Thursday, October 31, 2013

ಧೀಮಂತನೊಬ್ಬನ ಕರಗದ ಉಕ್ಕಿನಂತಹ ನೆನಪಿನಲ್ಲಿ.....


ದೇಶದ ಸ್ವಾತಂತ್ರೋತ್ತರ ಇತಿಹಾಸದಲ್ಲಿ ವ್ಯವಸ್ಥಿತವಾಗಿ ಮೂಲೆಗೆ ಒತ್ತಲ್ಪಟ್ಟ ಮುತ್ಸದ್ಧಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಇವತ್ತು. ಕೋಮುವಾದಿ ಹಾಗೂ ಜಾತ್ಯತೀತವಾದಿ ವಾದದ ವಿಕೃತ ವಿಶ್ಲೇಷಣೆ ಹದ ಮೀರಿದ ಧಾಟಿಯಲ್ಲಿ ಕಂಡಕಂಡ 'ಲಲ್ಲು ಪಂಜು' "ಪಪ್ಪು"ಗಳ ಮೂಲಮಂತ್ರವಾಗಿ ಎಗ್ಗುಸಿಗ್ಗಿಲ್ಲದೆ ಎಲುಬಿಲ್ಲದ ನಾಲಗೆಯ ಮೇಲೆ ಹರಿದಾಡುತ್ತಿರುವಾಗ ಸರ್ದಾರ್ ಪಟೇಲರ ನೆನಪಿನ ಈ ದಿನ ಅವರು ಆಕಾಶವಾಣಿಯಲ್ಲಿ ಭಾರತದ ಗೃಹಮಂತ್ರಿಯಾಗಿ ನೀಡಿದ್ದ ಈ ಭಾಷಣ ಅರ್ಥಪೂರ್ಣ.


ನವ ಸಾಕ್ಷರ ಮುಸ್ಲಿಂ ಮತೀಯವಾದಿ ಶ್ರೀಮಂತರನ್ನೆ ಒಳಗೊಂಡಿದ್ದ "ಶಿಮ್ಲಾ ಡೆಪ್ಯುಟೇಶನ್" ೧೯೦೬ರಲ್ಲಿ ಮಿಂಟೋ ಮಾರ್ಲೆ ಆಯೋಗದ ಮುಂದೆ ಸ್ವತಃ ಬ್ರಿಟಿಷ್ ಆಳರಸರ ಕುಮ್ಮಕ್ಕಿನಿಂದ ಮನವಿ ಸಲ್ಲಿಸಿ ಕಟ್ಟಿಕೊಂಡಿದ್ದ "ಮುಸ್ಲಿಂ ಲೀಗ್" ಒಂದು ಕ್ರಿಯೆಯಾಗಿದ್ದರೆ, ಈ ಕೋಮುವಾದದ ವಿರುದ್ಧ ಸೆಟೆದು ನಿಂತ ಹಿಂದೂಗಳ ಪ್ರತಿಕ್ರಿಯೆ ೧೯೨೫ರಲ್ಲಿ ಆರಂಭವಾದ "ರಾಷ್ಟ್ರೀಯ ಸ್ವಯಂ ಸೇವಕ ಸಂಘ" ಎನ್ನುವುದು ಇತಿಹಾಸದ ಕಟು ವಾಸ್ತವ. ಆದರೆ ಆರ್'ಎಸ್'ಎಸ್ ಸಂಘಟನೆಗೆ ಕೋಮುವಾದದ ಮೊಹರು ಒತ್ತುವ ನಮ್ಮ ನಡುವಿನ ಅತಿಬುದ್ಧಿವಂತರು ಮುಸ್ಲಿಂ ಲೀಗ್'ನ ಕುತಂತ್ರದಿಂದಾದ ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರೋತ್ತರ ಭಾನಗಡಿಗಳು, ಕೆಲವೆ ಸಿರಿವಂತ ಮುಸಲ್ಮಾನರ ಅಧಿಕಾರದ ತೆವಲಿಗಾಗಿ ಹುಟ್ಟಿಕೊಂಡ ಲೀಗಿನ ಅಂತಿಮ ಫಲಶ್ರುತಿ ಪಾಕಿಸ್ತಾನದ ದೆಸೆಯಿಂದ ಭಾರತೀಯನಾಗಿಯೆ ಉಳಿದ ಉಪಖಂಡದ ಬಡ ಮುಸಲ್ಮಾನರ ಸಾಮಾಜಿಕ ಸ್ಥಿತಿ ಹದಗೆಟ್ಟದ್ದನ್ನ ಸುಖವಾಗಿ ಮರೆಯುತ್ತಾರೆ ಹಾಗೂ ದೊಡ್ಡ ದೊಂಡೆಯಿಂದ ಬೊಬ್ಬಿಟ್ಟು ಅದನ್ನ ವಿಷದಪಡಿಸಲು ಹೊರಟವರ ಧ್ವನಿಯನ್ನ ಹೂತು ಹಾಕುತ್ತಾರೆ. ಅಂತಹ ಹೊತ್ತಲ್ಲಿಯೆ ಪಟೇಲರು ಪ್ರಸ್ತುತವಾಗುವುದು.


ಸ್ವತಂತ್ರ ಭಾರತದ ವಿಭಜನೆಯ ನಂತರ ಅಳಿದುಳಿದ ಪಾಳೆಪಟ್ಟುಗಳನ್ನ ಒಗ್ಗೂಡಿಸಲಿಕ್ಕೆ ಸಾಮ-ದಾನ-ದಂಡೋಪಾಯದಿಂದ ಶ್ರಮಿಸಿದ ಧೀಮಂತ ಪಟೇಲರಿಲ್ಲದಿದ್ದರೆ ಗಾಂಧಿ ಪಳೆಯುಳಿಕೆಯನ್ನ ಹೆಸರಿನ ಮುಂದೆ ಹೊತ್ತ ನೆಹರೂವಿನ ವಂಶಪಾರಂಪರ್ಯದ ನವ ಪಾಳೆಗಾರರಾದ ಹೀನಾತಿಹೀನ ಸಂತಾನಗಳಿಗೆ ಆಳಿ-ದೋಚಿ-ನುಂಗಿ ನೊಣೆಯಲಿಕ್ಕೆ ಇಷ್ಟು ವಿಶಾಲ ದೇಶ ಖಂಡಿತಾ ಸಿಕ್ಕುತ್ತಿರಲಿಲ್ಲ! ಅತಾರ್ಕಿಕವಾಗಿ ಪಾಕಿಸ್ತಾನದ ಭಾಗವಾಗುವ ಉಮೇದನ್ನ ಪ್ರಕಟಿಸಿದ ಹೈದರಾಬಾದಿನ ನಿಜಾಮ, ಕಡೆಯ ಕ್ಷಣದಲ್ಲಿ ಮಹಮದಾಲಿ ಜಿನ್ನಾರ ಮೋಹಕ ಮಾತುಗಳಿಗೆ ಮರುಳಾಗಿ ಪಾಕಿಸ್ತಾನ ಸೇರ ಬಯಸಿದ ಬಿಕಾನೇರ್ ಹಾಗೂ ಜೋಧಪುರದ ರಾಜಪೂತ ದೊರೆಗಳು, ತನ್ನ ದೇಶ ಪಾಕಿಸ್ತಾನವೆಂದು ಬಗೆದು ಕಡೆಗೆ ಅಲ್ಲಿಗೆ ಓಡಿಹೋದ ಜುನಾಘಡದ ನವಾಬನ ಸಂಸ್ಥಾನವನ್ನ ಭಾರತದೊಳಗೆ ವಿಲೀನಗೊಳಿಸಲು ಪಟೇಲರ ಕಠಿಣ ನಿಲುವಿಲ್ಲದಿದ್ದರೆ, ಅವರ ಸೇನಾನಿ ವಿ ಪಿ ಮೆನನ್ನರ ಬೆದರಿಕೆಯ ರಾಯಭಾರವಿಲ್ಲದಿದ್ದರೆ ಖಂಡಿತ ಶೋಕಿಲಾಲ ನೆಹರುವಿನ ಕೈಯಲ್ಲಂತೂ ತಿಪ್ಪರಲಾಗ ಹಾಕಿದರೂ ಈ ಐಕ್ಯತೆಯ ವಿಲೀನ ಸಾಧ್ಯವಾಗುತ್ತಿರಲಿಲ್ಲ. ತಾನೆ ನೇರ ವ್ಯವಹರಿಸಲು ಹೋಗಿ ಕಾಶ್ಮೀರವನ್ನ ನೆಹರೂ ಎಂಬ ಸೊಕ್ಕಿನ ಮೂರ್ಖ ಇಂದು ತಂದು ನಿಲ್ಲಿಸಿದ ಸ್ಥಿತಿಯ ಉದಾಹರಣೆ ನಮ್ಮ ಕಣ್ಣ ಮುಂದೆಯೆ ಇದೆ.


ಹೌದು, ಗಾಂಧಿಜಿ ಹತ್ಯೆಯ ನಂತರ ಆರ್'ಎಸ್'ಎಸ್ ವಿರುದ್ಧ ಪಟೇಲರು ಕಠಿಣ ನಿರ್ಧಾರ ಪ್ರಕಟಿಸಿ ನಿಷೇಧ ಹೇರಿದ್ದರು. ಆದರೆ ಅದೇ ಪಟೇಲರು ಗುರೂಜಿಯವರಿಂದ "ಕೇವಲ ಸಾಂಸ್ಕೃತಿಕ ಸಂಘಟನೆಯಾಗಿ ಉಳಿಯುತ್ತೇವೆ, ರಾಜಕೀಯವಾಗಿ ಸಕ್ರಿಯರಾಗುವುದಿಲ್ಲ" ಎನ್ನುವ ಲಿಖಿತ ಭರವಸೆ ಪಡೆದು ಆ ನಿಷೇಧವನ್ನ ತೆರವುಗೊಳಿಸಿದ್ದೂ ಕೂಡ ಅಷ್ಟೆ ಸತ್ಯ. ಆದರೆ ಕೊಟ್ಟ ಮಾತಿಗೆ ಆರಂಭದಲ್ಲಿ ಬದ್ಧತೆ ತೋರಿದ ಸಂಘ ಆಮೇಲಾಮೇಲೆ ಈ ಮಾತಿಗೆ ಕಟ್ಟು ಬೀಳದೆ ಸರದಾರರಿಗೆ ಕೊಟ್ಟ ಮಾತಿಗೆ ತಪ್ಪಿ ನಡೆದು ರಾಜಕೀಯವಾಗಿಯೂ ಸಕ್ರಿಯವಾಗುತ್ತಿರುವ ವ್ಯಂಗ್ಯವೂ ಘಟಿಸುತ್ತಿದೆ. ಅದನ್ನ ಆದರ್ಶದ ಬೊಗಳೆ ಹೊಡೆಯುವ ಆರ್'ಎಸ್'ಎಸ್ ಮುಖಂಡರ ವರ್ತನೆಯಲ್ಲಿ ನಾವೆಲ್ಲಾ ಇಂದು ಕಣ್ಣಾರೆ ಕಾಣುತ್ತಿದ್ದೇವೆ. ಒಂದು ವೇಳೆ ೧೯೦೬ರ ನಂತರದ ದಿನಗಳಲ್ಲಿ ಭಾರತ ಸ್ವತಂತ್ರವಾಗಿದ್ದು ಅಗಲೂ ಸ್ವತಂತ್ರೋತ್ತರ ಕಾಲದಲ್ಲಿದ್ದಂತೆ ಪಟೇಲರಿಗೆ ಗೃಹಮಂತ್ರಿಯಾಗಿ ಅಷ್ಟೆ ಅಧಿಕಾರವಿರುತ್ತಿದ್ದರೆ ಆವರು ಇದೇ ನೀತಿಯನ್ವಯ "ಮುಸ್ಲಿಂ ಲೀಗ್"ನ ನಡುವನ್ನೂ ಕೂಡ ಮುರಿಯುತ್ತಿದ್ದುದು ನಿಸ್ಸಂಶಯ! ಹಾಗೇನಾದರೂ ಆಗಿರುತ್ತಿದ್ದರೆ ದೇಶ ವಿಭಜನೆಯೆ ಆಗುತ್ತಿರಲಿಲ್ಲ. ತಮಾಷೆಯೆಂದರೆ ಒಂದಾನೊಂದು ಕಾಲದಲ್ಲಿ ಅವರಿಂದ ನಿಷೇಧದ ಬರೆ ಎಳೆಸಿಕೊಂಡಿದ್ದ ಬಿಜೆಪಿಯ ಮಂದಿ ಇಂದು ರಾಜಕೀಯ ಲಾಭಕ್ಕಾಗಿ ಅದೇ ಕಾಂಗ್ರೆಸ್ಸಿಗ ಪಟೇಲರ ಹೆಸರನ್ನ ಸ್ವಾಭಿಮಾನದ ಸಂಕೇತ ಅನ್ನುವ ಹೆಸರಿನಲ್ಲಿ ಬಳಸಿಕೊಳ್ಳುತ್ತಿದ್ದರೆ, ಅವರನ್ನ ಮೂಲೆಗುಂಪು ಮಾಡಿದ್ದ ಅವರದ್ದೆ ಪಕ್ಷದವರು ಈಗ ಆಗಿರುವ ಪ್ರಮಾದಕ್ಕಾಗಿ "ಕೈ" ಹಿಸುಕಿಕೊಳ್ಳುತ್ತಿದ್ದಾರೆ!


ಪಟೇಲರನ್ನ ನೆಹರೂವಿಂದ ಆರಂಭಿಸಿ ಎಲ್ಲಾ ನೆಹರೂ ಕುಟುಂಬದ ಬಾಲಬುಡುಕರು "ಕೋಮುವಾದಿ" ಹಣೆಪಟ್ಟಿ ಕಟ್ಟಲಿಕ್ಕೆ ಹವಣಿಸಿದಕ್ಕೆ ಸಾಕಷ್ಟು ಪುರಾವೆಗಳಿವೆ. ಸೋಮನಾಥ ದೇವಾಲಯದ ಮರು ನಿರ್ಮಾಣವೆ ಅದಕ್ಕೆ ಉತ್ತಮ ಉದಾಹರಣೆ. ಸ್ವಾತಂತ್ರೋತ್ತರ ಭಾರತದಲ್ಲಿ ಮುಸ್ಲಿಂ ಧಾಳಿಕೋರರಿಂದ ಭಗ್ನವಾಗಿದ್ದ ಸೋಮನಾಥವನ್ನ ಪುನರುತ್ಥಾನಗೊಳಿಸಲಿಕ್ಕೆ ಸರದಾರರು ಉಧ್ಯುಕ್ತವಾದಾಗ ಮೊದಲ ಪ್ರಬಲ ಆಕ್ಷೇಪ ಬಂದದ್ದೆ ನೆಹರೂವಿನಿಂದ! ಅದರಿಂದ ಮುಸ್ಲೀಮರ ಭಾವನೆಗೆ ಧಕ್ಕೆಯಾಗಲಿಕ್ಕಿದೆ ಅನ್ನುವ ಹಾಸ್ಯಾಸ್ಪದ ವಾದ ಹೊತ್ತ ಈ ಆಕ್ಷೇಪಕ್ಕೆ ಚಿಕ್ಕಾಸಿನ ಬೆಲೆಯನ್ನೂ ಕೊಡದ ಪಟೇಲರು ತಮ್ಮ ವಿವೇಚನಾಧಿಕಾಅರ ಬಳಸಿ ಈ ಕಾರ್ಯವನ್ನ ದಾಖಲೆ ಅವಧಿಯಲ್ಲಿ ಮಾಡಿ ಮುಗಿಸಿದರು. ನೆಹರೂ ಹೇಳಿದಂತೆ ಯಾವೊಬ್ಬ ಮುಸ್ಲೀಮರ ಭಾವನೆಗೂ ಇದರಿಂದ ಧಕ್ಕೆಯಾದದ್ದು, ಅದರ ಪರಿಣಾಮವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ದೇಶದ ಯಾವ ಮೂಲೆಯಿಂದಲೂ ವರದಿಯಾದದ್ದು ನಮ್ಮ ಇತಿಹಾಸದಲ್ಲಂತೂ ದಾಖಲಾಗಿಲ್ಲ!


ಅಷ್ಟಕ್ಕೂ ದಕ್ಷಿಣ ಹಾಗೂ ಉತ್ತರ ಭಾರತದ ನಡುವೆ ಇರುವಷ್ಟು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂತರ ಪಾಕಿಸ್ತಾನ ಹಾಗೂ ಉತ್ತರ ಭಾರತದ ನಡುವೆ ಇಲ್ಲ! ಧರ್ಮವೆ ದ್ವೇಷದ ಬುನಾದಿ ಅನ್ನುವುದು ಹಾಸ್ಯಾಸ್ಪದ. ಅದರಲ್ಲೂ ನಮ್ಮ ದೇಶದ ಸಾಂಸ್ಕೃತಿಕ ಔನತ್ಯವನ್ನ ಮತ್ತೆ ಎತ್ತಿ ಹಿಡಿದರೆ ನಮ್ಮ ನಾಡಿನ ಪ್ರಜೆಗಳೆ ಆಗಿರುವ ಮುಸಲ್ಮಾನರೇಕೆ ಕೆರಳುತ್ತಾರೆ? ಅದು ನಿಜವೆ ಆಗಿದ್ದರೆ ವೆನೆಜುವೆಲಾ ಹಾಗೂ ಕ್ಯೂಬಾದ ಮೇಲೆ ಅಮೇರಿಕಾ ಮುರಿದುಕೊಂಡು ಬೀಳುತ್ತಿರಲಿಲ್ಲ, ಇರಾನ್ ಹಾಗೂ ಇರಾಕ್ ಹುಟ್ಟಾ ವೈರಿಗಳಂತೆ ದಶಕಗಳ ಕಾಲ ಕತ್ತಿ ಕೊಡಲಿ ಹಿಡಿದು ಕಾದಾಡುತ್ತಿರಲಿಲ್ಲ, ತನ್ನ ಕುಖ್ಯಾತ ಗುಪ್ತಚರ ಸಂಸ್ಥೆಯ ಪಾಶವಿ ಕೃತ್ಯಗಳಿಂದ ಪಾಕಿಸ್ತಾನ ಅಫಘನಿಸ್ತಾನದ ವರ್ತಮಾನದ ಬಾಳನ್ನ ನರಕ ಮಾಡಿ ವಿಕೃತ ನಗೆಬೀರುತ್ತಿರಲಿಲ್ಲ ಅನ್ನುವ ಸಾಮಾನ್ಯ ಜ್ಞಾನ ನಮಗಿದ್ದಾರೆ ಸಾಕು. ಇದೆ ನೆಹರೂ ಪ್ರಣೀತ ಕಾಂಗ್ರೆಸ್ ಬಾಲಬುಡುಕರ ಹಾಗೂ ವಾಸ್ತವವಾದಿ ದೇಶ ಪ್ರೇಮಿಗಳ ನಡುವಿನ ವ್ಯತ್ಯಾಸ.


