿನಂತಾಗುತ್ತೇನೆ
ಎನ್ನುವುದೆಲ್ಲ ಬರಿ ಆತ್ಮವಂಚನೆ ಅಷ್ಟೆ,
ಸತ್ಯವನ್ನ ಹೇಳಲಿಕ್ಕೆ ಬೇಕಿರೋದು ಧೈರ್ಯವಲ್ಲ
ವಂಚನಾ ರಹಿತ ಪ್ರಾಮಾಣಿಕ ಒಳಮನ ಮಾತ್ರ./
ಕ್ಷಣ ಚಿತ್ತ ಮರು ಕ್ಷಣ ಪಿತ್ಥ
ಗೊಂದಲದ ಮನಸ್ಥಿತಿ ನನ್ನದಾಗಿರಲು
ಚೂರು ಪಾರು ನೀನೂ ಸಹ ಕಾರಣ......
ಸೋಲಿಸಿ ಹೋದ ಹಳೆಯ ದಿನಗಳು
ಹೊಸತೇನನ್ನೂ ಗೆಲ್ಲಲಾಗದಷ್ಟು
ಮನವನ್ನು ಬಲಹೀನಗಳಿಸಿ ಹೋಗಿವೆ.//


ಮೃದು ಮಾತುಗಳಲ್ಲಿ ಮುಳುಗಿಸಿದ
ನವಿರು ಭಾವಗಳನ್ನ ಲೇಪಿಸಿದ ಕನಸೊಂದು....
ನಿತ್ಯ ನಿದಿರೆಯ ಹಾದಿ ಬದಿ
ನೆನಪಿನ ಬುತ್ತಿ ಹಿಡಿದು ಕಾಯುತ್ತಾ ನಿಂತಿರುತ್ತದೆ,
ಸೂತಕದ ಮನೆಗಾದರೂ ಶುದ್ಧಿ ಎಂಬ ಒಂದು ಕೊನೆಯಿರುತ್ತೆ
ಆದರೆ ಸೋತ ಮನಕ್ಕಾವ ಆಸರೆಯೂ ಇಲ್ಲ./
ಮೋಡ ಕವಿದ ಬಾನನ್ನೆ ಆಸೆಗಣ್ಣಿಂದ ನಿತ್ಯ ದಿಟ್ಟಿಸಿ
ನೆಲ ನಿರಾಸೆಯ ಕತ್ತಲನ್ನ
ಮೌನವಾಗಿ ಹೊದ್ದು ಸುಮ್ಮನಾಗುತ್ತದೆ....
ನಾನಾಗಿರದ ನಾನು
ಬೇರಿಲ್ಲದೆ ಸಸಿ ಎಂದಾದರೂ ಬಾಳೀತೇನು?
ಖುಷಿಯೊಂದು ಕಲ್ಪಿತ ಭ್ರಮೆ,
ಎಂದೆಂದಿಗೂ ಅದಾಗದು ಎಂಬ ಅರಿವಿದ್ದರೂ
ಸಮಯದ ಹುಚ್ಚು ಕುದುರೆಯನ್ನ ಮೂಗುದಾರ ಹಿಡಿದೆಳೆದು ನಿಲ್ಲಿಸಿ....
ಬಲವಂತವಾಗಿಯಾದರೂ ಮತ್ತೆ ಹಿಂದೋಡಿಸುವ
ನನ್ನ ಸ್ವಪ್ನ ಇನ್ನೂ ಜೀವಂತವಾಗಿ ಉಸಿರಾಡುತ್ತಿದೆ.//


ಗಾಳಿಯ ಧಾರೆಗಳನ್ನೆ ಬಿಗಿದು ಅಂಗೈಯಲ್ಲಿ ಒಟ್ಟಾಗಿ ಹಿಡಿದು
ಸುಲಭವಾಗಿ ಮೇಲೇರುತ್ತೇನೆ ನಿತ್ಯ ಕನಸಲ್ಲಿ....
ನಿಜ ವಾಸ್ತವದ ಅರಿವು ಹಸಿದ ಹೆಬ್ಬಾವಿನಂತೆ
ಸುತ್ತಿಕೊಂಡು ಎಚ್ಚರಿಸುತ್ತದೆ ಮತ್ತೆ ನನಸಲ್ಲಿ,
ಗಟ್ಟಿ ಗುಂಡಿಗೆ ಇದ್ದರೂ ಕಠಿಣ ಮುಂದಿನ ಪಯಣದ
ಹೊಂಡ ದಿಣ್ಣೆಗಳ ದಾರಿಗಳನ್ನ ನೆನೆದು ಅಧೀರನಾಗುತ್ತೇನೆ ಕೆಲವೊಮ್ಮೆ....
ಆದರೂ ನಂಬಿದ ಬಾಳಿಗೆ ಅಪ್ರಾಮಾಣಿಕನಾಗಿ
ಸೊಗಸಾದ ಮತ್ತೊಂದು ಹೆದ್ದಾರಿ ಹುಡುಕಿಕೊಳ್ಳಲು ಮಾತ್ರ ಕೊನೆಯವರೆಗೂ ಒಲ್ಲೆ./
ಸಲುಗೆಯೆಲ್ಲ ಹಗಲಿರುಳ ಅತಿ ಸುಲಿಗೆಯಾದ ಹೊತ್ತಲ್ಲೂ
ಮೌನ ಮನದಲ್ಲಿ ಹುಟ್ಟುವ ಮೊದಲೆ ಸತ್ತ ಮಾರ್ದವ ಮಾತುಗಳೆಲ್ಲ
ಮತ್ತಷ್ಟು ನಿಶ್ಯಬ್ಧದಾಳಕ್ಕೆ ಜಾರಿದವು....
ನುಚ್ಚು ನೂರಾದ ಕನಸಿನಲ್ಲಿಯೂ ನೆನೆಪುಗಳ ನೂರಾರು ಚೂರುಗಳಿರುತ್ತವೆ
ನಿಶ್ಚಲ ಜಲದಂತೆ ನೆಲೆ ನಿಂತ ಊರಿನಲ್ಲಿಯೂ
ಅಲೆಮಾರಿಗಳಂತೆ ಅಂದು ಅಲೆದ ನೂರು ಮರೆಯಲಾಗದ ಊರುಗಳಿರುತ್ತವೆ,
ದಾಸನಾಗಿಸಿದ ಮೋಹಕ ಮೌನರಾಗದಂತೆ ಒಲವು
ಕೇಳದಿದ್ದರೂ ಕಾಡುತ್ತಿದೆ....
ಅರಳದಿದ್ದರೂ ಮನ ಒಳಗೊಳಗೆ ಅದರ ನೆನಪಿನಲ್ಲೆ ಬಾಡುತ್ತದೆ.//


