Friday, July 22, 2011

ಕೃತಜ್ಞತೆ....

ಈ ದೇಶಕ್ಕೆ ರಾಜಕೀಯ ಸ್ವಾತಂತ್ರದ ಸುಳಿಗಾಳಿ ಬೀಸಿದ್ದು ಕೇವಲ ಕೆಲವರಿಂದಷ್ಟೇ ಎಂಬ ಭ್ರಮೆ ಹಲವು ಭ್ರಮಾಧೀನರದ್ದು.ಹೀಗಿರುವಾಗಲೆ ಮೊ ಕ ಗಾಂಧಿ,ಜ ಲಾ ನೆಹರುಗಳನ್ನ ನಿರಂತರ ಜಪಿಸುತ್ತ ಅವರ ಉತ್ಸವಮೂರ್ತಿ ಹೊತ್ತು ಹೊತ್ತಲ್ಲದ ಹೊತ್ತಲ್ಲಿ ಕರಗ ಕುಣಿಯುವ ಜನ ( ಈ ಜಪದ ಹಿಂದೆ ಇಹದ ಸುಖ ಹಾಗು ಅಧಿಕಾರಗಳ ಅಪೇಕ್ಷೆ ಇರುತ್ತದೆ ಅನ್ನೋದು ಬೇರೆ ಮಾತು!) ಬಾಲಗಂಗಾಧರ ತಿಲಕ್(೨೩ ಜುಲೈ ೧೮೫೬-೧ ಆಗೋಸ್ಟ್ ೧೯೨೦),ಚಂದ್ರಶೇಖರ ಆಜಾದ್ ರನ್ನ (೨೩ ಜುಲೈ ೧೯೦೬-೨೭ ಫೆಬ್ರವರಿ ೧೯೩೧) ಜಾಣತನದಿಂದ ಮರೆಯುತ್ತಾರೆ.ಅಷ್ಟಲ್ಲದೇ ಇವರೆಲ್ಲರ ನಿತ್ಯ ಸ್ಮರಣೆಯಿಂದ ಯಾವುದೆ ರಾಜಕೀಯ ಲಾಭವೂ ಇಲ್ಲವಲ್ಲ?!
ಇಂದು ಭಾವಕ್ಯತೆಯ ನಿಜವಾದ ಪಾಠ ಕಳಿಸಿದ ತಿಲಕರ,ಸ್ವಾತಂತ್ರಕ್ಕಾಗಿ ಹಂಬಲಿಸಿ ಪ್ರಾಣ ತೆತ್ತ ಆಜಾದರ ಜನ್ಮದಿನ...ಕನಿಷ್ಠ ಇವತ್ತಾದರೂ ಅವರನ್ನ ತಂಪುಹೊತ್ತಿನಲ್ಲಿ ನೆನೆಯಬೇಕಲ್ಲ? ಅಷ್ಟೂ ಕೃತಜ್ಞತೆ ನಮ್ಮೊಳಗಿರದಿದ್ದರೆ ಹೇಗೆ?

Sunday, July 10, 2011

ಬಣ್ಣದ ಕನಸುಗಳಿಗೆ ಇರುಳೆಲ್ಲ ಸವಿನಿದ್ದೆ...

ಮೌನಕ್ಕೆ ಜಾರಿದ
ಮಾತುಗಳಿಲ್ಲದ ಇರುಳ ಮೋಹಕತೆಗೆ.....
ಮನಸೋತ ಮನಸಿನಾಳದಲ್ಲಿ ನಿನ್ನೊಂದಿಗೆ
ಆಡಿ ಮುಗಿಸಿರುವ ನುಡಿಗಳ ಮುತ್ತುಗಳೆ ತುಂಬಿವೆ,
ನಿನ್ನೆದೆಯ ಋಣ ನನ್ನ ಮನಸೊಳಗೆ
ಒಲವ ಕೃತಜ್ಞತೆಯನ್ನ ಉಕ್ಕಿ ಹರಿಸಿದೆ/
ಇರುಳ ಮೋಹಕತೆಗೆ ಮನಸೋತ ಮನಸು
ಹಣೆದಿದ್ದ ಕನಸುಗಳಲ್ಲೆಲ್ಲ ನಿನ್ನದೆ ಕಂಪನ್ನ ಗಾಳಿ ಬಳಿದಂತೆ
ನನ್ನೆಲ್ಲ ಭಾವಗಳು ನಿನ್ನುಸಿರ ಮಳೆಯಲ್ಲಿ ತೊಯ್ದಂತೆ...
ಭ್ರಮೆಯಲ್ಲಿ ತೇಲಿದೆ ನನ್ನೆದೆಯ ಭಾವಗಳು//