ಕಡೆಯದಾಗಿ ಇನ್ನೊಂದು ಘಟನೆ ಇಲ್ಲಿ ಪ್ರಸ್ತುತ. ಪಟೇಲರನ್ನ ಯಾವ ಮಟ್ಟಕ್ಕೆ ನೆಹರೂ ಎಂಬ ಅಲ್ಪ ದ್ವೇಷಿಸುತ್ತಿದ್ದ ಎನ್ನುವುದಕ್ಕೆ ಇಲ್ಲಿ ಪುರಾವೆ ಸಿಗುತ್ತದೆ. ತನ್ನ ತಂದೆಯ ಮರಣದ ನಂತರ ಅಂದಿನ ಲೋಕಸಭಾ ಸದಸ್ಯೆಯಾಗಿದ್ದ ಪಟೇಲರ ಮಗಳು ಮಣಿಬೆನ್ ಎಂದಿನ ರೂಢಿಯಂತೆ ಆಹಮದಾಬಾದಿನಿಂದ ಆಗಿನ್ನೂ ಚಾಲ್ತಿಯಲ್ಲಿದ್ದ ರೈಲಿನ ಮೂರನೆ ದರ್ಜೆಯಲ್ಲಿಯೆ ಪ್ರಯಾಣಿಸಿ ದೆಹಲಿ ತಲುಪಿದರು. ಎಂದಿನಂತೆ ಒಂದು ಜೋಳಿಗೆ ಮಾತ್ರ ಆಕೆಯ ಬಗಲಿನಲ್ಲಿತ್ತು ಹಾಗೂ ಅದರಲ್ಲಿ ಒಂದು ನೋಟು ಪುಸ್ತಕ ಹಾಗು ಮೂವತ್ತು ಸಾವಿರ ರೂಪಾಯಿಯ ನೋಟುಗಳು ಇದ್ದವು! ಅದು ಪಕ್ಷಕ್ಕಾಗಿ ಪಟೇಲರು ಸಂಗ್ರಹಿಸಿದ್ದ ನಿಧಿ ಹಾಗೂ ಅದರ ವಿವರ ಬರೆದಿದ್ದ ಪುಸ್ತಕ. ಅದನ್ನ ಅಂದಿನ ಪ್ರಧಾನಿ ನೆಹರೂಗೆ ದಾಟಿಸಲಿಕ್ಕೆ ಮಣಿಬೆನ್ ಸಮಯ ಕೇಳಿದರು. ಪ್ರಧಾನಿ ಗೃಹ ಕಛೇರಿಯಲ್ಲಿ ಅವರಿಗೆ ಹತ್ತು ನಿಮಿಷಗಳ ಭೇಟಿಯ ಆವಧಿಯೂ ಸಿಕ್ಕಿತು. ಆ ಕಿರು ಆವಧಿಯ ಭೇಟಿಗೆ ಸ್ವತಃ ಲೋಕಸಭಾ ಸದಸ್ಯೆ ಹಾಗೂ ಮಾಜಿ ಉಪ ಪ್ರಧಾನಿಯ ಮಗಳಾಗಿದ್ದರೂ ಮಣಿಬೆನ್'ರನ್ನ ಭಂಡ ನೆಹರೂ ಬೇಕಂತಲೆ ಎರಡು ಘಂಟೆ ಕಾಯಿಸಿದರು! ಹೇಳಿದ ಹೊತ್ತಿಗೆ ಹಾಜರಿದ್ದ ಮಣಿಬೆನ್ ಬಿಗಿದ ಮುಖ ಚೆಹರೆಯ ನೆಹರು ಕೈಗೆ ಆ ನಿಧಿ ಹಾಗೂ ವಿವರಗಳಿದ್ದ ಪುಸ್ತಕ ಒಪ್ಪಿಸಿ ತನ್ನ ಅಪ್ಪ ವಹಿಸಿದ್ದ ಕೊನೆಯ ಕಾರ್ಯಭಾರವನ್ನ ಚಾಚೂ ತಪ್ಪದೆ ನಿರ್ವಹಿಸಿ ಪಿತೃಋಣದಿಂದ ಮುಕ್ತರಾದರು.


ಕನಿಷ್ಟ ಸೌಜನ್ಯಕ್ಕೂ ಅವಿವಾಹಿತೆ ಹಾಗೂ ಒಂಟಿ ಜೀವಿಯಾಗಿದ್ದ ಆಕೆಯ ಮುಂದಿನ ಬಾಳಿನ ವ್ಯವಸ್ಥೆಯ ಕಾಳಜಿ ವ್ಯಕ್ತ ಪಡಿಸದ ನೆಹರೂ ಆಕೆಯ ಮುಂದಿನ ಬಾಳಿನ ಅಗತ್ಯಗಳ ಬಗ್ಗೆ ವಿಚಾರಿಸಿಕೊಳ್ಳಲಿಲ್ಲ! ಭೇಟಿಗೆ ಬಂದಷ್ಟೆ ಶೀಘ್ರವಾಗಿ ರೇಷನ್ನಿನಂತೆ ಕೆಲವೆ ಕೆಲವು ಔಪಚಾರಿಕ ಮಾತುಗಳನ್ನಾಡಿ ಅದೆ ಬಿಗಿದ ಮುಖ ಭಾವದೊಂದಿಗೆ ಹಣದ ಥೈಲಿ ಕಸಿದುಕೊಂಡ ನಿರ್ಲಜ್ಜ ನೆಹರು ನಿರ್ಗಮಿಸಿದರು. ಆ ಕಾಲದಲ್ಲಿ ಮೂವತ್ತು ಸಾವಿರ ರೂಪಾಯಿಗಳಿಗೆ ಇದ್ದ ಬೆಲೆಯನ್ನ ಊಹಿಸಿ ಹಾಗೂ ನೆಹರೂಗೆ ಆ ಸಂಗ್ರಹಿತ ನಿಧಿಯ ಬಗ್ಗೆ ಸುಳಿವೇ ಇರಲಿಲ್ಲ ಅನ್ನುವುದನ್ನ ಜ್ಞಾಪಿಸಿಕೊಳ್ಳಿ. ದೇಶದ ಬಗ್ಗೆ ನಿಸ್ಪೃಹ ಒಲವಿದ್ದ ಮಣಿಬೆನ್'ರ ಪ್ರಾಮಾಣಿಕತೆಗೆ ಹಾಗೂ ಅವರ ತಂದೆ ಪಟೇಲರ ಧೀಮಂತಿಕೆಗೆ ಈ ದೇಶದ ಖಜಾನೆಯನ್ನೆ ನೆಕ್ಕಿ ನೊಣೆದ ನೆಹರೂ ಹಾಗೂ ಅವರ ಉತ್ತರಾಧಿಕಾಅರಿ ಹೀನಾತಿಹೀನ ಸಂತಾನಗಳ ಹಪಾಹಪಿಯೊಂದಿಗೆ ಹೋಲಿಸಿ ನೋಡಿ. ಹೊಲಸು ಹಾಗು ಒಳ್ಳೆತನದ ಹುಲುಸು ಇವುಗಳ ನಡುವಿನ ವ್ಯತ್ಯಾಸ ಖಂಡಿತ ನಿಮ್ಮ ಅರಿವಿಗೆ ಬರುತ್ತದೆ.


ಪಟೇಲರೆ ನಿಮಗೆ ನಮ್ಮ ಕೃತಜ್ಞತೆಗಳು ಖಂಡಿತಾ ಸಲ್ಲುತ್ತವೆ. ಈ ಕೃತಜ್ಞ ದೇಶ ನಿಮ್ಮನ್ನ ಮರೆತಿಲ್ಲ ಸ್ವಾಮಿ.


http://www.youtube.com/watch?v=QLAbNqKKxY0

Saturday, October 26, 2013

ದಿಟ್ಟ ಧ್ವನಿಯ "ಜಟ್ಟ"ನ ವಾಸ್ತವವಾದ....






ಕನ್ನಡದ "ಚಾಕೂ ಚೂರಿ ಜಾಕಿಚಾನ್" ಚಿತ್ರ ಸಂಸ್ಕೃತಿಯನ್ನ ಚೆನ್ನಾಗಿ ಬಲ್ಲವರಿಗೆ, ಗಾಂಧಿನಗರದ ಸು"ಸಂಸ್ಕೃತ" "ಮಾತೃ"ಭಾಷೆಯ ಚಿತ್ರರತ್ನಗಳನ್ನ ಪ್ರತಿ ಶುಕ್ರವಾರ ನೋಡಿ ನೋಡಿ ಜಡ್ಡುಗಟ್ಟಿ ಹೋದವರಿಗೆ, "ನಾಲ್ಕು ಫೈಟು-ಮೂರು ರೇಪು-ಎರಡು ಐಟಂ ಸಾಂಗ್ ಐತೆ ಸಾ....." ಅಂತ ಹೊಸ ಫಾರ್ಮುಲಾ ಒಂದನ್ನ ಅಗಷ್ಟೆ ಕಂಡುಹಿಡಿದ ಮರಿ ವಿಜ್ಞಾನಿಯಂತೆ ಪ್ರತಿಯೊಂದು ಚಿತ್ರದ ಮುಹೂರ್ತದಲ್ಲೂ ಕಿಸಬಾಯಿದಾಸರ ಗೆಟಪ್ಪಿನಲ್ಲಿ ಆ ಚಿತ್ರದ ನಿರ್ದೇಶಕರು ಹಾಡಿದ್ದನ್ನೇ ಹಾಡುವುದನ್ನ ಕೇಳಿಸಿಕೊಂಡು 'ಎನ್ನ ಕಿವುಡನ ಮಾಡಯ್ಯ ತಂದೆ' ಎಂದು ಕಾಣದ ದೇವರಲ್ಲಿ ದೀನವಾಗಿ ಮೊರೆಯಿಡುವವರಿಗೆ, ಇತ್ತೀಚಿನ ರಿಮೇಕ್-ರಿಮಿಕ್ಸ್ ಶೈಲಿಯ ಹೊರಗಿನ ಹಳಸಿದ ಅನ್ನಕ್ಕೆ ಬಿಢೆಯಿಲ್ಲದೆ ಬಹಿರಂಗವಾಗಿಯೆ ಕನ್ನಡದ ಕರಿ ಬೇವಿನ ಒಗ್ಗರಣೆ ಕೊಟ್ಟ ವಿ"ಚಿತ್ರಾನ್ನ"ದಂತಹ "ಹೊಚ್ಚ ಹೊಸಾ ಕನ್ನಡ ಸಿನೆಮಾ ಸ್ಕೋಪ್" ನೋಡಿ ಹಣೆಹಣೆ ಚಚ್ಚಿಕೊಂಡು 'ತಮಗೆ ಈ ಹಾಳು ಹಣೆಯಿರುವುದೆ ತಪ್ಪಾಯಿತಲ್ಲ!' ಎಂದು ವ್ಯರ್ಥವಾಗಿ ಹಳಹಳಿಸಿ "ಲೈಫು ಇಷ್ಟೇನೆ!" ಎನ್ನುವ ಅರ್ಜೆಂಟ್ ಅಧ್ಯಾತ್ಮ ಜೀವಿಯಾಗಿ ಬಾಳಿನಲ್ಲಿ ಭರವಸೆಯನ್ನೆ ಕಳೆದುಕೊಂಡವರಿಗೆ ಬೆಚ್ಚಿ ಬೀಳಿಸುವಂತೆ ಯಾವುದೆ ಅಬ್ಬರವಿಲ್ಲದೆ ತಣ್ಣಗೆ ತೆರೆಕಂಡಿರುವ ಹೊಚ್ಚ ಹೊಸ ಅಚ್ಚರಿಯೆ ಗಿರಿರಾಜ್ ಬಿ ಎಂ ನಿರ್ದೇಶನದ ಕನ್ನಡ ಚಿತ್ರ "ಜಟ್ಟ"

ಕರ್ನಾಟಕದ ಮಲೆನಾಡಿನ ಮೂಲೆಯಲ್ಲಿರಬಹುದಾದ ಮಾದಿ ತಾಯಿಯ "ಸೀತಾ ಕಾಡು" ಎಂಬ ಕಲ್ಪಿತ ಪ್ರದೇಶದಲ್ಲಿ ಸಾಗುವ ಕಥೆಯೆ "ಜಟ್ಟ". ಸೀತಾ ಕಾಡಿನಲ್ಲಿ ಅರಣ್ಯ ಇಲಾಖೆಯ ಸಂರಕ್ಷಿತ ವನ ಸಂಪತ್ತಿದೆ, ಈ ಕಾಯ್ದಿರಿಸಿದ ಕಾಡನ್ನ ಕಾಯುವ ಅದೇ ಅರಣ್ಯ ಇಲಾಖೆಯ ದಿನಗೂಲಿ ವನ ಕಾವಲುಗಾರ ಅರ್ಥಾತ್ ಗಾರ್ಡ್ ಈ ಜಟ್ಟ. ಅವನ ಜೀವನ ಕಾಡಿನ ಇತರ ಜೀವಿಗಳಿಗಿಂತ ತೀರ ಭಿನ್ನವೇನಲ್ಲ. ಅಲ್ಲಿನ ದುರ್ಗಮ ಕಾಡಿನ ಇಂಚಿಂಚೂ ಜಟ್ಟನ ಪಾಲಿಗೆ ಸಲೀಸು. ಕಾಡಿನ 'ತಾಯಿಮರ'ದ ಬಗ್ಗೆ ವಿಶೇಷ ಅಸ್ಥೆ ವಹಿಸುವ ಜಟ್ಟನಿಗೆ ಅಂತಹದೆ ತಾಯಿಮರವೊಂದರ ಆಡಿಗೆ ಇರುವ, ಆ ಕಾಡಿನ ಮಕ್ಕಳನ್ನೆಲ್ಲ ಕಾಯುವ ತಾಯಿ ಎಂದೆ ಪ್ರತೀತಿಯಿರುವ ಮಾದಿತಾಯಿಯ ಮಹಿಮೆಯ ಬಗ್ಗೆ ವಿಪರೀತ ಭಯ ಭಕ್ತಿ. ಆಕೆಯ ಶಕ್ತಿಯ ಕಾರಣವೊಂದೆ ತಾನು ತನ್ನಂತವರ ಬದುಕಿಗಿರುವ ಭರವಸೆ ಹಾಗೂ ಭದ್ರತೆ ಎನ್ನುವ ಜಟ್ಟನ ಗಾಢ ನಂಬಿಕೆಗೆ ಇನ್ನಷ್ಟು ನೀರೆರೆಯುವುದು ಸ್ಥಳಿಯ ಹಿಂದುತ್ವವಾದಿ ಪುಢಾರಿಯ ನಯಗೊಳಿಸಿದ ಭಾರತೀಯತೆ ಹಾಗೂ ಪರಕೀಯತೆಯ ವಿತಂಡವಾದದ ಉತ್ಪ್ರೇಕ್ಷಿತ ಬೋಧನೆಗಳು. 

ಇದಕ್ಕೆ ಪೂರಕವಾಗಿ ಕಾಡಿನೊಳಗೆ ಮೋಜಿನ ಚಾರಣ ಮಾಡಲು ಬರುವ ಬೆಂಗಳೂರಿನ ಹುಡುಗ ರಾಜೇಶನ ಮೋಹದ ಮಾತುಗಳಿಗೆ ಮರುಳಾದ ಆತನ ಹೆಂಡತಿ ಗವ್ವೆನುವ ಕಾಡಿನ ಏಕಾತಾನತೆಗೆ ಬೇಸತ್ತು ಎರಡು ವರ್ಷಗಳ ಹಿಂದೆ ಅತನ ಹಿಂದೆ ಓಡಿ ಹೋಗಿರುತ್ತಾಳೆ. ಇತ್ತ ಪುಢಾರಿಯ ಬೋಢನೆ ತನ್ನ ಹಣೆಬರೆಹವೆ ಖೊಟ್ಟಿ ಎಂದು ನಂಬಿದ್ದ ಜಟ್ಟನ ಒಳಗೆ ಅಡಗಿರುವ ಗಂಡಸ್ತನವನ್ನ ಜಾಗೃತಗೊಳಿಸುತ್ತದೆ, ಹೆಂಡತಿಯಿಂದ ತನಗಾದ ಅನ್ಯಾಯದ ವಿರುದ್ದ ಪುಢಾರಿಯ ಪ್ರಚೋದಕ ಮಾತುಗಳು, ಅವರಿಂದ ಜಟ್ಟನಿಗೆ ಸಿಗುವ ದುರ್ಭೋಧನೆ ಅವನ ಪುರುಷಾಹಂಕಾರವನ್ನ ಬಡಿದೆಬ್ಬಿಸುತ್ತದೆ. ಆದೇ ಕಾಲಕ್ಕೆ ಜಟ್ಟನ ಬಗ್ಗೆ ಕಾಳಜಿಯಿರುವ ಅವನ ಕಾಡಿನ ರೇಂಜರರ ವೈವಾಹಿಕ ಬಾಳಿನಲ್ಲಿ ಆಗುವ ಏರುಪೇರು ಇವೆಲ್ಲಾ ಸೇರಿ ಅವನಲ್ಲಿ ತನಗೆ ಅರಿವಿಲ್ಲದೆ ಒಂದು ದ್ವೇಷದ ಕಿಚ್ಚು ಹುಟ್ಟುತ್ತದೆ. ಆದರೆ ಅದಕ್ಕೆ ಬಲಿಯಾಗುವವಳು ಮಾತ್ರ ಸಮೀಪದ ಊರಿಗೆ ಪುರೋಗಾಮಿತನದ ವಿರುದ್ಧ ನಡೆಯುವ ವಿಚಾರ ಸಂಕೀರಣದಲ್ಲಿ ಭಾಗವಹಿಸಲಿಕ್ಕೆ ಬರುವ ಸ್ತ್ರೀವಾದಿ ತರುಣಿ. 