ನಿದ್ರೆಯ ತೆಕ್ಕೆಗೆ ಜಾರಿದ ಕನಸಿನ ಕನ್ಯೆ
ಮನಸೊಳಗೆ ನಾಚಿ ನೀರಾದಳು....
ಸವೆದ ದಾರಿಯ ಜಾಡಿನ ಹಾದಿಯುದ್ದ
ನೆನಪುಗಳ ಹೆಜ್ಜೆ ಗುರುತುಗಳು ಮೂಡಿವೆ
ಸವೆದ ನೆನ್ನೆಯ ಸವಿ ಕ್ಷಣಗಳು ಇಂದೇನು ನಾಳೆಯೂ ಕಾಡಲಿಕ್ಕಿವೆ,
ಕತ್ತಲ ಮೊಗ್ಗು ಮುಳುಗಿದ ಬಾನಿನಂಚಿನಲ್ಲಿಯೇ
ಮತ್ತೆ ಹಗಲ ಹೂವರಳಿ ನಿರೀಕ್ಷೆಯ ಸೌಗಂಧವನ್ನು ಮರಳಿ ಹೊಮ್ಮಿಸುತ್ತಿದೆ....
ಬಾರದ ನಿದಿರೆಗೆ ಪೂಸಿ ಹೊಡೆದು
ನಿತ್ಯ ದಣಿವ ಕನಸುಗಳನ್ನ ಕಂಡರೆ ನನಗದೇನೋ ಮರುಕ./
ದೂರದಲ್ಲೆಲ್ಲೋ ನೆಲದೆದೆ ಒದ್ದೆಯಾದ ಕಥೆಯನ್ನ
ಆರ್ದ್ರವಾಗಿ ನಿತ್ಯ ಹೇಳುವ ಗಾಳಿಯ ಅಲೆಗಳ ಆಳದಲ್ಲಿ
ಇಲ್ಲಿಗೂ ಅವು ಆಗಮಿಸಬೇಕಿತ್ತು ಎನ್ನುವ ಆಳದ ಆಪೇಕ್ಷೆ ಇದ್ದಂತಿದೆ....
ಕನಸ ಕಾಣದ ಲೋಕಕ್ಕೆ ಕರೆದೊಯ್ಯುವ
ಇರುಳಿನ ಅತಿ ಅಮೂಲ್ಯ ಕ್ಷಣಗಳೆ
ಅಲ್ಲಿಯೇ ಶಾಶ್ವತ ಉಳಿಯುವ ಆಸೆ ನನಗೂ ಇದೆ,
ಎದೆಗೊರಗಿ ಗುಂಡಿಗೆಯ ಮಿಡಿತವನ್ನಾಲಿಸಿ
ಕಣ್ಣ ಮೂಲಕ ಮಧುರ ಭಾವಗಳನ್ನ
ಮನದ ಖಾಲಿ ಮಹಲಿಗೆ ದಾಟಿಸಿದ ನೆನಪುಗಳು ಅಮೂಲ್ಯ ಸಿರಿ ಯಾವತ್ತಿಗೂ.//

ಮಾಸದ ನೆನಪಿನ ಛಾಯೆಯ ಧಾರೆಯಡಿಯಲ್ಲಿ......



ಇನ್ನೇನಿಲ್ಲದಿದ್ದರೂ ನೆನಪಿನ ಒಂದು ಹನಿಯಿದೆ
ಅದರ ಆಳದಿಂದ ಹುಟ್ಟಿದ ಆರ್ತನಾದದ ಒಂದು ಆಪ್ತ ಧ್ವನಿಯಿದೆ.....
ಒಂಟಿ ಅಲ್ಲ ನಾನು,
ಒಂದೊಮ್ಮೆ ಮೋಡ ತನ್ನ ತಬ್ಬಿ ಮುದ್ದಿಟ್ಟರೂ
ವಿಶಾಲ ನೀಲಿಯಾಳದಲ್ಲಿ ಮೇಘದರಳೆಯ ಕೊನೆಯ ಚೂರೊಂದೇ ತೇಲುತ್ತಿದ್ದುಬಿಟ್ಟರೂ.....
ಅನಾಥನಾದೆನೆಂದು ಮರುಗೀತೇನು ಎಂದಾದರೂ ನಿರ್ಲಿಪ್ತ ಬಾನು?/
ಸರಿ ಕಂಡ ದಾರಿಯಲ್ಲಿ ಅದೇನೆ ಮುಳ್ಳಿನ ಹಾಸು ಹರವಿದ್ದರೂ
ನೆತ್ತರು ಸುರಿಸಿಕೊಂಡಾದರೂ ಸರಿ,
ಬರಿಬೆತ್ತಲೆ ಪಾದಗಳನ್ನ ಆದಷ್ಟು ಆಳಕ್ಕೆ ಊರಿ
ನಡೆದೆ ಕೊನೆ ಮುಟ್ಟುವ ಹಟ ನನ್ನೊಳಗೂ ಮೂಡಿ ಆಗಿದೆ.//


ಹಳಸಲು ಕನಸಿನ ತುಂಬ
ಮಾಸಲು ಮನಸಿನ ಬಿಂಬ...
ಬರಿ ನೆನಪುಗಳು ಕೆಲವು ನನ್ನವು
ಕೆಲವು ನಿನ್ನವು ಹಲವು ನಮ್ಮಿಬ್ಬರವು,
ಅತಿ ಅಲ್ಲದ ಪ್ರತಿ ಸಣ್ಣ ಆಸೆಗೂ
ಗತಿಗೇಡಿನ ಫಲ ಸಿಗುವ ಕಠೋರ ಜಗದಲ್ಲಿ
ವಿಶಾಲ ಹೃದಯ ಒಂದು ಅತಿರಮ್ಯ ಕಲ್ಪನೆ....
ಮತ್ತೆ ಆಸೆ ಹುಟ್ಟಿಸಿದ ಮಳೆಯ ಹಳೆಯ ಮೋಸದ ಮೋಹವನ್ನ
ಅತಿಯಾಗಿ ನಂಬಿರುವ ಅಮಾಯಕ ಭೂಮಿ
ಇನ್ನೂ ಬಿರಿದು ಹನಿ ಪ್ರೀತಿಗಾಗಿ ಬಾಯ್ತೆರೆದುಕೊಂಡು ಕಾದಿದೆ/
ವಿಪರೀತವಾಗಿರುವಾಗ ಮಾಹಿತಿ ಸೋರಿಕೆಯ ಅನಂತ ಭೀತಿ
ಅದಕ್ಕೆ ನಿನ್ನ ವಿಷಯದಲ್ಲಿ ಮೌನದಾಭರಣ ತೊಟ್ಟುಕೊಂಡೆ
ಕಾಲ ಹಾಕುವುದೆ ನನ್ನ ಚಿರ ನೀತಿ.....
ಇರುಳಲ್ಲಿ ಕಣ್ಣು ಬಾಡದೆ
ಕಿರು ನಿದಿರೆಗಳ ಮೊರೆ ಹೋಗಿರುವ ನನಗೆ,
ಅಲ್ಲಿಯೂ ಕನಸಾಗಿ ನನಗಿಂತ ಮೊದಲು ನೀ ಬಂದು ನನಗಾಗಿ
ಕಾದಿರಲಿ ಎನ್ನುವ ಸಲ್ಲದ ದುರಾಸೆ.//


ಕಾಮನೆಗಳ ಬಿಸಿಲುಗುದುರೆ ಏರಿ ಹೊರಟು
ಜಗವನ್ನೆಲ್ಲಾ ಸುತ್ತಿ ಬಳಲಿ ಬೆಂಡಾಗಿ ಬಂದರೂ....
ಎಲ್ಲೂ ಮನದ ಅಪೇಕ್ಷೆಯ ಸುಮ ಅರಳುವ ತಾಣ
ಕಡೆಗೂ ಕಾಣಸಿಗಲೇ ಇಲ್ಲ,
ಮತ್ತೆ ಮುಖ ಕಾಣದಿರಲು ಹುಟ್ಟಿಸಿ ಹೇಳಿದ ನೆಪಗಳೆಲ್ಲ
ಕೇವಲ ಪೇಲವ ಕಾರಣಗಳಾಗಿ
ಮನವ ಮೋಸಗೊಳಿಸಿದ ಮಾತುಗಳೆಲ್ಲ ಪ್ರಾಮಾಣಿಕ ಭಾವಗಳ ಇರಿದು ಹೋಗಿ....
ಹನಿ ನೆತ್ತರು ಕಾಣದೆ ಹೋಗಿದ್ದರೂ ಎಲ್ಲಾ
ನವ ನಾಳೆಗಳ ಕೊಲೆಯಾಗಿಹೋಗಿದೆ./
ಹಳೆಯದೊಂದು ಹುಂಬ ಕಸರತ್ತು
ತುಟಿಯಂಚಿನಲ್ಲಿ ಕಿರುನಗುವ ಹೊಮ್ಮಿಸುವ ಹಾಗೆ....
ನೀ ನೆನಪಾದಾಗ ನಾನು ಮುದಗೊಂಡು
ಮತ್ತೆ ಸ್ವಸ್ಥ ಚೇತರಿಸಿಕೊಳ್ಳುತ್ತೇನೆ ಅದೆಂತಹದ್ದೇ ಆತಂಕವಿದ್ದರೂ,
ಸಮಯಸಾಧಕ ಕೋಗಿಲೆಗೆ
ತುತ್ತುಣಿಸಿದ ಕಡುಗಪ್ಪು ಕಾಗೆಯಾಗುಳಿದಿದ್ದರೂ ಸರಿ....
ಒಲವು ಮತ್ತು ಆನಂದದಿಂದ ಉಬ್ಬೇರುತ್ತದೆ ಮನ
ತನ್ನ ಆಸರೆಯಲ್ಲಿದ್ದ ಕೋಕಿಲ ಮುಂದೆಲ್ಲೋ ಮರೆಯಲ್ಲಿ
ಉಲಿಯುವಾಗ ಕೇವಲ ಮಧುರ ಗಾನ ಸಿರಿ.//