ದಾಸವಾಳದ ಹೂವ ಒಡಲು ಹೊಕ್ಕ
ಜೇನುದುಂಬಿಯ ಹಾಗಾಗಿದೆ ನನಗೆ...
ನಿನ್ನ ಎದೆಯಾಳದಲ್ಲಿ ಅದೆಷ್ಟು ಒಲವಿನ ಭಂಡಾರವಿತ್ತಲ್ಲ,
ಮನಸ ತೆರೆದು ತೋರಲಾರೆ
ಕನಸಿನಾಳಕ್ಕೆ ನಿನ್ನ ಕೈಹಿಡಿದು ಕರೆದೊಯ್ಯಲಾರೆ....
ನನ್ನೊಲವು ಎದೆಯೊಳಗೆ ಬೆಚ್ಚಗಿದೆ
ವಿವರಣೆಗೆ ಪದಗಳಿಲ್ಲದ್ದಿದ್ದರೂನೂ/
ಕಣ್ಣಕನ್ನಡಿಯಲ್ಲಿ ಪ್ರತಿ ಫಲಿಸುವ ನಿನ್ನ ಬಿಂಬಕ್ಕೆ
ಒಂದು ಕನಸಿನ ಚೌಕಟ್ಟು ಹಾಕಲಾಗುವಂತಿದ್ದರೆ!
ನನ್ನೆದೆಯ ಒಳ ಮನೆಯಲ್ಲೆ ನಿನ್ನ ಚಿತ್ರವ ಕಾಪಿಡುತ್ತಿದ್ದೆ,
ಸಂಭ್ರಮವನ್ನೆಲ್ಲ ಮಾರುವ ಸಂತೆಯೊಂದು ಇದ್ದಿದ್ದರೆ
ಅಲ್ಲೆ ಮೂಲೆಯಲ್ಲಿ ಸಂಕಟಗಳನ್ನೂ ಕೊಳ್ಳುವ ರದ್ದಿ ಅಂಗಡಿಯ ಯಾರಾದರೂ ತೆರೆದಿದ್ದರೆ,
ಯಥೇಚ್ಛವಾಗಿರುವ ನನ್ನೆಲ್ಲ ನೋವುಗಳನ್ನ ಅಲ್ಲಿ ಸಿಕ್ಕಷ್ಟು ಬೆಲೆಗೆ ಬಿಕರಿಗಿಡುತ್ತಿದ್ದೆ...
ಅದೇ ದುಡ್ಡಲ್ಲಿ ಒಂದಿಷ್ಟು ಖುಷಿಗಳ ಕೊಂಡುತಂದು ನಿನ್ನೆದುರು ಸುರಿಯುತ್ತಿದ್ದೆ//


ಮನಸ ಅರಳಿಸೋ ಹಾದಿಯ
ಮೌನ ಕರಗಿಸೊ ದಾರಿಯ....
ಕಳೆದುಕೊಂಡು ದಿಕ್ಕು ತಪ್ಪಿದ ನನಗೆ,
ನಿನ್ನ ಜೊತೆ ಕಳಚಿ ಹೋದ ನಂತರ ರೆಕ್ಕೆ ಮುರಿದ ಹಕ್ಕಿಯಂತಾಗಿದ್ದೇನೆ/
ಸಂಜೆಗಪ್ಪಿನ ಮತ್ತಲ್ಲಿ ಮನಸು
ನಿನ್ನೆದೆಯ ಜಾಡಿಗೆ ಮತ್ತೆ ಹೊರಳಿದೆ...
ನಾವಿಬ್ಬರೂ ಜೊತೆಯಾಗಿ ಕಳೆದಿದ್ದ ಕ್ಷಣಗಳ ಹಿತವಾದ ಕನವರಿಕೆಗೆ,
ಮುದುಡಿದ್ದ ನನ್ನ ತುಟಿಗಳ ಅಂಚಲೂ ಮುಗುಳ್ನಗುವರಳಿಸಿದೆ//