ಕುಡಿತದ ಅಮಲಿನಲ್ಲಿ ಅಫಘಾತಕ್ಕೀಡಾಗುವ ಅವಳ ಕಾರಿನಿಂದ ಮನೆಗೆ ಮರಳುವ ಹಾದಿಯಲ್ಲಿದ್ದ ದ್ವೇಷ ತಪ್ತ ಜಟ್ಟನ ಕೈಗವಳು ಸಿಕ್ಕಿಬೀಳುತ್ತಾಲೆ. ಆಗ ಅವಳಿರುವ ಪರಿಸ್ಥಿತಿ ಹಾಗೂ ಅವಳ ಅಸ್ತವ್ಯಸ್ತ ತುಂಡುಡುಗೆ ಜಟ್ಟನ ಸಂಸ್ಕೃತಿಯ ಜಿಜ್ಞಾಸೆಯ ಕಿಚ್ಚಿಗೆ ತುಪ್ಪ ಸುರಿಯುತ್ತದೆ. ಅವಳ ಮೂಲಕ ನೈತಿಕವಾಗಿ ಹಾದಿ ತಪ್ಪಿದ ಸಮಸ್ತ ಸ್ತ್ರೀ ಕುಲಕ್ಕೇ ಬುದ್ಧಿ ಕಲಿಸುವ ನಿರ್ಧಾರಕ್ಕೆ ಬರುವ ಜಟ್ಟ ಅರೆಪ್ರಜ್ಞಾವಸ್ಥೆಯಲ್ಲಿರುವ ಆಕೆಯನ್ನ ತನ್ನ ಬಿಡಾರಕ್ಕೆ ಹೊತ್ತೊಯ್ಯುತ್ತಾನೆ. ಪುಢಾರಿಯ ಬೋಧನೆಯ ಅನುಸಾರ ಅಲ್ಲಿ ಕಾಡು ಪ್ರಾಣಿಯನ್ನ ಪಳಗಿಸುವಾಗ ಮಾಡುವಂತೆ ಆಕೆಯನ್ನ ಸರಪಳಿಯಲ್ಲಿ ಬಂಧಿಸಿಟ್ಟು ಹಿಂಸೆಯ ಹಾದಿಯಲ್ಲಿಯೆ ಪಳಗಿಸುವ ವ್ಯರ್ಥ ಪ್ರಯತ್ನಕ್ಕಿಳಿಯುತ್ತಾನೆ ನವ ಸಂಸ್ಕೃತಿಯ ಸೈನಿಕ ಜಟ್ಟ.

ಅದರಲ್ಲಿ ಆತನಿಗೆ ಸಾಫಲ್ಯ ಸಿಕ್ಕಿತಾ? ಆವ ಅಂದುಕೊಂಡ ಹಾಗೆ ಅಕೆಯನ್ನ ಪಳಗಿಸಿ ಸಮಸ್ತ(?) ಸ್ತ್ರೀ ಕುಲದ ಕುಲಟ ಸ್ವಭಾವದ ಮೇಲೆ ಹಿಡಿತ ಸಾಧಿಸಿದನ? ಪ್ರಾತಿನಿಧಿಕವಾಗಿಯಾದರೂ ಅವಳನ್ನ ಭಾರತೀಯ ಸಂಸ್ಕೃತಿಯ ತಗ್ಗಿ ಬಗ್ಗಿ ನಡೆಯುವ ವಿಧೇಯ ಹೆಣ್ಣಾಗಿ ಪರಿವರ್ತಿಸಲು ಆವನಿಗೆ ಸಾಧ್ಯವಾಯಿತ? ಎನ್ನುವ ಕುತೂಹಲಗಳನ್ನೆಲ್ಲಾ ಆಸಕ್ತರು ಚಿತ್ರಮಂದಿರಕ್ಕೆ ಹೋಗಿಯೇ ತಣಿಸಿಕೊಳ್ಳುವುದು ಸೂಕ್ತ ಎನ್ನುವುದು ನನ್ನ ಅನಿಸಿಕೆ. ಅವರು ಕೊಡುವ ಕಾಸಿನ ಕೊನೆಯ ಪೈಸಕ್ಕೂ ಮೋಸವಾಗದಂತೆ ಗಿರಿರಾಜ್ "ಜಟ್ಟ"ವನ್ನ ಒಂದು ಗಾಢ ವಿಷಾದದ ಅನುಭವವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪರಿಕಲ್ಪನೆಯ ಮೂಸೆಯಲ್ಲಿ ಜಟ್ಟನಾಗಿ ಕಿಶೋರ್, ಜಟ್ಟನ ಓಡಿಹೋದ ಹೆಂಡತಿಯಾಗಿ ಪಾವನಿ, ಜಟ್ಟನ ಖೆಡ್ಡಾದಲ್ಲಿ ಬೀಳುವ ಹೆಣ್ಣಾಗಿ ಸುಕೃತಾ ವಾಗ್ಳೆ, ಜಟ್ಟನ ತಲೆ ತೊಳೆಯುವ ಪುರೋಗಾಮಿ ಸಂಘಟನೆಯ ನೇತಾರರಾಗಿ ಬಿ ಸುರೇಶಣ್ಣ, ಮಾದಿತಾಯಿಯ ಪೂಜಾರಿಯಾಗಿ ಆರಾಧ್ಯ, ಮಾದಿತಾಯಿಯಷ್ಟೆ ಜಟ್ಟನ ಭಕ್ತಿಗೆ ಪಾತ್ರವಾದ ರೇಂಜರ್ ಪಾತ್ರದಲ್ಲಿ ಪ್ರೇಮ್ ಕುಮಾರ್ ಹಾಗೂ ಅವರ ಇನ್ನೊಬ್ಬ ಗಾರ್ಡ್ ಆಗಿ ರಂಗಪ್ರತಿಭೆ ಕಿರಣ್ ಪರಕಾಯ ಪ್ರವೇಶ ಮಾಡಿದವರಂತೆ ನಟಿಸಿದ್ದಾರೆ.

ಒಬ್ಬ ಕಾಡು ಜೀವಿಯಂತೆಯೆ ಬಾಳುವ ಜಟ್ಟನ ಭಾವ ಭಂಗಿ, ಕರೆದಾಗ ನೆಟ್ಟಗೆ ಓಡಿ ಬರುವ ಶೈಲಿ, ಹೆಚ್ಚು ಭಾವ ವಿಕಾರ ಪ್ರಜ್ಞೆಯಿಲ್ಲದ ಮುಖಭಾವದಲ್ಲಿ ಕಿಶೋರ್ ತಮ್ಮ ಸಾಮರ್ಥ್ಯವನ್ನೆಲ್ಲ ಒರೆಗೆ ಹಚ್ಚಿದಂತೆ ನಟಿಸಿದ್ದಾರೆ. ಈಗಾಗಲೆ "ಹುಲಿ"ಯಂತಹ ಅಪ್ಪಟ ವ್ಯಾಪಾರಿ ಚಿತ್ರದಲ್ಲಿಯೂ ವಿಭಿನ್ನವಾಗಿ ಅಭಿನಯಿಸಿ ತೋರಿಸಿದ್ದ ಕಿಶೋರ್ ಇಲ್ಲಿಯೂ ಮಾನವ ರೂಪದ ಮೃಗವಾಗಿ, ಕಾಡಿನ ಮಾಹಿತಿ ಕೋಶದಂತಹ ವಿಸ್ಮಯವಾಗಿ ಸಹಜತೆಗೆ ಹತ್ತಿರವಾಗಿ ನಟಿಸಿದ್ದಾರೆ. ಅವರ ಅಭಿನಯಕ್ಕೆ ಪೈಪೋಟಿ ಹೆಚ್ಚು ಸಿಕ್ಕಿರುವುದು ಹಾಗೆ ನೋಡಿದರೆ ಜಟ್ಟನ ಹೆಂಡತಿ ಪಾತ್ರದಲ್ಲಿ ನಟಿಸಿರುವ ಪಾವನಿ ಹಾಗೂ ಪುರೋಗಾಮಿ ಸಂಘಟನೆಯ ನಾಯಕ ಬಿ ಸುರೇಶಣ್ಣರಿಂದ. ಓಡಿ ಹೋದವಳು ಮತ್ತೆ ಮರಳಿ ಕಾಡಿಗೆ ಗಂಡನ ಆಸರೆಯನ್ನೆ ಅರಸಿಕೊಂಡು ಬರುವ ಅವಕಾಶವಾದಿ ಹೆಂಡತಿಯಾಗಿ ಪಾವನಿ ಪಾತ್ರವರಿತು ನಟಿಸಿದ್ದಾರೆ. ಅವರ ಸ್ತ್ರೀ ಸಹಜ ಆಕ್ರೋಶಗಳು, ಅವರ ಮುಖದಲ್ಲಿ ಮೂಡುವ ಅವಮಾನದ ಪ್ರತಿಫಲನ ಕಾಡಿನ ಒಂಟಿ ಜೀವಿಯೊಂದರ ಮನೋಭೂಮಿಕೆಯನ್ನ ಪ್ರತಿಫಲಿಸುತ್ತದೆ. ಕಡೆಗೆ ಮರಳಿ ಜಟ್ಟ ತನ್ನನ್ನ ತ್ಯಜಿಸುವಾಗಲೂ ಆಕೆಯ ಮುಖದಲ್ಲಿ ಗೊಂದಲದೊಡನೆ ಮೂಡುವ ಅಪನಂಬಿಕೆಯ ಭಾವದಲ್ಲಿ ಅವರ ಅಭಿನಯ ಸಹಜತೆಯ ಇನ್ನೊಂದು ಮುಖದಂತೆ ಕಾಣುತ್ತದೆ.

ಇನ್ನು ಭಾಷಣ ಶೂರ ಮೂಲಭೂತವಾದಿ ಸಂಘಟನೆಯ ಮುಖಂಡನಾಗಿ ಬಿ ಸುರೇಶಣ್ಣ ನಟಿಸಿದ್ದಾರೋ ಇಲ್ಲಾ ಆ ಪಾತ್ರವನ್ನ ತಾನೆ ತಾನಾಗಿ ಜೀವಿಸಿದ್ದಾರೋ ಹೇಳುವುದು ಸ್ವಲ್ಪ ಕಷ್ಟ. ದಕ್ಷಿಣ ಕನ್ನಡ ಜಿಲ್ಲೆಯ ಪುರೋಗಾಮಿ ಸಂಘಟನೆಯೊಂದರ ಉಗ್ರ ನಿಲುವಿನ ನೇತಾರನ "ಪ್ರಭೆ"ಯಿರುವ ಪಾತ್ರವದು. ಅದರ ನಿರ್ವಹಣೆಯ ಕುರಿತು ಸುರೇಶಣ್ಣನ ಮಾತಿನಲ್ಲಿಯೇ ಹೇಳುವುದಾದರೆ " ಕ್ಯಾರಿಕೇಚರ್ ಅಭಿನಯ ಕಷ್ಟದ್ದು. ಯಾರಂತೆಯೋ ಕಾಣಬೇಕು, ಆದರೆ ಆ ವ್ಯಕ್ತಿಯ ಹೋಲಿಕೆ ಇರಬಾರದು. ಇದು ನಟನೆಗೆ ಸವಾಲು." ಈ ಸವಾಲನ್ನ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ಅಭಿನಯದ ಮೊದಲಿನ ಒಂದೆರಡು ದೃಶ್ಯದಲ್ಲಿ ಈ ಪಾತ್ರ ಪೋಷಣೆ ಪೇಲವವಾಯಿತಲ್ಲ ಅಂತನ್ನಿಸಿದರೂ ಅನಂತರದ ದೃಶ್ಯಗಳಲ್ಲಿ ಹೀಗೆ ಅಂಡರ್ ಪ್ಲೇ ಮಾಡಿರುವ ಹಕೀಕತ್ತು ಏನೆಂಬುದು ಅರಿವಾಗುತ್ತದೆ. ಕಡೆಯದಾಗಿ ಒಬ್ಬ ಆಶಾಡಭೂತಿಯಾಗಿ ಪೋಜು ಕೊಡುವಾಗಲೂ ಅವರು ಬೇರೆ ಆ ಪಾತ್ರವೇ ಬೇರೆ ಅಂತ ಎಲ್ಲಿಯೂ ಅನ್ನಿಸದಷ್ಟು ಅವರು ಆ ಪಾತ್ರದಲ್ಲಿ ಹುದುಗಿಹೋಗಿದ್ದಾರೆ. ಇವರಷ್ಟೆ ನಿರಾಳತೆಯ ಅಭಿನಯ ಕರ್ತವ್ಯ ನಿಷ್ಠ-ಪ್ರಾಮಾಣಿಕ ರೇಂಜರ್ ಪಾತ್ರದಲ್ಲಿ ನಟಿಸಿರುವ ಪ್ರೇಮ್ ಕುಮಾರದ್ದು. ಮಲಯಾಳಿ ಮಾತೃಭಾಷೆಯ ತಮಿಳು ಕಿರುತೆರೆಯ ಜನಪ್ರಿಯ ನಟ ಇವರು. ಆದರೆ ಕನ್ನಡಕ್ಕೆ ತಾನೇನೂ ಹೊಸಬನಲ್ಲ ಅನ್ನುವಷ್ಟು ಸಹಜತೆ ಅವರ ದೇಹಭಾಷೆಯಲ್ಲಿ ವ್ಯಕ್ತವಾಗುತ್ತದೆ. ಅವರಿಗೆ ಕಂಠ ದಾನ ಮಾಡಿರುವ ನಿರ್ದೇಶಕ ಗಿರಿಧರ್ ಅವರ ಪಾತ್ರವನ್ನ ಇನ್ನಷ್ಟು ಆಪ್ತವಾಗಿಸುತ್ತಾರೆ. ಅಂತಹ ಸಹಜ ನಟರ ಅಗತ್ಯ ಕನ್ನಡ ಚಿತ್ರರಂಗಕ್ಕೆ ಇದ್ದೇ ಇದೆ. ಇವರೊಂದಿಗೆ ಮತ್ತೊಬ್ಬ ಗಾರ್ಡ್ ಆಗಿ ನಟಿಸಿರುವ ಕಿರಣ್ ಮೂಲತಃ ರಂಗಭೂಮಿಯವರು. ಅವರ ಸಮಯಾವಧಾನದ ಕೀಟಲೆಯ ಮಾತುಗಳು ಮುದ ಕೊಡುತ್ತವೆ. ಅದರಲ್ಲಿಯೂ ಅರಣ್ಯದೊಳಗೆ ಅತಿಕ್ರಮ ಪ್ರವೇಶದ ಹಿನ್ನೆಲೆಯಲ್ಲಿ ಮರಗಳ್ಳರಿಂದ ಮೊಬೈಲ್ ಫೋನ್ ವಶ ಪಡಿಸಿಕೊಳ್ಳುವ ಅವರು "ಇವ್ರೆ. ಇದರಲ್ಲಿ ವಿಧಾನಸೌಧದಲ್ಲಿ ನೋಡೋವಂತ(?) ವೀಡಿಯೋಗಳೇನಾದರೂ ಇದಾವೇನ್ರಿ!" ಅನ್ನೋದು ಕೇವಲ ಒಂದು ಸ್ಯಾಂಪಲ್ ಅಷ್ಟೆ. 

ಸುಕೃತಾ ವಾಗ್ಳೆ ಮೊಂಡು ಹಿಡಿಯುವ ದಿಟ್ಟ ಹುಡುಗಿಯಾಗಿ ಇಷ್ಟವಾದರೂ ಅವರ ಅಭಿನಯ ಅಷ್ಟೇನೂ ಪರಿಪೂರ್ಣವಾಗಿಲ್ಲ. ಬರಿ ಮೈಯಲ್ಲಿ ಅಭಿನಯಿಸುವ ಚಿತ್ರ ಕಥೆಯ ಬೇಡಿಕೆಯ ಅನುಸಾರ ಮೈ ಚಳಿ ಬಿಟ್ಟು ಆಕೆ ನಟಿಸಿ ಸೈ ಎನಿಸಿ ಕೊಂಡಿದ್ದಾರೆ. ಆದರೆ ಕಾಮಾತುರತೆಯಿಂದ ಕನಸಿನಲ್ಲಿ ನುಲಿಯುತ್ತಾ ಬೆಚ್ಚಗಾಗುವುದರಲ್ಲಿ ಆಕೆ ತೋರುವ ಪರಿಪೂರ್ಣತೆ; ತನಗೆ ಊಟ ಮಾಡಿಸಬೇಕಾದಾಗ ಜಟ್ಟನನ್ನ ಸೀರೆಯಲ್ಲಿ ಶಿಖಂಡಿಯಂತೆ ಕಾಣುವ ವಿಕೃತ ಹಂಬಲ ತಣಿದ ಬಳಿಕ ಬೀರುವ ವ್ಯಂಗ್ಯದ ನಗುವಲ್ಲಿ ಕೃತಕವಾಗಿ ಕಂಡು ಅದು ಅವರ ಅಭಿನಯ ಪ್ರತಿಭೆಯ ಮಿತಿಯಾಗಿ ಎದ್ದು ಕಾಣುತ್ತದೆ. ಧ್ವನಿಯ ಏರಿಳಿತದಷ್ಟೆ ಮುಖ್ಯವಾದ ಕಣ್ಣ ಭಾಷೆ ಹಾಗೂ ಮುಖದಲ್ಲಿ ವಿವಿಧ ಭಾವಗಳ ರಸವನ್ನ ಪರಿಣಾಮಕಾರಿಯಾಗಿ ಆ ಪಾತ್ರದ ಅಗತ್ಯಕ್ಕೆ ತಕ್ಕಂತೆ ಹೊರಹಾಕಲು ಸುಕೃತ ಸೋತಿದ್ದಾರೆ. ಚಿತ್ರದ ಕೊನೆಯ ಎರಡು ದೃಶ್ಯಗಳಲ್ಲಿ ಅವರಿಗೆ ಅಂಡರ್ ಪ್ಲೇ ಮಾಡಲು ಧಾರಾಳ ಅವಕಾಶವಿದ್ದರೂ ಅವರು ಕಾನ್ವೆಂಟ್ ಕುವರಿಯಂತೆ ಸಂಭಾಷಣೆಯ ಗಿಳಿ ಪಾಠ ಒಪ್ಪಿಸುವುದಕ್ಕಷ್ಟೆ ತಮ್ಮನ್ನ ತಾವು ಸೀಮಿತಗಳಿಸಿಕೊಂಡಿದ್ದಾರೆ. ಅದಕ್ಕೆ ಹೋಲಿಸಿದರೆ ರಾಜೇಶ್ ಪಾತ್ರಧಾರಿಯ ಅಭಿನಯ ಹಾಗೂ ಸ್ವತಃ ನಿರ್ದೇಶಕ ಗಿರಿರಾಜ್ ನಿರ್ವಹಿಸಿದ ಸಂಶೋಧಕನ ಕಿರು ಪಾತ್ರದ ಅಭಿನಯ ಸಹಜವಾಗಿದೆ!