ಇಂದಿನ ತನಕದ ಗಳಿಕೆಯೆಲ್ಲ ಹಾಗೇ ಖರ್ಚಾಗದೆ ಉಳಿದಿದ್ದರೆ
ನಾನಿಂದು ಎಲ್ಲರಿಗಿಂತ ಹೆಚ್ಚು ಮಾನ್ಯ....
ಸಂಬಂಧಗಳೆಲ್ಲ ಸಡಿಲಾಗದೆ ಮೊದಲ ಹಾಗೆ ಬಿಗಿಯುಳಿದಿದ್ದರೆ
ನಾನೂ ಆಗಿರುತ್ತಿದ್ದೆ ಹುಸಿ ನಾಟಕದ ಲೋಕದಲ್ಲೊಬ್ಬ ಅಗ್ರಗಣ್ಯ,
ಕರಗಿ ಹೋದ ಹಗಲಿಗೆ
ನಿತ್ಯದಂತೆ ವಿದಾಯ ಹೇಳಿದ ಕಾಲದ ಕೂಸು
ಮರಳಿ ಏರಿ ಕೂತಿತು ಇರುಳ ಕತ್ತಲ ಹೆಗಲಿಗೆ./
ಮರಳಿ ಗೂಡು ಸೇರಿದ ಹಕ್ಕಿಯ ಭಾವಗಳ ಮೇಲೆ
ಹಕ್ಕು ಸಾಧಿಸುವವರ್ಯಾರೂ ಕೊನೆಯವರೆಗೂ
ಕಾದು ಕೂತಿರೋದಿಲ್ಲ ಅನ್ನೋದು ಅದಕ್ಕೂ ಅರಿವಿದೆ.....
ಮಾಸದ ನೆನಪಿನ ಛಾಯೆಯ ಧಾರೆಯಡಿಯಲ್ಲಿ
ನಿತ್ಯ ನೆನೆವ ಮನ ತಪ್ತ
ಅಲ್ಲಲ್ಲಿ ಹನಿಯೊಡೆಯಲು ಕಾದ ಭಾವದ ಮೋಡಗಳೆಲ್ಲ ಇನ್ನೂ ಸುಪ್ತ,
ನೂತ ನೆನಪಿನ ನಾಲ್ಕು ದಾರಗಳನ್ನೆ ಬಳಸಿ
ನೇಯ್ದ ನವನವೀನ ಕುಲಾವಿಯೊಂದು
ನನ್ನನ್ನೆ ಪೂರ್ತಿ ಆವರಿಸಿ ನೀನಾಗಿಸಿ ಬಿಟ್ಟಿದೆ....
ಸುಳ್ಳನ್ನ ಸತ್ಯವನ್ನಾಗಿ ಸಾಧಿಸಲಿಕ್ಕೆ
ಮನಸು ಕಳ್ಳನಾಗಬೇಕಾಗುತ್ತದೆ
ತನು ಮಳ್ಳನಾಗಿಯೂ ನಟಿಸುತ್ತಿರಬೇಕಿರುತ್ತದೆ.//

Sunday, June 15, 2014

ಮೂರೂ ಬಿಟ್ಟ ಮೂರ್ತಿಗಳು ಸರಕಾರಿ ಖಜಾನೆಯಲ್ಲಿ ಮಾನಗೆಟ್ಟು ಭಿಕ್ಷೆ ಎತ್ತಿದರು.



ಕೊಟ್ಟವ ದೊಡ್ಡ ಕೋಡಂಗಿ, ಇಸ್ಕೊಂಡ ಈರಭದ್ರನೂ ಏನೂ ಕಡಿಮೆ ಇಲ್ಲ. ನಾನು ಕಟ್ಟಿದ್ದ ಆದಾಯ ತೆರಿಗೆ ಹಾಗೂ ಇನ್ನಿತರ ತೆರಿಗೆಗಳಿಂದ ಸಂಗ್ರಹವಾದ ರಾಜಸ್ವದ ಹಣದಲ್ಲಿ ಒಂದು ಪಾಲು ಡಾ ಯು ಆರ್ ಅನಂತಮೂರ್ತಿಗಳ "ರಾಜ ರೋಗ"ದ ಚಿಕಿತ್ಸೆಯ ವೆಚ್ಚಕ್ಕಾಗಿ ಹನ್ನೊಂದೂ ಮುಕ್ಕಾಲು ಲಕ್ಷ ರೂಪಾಯಿಗಳನ್ನ ನಮ್ಮ ಶೇಮ್ ಲೆಸ್ ಸಿದ್ಧನ "ಭಾಗ್ಯವಂತ"ರ ರಾಜ್ಯ ಸರಕಾರ ಸರಾಸಗಟಾಗಿ ಪಾವತಿಸಿದೆ ಎಂದು ತಿಳಿದು ಅಘಾತವಾಗಿದೆ.

ನನಗೆ ತಿಳಿದ ಮಟ್ಟಿಗೆ ಅನಂತಮೂರ್ತಿಯವರೇನೂ ನೊಂದು ಬೆಂದು ಬಳಲಿ ಹೋಗಿರುವ ಆರ್ಥಿಕವಾಗಿ ಬಲಹೀನರಾಗಿರುವ ವ್ಯಕ್ತಿ ಖಂಡಿತಾ ಅಲ್ಲ. ಅವರ ಸಂ"ಮಜಾ"ವಾದಿ ಗೆಳೆಯರೊಬ್ಬರು ಗದ್ದುಗೆ ಮೇಲೆ ತೇಲುಗಣ್ಣು ಮಾಲುಗಣ್ಣು ಮಾಡಿ ಕೂತು ಓಲಾಡುತ್ತಿದ್ದಾಗ ಅವರಿಗೆ ಬಕೆಟ್ ಬುಟ್ಟಿ ಹಾಗೂ ಇನ್ನೇನನ್ನೋ ಹಿಡಿದು ಯುಆರ್'ಅ ಲಪಟಾಯಿಸಿದ್ದ ಡಾಲರ್ಸ್ ಕಾಲೋನಿಯ ಜಾಗದ ಬೆಲೆಯೆ ಈಗ ಕೋಟ್ಯಾಂತರ ರೂಪಾಯಿಗೆ ಬೆಲೆ ಬಾಳುತ್ತದೆ. ಅಷ್ಟು ಅಗತ್ಯವಿದ್ದರೆ ಅದನ್ನ ಮಾರಿಯೋ ಇಲ್ಲ ಬ್ಯಾಂಕಿಗೆ ಅಡ ಹಾಕಿಯೋ ಅವರು ಆ ಹಣವನ್ನ ಹೊಂದಿಸಿಕೊಳ್ಳಬಹುದಿತ್ತು.

ಇನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕನಾಗಿದ್ದು, ಸದ್ಯ ಇಂಗ್ಲೆಂಡಿನಲ್ಲಿ ಪೌಂಡ್ ಲೆಕ್ಖದಲ್ಲಿ ಹಣ ಸಂಪಾದಿಸುತ್ತಿರುವ ಅವರ ಸ್ಥಿತಿವಂತ ಮಗ ಶರತ್ ಇದ್ದಾನೆ ಅಪ್ಪನ ಮುತುವರ್ಜಿ ವಹಿಸಲಿಕ್ಕೆ. ಅದು ಅವನ ಜನ್ಮಸಿದ್ಧ ಕರ್ತವ್ಯ ಸಹ. ಅಷ್ಟೆಲ್ಲ ಏಕೆ ತೀರ್ಥಹಳ್ಳಿಯ ಪಿತ್ರಾರ್ಜಿತ ಆಸ್ತಿಯಲ್ಲಿಯ ಆದಾಯವೂ ಕಾಲಕಾಲಕ್ಕೆ ಅನಂತಮೂರ್ತಿಗಳ ಖಾತೆಗೆ ಜಮೆ ಆಗುತ್ತಿದೆ. ಇದನ್ನ ಅವರ ತಮ್ಮ ಡಾ ಅನಿಲ್ ನನಗೆ ಖಚಿತ ಪಡಿಸಿದ್ದಾರೆ. ಅನಂತಮೂರ್ತಿಯವರೆ ಸರಕಾರದ ವಿವಿಧ ಗೌರವ ಹುದ್ದೆಗಳಲ್ಲಿ ದುಡಿದು ಉಳಿಸಿದ್ದ ದುಡ್ಡಿನ ದೊಡ್ಡದೊಂದು ಗಂಟು ಡಾಲರ್ಸ್ ಕಾಲೋನಿಯ ಸ್ಟೇಟ್ ಬ್ಯಾಂಕ್ ಆಫ್ ತ್ರಿವೇಂದ್ರಂ ಹಾಗೂ ರಾಜಮಹಲ್ ವಿಲಾಸದ ಸಿಂಡಿಕೇಟ್ ಬ್ಯಾಂಕಿನ ಉಳಿತಾಯ ಖಾತೆಗಳಲ್ಲಿ ಹಾಗೆ ಕೊಳೆಯುತ್ತಾ ಬೆಳೆಯುತ್ತಿದ್ದು ಆಗಾಗ ಅವರ ಖಾಸಗಿ ಷೋಕಿ ಹಾಗೂ ತೆವಲಿಗೆ ಧಾರಾಳವಾಗಿ ವಿನಿಯೋಗವಾಗುತ್ತಿದೆ. ಅಗತ್ಯ ಬಿದ್ದವರಿಗೆ ಖಾತೆ ವಿವರ ನನ್ನಲ್ಲಿ ಲಭ್ಯವಿದೆ.


ಇಷ್ಟೆಲ್ಲ ಇರುವ ಸ್ಥಿತಿವಂತನಿಗೆ ಜನರ ದುಡ್ಡಿನಲ್ಲಿ ಕೈಸೋತ ಬಡಪಾಯಿಗೆ ಮಾಡುವಂತೆ ಸರಕಾರಿ ಕೃಪಾ ಕಟಾಕ್ಷದ ಕೈ ಆಸರೆಯ ಸಹಾಯ ಮಾಡುವ ಯಾವ ಅವಶ್ಯಕತೆಯೂ ನನಗಂತೂ ಕಂಡು ಬರುತ್ತಿಲ್ಲ. ಅವರು ರಾಜ್ಯದ ಬೌದ್ಧಿಕ ಚಿಂತಕರೆ ಇರಬಹುದು ಹಾಗಂತ ಕೈ ಸೋತ ಬಡಪಾಯಿ ಅಲ್ಲವೆ ಅಲ್ಲ. ನಿಸ್ಸಹಾಯಕರಿಗೆ ಮಾತ್ರ ದಾನ ಸಲ್ಲ ಬೇಕೆ ಹೊರತು ಬಲಿತ ಭಂಡರಿಗಲ್ಲ. ನಾಚಿಕೆ ಅವರಿಗಾದರೂ ಆಗಬೇಡವ ಈ ಬಡ ಜನರ ಬೆವರ ಸಂಪಾದನೆಯನ್ನ ಕೈ ಒಡ್ಡಿ ತಮ್ಮ ಬಂಕಣಕ್ಕೆ ಇಳಿಸುವಾಗ? ಹೀಗೆ ಮೂರೂ ಬಿಟ್ಟು ಕಂಡವರ ಕಾಸಿಗೆ ನಾಲಗೆ ಚಾಚುವ ಮಂದಿಗೆ ತನ್ನ ಮೂಗಿನ ನೇರಕ್ಕೆ ಜನರ ದುಡ್ಡನ್ನ ಮನ ಬಂದಂತೆ ಹಂಚಲಿಕ್ಕೆ ತೆಪರ ಸಿದ್ಧನಿಗೆ ಅಧಿಕಾರ ಕೊಟ್ಟವರ್ಯಾರು? ಇದೇನು ಸಿದ್ಧರಾಮನ ಹುಂಡಿಯಲ್ಲಿ ಅವರಪ್ಪ ಅವರಿಗೆ ಕೊಟ್ಟ ಪಾಲಿನ ಕುರಿ ಮಾರಾಟ ಮಾಡಿ ಒಟ್ಟು ಮಾಡಿದ ಹಣದಲ್ಲೊಂದು ಪಾಲ ಹಾಗೆ ಮನಸೋ ಇಚ್ಛೆ ದುರ್ವ್ಯಯ ಮಾಡಲಿಕ್ಕೆ? ಅನಂತಮೂರ್ತಿಗಳೆ ಇರಲಿ ಇಲ್ಲಾ ಬಾತ ತಲೆಯ ಇನ್ಯಾವುದೇ ಸಾಹಿತಿ ಪಿಂಡವೆ ಆಗಿರಲಿ ಕಂಡ ಕಂಡವರ ಖಾಸಗಿ ತೆವಲಿಗಾಗಿ ವ್ಯಯಿಸಲಿಕ್ಕೆ ಸರಕಾರಿ ಖಜಾನೆಯೇನೂ ಸೂರೆ ಹೋದ ಸೂಳೆ ಮನೆಯ?

Saturday, June 7, 2014

ಶತಾಯುಷಿಯ ಸ್ವಪ್ನವೊಂದು ಕಡೆಗೂ ಸಾಕಾರವಾಗುವುದಿಲ್ಲ......







ಕವಿ ಕಯ್ಯಾರ ಕಿಂಞಣ್ಣ ರೈಗಳು ನನ್ನ ಪಾಲಿಗೆ ಕೇವಲ ಪಠ್ಯ ಪುಸ್ತಕದ ಕೊನೆಯ ಪದ್ಯವಾಗಿದ್ದವರು. ಎರಡನೆ ತರಗತಿಯ ವಿದ್ಯಾರ್ಥಿ ನಾನಾಗಿದ್ದಾಗ ನಮ್ಮ ಶೈಕ್ಷಣಿಕ ವರ್ಷಕ್ಕೆ ಪಠ್ಯ ಪುಸ್ತಕಗಳು ಬದಲಾಗಿದ್ದವು. ಹಿಂದಿನ ವರ್ಷ ಒಂದನೆ ತರಗತಿಯಲ್ಲಿ ಗೋವಿನ ಹಾಡಿನಂತಹ ಲಯಬದ್ಧ ಸರಳ ರಾಗಗಳಲ್ಲಿ ಹಾಡ ಬಹುದಾಗಿದ್ದ ಪದ್ಯಗಳನ್ನಷ್ಟೆ ಕಲಿತು ಗೊತ್ತಿದ್ದ ನನಗೆ ಯಾವ ರಾಗಕ್ಕೂ ನಿಲುಕದ ಕಯ್ಯಾರರ "ಐಕ್ಯಗಾನ" ಎನ್ನುವ ಪದ್ಯ ಪರಮ ಗೊಂದಲ ಹುಟ್ಟಿಸಿತ್ತು! ಇಂತಹ ಕಯ್ಯಾರರಿಗೆ ಇಂದಿಗೆ ಭರ್ತಿ ನೂರು ವರ್ಷ ಪ್ರಾಯವಾಗಿದೆ, ಅಂತೆಯೆ ಅವರ ಮತ್ತೆ ಕನ್ನಡ ನಾಡಿನಲ್ಲಿ ತಮ್ಮ ನೆಲವನ್ನ ಮರಳಿ ಐಕ್ಯ ಮಾಡುವ ಕನಸಿಗೂ ಆರು ದಶಕಗಳು ತುಂಬಲು ಇನ್ನೆರಡೇ ವರ್ಷ ಬಾಕಿ ಉಳಿದಿದೆ!