ನೆನಪಿನ ಕಂಬಳಿ ಹೊದ್ದ
ಬಣ್ಣದ ಕನಸುಗಳಿಗೆ ಇರುಳೆಲ್ಲ ಸವಿನಿದ್ದೆ...
ಮನಸು ಕನಸ ಕಿವಿಯಲ್ಲಿ ಉಸುರಿದ ಗುಟ್ಟನ್ನೆಲ್ಲ,
ಸನಿಹವೆ ಸುಳಿಯುತ್ತಿದ್ದ ತಣ್ಣನೆ ಗಾಳಿ ಕದ್ದು ಕೇಳಿಸಿಕೊಂಡಿತು..!/
ಹಗಲು ಹುಟ್ಟಿದ ಕ್ಷಣ
ಇರುಳು ಕಣ್ಮುಚ್ಚಿದ ಮುಂಬೆಳಕಲ್ಲಿ ಬೀಳುವ ಕನಸೆಲ್ಲ ಸಾಕಾರವಾಗುತ್ತವಂತೆ ನಿಜಾನ?
ಹಾಗಿದ್ದಲ್ಲಿ ನೀನು ಮರಳಿ ಬರಬೇಕಿತ್ತಲ್ಲ?,
ನನ್ನ ಮುಂಗುರುಳ ನೇವರಿಸಿ ಹಣೆಗೆ ಮುತ್ತಿಡಬೇಕಿತ್ತಲ್ಲ?
ನಾನು ಕನಸಲ್ಲಿ ಕಂಡದ್ದು ಇದನ್ನೆ ತಾನೇ//

ಕಣ್ಣಂಚಿನಲ್ಲಿ ನೀರ ಝರಿ...

ಮಳೆಗೆ ತನ್ಮಯವಾಗಿ ಮೈಯೊಡ್ಡಿ
ಮಿಂದ ದಾಸವಾಳದಂತಹ ನನ್ನ ಮನ....
ಮತ್ತನಾಯಿತು.
ಹನಿ ತೋಯಿಸಿದ ಕಡೆಯಲ್ಲೆಲ್ಲ ನಿನ್ನ ಸ್ಪರ್ಶವನ್ನೆ ಪರಿಭಾವಿಸಿ
ಇನ್ನಸ್ಟು ಕೆಂಪಾಗಿ...
ಉನ್ಮತ್ತನಾಯಿತು/
ಸಂಬಂಧಗಳನ್ನ ಕಳಚುವ ಕಾನೂನಿದೆ...
ಒಲವಲ್ಲಿ ನಾವಿಬ್ಬರೂ ಜೊತೆಗೆ ಹಂಚಿಕೊಂಡಿದ್ದ ಕ್ಷಣಗಳ ಸಂಭ್ರಮಗಳನ್ನಲ್ಲ,
ಬೇಡದ್ದನ್ನು ಅಳಿಸಿ ಹಾಕುವ ಬಗೆ ಮನಸಿಗೆ ಗೊತ್ತಿದೆ
ಆದರೆ....ನಿನ್ನೊಂದಿಗ​ೆ ಕಂಡಿದ್ದ ಕನಸುಗಳನ್ನಲ್ಲ//




ಅರ್ಥವೋ ಅನರ್ಥವೋ
ನನಗಂತೂ ಗೊತ್ತಿಲ್ಲ.....
ಆಗಾಗ ನಿನ್ನ ನೆನಪಲ್ಲಿ ನಾಲ್ಕುಸಾಳು ಗೀಚುವ ಗೀಳು ನನ್ನನ್ನಂತೂ ಮರುಳನ್ನನ್ನಾಗಿಸಿದೆ,
ನೆಪವಷ್ಟೇ ಈ ಪದ್ಯದ ಹಂಗು...
ಬದುಕ ಹಾದಿಯ ಪೂರ್ತ ನಡೆಯಲೇ ಬೇಕಲ್ಲ?
ಹಿಡಿದು ಹೀಗೆ ಗತದ ಅಂಗಿಯ ಚುಂಗು/
ನೀ ಬೇಕಂತಲೆ ಮರೆತು ಹೋದ
ನೆನಪಿನ ಕೈಚೀಲ ಜತನವಾಗಿದೆ ನನ್ನ ಬಳಿ....
ನೀನಿತ್ತು ಹೋದ ನಾ ತೀರಿಸಲಾಗದ ಗತದ ಕೈಸಾಲ,
ಆಗಾಗ ನೆನಪಿಸಿ ಕುಟುಕುತಿದೆ
ನನ್ನೆದೆಯ ಗೂಡಿನಲ್ಲಿ ಬಂಧಿತ ಮಾತನಾಡುವ ಗಿಳಿ//