ವಾಣಿಜ್ಯಿಕ ಕಾರಣಗಳಿಂದ ವಿಚಾರವಾದದ ನಿಲುವಿದ್ದರೂ ಅದನ್ನ ಖಚಿತವಾಗಿ ಕಥೆಯಾಗಿ ಕಟ್ಟಿಕೊಡಲಾಗದ ಅಸಹಾಯಕರೆ ಹೆಚ್ಚಿರುವ ಸಿನೆಮಾ ಪ್ರಪಂಚದಲ್ಲಿ ನಿರ್ದೇಶಕ ಗಿರಿರಾಜ್ ತೆಗೆದುಕೊಂಡ ದಿಟ್ಟ ನಿರ್ಧಾರವೆ ಈ "ಜಟ್ಟ". ದಕ್ಷಿಣ ಕನ್ನಡದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಂತರ್ಗಾಮಿಯಾಗಿ ಹರಿಯುತ್ತಿರುವ ಕೋಮು ವೈಷಮ್ಯವನ್ನ, ಅದರ ಸಾಧ್ಯಾ ಸಾಧ್ಯತೆಗಳನ್ನ ಹೆಚ್ಚು ಕಡಿಮೆ ಗಿರಿರಾಜ್ ಸರಿಯಾಗಿ ಊಹಿಸಿದ್ದಾರೆ. ಆದರೆ ಇವರು ಹೇಳಿದಷ್ಟೆ ಅಲ್ಲದೆ ಇದಕ್ಕೆ ಇನ್ನೂ ಅನೇಕ ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳಿವೆ ಅನ್ನುವುದನ್ನ ಮರೆಯಲಿಕ್ಕಾಗದು. ಸರಳವಾಗಿ ಹೇಳಬೇಕೆಂದರೆ ಅವರ ಗ್ರಹಿಕೆಗೂ ಮಿತಿಗಳಿವೆ. ಕಳೆದ ವರ್ಷ ನಡೆದ ನೈತಿಕ ಪೊಲೀಸ್ ಗಿರಿಯ "ಮಾರ್ನಿಂಗ್ ಮಿಸ್ಟ್" ಧಾಳಿಯ ಪ್ರತಿಬಿಂಬವನ್ನ, ಅಂತಹ ಧಾಳಿಗಳಲ್ಲಿ ಬಳಕೆಯಾಗುವ ಅಮಾಯಕ ಮಾನವ ಅಸ್ತ್ರಗಳ ಹಲವಾರು ಕಾರಣಗಳ ಸುಪ್ತ ಆಕ್ರೋಶವನ್ನ ಜಟ್ಟನ ಮೂಲಕ ಹೊರಗೆಡವಲು ಅವರು ಪ್ರಯತ್ನಿಸಿದ್ದಾರೆ.

ಇನ್ನು ತನ್ನ ವಿಷಯ ವಸ್ತುವಿನ ಪ್ರತಿಪಾದನೆಯಲ್ಲಿ ಗಿರಿರಾಜ್ ವಹಿಸಿದ ಸಂಯಮ ಪ್ರಶಂಸಾರ್ಹ. ಸಮಾಜದ ವಿರುದ್ಧ ಬಂಡೆದ್ದ ಅನೇಕರು ಕಾಲಾನುಕ್ರಮದಲ್ಲಿ ಆದೆ ತಥಾಕಥಿತ ಮುಖ್ಯವಾಹಿನಿಯ ಆರಾಧನೆಯ ಭಾಗವಾಗಿ ಹೋಗಿರುವುದು ನಿಚ್ಚಳ ವಾಸ್ತವ. ಇಂತಹ ಕಟು ವಾಸ್ತವದ ಹೇಳಬೇಕಾದ ವಿಷಯವನ್ನ ನಿರ್ಭೀತವಾಗಿ ಆದರೆ ವಿವಾದಕ್ಕೆಡೆ ಮಾಡಿಕೊಡದಂತೆ ಸಭ್ಯತೆಯ ಮಿತಿಯೊಳಗೆಯೆ ಹೇಳಲು ಅವರು ಮಾಡಿರುವ ಪ್ರಯತ್ನವನ್ನ ಇತ್ತೀಚೆಗೆ ವಿವಾದ ಹುಟ್ಟಿಸಿದ ಕಾದಂಬರಿ "ಢುಂಢಿ"ಯಲ್ಲಿ ಅದರ ಲೇಖಕ ಅನಗತ್ಯವಾಗಿ ಬಳಸಿದ ಪದಗಳು ಹಾಗೂ ಅವಹೇಳನಕಾರಿ ಭಾಷಾ ಪ್ರಯೋಗದೊಂದಿಗೆ ಹೋಲಿಸಬಹುದು. ಒಂದು ಕಹಿ ಸತ್ಯವನ್ನ ಮನವರಿಕೆ ಮಾಡಿಸುವ ಭರದಲ್ಲಿ ನಾವು ಇನ್ನೊಬ್ಬರ ಸ್ಥಾಪಿತ ನಂಬಿಕೆಯನ್ನ ಒಂದೆ ಏಟಿಗೆ ಕಡಿದು ಎಸೆದು ಅವರನ್ನ ಘಾಸಿಗೊಳಿಸಬೇಕೆಂದೇನಿಲ್ಲ. ಜಟ್ಟ ಆ ವಿಷಯದಲ್ಲಿ ಗೆದ್ದಿದೆ. 

ಒಟ್ಟಿನಲ್ಲಿ "ಜಟ್ಟ" ಒಂದು ಸಾಂಘಿಕ ಪ್ರಯತ್ನದ ಉತ್ತಮ ಫಲಶ್ರುತಿ. ಆಶ್ಲೆ ಅಭಿಲಾಷರ ಹಿನ್ನೆಲೆ ಸಂಗೀತ ಈ ಅನುಭವವನ್ನ ಇನ್ನಷ್ಟು ಆಪ್ತವಾಗಿಸಿದರೆ ಸಂಕಲನಕಾರ ಪ್ರಕಾಶರ ಕತ್ತರಿ ಅನಗತ್ಯ ರೆಕ್ಕೆಪುಕ್ಕಗಳನ್ನ ಕತ್ತರಿಸಿ ಗಿರಿರಾಜರ ನಿರೀಕ್ಷೆಯಂತೆ ಚಿತ್ರವನ್ನ ಅರ್ಥಪೂರ್ಣವನ್ನಾಗಿಸುವಲ್ಲಿ ಸಫಲವಾಗಿದೆ. ಇಂತಹ ಒಳ್ಳೆಯ ಚಿತ್ರವನ್ನ ಪ್ರೇಕ್ಷಕರು ಮೆಚ್ಚುತ್ತಿರುವಾಗಲೆ ಚಿತ್ರಮಂದಿರದಿಂದ ಒಕ್ಕಲೆಬ್ಬಿಸುವ ಗಾಂಧಿನಗರದ ಪಟ್ಟಭದ್ರ ಗೋಡ್ಸೆಗಳ ಹೀನ ಆಂತರಿಕ ರಾಜಕೀಯ ನಾಚಿಕೆಗೇಡಿನದು. ತಮ್ಮ ತಮ್ಮ ಹೀನ ಸಂತಾನಗಳ ಅಭಿನಯ ಕೋರತನದ ಚಿತ್ರರತ್ನಗಳನ್ನ ನೊಣ ಹೊಡೆಯುವವರೂ ಗತಿಯಿಲ್ಲದಿದ್ದರೂ ಗೋಡೌನಿನಂತಹ ಚಿತ್ರಮಂದಿರಗಳಲ್ಲಿ ಹಡಬೆ ಕಾಸು ಖರ್ಚುಮಾಡಿ ಓಡಿಸಿ ನೂರು ದಿನದ ಕಿರೀಟವನ್ನ ತಲೆಗೇರಿಸಿಕೊಳ್ಳುವ ಈ ತಲೆತಿರುಕರಿಗೆ "ಸಪ್ನಾ"ದಂತಹ ಸಣ್ಣ ಚಿತ್ರಮಂದಿರದಲ್ಲಿದ್ದರೂ ಪ್ರೇಕ್ಷಕರನ್ನ ಸೆಳೆಯುತ್ತಿರುವ "ಜಟ್ಟ"ದಂತಹ ಸತ್ವಪೂರ್ಣ ಚಿತ್ರದ ಕುರಿತು ವಿಕೃತ ಮತ್ಸರ. ಇವೆಲ್ಲ ಅಡೆತಡೆಗಳನ್ನ ಮೀರಿಯೂ ಗಿರಿರಾಜರ ಚಿತ್ರ ನೂರು ದಿನ ಪೂರೈಸುವುದರಲ್ಲಿ ಸಂಶಯವಿಲ್ಲ ಅನ್ನಿಸುತ್ತದೆ. ಹೊಸ ಹಾಗೂ ಉತ್ತಮ ಪ್ರಯತ್ನಗಳನ್ನ ನಡುನೀರಿನಲ್ಲಿ ಕೈಬಿಡುವಷ್ಟು ದಡ್ಡತನ ಕನ್ನಡಿಗ ಪ್ರೇಕ್ಷಕರಿಗೂ ಇದ್ದಂತಿಲ್ಲ.

Saturday, October 19, 2013

ವಿಷಾದದ ಆಲಾಪದಲ್ಲಿ ಮೌನ ಸಂವಾದ.....


ಮಾನವೀಯ ಮೌಲ್ಯಗಳ ಬೆನ್ನು ಹತ್ತಿದ ವ್ಯಕ್ತಿಯೊಬ್ಬ ಯಾವೆಲ್ಲಾ ಸಂಕಟಗಳನ್ನ ಎದುರಿಸಬೇಕಾಗಿ ಬರುತ್ತದೋ ಅದಕ್ಕೊಂದು ಸಣ್ಣ ಆದರೆ ಜ್ವಲಂತ ನಿದರ್ಶನ ಶಾಹೀದ್ ಅಜ್ಮಿ. ೧೯೯೩ರ ಸರಣಿ ಬಾಂಬ್ ಸ್ಪೋಟೋತ್ತರ ಮುಂಬೈ ( ಆಗಿನ್ನೂ ಬೊಂಬಾಯಿ.)ಯ ಉಪನಗರದಲ್ಲಿದ್ದ ಮುಸ್ಲಿಂ ಕುಟುಂಬದ ಎಳೆಯ ಹುಡುಗನೆ ಶಾಹಿದ್. ತಾನು ಕಂಡ ಸಾವು ನೋವುಗಳಿಂದ ಪ್ರೇರಿತನಾಗಿ ಜೆಹಾದಿ ತಲೆ ತೊಳಿತಕ್ಕೆ ಒಳಪಟ್ಟು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಮುಸ್ಲಿಂ ಉಗ್ರವಾದಿಗಳ ತರಬೇತಿ ಶಿಬಿರಕ್ಕೆ ಸೇರಿಕೊಳ್ಳುತ್ತಾನೆ. ಕಾಲಕ್ರಮೇಣ ಅವನ ವ್ಯಕ್ತಿತ್ವಕ್ಕೆ ಆ ತೀವೃವಾದದ ಧಾರ್ಮಿಕ ವಿತಂಡವಾದಗಳೆಲ್ಲಾ ಆತಿರೇಕದಂತೆನೆಸಿ ಅಲ್ಲಿಂದ ಮರಳಿ ಹೊರಟು ಮನೆ ಸೇರಿಕೊಳ್ಳುತ್ತಾನೆ. ಈ ನಡುವೆ ಪೊಲೀಸ್ ಬೇಹುಗಾರರ ಕಣ್ಣಿಗೆ ಸಿಕ್ಕು ಟಾಡಾ ಕಾಯ್ದೆಯಡಿ ಜೈಲು ಪಾಲಾಗುತ್ತಾನೆ.


ತಿಹಾರ್ ಸೆರೆಮನೆಯಲ್ಲಿ ಮತ್ತೆ ಉಗ್ರವಾದಿ ಸಹಖೈದಿ ಉಮರ್ ಶೇಖ್ ಆತನ ತಲೆ ತೊಳೆದು ಮತ್ತೆ ದೇಶದ್ರೋಹಕ್ಕೆಳೆಸಲು ಯತ್ನಿಸುವಾಗ ಇನ್ನೊಬ್ಬ ಸಹಖೈದಿ ಸಹೃದಯಿ ಕಾಶ್ಮೀರಿ ಗುಲಾಂ ನಬಿಯ ವಿವೇಕದ ಮಾತುಗಳಿಗೆ ಕಿವಿಕೊಡುವ ಶಾಹೀದ್ ಮತ್ತೆ ತನ್ನ ವಿದ್ಯಾಭ್ಯಾಸ ಮುಂದುವರೆಸಲು ಆಶಿಸುತ್ತಾನೆ. "ವ್ಯವಸ್ಥೆಯನ್ನ ತಿದ್ದಲಿಕ್ಕೆ ಅದರ ಭಾಗವಾಗಿದ್ದುಕೊಂಡೆ ಪರಿಣಾಮಕಾರಿಯಾಗಿ ಯತ್ನಿಸಬೇಕೆ ಹೊರತು, ಅದರ ವಿರುದ್ಧ ಬಂಡಯವೆದ್ದು ಅದನ್ನ ಎದುರು ಹಾಕಿಕೊಳ್ಳಬಾರದು" ಎನ್ನುವ ನಬಿಯ ಸಲಹೆ ಆತನನ್ನ ಹಾದಿ ತಪ್ಪದಂತೆ ಎಚ್ಚರಿಸುತ್ತದೆ. ಮತ್ತೆ ಜೆಹಾದಿಯಾಗುವತ್ತ ತಿರುಗಿದ್ದ ಅತನನ್ನ ನಬಿಯ ಆರ್ಥಿಕ ಹಾಗೂ ನೈತಿಕ ಸಹಾಯ ಮತ್ತು ಆಲ್ಲಿಯೆ ಸಹಖೈದಿಗಳಾಗಿರುವ ಡಾ ಸಕ್ಸೇನಾರ ಮಾರ್ಗದರ್ಶನ ಕಾನೂನಿನ ಪದವಿಧರನಾಗುವಂತೆ ಪ್ರೇರೇಪಿಸುತ್ತದೆ. ಮುಂದೆ ಆ ಪ್ರಕರಣದಿಂದ ಖುಲಾಸೆಗೊಂಡು ಹೊರ ಬಂದವ ವೃತ್ತಿ ಬದುಕಿನಲ್ಲಿ ಒಬ್ಬ ಕಿರಿಯ ವಕೀಲನಾಗಿ ವಕಾಲತ್ತಿನ ತಟವಟದ ರೇಜಿಗೆಯ ವ್ಯವಹಾರಗಳನ್ನೆಲ್ಲ ಹತ್ತಿರದಿಂದ ಕಂಡು ಕಂಗಾಲಾಗಿ ವೃತ್ತಿ ನಿಷ್ಠೆಗೆ ಬದ್ಧನಾಗುವ ನಿರ್ಧಾರಕ್ಕೆ ಬರುತ್ತಾನೆ. ಹೀಗಾಗಿ ಸ್ವತಂತ್ರ್ಯವಾಗಿ ತನ್ನ ವೃತ್ತಿಯನ್ನ ನಿರ್ವಹಿಸುವ ಸಾಹಸಕ್ಕಿಳಿಯುವುದು ಶಾಹೀದ್ ಅಜ್ಮಿಗೆ ಅನಿವಾರ್ಯವಾಗುತ್ತದೆ. ಆಗ ಎದುರಾಗುತ್ತದೆ ವಾಸ್ತವ ಬದುಕಿನ ಅಸಲು ಸವಾಲು.


ಸಿವಿಲ್ ಪ್ರಕರಣವೊಂದು ವಿಚ್ಛೇದೆತೆ ಸುಂದರಿ ಮರಿಯಂಳನ್ನ ಶಾಹೀದನ ಮನೆ ತುಂಬಿದ ಮಡದಿಯಾಗಿಸಿದರೆ, ಪೋಟಾ ಕಾಯ್ದೆಯಡಿಯೆ ಬಂಧಿತನಾದ ಅಮಾಯಕನೊಬ್ಬನ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿ ಪರ ಶಾಹೀದ್ ಸಾಧಿಸುವ ಗೆಲುವು ವೃತ್ತಿ ಬದುಕಿನಲ್ಲಿ ಆತನಿಗೆ ಖ್ಯಾತಿಯನ್ನು ಅನುಗ್ರಹಿಸುತ್ತದೆ. "ನೊಂದವರ, ಅಮಾಯಕರ, ಬಾಯಿ ಸತ್ತವರ ಪ್ರಕರಣಗಳಿಗೆ ಶಾಹೀದ್ ಅಜ್ಮಿ ಮಾತ್ರ ಏಕೈಕ ಆಶಾಕಿರಣ" ಎನ್ನುವ ಸ್ಥಿತಿಗೆ ಮುಟ್ಟಿದ  ಶಾಹೀದ್ ಮುಂದೆ ಏನಾದ? ಅವನ ಧ್ಯೇಯ ಬದ್ಧತೆ ಆತನನ್ನ ಯಾವ ಹಂತಕ್ಕೇರಿಸಿತು ಅನ್ನುವುದನ್ನ ನೋಡಲಿಕ್ಕೆ ಚಿತ್ರ ಮಂದಿರಕ್ಕೆ ಹೋಗುವುದು ಮಾತ್ರ ಖಡ್ಡಾಯ!