ಆದರೆ ಅವರ ಕನಸು ನನಸಾಗುವ ಯಾವುದೇ ಕ್ಷೀಣ ಸಾಧ್ಯತೆಗಳೂ ಅತಿದೂರಕ್ಕೂ ಗೋಚರಿಸುತ್ತಿಲ್ಲ. ಅದನ್ನ ಆಗ ಮಾಡಿಸಲು ಕಾನೂನಿನ ಹೋರಾಟ, ರಾಜಕೀಯ ಒತ್ತಡ ಮುಂತಾದ ಪ್ರಯತ್ನ ನಡೆಸಬೇಕಾದ ಆಳುವ ಕರುನಾಡ ಸರಕಾರ ಮಾತ್ರ ಜೋಭದ್ರನಂತೆ ವರ್ತಿಸುತ್ತಲೇ ಕಾಲ ಹಾಕುತ್ತಿದೆ. ಈಗ ಅದೆ ಅಪ್ರಾಮಾಣಿಕ ಸರಕಾರ ತೋರಿಕೆಯ ಅಸ್ಥೆ ಪ್ರದರ್ಶಿಸಲಿಕ್ಕೆ ಸದ್ಯ ಕೇರಳದ ತೆಕ್ಕೆ ಸೇರಿರುವ ಅವರ ಬದಿಯಡ್ಕದ ಮನೆ "ಕವಿತಾ ಕುಟೀರ"ಕ್ಕೆ "ಪಂಪ ಪ್ರಶಸ್ತಿ" ಪ್ರದಾನ ಮಾಡಲು ಹೊರಟಿದೆ. "ಬೆಂಕಿ ಬಿದ್ದಿದೆ ಮನೆಗೆ ಓಡಿ ಬನ್ನಿ...." ಎಂದು ಆರ್ತವಾಗಿ ಅವರೆ ಮೊರೆಯಿಟ್ಟಿದ್ದಾಗ, ತುಳುನಾಡ ಭೂ ಭಾಗವೆ ಆಗಿದ್ದ - ಈಗಲೂ ಸಾಂಸ್ಕೃತಿಕವಾಗಿ ತುಳುನಾಡಿನ ಅವಿಭಾಜ್ಯ ಅಂಗವಾಗಿಯೇ ಇರುವ ಕಾಸರಗೋಡು ತಾಲ್ಲೂಕನ್ನ ಅನ್ಯಾಯದ ಮಾರ್ಗ ಅನುಸರಿಸಿ ಕೇರಳವೆಂಬ ಖದೀಮ ಕಬಳಿಸಿದಾಗ ಕಿವುಡನಂತೆ ನಟಿಸಿ ಮುಖ ಮರೆಸಿಕೊಂಡಿದ್ದ ರಾಜಕಾರಣಿಗಳಿಗೆ ನಾಚಿಕೆ ಎನ್ನುವುದು ಚೂರಾದರೂ ಇದ್ದರೆ ಇಂತಹ ನಾಟಕಗಳನ್ನ ಮಾಡುವ ಬದಲು ಕಯ್ಯಾರರಂತಹ ಅನೇಕರ ಅಳಲನ್ನ ಇನ್ನಾದರೂ ಪ್ರಾಮಾಣಿಕವಾಗಿ ಆಲಿಸಬೇಕು. ಅವರಂತಹ ನೊಂದವರ ಕನಸನ್ನ ನನಸಾಗ ಮಾಡಲು ಹಾತೊರೆದು ಸರಿಯಾದ ಕಾನೂನಿನ ಮಾರ್ಗಗಳನ್ನ ಅನುಸರಿಸಿ ಹೋರಾಡಿ ನಮ್ಮ ಹಕ್ಕನ್ನ ಸಾಧಿಸಬೇಕು.


  ಎಲ್ಲಾ ಪೌರಾತ್ಯ ದೇಶಗಳಲ್ಲಿನ ರೂಢಿಯಂತೆ ನಮ್ಮ ನಾಡಿನಲ್ಲಿಯೂ ಗಡಿಯನ್ನ ನಿರ್ಧರಿಸಿ ಎರಡು ರಾಜ್ಯಗಳನ್ನ ವಿಭಜಿಸುತ್ತಿದ್ದದ್ದು ನಿಸರ್ಗ ಸಹಜವಾದ ನದಿ, ಬೆಟ್ಟ, ಜಲಪಾತ ಹಾಗೂ ಕಾಡುಗಳು. ಹೀಗೆಯೆ ಅಂದಿನ ಮೈಸೂರು ರಾಜ್ಯದಿಂದ ಅಂದಿನ ಮದರಾಸು ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದ ತುಳುನಾಡನ್ನ ಪಶ್ಚಿಮ ಘಟ್ಟಗಳು ( ನಕ್ಷೆ ಗಮನಿಸಿ.) ಬೇರ್ಪಡಿಸಿದರೆ, ಮೈಸೂರನ್ನ ಕೊಡಗು ರಾಜ್ಯದಿಂದ ನಾಗರಹೊಳೆ ಕಾಡು ಹಾಗೂ ಕಾವೇರಿ ನದಿ ವಿಭಜಿಸುತ್ತಿದ್ದಳು. ಉತ್ತರದಲ್ಲಿ ಮೈಸೂರು ರಾಜ್ಯವನ್ನ ಬೊಂಬಾಯಿ ಪ್ರಾಂತ್ಯದಿಂದ ತುಂಗಭದ್ರೆಯರು ಹಾಗೂ ಜೋಗ ಜಲಪಾತ ಪ್ರತ್ಯೇಕವಾಗಿಸುತ್ತಿತ್ತು.


ಇದೆ ಮಾನದಂಡದಲ್ಲಿ ಸುಳ್ಯದಿಂದ ಸಾಗಿ ಕಾಸರಗೋಡಿನ ಮಾರ್ಗವಾಗಿ ಅರಬ್ಬಿ ಕಡಲಿನ ಒಡಲನ್ನ ಸೇರುವ ಪಯಸ್ವಿನಿ ಅಥವಾ ಚಂದ್ರಗಿರಿ ಹೊಳೆಯೆ ತುಳುನಾಡು ಹಾಗೂ ಕೇರಳದ ನಡುವಿನ ಸಹಜ ಗಡಿ. ಇಲ್ಲಿ ನೀಡಿರುವ ಆ ಕಾಲದ ರಾಜಕೀಯ ಗಡಿ ನಕ್ಷೆಯೂ ಇದನ್ನೆ ಖಚಿತ ಪಡಿಸುತ್ತದೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾಚೆಗೆ ಕಲ್ಲಿಕೋಟೆ ಜಿಲ್ಲೆಯನ್ನ ಸ್ಪಷ್ಟವಾಗಿ ಕಾಣಿಸಿದೆಯೆ ಹೊರತು ಕಾಸರಗೋಡು ಎನ್ನುವ ಅಸಹಜ ಜಿಲ್ಲೆಯೊಂದನ್ನಲ್ಲ. ಇದನ್ನ ಬ್ರಿಟಿಷ್ ಭಾರತದ ಸರ್ವೆಯ ದಸ್ತಾವೇಜುಗಳೂ ದೃಢಪಡಿಸುತ್ತವೆ. ನಮ್ಮ ತುಳುನಾಡಿನ ಭೂತಗಳೂ ತಮ್ಮ ಪಾಡ್ದನದಲ್ಲಿ ಚಂದ್ರಗಿರಿ ಹೊಳೆಯಾಚಿನ ನೆಲವನ್ನಷ್ಟೆ ಕೇರಳವೆಂದು ತಲೆತಲಾಂತರಗಳಿಂದ ಗುರುತಿಸುತ್ತಿವೆ. ಆದರೆ ನಮ್ಮವರಿಗೆ ಮಾತ್ರ ಅದೊಂದೂ ಮುಖ್ಯವಲ್ಲ.