ನೋವೊ ನಲಿವೊ
ನಿನ್ನುಸಿರ ಪರಿಮಳ ನನ್ನ ಮಲೆತ ಬಾಳನ್ನೂ ಸುವಾಸಿತವಾಗಿಸಿತ್ತಲ್ಲ....
ಇದಕ್ಕಿಂ​ತ ಹೆಚ್ಚು ಬೇರಿನ್ನೇನು ಬೇಕು ಬದುಕಲ್ಲಿ?,
ಉಕ್ತ ನುಡಿಗಳಲ್ಲಿ ವಿವರಣೆ ಅಸಾಧ್ಯ...
ನಿನ್ನ ನಿರಾಕರಣೆಯ ಬರೆಬಿದ್ದ ಹೃದಯದ ವೃಣವನ್ನ ಮರೆಮಾಚಲಾದರೂ ಹೇಗೆ ಸಾಧ್ಯ?/
ಘಾಸಿಗೊಂಡ ನನ್ನ ಮನ ಮೌನ
ಭಗ್ನ ನಿರೀಕ್ಷೆಗಳ ಎದುರು ಉಳಿದ ನೋವುಗಳೆಲ್ಲವು ಗೌಣ....
ಕಣ್ಣಂಚಿನಲ್ಲಿ ನೀರ ಝರಿ
ಆದರೂ ಸಾಂಗತ್ಯದ-ಸಾಮೀಪ್ಯದ ಬಾಯಾರಿಕೆಯಿಂದ ನಾ ತಪ್ತ,
ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳ ನೆನಪಿನ ಜಾತ್ರೆ ಎದೆಯಾಳದಲ್ಲಿ....
ಆದರೂ ವಿರಹದ ಭಣಗುಡುವ ಏಕಾಂತದಲ್ಲಿ ಮನಸು ಲುಪ್ತ//

Thursday, July 7, 2011

ನಿತ್ಯ ನಸುಕಲ್ಲಿ ನಿನ್ನುಸಿರ ಕನವರಿಕೆ....

ಮನದಾಳದ ಸಾಗರದಲ್ಲಿ ಹೆಪ್ಪುಗಟ್ಟಿದ....
ನೋವಿನ ನೀರ್ಗಲ್ಲೆಲ್ಲ,
ಆಗಾಗ ಕರಗಿ ಕಣ್ಣ ನೀರಾಗುತ್ತವೆ/
ನಿನಗೆ ಮಾತ್ರ ನಾ ಬರೆದು ಕಳಿಸುವ...
ಈ ತರಹದ,
ನಾಲ್ಕೆ ನಾಲ್ಕು ಶೋಕದ ಸಾಲಾಗುತ್ತವೆ//


ನಿನ್ನ ಹೆಸರನ್ನಷ್ಟೆ ಬರೆದು
ಹರಿವ ಹೊಳೆಯಲ್ಲಿ ನಾ ತೇಲಿಬಿಟ್ಟ ಹಸಿರು ಎಲೆಗಳು.....
ನೆಮ್ಮದಿಯ ತೀರವನ್ನೆ ಹೋಗಿ ಮುಟ್ಟಲಿ,
ನಾನಿನ್ನ ಕಳೆದುಕೊಂಡರೇನು?
ಕನಿಷ್ಠ ನನ್ನಷ್ಟೆ ನಿನ್ನ ಇಷ್ಟ ಪಡುವ...
ಮನಸೊಂದರ ತಲೆಬಾಗಿಲಿಗೆ ಅದು ಸಾಗಿ ತಾಕಲಿ/
ಎದೆ ಬಿರಿದರೆ ನೋವು,
ತುಟಿಬಿರಿದರೆ ನಲಿವು...ಸಂತಸಕ್ಕೂ ಕಣ್ಣೀರು
ಸಂಭ್ರಮಕ್ಕೂ ಅದೆ
ಬದುಕಿನ ವೈರುಧ್ಯದ ಈ ಎರಡು ಮುಖಗಳಿಗೆ....
ಏನೋ ಒಂಥರಾ ಒಳ ಸಾಮ್ಯತೆ ಇದೆ//