ಅನುರಾಗ್ ಕಶ್ಯಪ್ ಒಬ್ಬ ನಿರ್ದೇಶಕನಾಗಿ ಆಯ್ದುಕೊಳ್ಳುತ್ತಿದ್ದಷ್ಟೆ ವಿಭಿನ್ನ ಹಾಗೂ ನೈಜ ಸಂಗತಿಯನ್ನ ಒಬ್ಬ ನಿರ್ಮಾಪಕನಾಗಿಯೂ ಆರಿಸಿಕೊಂಡು ಬಂಡವಾಳ ತೊಡಗಿಸಿದ್ದಾರೆ. ಹಂಸಲ್ ಮೆಹ್ತಾ ನಿರ್ದೇಶನಕ್ಕೆ ಸಮೀರ್ ಗೌತಮ್'ಸಿಂಗ್ ಹಾಗೂ ಅಪೂರ್ವ ಅಸ್ರಾಣಿಯವರು ಹೆಣೆದ ಬಿಗಿಯಾದ ಚಿತ್ರಕಥೆಯ ಬೆಂಬಲವೂ ಸಿಕ್ಕಿದೆ. ಶಾಹೀದ್ ಪಾತ್ರದಲ್ಲಿ ರಾಜ್'ಕುಮಾರ್ ಯಾದವ್ ಅತಿ ನೈಜವಾಗಿ ನಟಿಸಿದ್ದರೆ. ಕೆ ಕೆ ಮೆನನ್, ಪ್ರಭಾಲ್ ಪಂಜಾಬಿ ಹಾಗೂ ವಿವೇಕ್ ಗಮಂಡಿಯವರ ಅಭಿನಯವೂ ಸಹಜತೆಗೆ ಹತ್ತಿರದಲ್ಲಿದೆ. ಕರಣ್ ಕುಲಕರ್ಣಿಯವರ ಹಿನ್ನೆಲೆ ಸಂಗೀತದ ಗಾಂಭೀರ್ಯ ಚಿತ್ರದ ಎರಡು ಹಾಡುಗಳಲ್ಲಿಯೂ ಸನ್ನಿವೇಶಕ್ಕೆ ಪೂರಕವಾಗಿ ಕಥೆಯನ್ನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಇವೆಲ್ಲವನ್ನೂ ಅನುಜ್ ಧವನ್ ಸೂಕ್ಷ್ಮ ದೃಷ್ಟಿಯಲ್ಲಿ ಪ್ರತಿ ಪ್ರೇಮಿನಲ್ಲೂ ಅರ್ಥಗರ್ಭಿತವಾಗಿ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಆಪೂರ್ವ ಅಸ್ರಾಣಿ ಸಂಕಲಿಸಿದ ಚಿತ್ರ ನಿಜ ಜೀವನಕ್ಕೆ ಹಿಡಿದ ಕೈಗನ್ನಡಿಯ ಬಿಂಬದಂತೆ ಗಾಢವಾಗಿ, ಒಂದು ವಿಷಾದದ ಅಲಾಪವಾಗಿ ನೋಡುಗರೆದೆಯನ್ನ ಕನಸಿನಂತೆ ತಾಕುತ್ತದೆ. ನೋಡುವ ಮನವನ್ನ ಅರ್ದ್ರವಾಗಿಸಿ ತೇವಗೊಳಿಸುತ್ತದೆ.



http://www.youtube.com/watch?v=egL3eSlEa-U

Friday, October 18, 2013

"ಸಕ್ಕರೆ" ಸಿಹಿ ಸ್ವಲ್ಪ ಜಾಸ್ತಿಯಾಯ್ತು....


( ಅಂದಹಾಗೆ ಇದು ವಿಮರ್ಶೆ ಖಂಡಿತಾ ಅಲ್ಲ!.)



ನಮ್ಮ ಅಭಯಣ್ಣನ ನಿರ್ದೇಶನದ ಮೂರನೆ ಚಿತ್ರ "ಸಕ್ಕರೆ"ಯನ್ನ ನೋಡಿದೆ. ಅಭಯಣ್ಣ "ಸಕ್ಕರೆ"ಭಾಗ್ಯ ಕರುಣಿಸುವ ಜೊತೆಗೆ ಖಾರ ಭಾಗ್ಯ, ಹುಳಿ ಭಾಗ್ಯ, ಚೂರು ಕಹಿ ಭಾಗ್ಯ, ಜೊತೆಗೊಂದಿಷ್ಟು ಒಗರಿನ ಭಾಗ್ಯವನ್ನೂ "ಬಡ"ಪಾಯಿ ಪ್ರೇಕ್ಷಕರಿಗೆ ಕರುಣಿಸಬಹುದಿತ್ತೇನೋ! ಇಲ್ಲಿ ಅವೆಲ್ಲಾ ಇಲ್ಲ ಎನ್ನುವಂತಿಲ್ಲ. "...ಅಯ್ಯಾ" ಅವರ "ಭಾಗ್ಯ"ಶಾಲಿ ನಾಡಿನ ಬಿಪಿಎಲ್ ಪ್ರಜೆಗಳಿಗೆ ಕೊಡುವಂತೆ ಅವೆಲ್ಲವನ್ನೂ ರೇಷನ್ ಮಾಡಿಯೆ ಪಡಿ ನೀಡಲಾಗಿದೆ ಅನ್ನುವುದು ಮಾತ್ರ ಖೇದಕರ ಸಂಗತಿ.

ತೀರಾ ಸವಕಲಾಗಿ ಹೋದ ಅವವೆ ಪದಗಳನ್ನ ಬಳಸಿ ಕಾಡಿಸುವ ಜಯಂತ ಕಾಯ್ಕಿಣಿಯವರ ಮೊಂಡು ಲೇಖನಿ ಹಾಗೂ ತಾನು ಬರೆದದ್ದೆ(?) ಗೀತೆ ಎನ್ನುವ ಹಟಕ್ಕೆ ಬಿದ್ದಿರುವ "ಕವಿ ಪುಂಗವ" ಯೋಗರಾಜ ಭಟ್ಟರ ಮೊಂಡ ಲೇಖನಿ ಇವೆರಡೂ ಕೆಲಕಾಲ ಅಜ್ಞಾತವಾಸಕ್ಕೆ ಹೋಗಿ ಬಂದರೆ ಕನ್ನಡ ಸಿನೆಮಾದ ಹಾಡುಗಳಿಗೂ, ಅದನ್ನ ಕೇಳಲೇ ಬೇಕಾದ ಅನಿವಾರ್ಯತೆ ಇರುವ ಸಿನೆಮಾ ಪ್ರಿಯರ ಬಡ-ಎಬಡ ಕಿವಿಗಳಿಗೂ ಅರೋಗ್ಯದ ಹಿತದೃಷ್ಟಿಯಿಂದ ಅತಿ ಕ್ಷೇಮ ಎನ್ನದೆ ವಿಧಿಯೇ ಇಲ್ಲ(?). ಕಾಯ್ಕಿಣಿಯವರ ಮಾತಿನಲ್ಲಿಯೇ ಇದನ್ನ ಹೇಳುವುದಾದಾರೆ "ಅದಾಗಲೆ ಅತಿ ಪಾಕದಲ್ಲಿ ಅದ್ದಿ ತೆಗೆದ ಜಿಲೇಬಿಯನ್ನ ಮತ್ತಷ್ಟು ಪಾಕ ಸುರಿದು ಕೊಟ್ಟಂತಿದೆ" "ಸಕ್ಕರೆ"ಯ ಸುಮಧುರ ಗೀತೆಗಳು. ಅಂದಹಾಗೆ ಮಾಧುರ್ಯ ದಯಪಾಲಿಸುವ ತಮ್ಮ  ಕೆಲಸಕ್ಕೆ ನಿಷ್ಠರಾಗಿರುವ ಸಂಗೀತ ನಿರ್ದೇಶಕ ವಿ ಹರಿಕೃಷ್ಣ್ರರ ತಪ್ಪೇನೂ ಇದರಲ್ಲಿಲ್ಲ.


ಇಲ್ಲಿ ಚಿತ್ರದ ಕಥೆ ಹೇಳುವ ಪಾಪಕ್ಕೆ ನಾನಿಳಿಯಲಾರೆ! ತರ್ಕಕ್ಕೆ ನಿಲುಕದ ಅನಂತನಾಗ್ ಹಾಗೂ ವಿನಯಾಪ್ರಕಾಶರ ಬಗ್ಗೆ ಹಾಗೂ ಪ್ರಾಯ ಸಂದದ್ದಕ್ಕೆ ಪ್ರತಿ ಫ್ರೇಮಿನಲ್ಲೂ ಪುರಾವೆ ಕಾಣ ಸಿಗುವ ನಾಯಕ "ರೋಲ್ಡ್'ಗೋಲ್ಡನ್ ಸ್ಟಾರ್" ಬಗ್ಗೆ ತುಟಿ ಬಿಚ್ಚಲಾರೆ!  ಒಟ್ಟಿನಲ್ಲಿ ಕೊನೆಗೆ ಚಿತ್ರಮಂದಿರದಿಂದ ಹೊರಬಂದ ಮೇಲೆಯೂ ನೆನಪಿನಲ್ಲುಳಿಯುವುದು ಕೇವಲ ನಾಲ್ಕು ಅಂಶಗಳು. ಮೊದಲನೆಯದು ಕಲಾ ನಿರ್ದೇಶಕ ಶಶಾಂಕರ ಸುಂದರವಾದ ಸೆಟ್'ಗಳು, ಪ್ರತಿ ಫ್ರೇಂನ್ನೂ ಚಂದಗಾಣಿಸಿಕೊಟ್ಟಿರುವ ವಿಕ್ರಂ ಶ್ರೀವಾಸ್ತವರ ಕ್ಯಾಮರಾ ಕಣ್ಣು, ಇದಕ್ಕೆಲ್ಲ ತಾಳ್ಮೆಯಿಂದ ಸಹಕರಿಸಿದ ನಿರ್ಮಾಪಕರ ಔದಾರ್ಯ ಹಾಗೂ ಇದರಲ್ಲೆಲ್ಲ ಮಿಂಚಿ ರೋಮಾಂಚನಗೊಳಿಸುವ ನಾಯಕಿ ದೀಪಾರ ದಿವ್ಯ ಸನ್ನಿಧಿ!. 


ಕೊನೆಗೊಂದು ಮಾತು ತಮಾಷೆಗೆ, ಕ್ಲೈಮಾಕ್ಸಿನಲ್ಲಿ ಆನು-ರಾಜೇಶ್ ಹಾಗೂ ದೀಪಾ ಸನ್ನಿಧಿಯ ಅಪ್ಪ "ಇನ್ನೋವಾ"ದಲ್ಲಿ ಬಂದರೆ, ಅಚ್ಯುತ ಹಾಗೂ ದೀಪಾ ಪ್ರತ್ಯೇಕವಾಗಿ ಸ್ಕೂಟಿಯಲ್ಲಿ ಬರಲು ಕಾರಣವೇನು? ಏಕೆ "ಇನ್ನೋವಾ"ದಲ್ಲಿ ಸೀಟ್'ಗಳು ಖಾಲಿ ಇರಲಿಲ್ಲವಾ?! ಒಟ್ಟಿನಲ್ಲಿ ಓರೆಕೋರೆಯಿಲ್ಲದ ದಾರಿಯ ಸರಾಗ ಪಯಣ ಅಭಯಣ್ಣನ ಈ ಸಿಹಿ "ಸಕ್ಕರೆ". ಹೀಗಾಗಿಯೇ ಇರಬೇಕು ಸಾಂಕೇತಿಕವಾಗಿ ನಯವಾದ, ಔಷಧಕ್ಕೂ ಒಂದು ಗುಂಡಿಗಳು ಸಿಗದಿರುವ ರಸ್ತೆಯನ್ನ ಚಿತ್ರದುದ್ದಕ್ಕೂ ತೋರಿಸಲಾಗಿದೆ! ಅದನ್ನ ನೋಡಿದ ವಾಸ್ತವ ಪ್ರಜ್ಞೆಯಿರುವ ಅಮಾಯಕ ಕನ್ನಡಿಗರು "ನಿಜವಾಗಲೂ ಅದು ಕನ್ನಡ ನಾಡಿನ ರಸ್ತೆಗಳೇ ಹೌದಾ? ಕರುನಾಡಿನ '...ಅಯ್ಯಾ'ರವರ ರಾಮ(?)ರಾಜ್ಯದಲ್ಲಿ ನಾಡಿನ ಉದ್ದಗಲಕ್ಕೂ ರಸ್ತೆಗಳಲ್ಲಿ ಗುಂಡಿಗಳೆ ಇಲ್ಲವಾ!" ಅಂತ ಆಶ್ಚರ್ಯ ಚಕಿತರಾಗಿ ಹೌಹಾರಬಾರದಾಗಿ ನಮ್ರ ವಿನಂತಿ. ಒಟ್ಟಿನಲ್ಲಿದೊಂದು ಕುಲು"ಕಾಟ"ವಿಲ್ಲದ ಹಗುರಾದ ಮಧುರ ಪಯಣ.

Saturday, October 12, 2013

ಮರೆಯುವ ಮುನ್ನ.....


ಈ ನಿರ್ಭಾಗ್ಯ ದೇಶ ಕಂಡ ಕೆಲವೇ ಕೆಲವು ಧೀಮಂತ ನಾಯಕರಲ್ಲಿ ರಾಮಮನೋಹರ ಲೋಹಿಯಾ ಕೂಡಾ ಒಬ್ಬರು. ಗಾಂಧಿ-ನೆಹರೂ ಭಜನೆಯಲ್ಲಿ ಮುಳುಗಿ ಹೋಗಿದ್ದ ಅಂದಿನ ಕಾಂಗ್ರೆಸ್ಸಿಗರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಶಹೀದ್ ಭಗತ್ ಸಿಂಗ್, ನೇತಾಜಿ ಸುಭಾಶ್ ಚಂದ್ರ ಬೋಸ್, ರಾಮಮನೋಹರ ಲೋಹಿಯಾ, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲಬಹದ್ದೂರ್ ಶಾಸ್ತ್ರಿ, ಜಯಪ್ರಕಾಶ ನಾರಾಯಣ ಹಾಗೂ ಶ್ಯಾಮಪ್ರಸಾದ್ ಮುಖರ್ಜಿಯಂತಹ ಮುತ್ಸದ್ಧಿಗಳನ್ನ ಯಶಸ್ವಿಯಾಗಿ ಇತಿಹಾಸದ ಮರೆವಿಗೆ ಸರಿಸಿ ಬಿಟ್ಟರು. 

ಸಮಾಜವಾದಿ ತತ್ವದ ಯಶಸ್ವಿ ಪ್ರತಿಪಾದಕ ಲೋಹಿಯರನ್ನಂತೂ "ಹುಚ್ಚ"ನ ಪಟ್ಟಕ್ಕೇರಿಸುವಲ್ಲಿ ಇಂದಿನ ಕಾಂಗ್ರೆಸ್ಸಿಗರೂ ತಮ್ಮ ಹರಾಮಿ ಹಿರಿಯರು ಹಾಕಿದ ಹಾದಿಯಲ್ಲೆ ನಿಷ್ಠೆಯಿಂದ ಮುನ್ನಡೆಯುತ್ತಿದ್ದಾರೆ. ಹಾಗೆ ನೋಡಿದರೆ ಮೇಲಿನ ಎಲ್ಲರೂ ಪಾರ್ಶ್ವ ಪಕ್ಷಪಾತಿ ಗಾಂಧಿಯ ಆಯ್ಕೆಯಾಗಿದ್ದ ಸ್ತ್ರೀಲೋಲ-ಶೋಕೀಲಾಲ ನೆಹರೂಗಿಂತ ಸಾವಿರ ಪಾಲು ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದು ಪ್ರಧಾನ ಮಂತ್ರಿಗಳಾಗಲು ಅರ್ಹರಾಗಿದ್ದರು. ಆದರೆ ನೆಹರು ಜೀತದ ಮುಂದೆ ದೇಶ ಬಡವಾಯ್ತು.

ಲೋಹಿಯಾ ಪ್ರಬುದ್ಧ ಚಿಂತಕ. ಭೂ ಸುಧಾರಣೆಯ ಕಾನೂನನ್ನ ಸಶಕ್ತ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಲು ನಮ್ಮ ಸಾಗರದ ಕಾಗೋಡು ಹಳ್ಳಿಗೂ ಬಂದಿದ್ದರು. ತಾಳಗುಪ್ಪದವರೆಗೆ ಅಂದಿನ ಮೀಟರ್'ಗೇಜ್ ರೈಲಿನಲ್ಲಿ ಬಂದು "ಕಾಗೋಡು ರೈತ ಸತ್ಯಾಗ್ರಹ"ದಲ್ಲಿ ಪಾಲ್ಗೊಂಡಿದ್ದ ಅವರನ್ನ ಅಂದಿನ ಎಸ್. ನಿಜಲಿಂಗಪ್ಪನವರ ಸರಕಾರ ಬಂಧಿಸಿ ಸರಕಾರ ರಾಜ್ಯದಿಂದ ಗಡಿಪಾರು ಮಾಡಿತ್ತು. ಆದರೂ ಆ ಕಿರು ಭೇಟಿಯ, ಅನಂತರದ ಗಡಿಪಾರಿನ ಮೂಲಕ ಕಾಗೋಡಿನ ಅನ್ಯಾಯವನ್ನ ಲೋಹಿಯಾ ರಾಷ್ಟ್ರೀಯ ಮಾಧ್ಯಮಗಳ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಅದರ ಫಲವಾಗಿಯೇ ದೇಶದಲ್ಲಿಯೆ ಮೊದಲ ಬಾರಿಗೆ ನಮ್ಮ ಕರ್ನಾಟಕದ ಬಡ ರೈತ "ಉಳುವವನೆ ಜಮೀನಿನ ಒಡೆಯ"ನಾದ. 

ಇಂದಿನ ಅವರ ಹೆಸರು ಹೇಳಿಕೊಂಡು ಸ"ಮಜಾ"ವಾದ ಮಾಡುವ ಲಲ್ಲು-ಪಂಜು-ಮುದ್ದೆ ಗೌಡರ ದೊಂಬರಾಟ ಲೋಹಿಯಾರ ಭವ್ಯ ಭಾರತದ ಕನಸನ್ನ ನುಚ್ಚುನೂರಾಗಿಸಿದೆ. ಈ ಮೂಲಕ ಕಾಂಗ್ರೆಸ್ ಮಾಡುತ್ತಿದ್ದ "ಲೋಹಿಯಾ ಚಾರಿತ್ರ್ಯ ವಧೆ"ಗೆ ಇಂದಿನ ಈ ಮಜಾವಾದಿಗಳೆ ವೇದಿಕೆ ಹಾಗೂ ಸಕಾರಣಗಳನ್ನ ಅಡಿಗಡಿಗೆ ಒದಗಿಸಿಕೊಡುತ್ತಿದ್ದಾರೆ. ಭಾರತದ ಸಂಸತ್ತಿನಲ್ಲಿ ಡಾ. ರಾಮಮನೋಹರ ಲೋಹಿಯಾರವರು ಮಾಡಿದ್ದ ದಾಖಲಾರ್ಹ ಭಾಷಣ ಆಸಕ್ತರಿಗಾಗಿ ಇಲ್ಲಿದೆ. ಅವರ ಆತ್ಮಕ್ಕೆ ಶಾಂತಿ ಮುಟ್ಟಲಿ.

http://www.youtube.com/watch?v=yqLagN7lByM

Sunday, October 6, 2013

ಹಲವು ಕನಸುಗಳ ಕೆಲವೆ ನಿರೀಕ್ಷೆಗಳು......