ವಾಸ್ತವವಾಗಿ ಚಂದ್ರಗಿರಿ ಹೊಳೆಯಾಚೆಗೂ ದಕ್ಷಿಣದ ತಂಬುರದವರೆಗೆ ಸುಮಾರು ಅರವತ್ತು ಕಿಲೋಮೀಟರ್ ನೆಲದಲ್ಲಿ ತುಳು ಮಿಶ್ರಿತ ಕನ್ನಡ ವ್ಯಾಪಿಸಿದೆ. ಆದರೆ ಹೊಳೆಯಾಚೆ ಅದರ ವ್ಯಾಪ್ತಿ ತೆಳುವಾಗುತ್ತಾ ಹೋಗಿ ಮುಂದೆ ಸಂಪೂರ್ಣ ಮಲಯಾಳದ ಅಧಿಪತ್ಯ ಆರಂಭವಾಗುತ್ತದೆ. ಅನೇಕ ಸ್ಥಳಿಯ ಪಾರಿಭಾಷಿಕ ಪದಗಳಲ್ಲಿ ಮಲಯಾಳಿಯ ನೆರಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ತುಳುನಾಡಿನಲ್ಲಿ ಕುಟುಂಬದ ಮೂಲ ಮನೆಯನ್ನು ಗುತ್ತು ಅಥವಾ ಬೀಡು ಎಂದರೆ ಈ ಪ್ರಾಂತ್ಯದಲ್ಲಿ ಅದನ್ನ ಮಲಯಾಳಿಗಳಂತೆ ತರವಾಡು ಎನ್ನಲಾಗುತ್ತದೆ. ಅಸಲು ಸಂಗತಿ ಇದಾಗಿದ್ದರೂ ಸಹ ಭಾಷಾವಾರು ಪ್ರಾಂತ್ಯದ ರಚನೆಯ ಸಂದರ್ಭದಲ್ಲಿ ಫಜಲ್ ಅಲಿ ಆಯೋಗ ಹಾಗೂ ಮಹಾಜನ್ ಆಯೋಗದ ಶಿಫಾರಸ್ಸುಗಳನ್ನೆಲ್ಲ ಕಸದ ಬುಟ್ಟಿಗೆ ಎಸೆದು ನೆಹರು ಛೇಲ ಫಣಿಕ್ಕರ್ ಎಂಬ ಅಧಿಕಾರ ವಲಯದ ಪ್ರಭಾವಿ ಮಲಯಾಳಿ ಇಡಿ ಕಾಸರಗೋಡು ತಾಲ್ಲೂಕನ್ನ ಕೇರಳದ ನಕ್ಷೆಯೊಳಗೆ ಸೇರಿಸಿ ಕನ್ನಡಿಗರನ್ನ ತಮ್ಮ ಮನೆಯಲ್ಲಿಯೇ ನಿರಾಶ್ರಿತರನ್ನಾಗಿ ಮಾಡಿದ!


ಆಗೆಲ್ಲಾ ಸಂಕಟದಿಂದ ಬೊಬ್ಬೆ ಇಟ್ಟ ಕಯ್ಯಾರರ ಮೊರೆ ಕೇಳದೆ ಕಡೆಗಣಿಸಿದ ಮಂದಿ ಇಂದು ಅವರನ್ನ ಸನ್ಮಾನಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ದುರಾಸೆಯಲ್ಲಿ ನಮ್ಮದಲ್ಲದಾಗಿರುವ ನಮ್ಮ ಮನೆ ಕಾಸರಗೋಡಿಗೆ ದಾಂಗುಡಿ ಇಡುತ್ತಿದ್ದಾರೆ. ನಾಚಿಕೆ ಆಗಬೇಕು ಇವರಿಗೆಲ್ಲ. ಇಂದು ಆಳುವ ಕೇರಳ ಸರಕಾರ ಕಾಸರಗೋಡನ್ನ ಜಿಲ್ಲೆಯ ದರ್ಜೆಗೇರಿಸುವ ಮೂಲಕ, ಅಲ್ಲಿ ತಿರುವಾಂಕೂರಿನ ಆಚೆಯ ಮಲಯಾಳಿಗಳನ್ನ ವಲಸೆ ಬರುವಂತೆ ಪ್ರೋತ್ಸಾಹಿಸುವುದರ ಮೂಲಕ, ಮಲಯಾಳಿ ಮಾಧ್ಯಮದ ಶಾಲೆಗಳನ್ನ ಅಲ್ಲಿ ಖಡ್ಡಾಯಗೊಳಿಸುವುದರ ಮೂಲಕ ವ್ಯವಸ್ಥಿತವಾಗಿ ಕಾಸರಗೋಡಿನ ತುಳುವ - ಕನ್ನಡಿಗ ಛಾಯೆಯನ್ನ ಇಲ್ಲವಾಗಿಸುವ ಕಾರ್ಯದಲ್ಲಿ ಬಲವಾಗಿ ತೊಡಗಿದೆ. ಇದನ್ನೆಲ್ಲ ನೋಡಿ ನೊಂದು ಹೋಗಿರುವ ಕಯ್ಯಾರರಿಗೆ ದೇಹ ಮಾಗಿದೆಯಾದರೂ ಮನಸ್ಸಿನ್ನ ಕೆಚ್ಚು ಇನ್ನೂ ಮಾಸಿಲ್ಲ. ಅವರಿಗೆ ಜನ್ಮದಿನ ಶುಭ ತರಲಿ.

Friday, June 6, 2014

ನಗು ಮೊಗದ ಗೌಡರು ಕನ್ನಡಿಗರ ಮೊಗದಲ್ಲೂ ನೆಮ್ಮದಿಯ ನಗು ಹೊಮ್ಮಿಸಲಿ.