ಮೋಡದ ತೊಳ್ತೆಕ್ಕೆಯಿಂದ ಜಾರಿದ ಹನಿಯೊಂದು
ನೆಲದೊಡಲ ಒಲವ ಪಾಲಾಯ್ತು....
ನೀ ನನ್ನ ಕೈ ತಪ್ಪಿ ಇನ್ನೊಂದು ಜೀವದ ಕನಸಲ್ಲಿ ಲೀನವಾದ ಹಾಗೆ,
ಕೊಗಿಲೆಯೊಂದರ ಮೊಟ್ಟೆಗೆ ಕಾವು ಕೂತಂತೆ ಕರಿಕಾಗೆ!/
ಸಣ್ಣ ತಪ್ಪಿಗೇಕೆ ಸಂಕಟದ ಘೋರ ಶಿಕ್ಷೆ?
ಎಷ್ಟು ಅಂತ ಮಾಡಲಿ ಹೇಳು ನಿತ್ಯ ನಾ ನಿನ್ನ ಪ್ರತೀಕ್ಷೆ?....
ಸುಮ್ಮನೆ ಮರಳಿ ಬರಬಾರದೆ ನೀನು?,
ನಂದಿ ಹೋಗುವ ಮುನ್ನ ನನ್ನ ಕಣ್ಣ ನಿರೀಕ್ಷೆ//



ನಾ ಬರೆವ ಸಾಲುಗಳನ್ನ
ನೀ ಯಾವ ರಾಗದಲ್ಲಾದರೂ ಹಾಡು......
ನನ್ನೆದೆಯ ಭಾವಗಳಿಗೆ
ಯಾವ ಬಣ್ಣಗಳನ್ನಾದರೂ ಹಚ್ಚು,
ನಿನಗಿಂತ ಮಿಗಿಲೇನು ನನಗೆ ಈ ಲೋಕದ ಪಾಡು?
ನನಗಿಂತಲೂ ನನಗೆ ನೀನೆ ಹೆಚ್ಚು/
ನಿತ್ಯ ನಸುಕಲ್ಲಿ ನಿನ್ನುಸಿರ ಕನವರಿಕೆ....
ಇರುಳ ತುಂಬೆಲ್ಲ ನಿನ್ನ ಕನಸ ಕಾತರಕೆ,
ಕಾದು ಬಸವಳಿದ ನನ್ನ ಮನಸಿಗೆ.....
ನೆನಪಿನ ನಾವೆಯಲ್ಲಿ ತೇಲೋದರಲ್ಲಿಯೇ
ಅದೇನೂ ಅಪರಿಮಿತ ಸುಖ//

ಕನಸಾಗಿಯೆ ಉಳಿದು ಹೋಗಿದೆ....

ನೀನೆ ನನ್ನ ಪ್ರಾರ್ಥನೆಗಳಲ್ಲಿ....
ನೀನೇನೆ ನನ್ನುಸಿರಲ್ಲಿ ಆಡುವ ಗಾಳಿಯ ಆವರ್ತನೆಗಳಲ್ಲಿ,
ನಿತ್ಯ ಕಣ್ಣಕನ್ನಡಿಯಲ್ಲಿ ಕಾಣುತ್ತ ನಿನ್ನ ಬಿಂಬ....
ನನ್ನ ವಿಳಾಸವನ್ನ ನಿನ್ನೆದೆಯಲ್ಲಿ ನವೀಕರಿಸುತ್ತಿದ್ದೇನೆ/
ಸಾಕ್ಷಿಗಳನ್ನ ಹನಿದುಂಬಿದ ನನ್ನ ಕಣ್ಣಂಚಲಿ ಹುಡುಕಬಹುದು...
ನನ್ನೆದೆಯ ನೋವುಗಳನ್ನ
ಅದರ ಮಿಡಿತದಲ್ಲಿಯೆ ಅರಿಯಬಹುದು,
ಇನ್ನೆಲ್ಲರಿಂದಲೂ ಮರೆಮಾಚಿ ಮೌನದಲ್ಲಿ...
ನಾನಡಗಿಸಿಟ್ಟ ವಿಷಾದಗಳನ್ನೆಲ್ಲ
ನೀ ನನ್ನ ನಿಟ್ಟುಸಿರುಗಳಲ್ಲಿ ಕಿವಿಗೊಡಬಹುದು//