ಕಾರಣ ನೂರಿದ್ದರೂ ಹೂರಣ ಹಲವಿದ್ದರೂ
ನಾನೆ ನನ್ನ ತುಟಿಗಳನ್ನ ಭದ್ರವಾಗಿ ಹೊಲಿದುಕೊಂಡಿರುವಾಗ.......
ನೀನು ಬೆದರಲು ಕಾರಣವಿಲ್ಲ,
ಸಾರಿ ಹೇಳದ ಮಾತುಗಳು ಮನದೊಳಗೆ ಮರಿ ಹಾಕಿ
ತನ್ನನ್ನ ತಾನೆ ವೃದ್ಧಿಸಿಕೊಳ್ಳುತ್ತಿರುವ ಹಾಗೆ....
ಹಚ್ಚದೆಯೆ ಹಬ್ಬಿ ಸುಡುತಲಿದೆ ನನ್ನೆದೆಯೊಳಗೆ ಬೇಗೆ/
ಕದಡಿದ ಕೊಳದಲ್ಲಿ ಅರಳಿದ ತಾವರೆಯ ಮೇಲೆ
ಕುಳಿತ ಬಿಂದುವೊಂದು ಈಗಲೋ ಆಗಲೋ ಜಾರಿ ಮತ್ತೆ.....
ನೀರ ಪಾಲಾಗುವುದು ಖಚಿತವಿದ್ದರೂ
ಜಾರುಜಾರುತ್ತಾ ಕೇವಲ ಒಲವನ್ನಷ್ಟೆ ಕನವರಿಸುತ್ತಿರೋದ ಕಂಡಿರ?,
ಕರಗಿದ ಒಂಟಿ ಮೋಡವೊಂದು
ಧೂಳಿನ ಮನಸೊಳಗೆ ಬಿದ್ದು ಅಂತರ್ಧನವಾಗುವ ಮುನ್ನ....
ಹನಿ ಹನಿಯಾಗಿ ಕಣ್ಣಲ್ಲಿ ಒಲವನ್ನೆ
ಪ್ರತಿಫಲಿಸುವುದನ್ನು ಅರಿತಿರ?//


ಕೇವಲ ಕನಸಲ್ಲ ತುಂಬಾ ಗಟ್ಟಿ ನಿಲುವಿತ್ತು
ಆಸೆಯ ಬಲವೂ ಇತ್ತು....
ನಿರೀಕ್ಷೆ ಪೂರ್ತಿ ಫಲಿಸದಿರೋಕೆ ಬಹುತೇಕ ನಾನಲ್ಲ ಕಾರಣ
ಮತ್ತಿನ್ನೇನೋ ಇದೆ ಅದರ ಒಳ ಹೂರಣ,
ಕನಸಿನ ಹಾದಿಯಲ್ಲಿನ ಕತ್ತಲ ಪಯಣ
ನನಸಿನ ಹಣೆಬರಹವಾಗಿರುವುದು ಅರಿವಿದ್ದರೂ ಸಹ....
ನಾನು ನಿನ್ನನ್ನ ಸೇರಲಿಕ್ಕೆ
ನಿತ್ಯ ಹೀಗೆಯೆ ಹಂಬಲಿಸುತ್ತಿದ್ದೆ/
ಪ್ರಾರ್ಥನೆಯಂತಹ ನಿನ್ನ ಪಿಸುದನಿ
ಆಲಾಪದಂತಹ ನಿನ್ನ ಗುನುಗಿನ ನೆನಪ ಹನಿ....
ನನ್ನೆದೆಯಲ್ಲಿ ಆರಿ ಇನ್ನಿಲ್ಲವಾಗುವ ತನಕ
ಇನ್ಯಾರೂ ನನ್ನ ಮೋಡಿ ಮಾಡಲಾರರು,
ಮನೆ ಮನಕ್ಕೆ ಕಾವಲಿಲ್ಲ ಬಾಗಿಲಿಲ್ಲ
ಸೂರೆ ಹೋಗುವ ಭಯವೂ ಇಲ್ಲ.....
ನನ್ನೆಲ್ಲ ನೆನಪುಗಳ ಇಡಿಗಂಟು
ನಿನ್ನೆದೆಯ ಖಜಾನೆಯಲ್ಲಿ ಭದ್ರವಾಗಿಯೇ ಇದೆಯಲ್ಲ.//


ಸಂಕಟವೆ ಸಡಗರ ನೋವೆ ಇಲ್ಲಿ ಸಂಭ್ರಮ
ಎದೆಯೊಳಗೆ ಉರಿಯುತಿರೋ ವಿರಹದ ಉರಿ......
ಇನ್ನುಳಿದವರ ಚಳಿಗೆ ಬೆಚ್ಚಗೆನಿಸಬಹುದೇನೋ
ಆದರೆ ಮನದ ಉರಿವ ಅಗ್ಗಷ್ಟಿಕೆಗೆ ಮಾತ್ರ
ಕಿಂಚಿತ್ತೂ ಕರುಣೆಯಿರೋಲ್ಲ,
ಸರಿದ ಕ್ಷಣಗಳನ್ನೆಲ್ಲ ಸುರಿದು ಹಾರವನ್ನಾಗಿಸಿಕೊಂಡು
ಎದೆಯ ಮೇಲದನ್ನ ಹರಡಿಕೊಂಡು....
ಕಳೆದು ಹೋದ ಪದಕಕ್ಕಾಗಿ ಮಾತ್ರ
ನಿತ್ಯವೂ ಕಾಯುತ್ತಲೆ ಇದ್ದೇನೆ/
ಕಾರಿರುಳಲ್ಲಿ ಕಾದಿರುವ ಕನಸುಗಳ ಕಣ್ಣುಗಳಲ್ಲಿ
ನಿದಿರೆ ಮರೆತ ಕುರುಹು ಕಡು ಕೆಂಪಾಗಿ ಕಾಣುತ್ತಿದೆ.....
ತುಸು ಮಳೆಯಲ್ಲಿ ತೋಯುತ್ತಾ
ನಸುನಗುವ ಚಿಮ್ಮಿಸುತ್ತಾ....
ನಿನ್ನನೆ ನೆನೆಯುತ್ತಾ ಕನವರಿಸುವ ಆಸೆ
ಕಣ್ಣಲ್ಲಿ ಅನುಗಾಲದಿಂದ ಆಡಗಿಕೂತಿದೆ,
ಹೆಸರನ್ನ ಬಿಟ್ಟು ಉಸಿರನ್ನೂ ಬಿಟ್ಟುಕೊಟ್ಟು
ಅನಾಮಿಕನಾಗಿ ಅದೆಷ್ಟೆ ಅಜ್ಞಾತನಾಗಿರಲು ಹವಣಿಸಿದರೂ ನಾನು....
ನಿನ್ನ ಖಾಯಂ ವಿಳಾಸವಾಗುವಲ್ಲಿಂದ
ತಪ್ಪಿಸಿಕೊಳ್ಳಲಾಗುತ್ತಲೆ ಇಲ್ಲವಲ್ಲ.//


ದಣಿವಾರಿಸಿಕೊಳ್ಳಲು ಎಲ್ಲಿಯೂ ನಿಲ್ಲದೆ
ಒಂದೇ ಸಮನೆ ಬಿಸಬಿಸ ನಡೆಯುತ್ತಿದ್ದರೂ ಸಹ....
ನನಗಿನ್ನೂ ಒಂದಿನಿತೂ ನಿನ್ನ
ಸೀಮೆಯ ಎಲ್ಲೆಯನ್ನ ದಾಟಲಾಗಿಯೇ ಇಲ್ಲ,
ಆಲ್ಪತೃಪ್ತನಾಗುವುದರಿಂದ ಆಗುವ ದೊಡ್ಡ ಉಪಕಾರವೆಂದರೆ
ಅಸೆಗಳು ಅದೆಷ್ಟೆ ಅಗಾಧವಾಗಿದ್ದರೂ....
ದಕ್ಕಿದ ಕೆಲ ನೆನಪುಗಳಲ್ಲಿಯೆ
ಕೊನೆಯವರೆಗೂ ಕಾಲ ಹಾಕಬಹುದು/
ಅಂಗಳದ ಮೂಲೆಯ ತುಳಸಿ
ಹಿತ್ತಲ ಗುಂಡಿಯ ಬಳಿಯ ರತ್ನಗಂಧಿ.....
ಏನೋ ಒಂದಾಗಿಯಾದರೂ ನಿನ್ನ ನಿಶ್ವಾಸದ ಉಸಿರು ಸುಳಿವಲ್ಲಿಯೆ
ಅದನ್ನ ನಿತ್ಯ ಅಘ್ರಾಣಿಸುತ್ತಾ ಇರುವ ಅನುಗಾಲದ ಆಸೆ ಇನ್ನೂ
ಜೀವಂತವಾಗಿದೆ ಆದೆಂದೋ ಸತ್ತ ನನ್ನೊಳಗೆ,
ಕರಗಿದ ಕನಸಿನ ಮೋಡಗಳೆಲ್ಲ
ಮನದ ಬಾನಿನಿಂದ ಕೆಳಗಿಳಿದು ಅಶ್ರುಗಳನ್ನ ಕೆಲ ಕಾಲ ಆಶ್ರಯಿಸಿ....
ಕಾಡಿಗೆಯ ಕೊನೆ ಗುರುತನ್ನೂ
ಕರಗಿಸಿಯೆ ನೆಲಕ್ಕಿಳಿಯುತ್ತವೆ.//

ಮತ್ತರಳುವ ಮೊಗ್ಗಿನ ಮುಖದಲ್ಲಿ ಬತ್ತದ ಮಂದಹಾಸವಷ್ಟೆ ಮರಳಿ ಅರಳುತ್ತಿದೆ.....






ಕಾಲದ ಕಪ್ಪು ಹಾದಿಯಲ್ಲಿ ಗೋಚರಿಸುವ
ಚೂರು ಬೆಳಕೆ ಭರವಸೆ....
ನೆನ್ನೆಯ ಇರುಳು ಕಳೆದು ನಾಳೆಯಾದರೂ ಹಗಲಾದೀತು
ಅನ್ನೋದು ಎಲ್ಲರೆದೆಯ ಕ್ಷೀಣ ಆಸೆ,
ಅಸೀಮ ಸಂಚಾರಿ ಮನಸಿಗೆ ಈಡೇರದ
ಸಾವಿರ ಕನಸುಗಳು ಬಳುವಳಿಯಾಗಿ ಬಂದಿದ್ದರೂ....
ದೊರೆತಿರುವ ಬಾಳು ಮಾತ್ರ
ಕೇವಲ ಒಂದೇ ಒಂದು/
ಖಾಲಿ ಪುಟಗಳ ಹಳೆಯ ಪುಸ್ತಕದೊಳಗಿನ
ಮಾಸದ ಪರಿಮಳ ನಾನು....
ನನ್ನ ನೆನಪುಗಳಲ್ಲಿ ದಾಖಲಾಗಿರದಿದ್ದರೂ
ಅವುಗಳ ಛಾಪು ಇದ್ದೇ ಇದೆ,
ಕನಸು ಕಾಣುವ ಕಣ್ಣಿಗೆ
ಮನಸ ಮುಟ್ಟುವ ಆಕಾಂಕ್ಷೆಯೂ ಇತ್ತು....
ಆದರೂ ಎಡವಿದ್ದೆಲ್ಲಿ ಎನ್ನುವ ಅರಿವು
ಇನ್ನೂ ಆಗುತ್ತಲೆ ಇಲ್ಲ.//



ಸರಿದ ಕಾಲದ ಚಕ್ರದ ಗುರುತುಗಳು
ಹಣೆಯ ರೇಖೆಗಳಾಗಿ ಮೂಡೋದು.....
ಕಾಕತಾಳೀಯವಂತೂ ಖಂಡಿತಾ ಅಲ್ಲ,
ಕರಗಿದ ಕ್ಷಣಗಳು ಘನವಾದ ಭಾವಗಳಾಗಿ
ಮನದ ಸರೋವರದಲ್ಲಿ ನಿರಂತರ ತೇಲುತ್ತಿರುವಾಗ,,,,,,
ನಾನಂತೂ ನಿರಾತಂಕ/
ಒಂದು ಸ್ವಪ್ನ ಸುಮ ಸಿಗದೆ ಹೋದರೆ
ಮರುಕ್ಷಣವೆ ಮತ್ತೊಂದು ಪುಷ್ಪವನ್ನರಸುವ.....
ಪಾಪಿ ದುಂಬಿ ನಾನಲ್ಲ,
ಉಪವಾಸ ಸತ್ತೇನು
ಮತ್ತೆಂದೂ ಹೂವ ಅಧರಕ್ಕೆ....
ನನ್ನವೆರಡು ತುಟಿ ಹೊಲೆಯಲಾರೆ.//


ಮುಂಜಾವಿನ ನಿರೀಕ್ಷೆಗಳೆಲ್ಲ
ಮುಸ್ಸಂಜೆಯಲ್ಲಿಯೆ ಕಳೆದುಹೋಗುವಾಗಲೂ....
ಕತ್ತಲಲ್ಲಿ ಮತ್ತೆ ಕನಸನ್ನರಳಿಸುವ ಉಮೇದು
ಸೋತು ಮುದುಡಿದ ಕಣ್ಣುಗಳಿಗಿದೆ,
ಒಂಟಿ ಎನ್ನುವುದೊಂದು ಭ್ರಮೆ
ಕಡಿವಾಣವಿಲ್ಲದ ಮಾತಿಗೆ ಇದ್ದೇ ಇದೆ....
ಮೌನದ ಅನಂತ ಕ್ಷಮೆ/
ಮನ ಕೋರುವ ಅತ್ಮೀಯ ಸ್ಪರ್ಶದ ಹಿತದಲ್ಲಿ
ಹೌದಲ್ಲ, ನೀನೆ ನೀನಾಗಿ ಅಡಗಿದ್ದೀಯ....
ಮಧುರ ಮೌನದಲ್ಲಿ ಎದೆಯಾಳಕ್ಕಿಳಿಯುವ ಆರ್ತ ಗಾನದಲ್ಲಿ
ಹೌದು, ನೀನಿದ್ದೀಯಾ,
ಒಂದೆ ಕಾಲಲ್ಲಿ ನಿಂತು ಕೊನೆಯವರೆಗೆ
ಕುತ್ತಿಗೆ ಉದ್ದ ಮಾಡಿಕೊಂಡು ಕಾಯುವುದು....
ಎಷ್ಟು ಯಾತನಾದಾಯಕ ಸುಖ ನಿನಗೂ ಗೊತ್ತಲ್ಲ?
ಮತ್ತೂ ಕಾಯಿಸಬೇಡ
ಆದಷ್ಟು ಬೇಗ ಬಂದೇ ಬಿಡು.//


ಕಾದ ಪ್ರತಿಯೊಂದು ಕನಸಿನ ಮೊಗ್ಗುಗಳಿಗೂ
ಸುಮವಾಗಿ ನಗುವ ಆವಕಾಶ ಸಿಗೋದಿಲ್ಲ....
ಆದರೂ ಗಿಡ ನಿತ್ಯ ನಿರೀಕ್ಷೆಯ
ನವ ಮೊಗ್ಗರಳಿಸದಿರೋದಿಲ್ಲ,
ಬಾಗಿ ಹೋದ ಬೆನ್ನಿನ ಮೇಲೆ ಮೂಡಿದ
ನೂರು ಭಾರಗಳ ಗುರುತುಗಳೀರೋದನ್ನ ಗುರುತಿಸಬಹುದು....
ಆದರೆ ಮಾಗಿದ ಮನಸಿನ ಮನೋವೇದನೆಯನ್ನ
ಹಾಗೆಯೆ ನಿರ್ದಿಷ್ಟವಾಗಿ ತೋರಿಸೋದಾದರೂ ಹೇಗೆ?/
ಘಾತುಕ ಸ್ವಪ್ನಗಳ ಸಹವಾಸ ಮಾಡಿಯಾದ ಮೇಲೆ
ಮನಸಿಗೆ ಆದ ಗಾಯಗಳನ್ನ ಮಾಯುತ್ತವೆಂದು......
ಕಾಯುವುದು ಮೂರ್ಖತನವೆಂಬ ಆರಿವಿದ್ದರೂ
ನಾನು ಚಿರ ಹುಂಬನಾಗಿಯೇ ಉಳಿಯಲಿದ್ದೇನೆ,
ಕಣ್ಣು ಹೊಳೆವ ಕಾರಣ ನಾಳೆಯ ಕನಸಲ್ಲವ?
ನಿರರ್ಥಕ ಈ ನೆನ್ನೆಯ ಮುನಿಸಲ್ಲವ?//

ನಾನೂ ನನ್ನ ಹೆಂಡ್ತೀರು.......





ತೀರ್ಥಹಳ್ಳಿಯ ನಮ್ಮ ಮನೆ ಪೇಟೆಯ ಮಗ್ಗುಲಲ್ಲೆ ಇರುವ ಸೊಪ್ಪುಗುಡ್ಡೆ ವಿಸ್ತರಣದಲ್ಲಿದ್ದದ್ದರಿಂದ ಗುರುತಿನ ಸುತ್ತಮುತ್ತಲ ಅನೇಕ ಹಳ್ಳಿಗರು ತಾಲೂಕು ಕೇಂದ್ರಕ್ಕೆ ಆಸ್ಪತ್ರೆ, ಕೋರ್ಟು-ಕಛೇರಿ, ಸಿನೆಮಾ, ಸಂತೆ, ಜಾತ್ರೆ. ದೇವಸ್ಥಾನದ ಹರಕೆ ಹಾಗೂ ಸ್ವಂತದ ಇನ್ನಿತರ ಚಿಕ್ಕಪುಟ್ಟ ಕೆಲಸಗಳ ನಿಮಿತ್ತ ಬಂದಾಗ ನಮ್ಮಲ್ಲಿ ಬರುವ ರೂಢಿಯಿತ್ತು. ನನ್ನಜ್ಜ "ಗಜಾನನ ಕಂಪನಿಯ" ಜನಪ್ರಿಯ "ಡೈವರ್ ಹೆಗಡೇರು" ಆಗಿದ್ದರಿಂದ ಹಾಗೂ ಆ ಕಾಲಕ್ಕಿನ್ನೂ ಬಸ್ ಚಾಲಕರು ಮಲೆನಾಡಿನ ಮಟ್ಟಿಗೆ ಬ್ರಿಟಿಷ್ ಏರ್'ವೇಸ್'ನ ಪೈಲೆಟ್'ಗಳಷ್ಟು ಮರ್ಯಾದೆ ಗಳಿಸುತ್ತಿದ್ದರಿಂದ ಈ ಎಲ್ಲಾ ಆವ್ಯಕ್ತ ಸಂಬಂಧಗಳು ಸುದ್ದಿ-ಸಾಮಾನುಗಳನ್ನ ಊರಿಂದೂರಿಗೆ ಮುಟ್ಟಿಸುವ ಅಜ್ಜನ ಮೂಲಕ ನಮ್ಮ ಮನೆಯೊಂದಿಗೆ ಬೆಸೆದುಕೊಂಡಿತ್ತು.