ಸ್ವತಂತ್ರ್ಯ ಭಾರತದ ಇಲ್ಲಿಯವರೆಗಿನ ಕೇಂದ್ರ ಸರಕಾರದಲ್ಲಿ ಈವರೆಗೆ ೪೨ ಮಂದಿ ರೈಲ್ವೇ ಸಚಿವರು ಆಗಿ ಹೋಗಿದ್ದಾರೆ. ಇದರಲ್ಲಿ ಸಿಂಹಪಾಲು ಕನ್ನಡಿಗರದ್ದೆ ಅನ್ನೋದು ನಮಗೆಲ್ಲ ಅತಿ ಹೆಮ್ಮೆಯ ವಿಚಾರ. ಆದರೆ ಇದರಿಂದ ಕರ್ನಾಟಕಕ್ಕೆ ಬಂದ ಭಾಗ್ಯವೇನು? ಎಂದು ತುಸು ಚಿಂತಿಸಿದಾಗ ಮಾತ್ರ ಈ ಉತ್ಸಾಹದ ಬೆಲೂನನ್ನ ಉಬ್ಬಿಸಿ ಕೂತ ನಮಗೆ ಸೂಜಿ ಚುಚ್ಚಿದ ಅನುಭವವಾಗುತ್ತದೆ! ಹೀಗಿದೆ ರೈಲ್ವೇ ಸಚಿವಾಲಯದ ಮೇಲೆ ಹಿಡಿತ ಸಾಧಿಸಿದ್ದ ಕರುನಾಡಿನ ಎಂಟು ಸಚಿವರ ನಾಡಿನ ಸೇವೆಯ ಸಾಧನೆ ವಿವರ, ಇದರೊಂದಿಗೆ ಕರುನಾಡಿನ ಮೂಲದ ಇನ್ನೊಬ್ಬ ಬಿಹಾರಿ ಸಂಸದರನ್ನೂ ಸೇರಿಸಿಕೊಂಡರೆ ಇಲ್ಲಿಯವರೆಗೂ ಒಟ್ಟು ಒಂಬತ್ತು ಮಂದಿ ಕನ್ನಡಿಗರು ರೈಲ್ವೆ ಸಚಿವರಾಗಿ ಮೆರೆದಿದ್ದಾರೆ. ಜೊತೆಗೆ ಇಬ್ಬರು ರಾಜ್ಯ ಖಾತೆ ದರ್ಜೆಯ ಸಹಾಯಕ ರೈಲ್ವೆ ಸಚಿವರೂ ಆಗಿದ್ದರು. ಆದರೆ ಈ ಒಂದು ಡಝನ್ನಿಗೆ ಒಂದು ಕಡಿಮೆ ಇರುವ ಈ ಸಚಿವರ ದಂಡಿನಿಂದ ನಾಡಿನ ಪಾರ್ಶ್ವವಾಯು ಪೀಡಿತ ರೈಲ್ವೆ ಪ್ರಗತಿಯಲ್ಲಿ ಸುಧಾರಣೆ ಕಂಡದ್ದು ಮಾತ್ರ ಅಷ್ಟಕ್ಕಷ್ಟೆ.

ಈ ಒಂಬತ್ತು ಮಂದಿಯಲ್ಲಿ ಎರಡು ಬಾರಿ ರೈಲ್ವೆ ಸಚಿವರಾಗಿದ್ದ ಟಿ ಎ ಪೈ, ದಕ್ಷಿಣ ಕನ್ನಡದ ಬಗಲಿನ ಕೊಡವ ಸಿ ಎಂ ಪುಣಚ, ಹುಟ್ಟಾ ಮಂಗಳೂರಿಗ ಜಾರ್ಜ್ ಫೆರ್ನಾಂಡಿಸ್ ಹಾಗೂ ಸದ್ಯದ ರೈಲ್ವೆ ಸಚಿವ ಡಿ ವಿ ಸದಾನಂದಗೌಡರು ತುಳುನಾಡಿನವರೆ ಆಗಿರೋದು ಒಂದು ಅಪರೂಪದ ಸಂಗತಿ. ಆದರೆ ಕರುನಾಡ ಕರಾವಳಿಯ ಮೂರು ಜಿಲ್ಲೆಗಳು ಮಾತ್ರ ರೈಲ್ವೆ ವ್ಯವಸ್ಥೆಯ ವಿಚಾರದಲ್ಲಿ ಇದ್ದಲ್ಲೇ ಇದೆ! ಆರಕ್ಕೆ ಏರೋದು ಅತ್ತಲಾಗಿರಲಿ,ಇದ್ದ ಮೀಟರ್ ಗೇಜ್ ಹಳಿಗಳನ್ನೂ ಕಿತ್ತೆಸೆದು ಮಂಗಳೂರು - ಬೆಂಗಳೂರು ನಡುವಿನ ಬ್ರಾಡ್'ಗೇಜಿಗೆ ಬದಲಿಸುವ ನೆಪದಲ್ಲಿ ಒಂದೂ ಮುಕ್ಕಾಲು ದಶಕಗಳ ಕಾಲ ಬೆಂಗಳೂರಿಗೆ ನೇರ ರೈಲ್ವೆ ಸಂಪರ್ಕವೇ ಇಲ್ಲದಂತೆ ಮಾಡಿ ಮೂರಕ್ಕಿಂತ ಕೆಳಕ್ಕಿಳಿಸಿ ತುಳುವರನ್ನ ಇವರೆಲ್ಲಾ ಉಪಕರಿಸಿದ್ದರು!

ತೊಂಬತ್ತರ ದಶಕಾರಂಭದಲ್ಲಿ ಮುಂಬೈ ಕೊಂಕಣ ರೈಲ್ವೆಯ ಮೂಲಕ ಮಂಗಳೂರಿನವರೆಗೆ ಬೆಸೆಯಿತು ಅಂತಾದಾಗ ತುಳುವರು ಅಲ್ಪತೃಪ್ತಿ ಪಟ್ಟು ಬೀಗಿದ್ದರೂ, ಕ್ರಮೇಣ ಮುಂಬೈನಿಂದ ಮಂಗಳೂರು ಮುಖಿಯಾಗಿದ್ದ ನೇತ್ರಾವತಿ ಎಕ್ಸ್'ಪ್ರೆಸ್, ಮತ್ಸ್ಯಗಂಧ ಎಕ್ಸ್'ಪ್ರೆಸ್, ದಾದರ್ - ಮಂಗಳೂರು ಎಕ್ಸ್'ಪ್ರೆಸ್ ಎಲ್ಲವೂ ಹಂತಹಂತವಾಗಿ ತಿರುವನಂತಪುರದವರೆಗೆ ವಿಸ್ತರಣೆ ಆಗಿ ಬೋಳು ಬೆಪ್ಪರಾದ ತುಳುವರ ಕೈಗೆ ಎಂದಿನಂತೆ ಮಲಯಾಳಿ ಲಾಬಿಗೆ ಮಣಿದ ಕೇಂದ್ರ ಸರಕಾರ ಚಿಪ್ಪು ಕೊಟ್ಟಿತು. ನೆನ್ನೆ ಮೊನ್ನೆಯವರೆಗೂ ಕರುನಾಡ ಕರಾವಳಿಯ ಉದ್ದ ವಿಸ್ತರಿಸಬೇಕಿದ್ದ ರೈಲುಗಳ ಮಾರ್ಗಗಳನ್ನೆಲ್ಲ ಅತಿ ಜಾಣ ಮಲಯಾಳಿಗಳು ಹಾಡು ಹಗಲೇ ಲಪಟಾಯಿಸುತ್ತಿದ್ದರೂ ನಮ್ಮ ಮಂತ್ರಿ ವೇಷದ ಕಂತ್ರಿಗಳು ಮಾತ್ರ ಹೇತ್ಲಾಂಡಿ ಹ್ಯಾಪರಂತೆ ಕೈ ಚೆಲ್ಲಿ ಕೂತರು.