ಮೋಡದಲ್ಲಿ ಜೊತೆಜೊತೆಯಾಗಿ ನಾಲ್ಕು ಹೆಜ್ಜೆ ಹಾಕಿ...
ಮುಂಗಾರಿನ ಮಿಂಚ ಅಂಚನ್ನ ತಾಕಿ,
ಮಳೆಯ ಮೂರೆ-ಮೂರು ಹನಿಗಳಲ್ಲಿ ನಿನ್ನೊಂದಿಗೆ ಕೈಕೈಹಿಡಿದು
ತೋಯುವ ನನ್ನ ಕನಸು....
ಕನಸಾಗಿಯೆ ಉಳಿದು ಹೋಗಿದೆ/
ಮುಂಜಾನೆಯ ಮೊಗ್ಗು ಹಗಲ ಹೂವಾಗಿ ಅರಳುವಾಗ...
ಜೊತೆಗಿಷ್ಟು ನಿನ್ನ ನಗೆ ಮಲ್ಲಿಗೆಯೂ
ಬೆರೆತಿದ್ದರೆ ಸೊಗಸಾಗಿರುತ್ತಿತ್ತು//


ಮೋಡ ಮರೆಮಾಚಿದ ನೀಲ ಬಾನು....
ಮುಂಜಾವಲ್ಲಿ ನಾಚಿ ಕೆಂಪಾಗಿತ್ತೇನು?/
ಶಶಿಯ ಚೇಷ್ಟೆಯೊ? ಇಲ್ಲ,
ರವಿಯ ರಗಳೆಯೊ?
ಅಸಲು ಅದಕ್ಕೆ ಕಾರಣವಾದರೂ ಏನು?//

ಮುಂಜಾವಿನ ಮೊಗದ ಮೇಲಿನ ಮುಗುಳುನಗು.......

ಕನಸಿನಲ್ಲಿ ನೀ ಮುತ್ತಿಟ್ಟ ಮನಸಿನ ನವಿರು ಭಾವಗಳು,
ನಸುಕ ನನಸಿನಲ್ಲಿ ಕರಗಿ ಹೋದವು/
ಹಗಲ ಮುಂದೆ ಇರುಳು ನಾಚಿ ಮರೆಯಾದಂತೆ,
ಭಾರವಾದ ಎದೆಯ ತುಮುಲಗಳೆಲ್ಲ ಆಗಾಗ ಕಣ್ಣೀರ ತೊರೆಯಾದಂತೆ//


ತುಂಟ ಮನಸೂ ಕೂಡ ಆಗಾಗ ಹದ ತಪ್ಪುವುದಿದೆ,
ಶೃಂಗಾರದ ಹೊಸ ಪದ ಅದು ಕಟ್ಟುವುದಿದೆ/
ಶೀಲ-ಅಶ್ಲೀಲದ ಪರಿಧಿಯ ಬಗ್ಗೆ ಅದಕ್ಕಿಲ್ಲ ಅಂಕೆ,
ಅಂತಹದರಲ್ಲೂ ಕೂಡ ನಿನ್ನದೆ ನೋಡು ನೆನಕೆ ಅದಕ್ಕೆ?!//


ನನ್ನೆದೆ ಗೂಡಿನಲ್ಲಿ ಮೊಟ್ಟೆ ಇಟ್ಟಿದ್ದ ನಿನ್ನೊಲವಿನ ಹಕ್ಕಿ....
ಅದು ಬೆಚ್ಚನೆ ಪ್ರೀತಿಗೆ ಹೂಮರಿಯಾಗುವ ಮುನ್ನವೆ ಹಾರಿಹೋಯಿತು/
ಮನಸಿನ ನೆಮ್ಮದಿಯ ಸಾರವನ್ನೆಲ್ಲ ಹೀರಿ ಹೋಯಿತು...
ನನ್ನ ನೆನ್ನೆಗಳೆಲ್ಲ ಅದರ ನೆನಕೆಯಲ್ಲೆ ಹಾಗೆ ಜಾರಿಹೋಯಿತು,
ನಾಳೆಗಳನ್ನೆಲ್ಲ ಮೌನದ ಗುಹೆಸೇರಿ ಸ್ತಬ್ಧವಾಗುವಂತೆ ಹೇಳಿಹೋಯಿತು//


ಎಳೆಬಿಸಿಲ ಕೋಲು ಎಷ್ಟೇ ಚುರುಕಾಗಿದ್ದರೂ,
ಒಂದು ಮಳೆ ಹನಿಯ ತೂಕ ಅದಕ್ಕಿಲ್ಲ!/
ಮುಂಜಾವಿನ ಮೊಗದ ಮೇಲಿನ ಮುಗುಳುನಗು...
ಅದೆಷ್ಟೇ ಮೋಹಕವಾಗಿದ್ದರೂ,
ನಟ್ಟಿರುಳ ನಿಟ್ಟುಸಿರಿಗೆ ಖಂಡಿತ ಅದು ಸರಿಸಾಟಿಯಲ್ಲ//