ಹೀಗೆ ನಮ್ಮಲ್ಲಿ ಬರುತ್ತಿದ್ದವರಲ್ಲಿ ಬೊಬ್ಬಿಯ ಇಂದ್ರಾ ಕಿಣಿ, ಮಂಡಗದ್ದೆಯ ಕುಸುಮಕ್ಕ, ಸಿಗದಾಳಿನ ಶಾಮ ಮಾವನ ಮಕ್ಕಳು, ದಬ್ಬಣಗದ್ದೆಯ ಪುಟ್ಟೇಗೌಡರ ಮನೆ ಮಂದಿ, ಅವರ ಆಳುಗಳಲ್ಲಿ ಪ್ರಮುಖವಾಗಿ ಮಂಜಿ, ಆಗುಂಬೆಯ ಅಪ್ಪಿಯಕ್ಕ, ಶೇಡ್ಗಾರಿನ ಕೆಲವರು, ಕಟ್ಟೆಹಕ್ಕಲಿನ ಹಲವರು, ಅಲ್ಮನೆಯ ಸ್ವಲ್ಪ ಮಂದಿ ಹೀಗೆ ಬಹುತೇಕರು ಹಾಗೂ ಆಗಾಗ ನಮ್ಮಲ್ಲಿಗೆ ಬರುತ್ತಿದ್ದ ರೆಹಮತ್ ಬೀಬಿ ನಮ್ಮ ಮನೆಗೆ ತಿಂಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಬಂದೇ ಬರುತ್ತಿದ್ದರು. ಅದರಲ್ಲೂ ಹದಿಹರೆಯದ ಹುಡುಗಿಯರು-ಹೆಂಗಸರು ಬಹಿರ್ದೆಸೆ, ಮುಟ್ಟಿನಂತಹ ತಮ್ಮ ಅನಿವಾರ್ಯಯತೆಗಳೊಂದಿಗೆ ನಿಗದಿತ ಕೆಲಸವನ್ನೂ ಪೂರೈಸುವ ಒತ್ತಡದಲ್ಲಿ ಇಂತಹ ತತ್ಕಾಲಿಕ ವಸತಿಗಳನ್ನ ವ್ಯವಸ್ಥೆ ಮಾಡಿಕೊಳ್ಳದೆ ವಿಧಿಯೂ ಇರಲಿಲ್ಲವಲ್ಲ, ಅದಕ್ಕಾಗಿ ನಾವು ಹಾಗೂ ನಮ್ಮಂತಹ ಪೇಟೆ ಮಂದಿಯ ಜೊತೆ ಅವರಿಗೆಲ್ಲ ಒಂದು ಸೌಹಾರ್ದಯುತ ಸಂಬಂಧ ಏರ್ಪಡಿಸಿಕೊಳ್ಳುತ್ತಿದ್ದರು ಅನ್ನಿಸುತ್ತೆ. 

ಹಾಗಂತ ಅವರು ಬರುವಾಗ ಬರಿಗೈಯಲ್ಲೇನೂ ನಮ್ಮಲ್ಲಿ ಬರುತ್ತಿರಲಿಲ್ಲ. ಏನಾದರೊಂದು ತರಕಾರಿ, ಮನೆಯಲ್ಲಿಯೆ ಹಾಕಿದ್ದ ಉಪ್ಪಿನಕಾಯಿ, ದೊಡ್ಲಿ ಕಾಯಿ, ಬಸಳೆ ಸೊಪ್ಪು, ಮಾವಿನ ಕಾಯಿ, ಹಲಸಿನ ಹಣ್ಣು, ಬಾಳಕ, ಜೇನುತುಪ್ಪ, ತುಪ್ಪ, ಕಳಲೆ ಹೀಗೆ ಏನಾದರೊಂದು ಹಳ್ಳಿಯ ಉತ್ಪನ್ನ ಅವರ ಮೂಲಕ ನಮ್ಮಲ್ಲಿಗೆ ಬಂದೇ ತೀರುತ್ತಿತ್ತು. ಹರಿಜನರ ಮಂಜಿಯಂತೂ ತನ್ನ ಬೆತ್ತದ ಕೌಶಲ್ಯದಿಂದ ಮಾಡುತ್ತಿದ್ದ ನಿತ್ಯದ ಬಳಕೆಯ ವಸ್ತುಗಳಾದ ಇರ್ಕೆ ( ಬಿಸಿ ಪಾತ್ರೆಗಳನ್ನ ನೆಲದ ಮೇಲೆ ಇಳಿಸಿಡಲು ಬಳಸುವ ಬೆತ್ತದ ಸ್ಟ್ಯಾಂಡ್.), ಮೊರ, ಗೆರಸಿ, ಅನ್ನ ಬಸಿವ ಸಿಬ್ಬಲ ಹೀಗೆ ಏನಾದರೊಂದು ಮಾಡಿ ತಂದುಕೊಡುತ್ತಿದ್ದಳು. ಅದಕ್ಕೆ ಆಕೆಗೆ ಅಮ್ಮನಿಂದ ದರ ಸಲ್ಲುತ್ತಿದ್ದರೂ ಲಾಭದ ಮುಖ ಕಾಣುವಷ್ಟೇನೂ ಅದರಲ್ಲಿ ಇರುತ್ತಿರಲಿಲ್ಲ ಅನ್ನುವುದು ಸ್ಪಷ್ಟ, ಬಹುಷಃ ಆಕೆಯ ಶ್ರಮದ ಅಸಲಿಗೆ ಮೋಸವಾಗುತ್ತಿರಲಿಲ್ಲ ಅಷ್ಟೆ. 

ಇನ್ನು ಕುಸುಮಕ್ಕ, ಇಂದಿರಾ ಇವರೆಲ್ಲರಂತೂ ಅಮ್ಮನ ಜೊತೆಗೆ ಅಡುಗೆಯಲ್ಲೂ ಸಹಾಯಕ್ಕೆ ನಿಂತು ಮಂಜಿ ತಂದು ಕೊಟ್ಟ ಗೆರಸಿ-ಮೊರ ಮುಂತಾದವಕ್ಕೆ ಕಾಗದ ಕೂಡಿಸಿ ಕಡೆದ ಮೆಂತೆಯ ಲೇಪ ಹಚ್ಚುವಲ್ಲಿ ಕೈಜೋಡಿಸುತ್ತಿದ್ದುದೂ ಉಂಟು. ತೀರ್ಥಹಳ್ಳಿಯಲ್ಲಿ ತಮಗಿರುವ ಕೆಲಸಕ್ಕೆ ತೆರಳುವ ಮುನ್ನ ಬಸ್ಟ್ಯಾಂಡಿನಿಂದ ನೇರ ನಮ್ಮ ಮನೆಗೆ ಬಂದು ತಮ್ಮ ಕೈಚೀಲವನ್ನ ಅಲ್ಲಿಯೆ ಬಿಟ್ಟು, ಮುಖ ತೊಳೆದು-ತಲೆ ಬಾಚಿಕೊಂಡು. ಅಲ್ಲಿಂದ ಹೊರಟು ಕೆಲಸ ಮುಗಿಸಿ ಮತ್ತೆ ಮನೆಗೆ ಬಂದು ಊಟ ಮಾಡಿ ವಿರಾಮದಲ್ಲಿ ಸ್ವಲ್ಪ ಹರಟಿ, ಅನಂತರ ಒಂದು ಸಣ್ಣ ಕೋಳಿ ನಿದ್ದೆ ತೆಗೆದು ಮತ್ತೆ ಸಂಜೆ ಮುಖ ತೊಳೆದು ತಲೆ ಬಾಚಿಕೊಂಡು ಚಾ ಕುಡಿದು ಅನಂತರ ತಮ್ಮ ಊರಿನ ಕಡೆಯ ಬಸ್ಸೇರಲು ಅವರೆಲ್ಲ ಸಾಮಾನ್ಯವಾಗಿ ಬಸ್ಟ್ಯಾಂಡಿನ ದಾರಿ ಹಿಡಿಯುತ್ತಿದ್ದರು. ಕುಸುಮಕ್ಕ ಮುಖ ತೊಳೆದು ಹಚ್ಚಿಕೊಳ್ಲುತ್ತಿದ್ದ ಪಾಂಡ್ಸ್ ಕ್ರೀಂನ ಘಮ, ಇಂದಿರಾರ ಫೇರ್ ಎಂಡ್ ಲವ್ಲಿಯ ಪರಿಮಳ, ಸುನಿಯಕ್ಕನ ವಿಕೊ ಟರ್ಮರಿಕ್ ಕ್ರೀಂನ ಸುಗಂಧ ಅವರು ಹೋಗಿ ಬಹುಕಾಲದ ನಂತರವೂ ಅಲ್ಲೆ ಕನ್ನಡಿಯ ಸುತ್ತಮುತ್ತ ಸುಳಿದಾಡುತ್ತಿರುತ್ತಿತ್ತು. ಈಗಲೂ ಅದರ ಗಂಧ ನನ್ನ ಉಸಿರಿನಿಂದ ಮಾಸಿಲ್ಲ.

ನಾವಷ್ಟೆ ಅಲ್ಲ ಎದುರು ಮನೆಯ ಬಾಲರಾಜಣ್ಣ, ಸಮೀಪದ ಮನೆಯ ಪದ್ದಯ್ಯ, ಒತ್ತಿನ ಮನೆಯ ರಾಜೀವಕ್ಕ, ಕೊನೆಯ ಮನೆಯ ಗಾಯತ್ರಿ ಆಂಟಿ ಹೀಗೆ ಎಲ್ಲರ ಮನೆಗೂ ಇಂತಹ ಅವ್ಯಕ್ತ ಬಾಂಧವ್ಯದ ಬಂಧುಗಳು ವಾರದ ಒಂದಿಲ್ಲೊಂದು ದಿನ ಬಂದೇ ಬರುತ್ತಿದ್ದರು. ಇದು ಪೇಟೆಯ ನಿವಾಸಿಗಳಲ್ಲಿ ಬಹುತೇಕರ ಪಾಲಿಗೆ ನಿತ್ಯದ ರೂಢಿಯೊಳಗೊಂದಾಗಿತ್ತಷ್ಟೆ. ತಾಲೂಕಿನ ಒಂದೊಂದು ಮೂಲೆ ತೀರ್ಥಹಳ್ಳಿಯಿಂದ ಒಂದು-ಒಂದೂವರೆ ಘಂಟೆ ಪ್ರಯಾಣದ ಸುದೀರ್ಘ ಅಂತರದಲ್ಲಿರುತ್ತಿದ್ದರಿಂದ ಈ ತಾತ್ಕಾಲಿಕ ಬಿಡಾರಗಳು ಅವರಿಗೆ ಅನಿವಾರ್ಯವಾಗಿದ್ದರೆ. ಹಳ್ಳಿಗರೊಂದಿಗಿನ ಸುಮಧುರ ಒಡನಾಟಕ್ಕೆ ನಮಗಿದು ಅವಕಾಶವನ್ನೊದಗಿಸಿಕೊಟ್ಟಿತ್ತು.

ಹೀಗೆ ಮನೆಗೆ ಬರುತ್ತಿದ್ದ ಮಂಡಗದ್ದೆ ಸಮೀಪದ ಸರವಿನಗದ್ದೆಯ ಕುಸುಮಕ್ಕ ಆಗಿನ್ನೂ ಮೂರೋ-ನಾಲ್ಕೋ ವರ್ಷದ ಪೋರನಾಗಿದ್ದ ನನ್ನನ್ನ "ನನ್ನ ಗಂಡ" ಅಂತ ಚುಡಾಯಿಸುತ್ತಿದ್ದರು. ಬರಿ ಮೈಯಲ್ಲಿ ಆಥವಾ ಬಹುತೇಕ ಚಡ್ಡಿಯಿಲ್ಲದೆ ಅಂಗಿ ಮಾತ್ರ ತೊಟ್ಟುಕೊಂಡು ಓಡಾಡುತ್ತಿದ್ದ ನನ್ನ "ಗಂಡಸ್ತನ"ಕ್ಕೆ ಈ ಮಾತಿನಿಂದ ವಿಪರೀತ ಗಲಿಬಿಲಿ, ನಾಚಿಕೆ(!) ಅಗುತ್ತಿತ್ತು. ನನ್ನನ್ನ ಹಿಡಿದೆತ್ತಿಕೊಳ್ಳಲಿಕ್ಕೆ ಬಯಸುತ್ತಿದ್ದ  ಅವರ ಕೈಗೆ ಸಿಕ್ಕದೆ ನಾನು ಪುಸಕ್ಕನೆ ಓಡಿ ಹೋಗಿ ಅಮ್ಮನ ಸೀರೆಯಲ್ಲಿ ಮುಖ ಮುಚ್ಚಿಕೊಳ್ಳುತ್ತಿದ್ದೆ ( ಗಮನಿಸಿ ಮುಖ ಮಾತ್ರ!.). ಕುಸುಮಕ್ಕ ಮಂಡಗದ್ದೆಯ ದಿಟ್ಟ ಹುಡುಗಿ. ಆಗ ಅವರ ಪ್ರಾಯ ಬಹುಷಃ ಇಪ್ಪತ್ತಾರರ ಆಸುಪಾಸಿನಲ್ಲಿತ್ತು ಅನ್ನಿಸುತ್ತೆ. 

ಅಪ್ಪನ ನಿಷ್ಕ್ರಿಯತೆಯ ಕಾರಣ ಮನೆಯ ಹಿರಿ ಮಗಳಾಗಿ ಒಬ್ಬ ಹುಡುಗನ ಹಾಗೆ ಜಮೀನಿನ-ತೋಟದ ಎಲ್ಲಾ ಜವಾಬ್ದಾರಿ ಹೊತ್ತು ಖುದ್ದು ಉತ್ತಿ-ಬಿತ್ತಿ-ಕಟಾವು ಮಾಡಿ, ಅಡಿಕೆಯ ಮರಕ್ಕೆ ನಿಂತು ಔಷಧಿ ಹೊಡೆಸಿ-ಫಸಲು ಕುಯ್ಯಿಸಿ, ಆಡಿಕೆ ಸುಲಿಸಿ-ಒಣಗಿಸಿ ಮಂಡಿಗೆ ಹಾಕಿ ಹಣ ಪಡೆಯುವ ತನಕ ಎಲ್ಲಾ ಕೆಲಸಗಳಿಗೂ ತಾವೆ ಹೆಗಲು ಕೊಟ್ಟ ಕಾರಣ ಅವರಿನ್ನೂ ಅವಿವಾಹಿತೆಯಾಗಿಯೆ ಉಳಿದಿದ್ದರು. ಸಾಲದ್ದಕ್ಕೆ ತನ್ನ ಬೆನ್ನಿಗೆ ಹುಟ್ಟಿದ್ದ ಇಬ್ಬರು ತಂಗಿಯರ ಹಾಗೂ ಒಬ್ಬ ತಮ್ಮ ಉಮೇಶಣ್ಣನ ವಿದ್ಯಾಭ್ಯಾಸದ ಜವಾಬ್ದಾರಿಯೂ ಅವರ ಹೆಗಲ ಹೊಣೆಗಾರಿಕೆಯೆ ಆಗಿತ್ತು. ಅವರನ್ನೆಲ್ಲ ಒಂದು ದಡ ಮುಟ್ಟಿಸಿ ತಾವು ಸಂಸಾರವಂದಿಗರಾಗುವ ಹೊತ್ತಿಗೆ ಬಹುಷಃ ಅವರ ಪ್ರಾಯ ಮೂವತ್ತರ ಗಡಿ ಮೀರಿ ಹೋಗಿತ್ತು ಅನ್ನಿಸುತ್ತೆ. ಹೀಗಾಗಿ ಅವರು ನಮ್ಮಲ್ಲಿಗೆ ಬಂದಾಗ ಅಮ್ಮನ ಜೊತೆಯ ಹರಟೆಯಲ್ಲಿ ಅವರ ಮದುವೆಯ ಮಾತು ಬಂದಾಗಲೆಲ್ಲ ಅವರು ಆ ಮಾತನ್ನ ಹಾರಿಸುತ್ತಿದ್ದರು ಹಾಗೂ ನನ್ನನ್ನೆ ಆವರ ಗಂಡ ಎನ್ನುತ್ತಿದ್ದರು! 