ಈ ಸಾರಿ ಬೆಂಗಳೂರು ಉತ್ತರವನ್ನ ಪ್ರತಿನಿಧಿಸುತ್ತಿದ್ದರೂ ಸಹ ಡಿ ವಿ ಸದಾನಂದಗೌಡರು ತಮ್ಮ ತವರು ಹಾಗೂ ತಮ್ಮನ್ನ ಇತ್ತೀಚಿನವರೆಗೂ ತಕರಾರಿಲ್ಲದೆ ಸಂಸತ್ತಿಗೆ ಗೆಲ್ಲಿಸಿ ಕಳಿಸಿದ ಕರಾವಳಿಗರ ಋಣ ತೀರಿಸುವ ಬಗ್ಗೆ ಪ್ರಾಮಾಣಿಕವಾಗಿ ಆಲೋಚಿಸಬೇಕಿದೆ. ಹೊಸತಾಗಿ ಇವರು ಯೋಜನೆಗಳನ್ನೇನೂ ಘೋಷಿಸಬೇಕಿಲ್ಲ. ಸದ್ಯ ಘೋಷಣೆಯಾಗಿರುವ ಪಾಲ್ಘಾಟ್ ವಿಭಾಗದಿಂದ ವಿಭಜಿಸಿ ಮಂಗಳೂರು ಪ್ರತ್ಯೇಕ ವಿಭಾಗ ಸ್ಥಾಪನೆ, ದಕ್ಷಿಣ ವಿಭಾಗದಿಂದ ನೈಋತ್ಯ ರಲ್ವೆ ವಲಯಕ್ಕೆ ಮಂಗಳೂರು ವಿಭಾಗದ ವಲಯ ಬದಲಾವಣೆ, ರೈಲುಗಳ ಸಂಖೆಯಲ್ಲಿ ಹೆಚ್ಚಳ, ಸ್ವಚ್ಛತೆಗೆ ಆದ್ಯತೆ ಹಾಗೂ ಮುಖ್ಯವಾಗಿ ಒತ್ತಾಯ ಪೂರ್ವಕವಾಗಿ ಕರುನಾಡ ಕರಾವಳಿಯ ಸಂಪರ್ಕದ ರೈಲುಗಳನ್ನ ಇನ್ಯಾರದ್ದೋ ಮನೆ ಉದ್ಧರಿಸಲು ವಿಸ್ತರಿಸದಿದ್ದರೆ ಸಾಕೇ ಸಾಕು. ಸಾದ್ಯವಾದರೆ ಆದ್ಯತೆ ಮೇಲೆ ಉಡುಪಿಯಿಂದ ಮಣಿಪಾಲ-ಹಿರಿಯಡ್ಕ-ಕಾರ್ಕಳ-ಮೂಡುಬಿದಿರೆ-ಬಿ ಸಿ ರಸ್ತೆ-ಮಂಗಳೂರು-ಪಡುಬಿದಿರೆ-ಮುಲ್ಕಿ-ಕಾಪು ಮಾರ್ಗವಾಗಿ ವರ್ತುಲ ಮೆಟ್ರೋ ರೈಲು ಯೋಜನೆಯನ್ನ ಕೈಗೊಳ್ಳಬಹುದು. ಕೊಚ್ಚಿನ್ - ಎರ್ನಾಕುಲಂ - ತಿರುವನಂತಪುರ ಮಾರ್ಗದಲ್ಲಿ ಇದು ಇಂದು ಸಾಕಾರವಾಗಿದೆ. ಅಲ್ಲಿ ಇದು ಸಾಧ್ಯವಾಗಬಹುದಾದರೆ ಅಲ್ಲಿನಷ್ಟೆ ವಿಸ್ತಾರ ಹಾಗೂ ಜನ ಸಂಖ್ಯೆ ಹೊಂದಿರುವ ಕರುನಾಡ ಕರಾವಳಿಗೂ ಈ ಸೌಲಭ್ಯ ಕಲ್ಪಿಸಿಕೊಡುವುದರಲ್ಲಿ ತಪ್ಪೇನೂ ಇಲ್ಲ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಇರುವ ಸಾಮಾನ್ಯ ರೈಲ್ವೆ ಮಾರ್ಗದಲ್ಲಿಯೇ ವರ್ತುಲ ರೈಲುಗಳನ್ನ ಜನ ಸಾಮಾನ್ಯರ ಹಿತಾನುಕೂಲಕ್ಕೆ ಓಡಿಸಬಹುದು. ಬಹುತೇಕ ದುಡಿಯುವ ವರ್ಗದ ಬಡವರೆ ವಾಸಿಸುವ ಡಿ ವಿ ಸದಾನಂದಗೌಡರು ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದ ವಲಸಿಗ ಕೂಲಿಗಳಿಗೆ ಇದರಿಂದ ಅಪಾರ ಲಾಭವಾಗುವುದಂತೂ ಖಂಡಿತ. ಇದಕ್ಕಾಗಿ ಯಾವುದೇ ಭೂಮಿಯನ್ನ ಹೊಸತಾಗಿ ವಶ ಪಡಿಸಿಕೊಳ್ಲಬೇಕಾಗಿಲ್ಲ. ಕೆಲವೆ ಲಕ್ಷಗಳನ್ನ ವ್ಯಯಿಸಿ ನಗರದೊಳಗೆ ವ್ಯಾಪಿಸಿರುವ ರೈಲ್ವೇ ಜಾಲ ಸಾಗುವ ಬಡಾವಣೆಗಳಲ್ಲಿ ಒಂದೊಂದು ಏರುಗಟ್ಟೆಗಳನ್ನ ನಿರ್ಮಿಸಿದರೆ ಸಾಕೇ ಸಾಕು. ರೈಲ್ವೇ ಸಚಿವರು ಈ ಬಗ್ಗೆ ಯೋಚಿಸಲಿ. ರಾಜ್ಯ ಸರಕಾರವೂ ಈ ಬಗ್ಗೆ ವಿಶಾಲ ಮನಸ್ಸಿನ ಸಹಕಾರ ನೀಡಲಿ.

ಇನ್ನು ಮರೀಚಿಕೆಯೆ ಆಗಿರುವ ರೈಲುಬಂಡಿಗಳ ಸ್ವಚ್ಛತೆ. ಎರಡನೆ ದರ್ಜೆಯ ಕಾಯ್ದಿರಿಸಿದ ಬೋಗಿಗಳಂತೂ ಬೆವರು, ಅಲ್ಲಿ ಮಲಗಿ ಎದ್ದು ಬರುವವರ ಮೈ ಮುಖದ ಜಿಡ್ಡಿನಿಂದ ಹೇಸುಗೆಟ್ಟು ನಾರುತ್ತವೆ. ರೈಲ್ವೆಯಲ್ಲಿ ಹೊರಗುತ್ತಿಗೆಯ ಪ್ರಸ್ತಾಪ ಈ ಸರಕಾರಕ್ಕೆ ಇದ್ದಂತಿದೆ. ಅದನ್ನ ಬಂಡಿಗಳ ಸ್ವಚ್ಛತೆಯ ಹೊರಗುತ್ತಿಗೆಯನ್ನ ಖಾಸಗಿಯವರಿಗೆ ವಹಿಸಿ ಕೊಟ್ಟು ಕೆಲವು ಖಡ್ಡಾಯದ ಮಾನದಂಡಗಳನ್ನ ಅವರ ಮೇಲೆ ಹೇರಿದರೆ ಈ ಕೊಳಚೆ ಬೋಗಿಗಳ ಒತ್ತಾಯದ ಶಿಕ್ಷೆ ರೂಪದ ಪಯಣದಿಂದ ಪಯಣಿಗರನ್ನ ಪಾರು ಮಾಡಿ ರೈಲ್ವೆ ಪಯಣವನ್ನೂ ಆಹ್ಲಾದ ಅನುಭವವಾಗಿಸಲಿಕ್ಕೆ ಖಂಡಿತಾ ಸಾಧ್ಯವಿದೆ. ನಗು ಮೊಗದ ಡಿ ವಿ ಸದಾನಂದಗೌಡರು ಕೇವಲ ನಗುವಿನಿಂದಲೇ ನಮ್ಮೆಲ್ಲರ ಹೊಟ್ಟೆ ತುಂಬಿಸದೆ ಕಟಿಬದ್ಧರಾಗಿ ಕರುನಾಡ ಹಿತ ಕಾಯಲಿ. ಮೊದಲಿನಿಂದಲೂ ಪರಿಚಿತರಾದ ಅವರಿಗೆ ಚುನಾವಣೆಯ ಗೆಲುವಿನ ನಂತರ ಹಾಗೂ ಇಲಾಖೆಯ ಅಧಿಕಾರ ಗ್ರಹಣದ ನಂತರವೂ ನಾನು ಒಬ್ಬ ಕನ್ನಡಿಗನಾಗಿ ಅಭಿನಂದನೆಯ ಶುಭ ಸಂದೇಶಗಳೊಂದಿಗೆ ಅರುಹಿದ್ದೂ ಸಹ ಇದನ್ನೆ.