Friday, July 1, 2011

ಮೌನಕ್ಕೂ ನಿಲುಕದು...ಒಲವಿದು

ಕಾಲದ ಚಕ್ರಕ್ಕೆ ತಡೆಯಿಲ್ಲ
ಅದರ ವೇಗವ ತಡೆಯೋರಿಲ್ಲ....
ಆದರೂ ನಿನ್ನೊಲವ ಕನವರಿಕೆಯಲ್ಲಿ,
ನಾನು ಕಾಲಾತೀತನಾಗಿ ಉಳಿದಿದ್ದೇನೆ!/
ಇನ್ನೆಲ್ಲೂ ಕಾಣದೆ ಹೋದ ಸಾಂತ್ವಾನ,
ನಿನ್ನ ಕಂಗಳು ಸೂಸಿದ ಕ್ಷಣ ನಾನು ನಿನ್ನೊಲವಿಗೆ ಮರುಳಾದೆ...
ಸೋಕಿದ ಉಸಿರು ನೆನಪಿದೆ
ತಾಕಿದ ಕಿರುಬೆರಳ ಸ್ಪರ್ಶವೂ ಸಹ...
ನಿನ್ನೊಂದು ಕಣ್ಣ ಸನ್ನೆಗೆ ನಾನು ಸದಾ ತಹತಹ//



ಮಾತು ಸಾಲದು
ಮೌನಕ್ಕೂ ನಿಲುಕದು...ಒಲವಿದು
ನಿನ್ನ ಹೊರತು ಇನ್ಯಾರಿಗೂ ಅರ್ಥವಾಗಲಾರದು,
ನಿನ್ನ ಕಣ್ಣು ಬಿತ್ತಿದ್ದ ಕನಸು
ನನ್ನೆದೆಯ ಬರಡು ಬಂಜರಲ್ಲೂ,
ನಿರೀಕ್ಷೆಗಳ ಹಸಿರ ಕುಡಿ ಚಿಗುರಿಸಿ....
ನನ್ನ ಬಾಳನ್ನೆಲ್ಲ ತಂಪಾಗಿಸಿದೆ/
ನಿನ್ನುಸಿರ ಗಾಳಿ ನನ್ನೆದೆಯ ಕೊಳವ ಸೋಕಿ
ನನ್ನೊಳಗಿನ ಭಾವಗಳ ತೆರೆಗಳ ತಾಕಿ,
ಸಂತಸದ ಅಲೆಗಳ ಉಂಗುರವ
ನನ್ನ ಮನದಾಳದಲ್ಲಿ ಮೂಡಿಸಿದೆ//



ಬತ್ತಿದ ಕಣ್ಣಿನ ಕಾಲುವೆಯನ್ನ
ಒಲವ ಪ್ರವಾಹದಿಂದ ಮುಳುಗಿಸಿ,
ನನ್ನನ್ನು ನಿನ್ನ ಪ್ರೀತಿಪೀಡಿತನನ್ನಾಗಿ ಆಗಾಗ ಕಾಡುತ್ತಿರು....
ನನ್ನೆದೆಯ ನದಿಯಾಗಿ ನಾದ ಹೊಮ್ಮಿಸುತ್ತ
ನಿರಂತರ ನೀನೋಡುತ್ತಿರು/
ನಿನ್ನೊಂದು ನಗುವಿಗೆ ಸೋತ
ಮನಸಿಗೆ ನಿನ್ನೊಲವಲ್ಲೆ ಗೆಲುವ ತೀರ ಸೇರುವಾಸೆ...
ಸೂಸಿದ ದ್ವೇಷವೆಲ್ಲ ಕೇವಲ ಕೃತಕ,
ನೀ ತೋರಿದ ಅನಾದರವೆಲ್ಲ ಕೇವಲ ನಾಟಕ....
ಅಷ್ಟಕ್ಕೂ ನನ್ನಿಂದ ಆದ ತಪ್ಪಾದರೂ ಏನು?//



ಸರಿವ ಕಾಲದ ಅಂಗಿಯ ಚುಂಗು ಹಿಡಿದು
ನೀ ನಡೆವ ಹಾದಿಯಲ್ಲಿ ಹೆಜ್ಜೆ ಹಾಕುವ....
ನನ್ನ ಕನಸಿಗೆ ಇನ್ನೂ ಹದಿಹರೆಯ/
ನಿತ್ಯ ನಸುಕಲ್ಲಿ ನಿನ್ನುಸಿರ ಕನವರಿಕೆ
ಇರುಳ ತುಂಬೆಲ್ಲ ನಿನ್ನ ಕನಸ ಕಾತರಕೆ...
ಕಾದು ಬಸವಳಿದ ನನ್ನ ಮನಸಿಗೆ,
ನೆನಪಿನ ನಾವೆಯಲ್ಲಿ ತೇಲೋದರಲ್ಲಿಯೇ....
ಅದೇನೂ ಅಪರಿಮಿತ ಸುಖ//