ನಾನು ಅಗೆಲ್ಲ ವಿಪರೀತ ಗಲಿಬಿಲಿಗೊಂಡು ಅಗತ್ಯ ಮೀರಿ ನಾಚಿ ಕೆಂಪಾಗುತ್ತಿದ್ದೆ. ಟಿವಿ ಮತ್ತು ಅಗಾಗ ಮಾತ್ರ ನೋಡಲಿಕ್ಕೆ ಸಿಗುತ್ತಿದ್ದ ಸಿನೆಮಾಗಳಲ್ಲಿ ಮಾತ್ರ "ಗಂಡ-ಹೆಂಡತಿ"ಯರನ್ನ ಕಂಡು ಗೊತ್ತಿದ್ದ ನನಗೆ ಇನ್ನುಳಿದಂತೆ "ಗಂಡ" ಏನೆನ್ನುವುದು ಗೊತ್ತೇ ಇರದಿದ್ದರೂ ಸಹ ನಾನು ಆ ಕ್ಷಣ ನಾಚಿ ಟೊಮ್ಯಾಟೋ ಹಣ್ಣಿನಂತೆ ಆಗಿರುತ್ತಿದ್ದೆ! ಕಾಲಾನುಕ್ರಮದಲ್ಲಿ ಕುಸುಮಕ್ಕ ಮದುವೆಯಾಗಿ ನಿಜದಲ್ಲಿ "ಗಂಡ"ನನ್ನು ಹೊಂದುವ ಕಾಲಕ್ಕೆ ಕಾರ್ಕಳದಲ್ಲಿ ನನ್ನ ವನವಾಸದ ಕೊನೆಯ ವರ್ಷ ನಡೆಯುತ್ತಿತ್ತು ಅನ್ನಿಸುತ್ತೆ. ಹೀಗೆ ನನ್ನ ಮೊದಲ "ಹೆಂಡತಿ"ಯ ಅಧಿಕೃತ ಗಂಡನನ್ನ ನಾನು ಇದುವರೆಗೂ ಕಾಣಲಿಕ್ಕೆ ಸಾಧ್ಯವಾಗಲೇ ಇಲ್ಲ. ಆದರೆ ನನಗೆ ಚಿಗುರು ಮೀಸೆ ಹೌದೋ ಇಲ್ಲವೋ ಅನ್ನುವ ಹಾಗೆ ಮೂಡಿ ಗಂಟಲು ಆಗಷ್ಟೆ ಒಡೆಯಲು ಆರಂಭಿಸುವ ಹೊತ್ತಿನಲ್ಲಿ ಒಮ್ಮೆ ಮಂಗಳೂರಿನಲ್ಲಿದ್ದವ ನಾನು ತೀರ್ಥಹಳ್ಳಿಗೆ ಹೋಗಿದ್ದಾಗ ಕುಸುಮಕ್ಕ ಕಾಣಸಿಕ್ಕಿದ್ದರು, ಐದು ತಿಂಗಳ ಬಸುರಿ ಕುಸುಮಕ್ಕ ವೈದ್ಯರ ಹತ್ತಿರ ನಿಯಮಿತ ಪರೀಕ್ಷೆಗಾಗಿ ಅವತ್ತು ಬಂದಿದ್ದವರು ಮನೆಗೂ ಬಂದಿದ್ದರು. ಅವರನ್ನ ಆ ಅವತಾರದಲ್ಲಿ ನೋಡಿ ಅದೇಕೋ ನನಗೆ ಇರುಸುಮುರುಸಾಗಿತ್ತು ಅನ್ನೋದು ಇಂದಿಗೂ ಚೆನ್ನಾಗಿ ನೆನಪಿದೆ. ಆದರೆ ಆ ಇರುಸುಮುರುಸಿಗೆ ಖಚಿತ ಕಾರಣ ಕೊಡಲಾರೆ!  ಕುಸುಮಕ್ಕ ಈಗಲಾದರೂ ಜವಾಬ್ದಾರಿಗಳೆಲ್ಲವಿಂದ ಮುಕ್ತರಾಗಿ ಸುಖವಾಗಿ ಇದ್ದಾರು ಅನ್ನಿಸುತ್ತೆ.

ಬೊಬ್ಬಿಯ ಇಂದಿರಾ ಕಿಣಿ ಕುಸುಮಕ್ಕನಂತೆ ನಮ್ಮಲ್ಲಿಗೆ ಆಗಾಗ ಕೆಲಸದ ನಿಮಿತ್ತ ಬರುತ್ತಿದ್ದ ಇನ್ನೊಬ್ಬ ಚಲುವೆ. ಅವರದ್ದೂ ಹೆಚ್ಚೂ ಕಡಿಮೆ ಅದೇ ಕಥೆ. "ನನಗ್ಯಾಕಮ್ಮ ಇಷ್ಟು ಬೇಗ(?) ಮದುವೆ?, ನನ್ನ ಗಂಡ ಇಲ್ಲೇ ಇದ್ದಾನಲ್ಲ! ಇದು ನನ್ನ ಅತ್ತೆ ಮನೆಯಲ್ವ?! ಹಾಗಾಗಿಯೆ ನಾನು ಆಗಾಗ ಇಲ್ಲಿಗೆ ಬರೋದು!!!" ಅಂತ ಅನುಗಾಲದ ಪಲ್ಲವಿಯನ್ನವರು ಹಾಡುತ್ತಿದ್ದರೆ, ಅಮ್ಮ ಅದಕ್ಕೆ ಉತ್ತರವಾಗಿ "ಸಾಕಾಗಿದೆ ಮಾರಾಯ್ತಿ ಇವನ ಕೀಟಲೆ! ನಿನ್ನ ಗಂಡನನ್ನ ನೀನು ನಿಮ್ಮ ಮನೆಗೆ ಕರ್ಕೊಂಡು ಹೋಗಿ ಮನೆ ಅಳಿಯ ಮಾಡಿಟ್ಟುಕೋ. 'ಅಳಿಯ ಮನೆ ತೊಳಿಯ' ಅಂತ ಗಾದೆಯೆ ಉಂಟಲ್ವಾ. ತಂಟೆಕೋರನಾದ ಇವನಿಗೆ ಮೂರು ಹೊತ್ತು ಅನ್ನ ಹಾಕಿ ನಿಮ್ಮ ಮನೆಯನ್ನ ನಿತ್ಯ ಚನ್ನಾಗಿ ತೊಳಿಸಿ!!" ಅಂತ ಪ್ರ್ತತ್ಯುತ್ತ್ರರ ನೀಡುತ್ತಿದ್ದ್ರುದು ಇವೆಲ್ಲಾ ನೆನ್ನೆ ಮೊನ್ನೆ ನಡೆದಂತಿದೆ. ನಾನು ಇಂದಿರಾ ಬಂದಾಗಲೆಲ್ಲ ಈ ಮಾತು ಕೇಳಿ ಅವರಿಬ್ಬರ ಮೇಲೂ ಗಲಿಬಿಲಿಯ ಸಿಟ್ಟನ್ನ ವ್ಯಕ್ತ ಪಡಿಸುತ್ತಿದ್ದೆ. ಆದರೂ ಬರುಬರುತ್ತಾ ನನಗದು ಅಭ್ಯಾಸವಾಗಿ ಹೋಗಿತ್ತು ಅನ್ನಿಸುತ್ತೆ. ಹೀಗಾಗಿ ಅವರು ಬಲವಂತವಾಗಿ ಓಡುತ್ತಿದ್ದ ನನ್ನನ್ನ ಹಿಡಿದು ಲೊಚಲೊಚನೆ ಮುತ್ತಿಡುವಾಗ ಮೇಲ್ನೋಟಕ್ಕೆ ಆ ಒತ್ತಾಯದ ಚುಂಬನವನ್ನ ಪ್ರತಿಭಟಿಸುತ್ತಾ ನಾನು ಕೊಸರಾಡುತ್ತಿದ್ದಂತೆ ಇನ್ನಿತರರಿಗೆ ಗೋಚರಿಸುತ್ತಿದ್ದರೂ ಸಹ ನನಗೆ ಮಾತ್ರ ಒಳಗೊಳಗೆ ಒಂಥರಾ ಖುಷಿಯೆ ಅನ್ನಿಸುತ್ತಿತ್ತು! ಇಂದಿರಾರಿಗೂ ಆನಂತರದ ದಿನಗಳಲ್ಲಿ ಅವರ ಪ್ರಾಯಕ್ಕಿಂತ ಸ್ವಲ್ಪ ಹಿರಿಯ ವಯಸ್ಸಿನ ವ್ಯಕ್ತಿಯ ಜೊತೆ ಮದುವೆಯಾಯಿತಂತೆ. ನಾನವರ ಮದುವೆಗೂ ಹೋಗಲಾಗಿಲ್ಲ, ಅವರೀಗ ಹೇಗಿದ್ದಾರೋ ಅನ್ನುವ ಅರಿವೂ ಸಹಿತ ನನಗಿಲ್ಲ.

ಮಂಜಿ ನಾನು ನೋಡುವಾಗಲೆ ಹಣ್ಣುಹಣ್ಣು ಮುದುಕಿ. ಬುಟ್ಟಿ-ಗೊರಬು ಮತ್ತಿತರ ಬಿದಿರು ಹಾಗೂ ಬೆತ್ತದ ಉತ್ಪನ್ನಗಳ ತಯಾರಿಕೆಯಲ್ಲಿ ಮಂಜಿ, ಮತ್ತವಳ ಗಂಡನದ್ದು ಎತ್ತಿದ ಕೈ. ಅವಳು ಏನಾದರೂ ಕೆಲಸದ ನಿಮಿತ್ತ ನಮ್ಮಲ್ಲಿಗೆ ಬಂದರೆ ಅವಳ ಕೈಯಲ್ಲಿ ಏನಾದರೊಂದು ಬೆತ್ತದ ಉತ್ಪನ್ನ ಇದ್ದೇ ಇರುತ್ತಿತ್ತು. ಅವಳ ಮಗಳ ಮದುವೆ ಇನ್ನೂ ಆಗಿರಲಿಲ್ಲ ಹೀಗಾಗಿ ನಾನು ಅವಳ ಪಾಲಿಗೆ "ಅಳಿಯ"ನೂ ಆಗಿದ್ದೆ ಕೆಲಕಾಲ. ಮಗಳ ಮದುವೆಯ ಪ್ರಸ್ತಾಪವಾದಾಗಲೆಲ್ಲ ನುಣ್ಣಗೆ ತಾನೆ ಕೆತ್ತಿ ಮಾಟವಾಗಿ ಲೋಟದಂತಾಗಿಸಿದ್ದ ಗರಟೆಯಲ್ಲಿ ಚಹಾ ಹೀರುತ್ತಾ "ನನ್ನ ಅಳಿಯ ಇಲ್ಲೆ ಇದಾನಲ್ಲಮ್ಮ, ಮದಿ ಮಾಡಿಸಿಕೊಡ್ನಿ ಕರ್ಕೊಂಡ್ ಹೋಗ್ತೆ!" ಅಂತ ತನ್ನ ಎಲೆ ಅಡಿಕೆ ತಿಂದು ತಿಂದು ಕೆಂಪಾಗಿ ಕಲೆಗಟ್ಟಿ ಹೋಗಿದ್ದ ತನ್ನ ಅಷ್ಟೂ ಹಲ್ಲು ಬಿಟ್ಟು ಕುಶಾಲಿನ ನಗುವನ್ನ ಹೊಮ್ಮಿಸುತ್ತಿದ್ದಳು. ತಕ್ಷಣ ಸಿಟ್ಟಿಗೇಳುತ್ತಿದ್ದ ನಾನು ಅವಳು ಕೊಟ್ಟಿದ್ದ ಗೆರಸೆ, ಸಿಬ್ಬಲವನ್ನ ಸವರುತ್ತಾ ಕುಳಿತಿದ್ದವ ತಟಕ್ಕನೆ ಎದ್ದು ಅವಳ ಬೆನ್ನಿಗೆ ಮುಷ್ಠಿ ಕಟ್ಟಿಕೊಂಡು ನನ್ನ ಪುಟ್ಟ ಪುಟ್ಟ ಕೈಗಳಿಂದ ಬಡಬಡನೆ ಗುದ್ದುತ್ತಿದ್ದೆ. ಮೆಲ್ಲಗೆ ಮಸಾಜ್ ಮಾಡಿದಂತಾಗುತ್ತಿದ್ದ ಆ ಎಳೆ ಕೈಯ ಗುದ್ದುಗಳನ್ನ ಆ ಮುದುಕಿ ನಗುನಗುತ್ತಲೆ ಸಹಿಸಿಕೊಂಡು ಎಂಜಾಯ್ ಮಾಡುತ್ತಿದ್ದಳು. ಆದರೆ ನನ್ನ ಪೆಟ್ಟಿಗೆ ನೋವಾದಂತೆ ನಟಿಸಿ ಅಳುವಂತೆ ಮಾಡಿದಾಗ ಮಾತ್ರ ನನಗೆ ತೃಪ್ತಿಯಾಗಿ ಗುದ್ದುಗಳನ್ನ ನಿಲ್ಲಿಸುತ್ತಿದ್ದೆ. ತನಗಿಂತ ಎರಡರಷ್ಟು ಪ್ರಾಯದ 'ಹುಡುಗ'ನ ಜೊತೆ ಮುಂದೆ ಮಂಜಿ ಮಗಳ ಮದುವೆಯೂ ಆಯಿತಂತೆ.

ಆಮ್ಮ ಅಂದರೆ ನನ್ನ ಅಜ್ಜಿಯ ಖಾಸಾ ಸ್ನೇಹಿತೆ ವಾರಿಜಕ್ಕ. ಗಣಪತಿ ಕಟ್ಟೆಯ ಪಕ್ಕ ಅವರ ಮನೆ ಸಂದಿಯೊಂದರಲ್ಲಿತ್ತು. ಅವರ ಗಂಡ ಪದ್ಮನಾಭಣ್ಣ ಮಾರಿಗುಡಿಯ ಎದುರು ಎಳನೀರು ಹಾಗೂ ಪಟಾಕಿಯ ಅಂಗಡಿ ಇಟ್ಟುಕೊಂಡಿದ್ದರು. ಆಗೆಲ್ಲ ಆಮ್ಮನ ಬಾಲವಾಗಿ ಅವರು ಹೋದಲ್ಲೆಲ್ಲ ತಪ್ಪದೆ ಹೋಗುತ್ತಿದ್ದ ನಾನು ಅವರು ದೇವಸ್ಥಾನಕ್ಕೆ ಹೋದಾಗಲೆಲ್ಲ ಬೆನ್ನು ಹಿಡಿಯುತ್ತಿದ್ದೆ. ಆಗೆಲ್ಲ ನಾವು ವಾರಿಜಕ್ಕನ ಮನೆಗೂ ಹೋಗಿ ಚಾ ಅಥವಾ ಪಾನಕ ಕುಡಿದು ಬರೋದಿತ್ತು. ವಾರಿಜಕ್ಕನ ಎರಡನೆ ಮಗಳು ನಿಮ್ಮಿ ನನ್ನ ಹೆತ್ತಮ್ಮನ ಸಮಪ್ರಾಯದವರು ಅವರನ್ನ ಚಿಕ್ಕಮಗಳೂರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ನನಗಿಂತ ಎರಡು ವರ್ಷಕ್ಕೆ ಕಿರಿಯಳಾದ ಮಗಳು ನಿರ್ಮಲಾರಿಗಿದ್ದಳು. ನೋಡಲು ಮುದ್ದುಮುದ್ದಾಗಿಯೂ ಅವಳಿದ್ದಳು. ಅವರು ನನ್ನ ಕಂಡಾಗಲೆಲ್ಲ "ನನ್ನ ಅಳಿಯ" ಅಂತ ಹಿಡಿದು ಹಿಂಡಿ ಮುದ್ದಿಸುತ್ತಿದ್ದರು. ಆಗೆಲ್ಲಾ ಅವರು ಹಾಗಂದದ್ದೆ ರುಮ್ಮನೆ ನನಗೆ ಸಿಟ್ಟು ಏರುತ್ತಿತ್ತು. "ಇಲ್ಲಾ ನಾನಲ್ಲಾ" ಆಂತ ನಾನು ಕಿರುಚುತ್ತಿದ್ದೆ, ಹೀಗೆ ಪ್ರತಿಭಟಿಸಿದಾಗಲೆಲ್ಲ ಅವರಿಗೆ ಇನ್ನಷ್ಟು ಉತ್ತೇಜನ ಸಿಕ್ಕಂತಾಗಿ "ಓಹೋಹೊ ಇವ ದೊಡ್ದ ಗಂಡಸು! ಮದ್ವೆ ಆಗಲ್ಲಂತೆ, ಹಿಡ್ಕೊಂಡ್ ಹೋಗಿ ಮನೆ ಅಳಿಯ ಮಾಡ್ಕಂತಿನಿ!" ಅಂತ ರೇಗಿಸುತ್ತಲೆ ಬೆದರಿಕೆ ಒಡ್ಡುತ್ತಿದ್ದರು! ಇದೇನೆ ಇದ್ದರೂ ಬರುಬರುತ್ತಾ ನಾನು ಅವರ ಮನೆಗೆ ಹೋದಾಗಲೆಲ್ಲ ಅವರು ನನ್ನನ್ನ ರೇಗಿಸಲಿ ಅಂತಲೆ ಮಳ್ಳನಂತೆ ಕಾಯುತ್ತಿದ್ದೆನೇನೋ ಅಂತ ಕಾಣಿಸುತ್ತದೆ! ಅವರ ಮಗಳೂ ಅವರಂತೆ ಈಗ ಸುರಸುಂದರಿಯೆ ಆಗಿರಲಿಕ್ಕೆ ಸಾಕು. ೧೯೯೪ರಲ್ಲಿ ನನ್ನ ಮೊದಲ ಚಿಕ್ಕಮ್ಮನ ಆರತಕ್ಷತೆಯಲ್ಲಿ ಅವಳನ್ನ ನೋಡಿದ್ದೆ ಕೊನೆ ಈಗ ಅವಳಿಗೆ ಬಹುಷಃ ೨೮ ವರ್ಷ ಪ್ರಾಯವಿದ್ದೀತು. ಮದುವೆಯೂ ಆಗಿರಬಹುದು.

ಈಗ ಮನೆಯಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ಎರಡು ಮೂರುವರ್ಷಗಳಲ್ಲಿ ಸಾಗಿನಬೆಟ್ಟಿಗೆ ಹೋದಾಗಲೆಲ್ಲ ಮದುವೆಯಾಗುವಂತೆ ಅಮ್ಮನ ಕಿರಿಕಿರಿ ಹೆಚ್ಚುತ್ತಿರುವಾಗ ಇವರೆಲ್ಲ ಸ್ಮೃತಿಯಲ್ಲಿ ಹಾಗೆಯೆ ಸುಳಿದು ಮರೆಯಾದರು. ಬಾಳು ಬಾಲ್ಯದಲ್ಲಿಯೇ ಬಹಳ ಗಂಭೀರವಾಗಿದ್ದರೆ ಈಗ ನನಗೆ ಸರಿಸುಮಾರು ಅರ್ಧ ಡಝನ್ ಹೆಂಡಿರಿರಬೇಕಿತ್ತು! ಪ್ರೀತಿ ಗಿಟ್ಟದೆ ಇನ್ನು ಮದುವೆ ಈ ಜನ್ಮಕ್ಕೆ ಇಲ್ಲ ಎನ್ನುವ ಖಚಿತ ನಿರ್ಧಾರಕ್ಕೆ ಬಂದ ನನ್ನ ಭಗ್ನ ಹೃದಯವನ್ನ ಬಗೆದು ಅಮ್ಮನಿಗೆ ಹೇಗೆ ತೋರಿಸಲಿ? ಏನಂತ ಅವರಿಗೆ ಅರ್ಥ ಮಾಡಿಸಲಿ?