ಮೌನದ ಅನ್ವೇಷಣೆ ನಿರಂತರ ಜಾರಿಯಲ್ಲಿದೆ...
ಗದ್ದಲದ ಬಾಳ ಸಂತೆಯಲ್ಲಿ ನೆಮ್ಮದಿಯ ಹುಡುಕಾಟ
ಅವಿರತವಾಗಿದೆ/
ಬಚ್ಚಿಟ್ಟುಕೊ ನಿನ್ನ ಮನದ ಒಳಮನೆಯಲ್ಲಿ ನನ್ನ
ಮುಚ್ಚಿಟ್ಟುಕೂ....
ಎದೆಯಾಳದಲ್ಲಿ ನನ್ನೆಲ್ಲ ಕನಸುಗಳ ಕಟ್ಟಿಟ್ಟ ಕಂತೆಯನ್ನ//

ನಿನ್ನ ನೆನಪ ನೆರಳು.....

ಕನಸಿನಾಳ...ಮನಸಿಗೆ ಬಿದ್ದ ಮೋಹದಗಾಳ
ವಿವರಿಸುವ ಬಗೆ ಗೊತ್ತಾಗುತ್ತಿಲ್ಲ....
ಎಲ್ಲೆಲ್ಲೂ ನಿನ್ನದೇ ಪರಿಮಳ,
ನನ್ನೆದೆ ಗ್ರಹಿಕೆಗೆ
ನಿನ್ನೆದೆ ಒಪ್ಪಿಗೆಯ ಗಳಿಕೆ...
ನನ್ನ ಚಿರಕಾಲದ ಸಾಯಲಾರದ ಕನಸು/
ನಾ ಸೋತ ಸೋಲಿನಲ್ಲೆಲ್ಲ ನಿನ್ನ ಗೆಲುವಿದೆ...
ನೀ ಮರೆತ ಬದುಕ ಸಾಲಿನಲ್ಲೆಲ್ಲ,
ಇನ್ನೂ ನನ್ನ ಒಲವಿದೆ//


ಮುಂಜಾನೆ ಮನದಾಳದಲ್ಲಿ ಮೂಡಿ ಬಂದ ರಾಗ
ನನ್ನೆದೆಯ ವೀಣೆ ನುಡಿಸಿದ ಮೆಲುನಾದ...
ನನ್ನುಸಿರ ಕೊಳಲು ಉಲಿದ ಹೆಸರು,
ಮತ್ತೆ ಹೇಳಲೆ ಬೇಕ?
ಅದು ನೀನು/
ನಿನ್ನ ಕಣ್ ಬೆಳಕಿಂದ ನನಗೆ ಹಗಲು....
ಅದರ ಅಂಚಲಿ ಅಂಟಿರುವ ಕಾಡಿಗೆಯಿಂದಲೆ ಆರಂಭ ನನ್ನಿರುಳು,
ಬಾಳಪೂರ್ತಿ ನಾ ಹೆಜ್ಜೆ ಹಾಕುವಾಗಲೆಲ್ಲ ಬಿಡದೆ ಹಿಂಬಾಲಿಸುವುದು
ನಿನ್ನ ನೆನಪ ನೆರಳು//


ಮೋಡದೊಂದಿಗೆ ನೆಲದ ಮುನಿಸು
ಮಳೆಯ ಧಾರೆ ಹನಿಯದೆ ಇರೋದಕ್ಕೊ?,
ಇಲ್ಲ ಬಾನಿನ ಮನ ಕರಗದೆ ಇರೋದಕ್ಕೊ?
ಗೊಂದಲವಿದೆ/
ಕಳೆದು ಹೋದ ಮಾತು...
ತೀರಿಸಲಾಗದ ಹಲವು ಸಾಲಗಳು ನನ್ನ ಮೇಲಿವೆ,
ಯಾಕೋ ಕೊಟ್ಟವರು ಮುನಿಸಿಕೊಂಡಿದ್ದಾರೆ...
ಏನ ಮಾಡಲಿ....?//